ದಸರಾ ಹಬ್ಬಕ್ಕೆ ಸಾಲಾಗಿ ಬರುತ್ತಿರುವ ಕನ್ನಡ ಚಿತ್ರಗಳ ಸಣ್ಣ ಝಲಕ್
ಅಕ್ಟೋಬರ್ ತಿಂಗಳಿನಲ್ಲಿ, ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಬಹಳ ದೊಡ್ಡ ಸಿನಿ ಹಬ್ಬ ಆರಂಭವಾಗಲಿದೆ. ಬಹು ನಿರೀಕ್ಷಿತ ಹಾಗೂ ದೊಡ್ಡ-ದೊಡ್ಡ ಬಜೆಟ್ ನ ಹಲವು ಸಿನಿಮಾಗಳು ತೆರೆ ಕಾಣಲು ಸಾಲಾಗಿ ನಿಂತಿವೆ.
ಈಗಾಗಲೇ ಒಂದಷ್ಟು ಸಿನಿಮಾಗಳು 'ದಸರಾ' ಹಬ್ಬಕ್ಕೆ ಬಿಡುಗಡೆಯಾಗುವುದಾಗಿ ಘೋಷಿಸಿಕೊಂಡಿದೆ. ಇದೇ ತಿಂಗಳ ಕೊನೆಯ ವಾರದಲ್ಲಿ 'ದೊಡ್ಮನೆ ಹುಡ್ಗ' ತೆರೆ ಕಾಣುವ ಮೂಲಕ ಸ್ಯಾಂಡಲ್ ವುಡ್ ನ ಸಿನಿ ಹಬ್ಬಕ್ಕೆ ಚಾಲನೆ ಸಿಗುತ್ತಿದೆ.[ದಸರಾ ಹಬ್ಬಕ್ಕೆ ನಟಿ ಪ್ರಿಯಾಮಣಿಗೆ ಅಗ್ನಿಪರೀಕ್ಷೆ !]
ಸೆಪ್ಟೆಂಬರ್ 23ಕ್ಕೆ ತೆರೆ ಕಾಣಬೇಕಿದ್ದ 'ದೊಡ್ಮನೆ ಹುಡ್ಗ' ಒಂದು ವಾರ ಲೇಟ್ ಆಗಿ ಈ ವಾರ ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಪುನೀತ್ ರಾಜ್ ಕುಮಾರ್ ಅವರ 25ನೇ ಸಿನಿಮಾ ತೆರೆಕಂಡ ಬೆನ್ನಲ್ಲೆ ಇನ್ನುಳಿದ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿದೆ.
ನಾಡಹಬ್ಬ ದಸರಾ ಸಂದರ್ಭದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿರುವ ಕನ್ನಡ ಚಿತ್ರಗಳು ಯಾವುದು?, ನೋಡಲು ಮುಂದೆ ಓದಿ...

'ಇದೊಳ್ಳೆ ರಾಮಾಯಣ'
ಬಹುಮುಖ ಪ್ರತಿಭೆ, ಬಹುಭಾಷಾ ನಟ ಕಮ್ ಕನ್ನಡಿಗ ಪ್ರಕಾಶ್ ರಾಜ್ ಅವರು ನಿರ್ದೇಶಿಸಿ, ನಿರ್ಮಿಸಿ, ನಟಿಸುತ್ತಿರುವ 'ಇದೊಳ್ಳೆ ರಾಮಾಯಣ' ಚಿತ್ರಕ್ಕೆ ಅಕ್ಟೋಬರ್ 7 ದಸರಾ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿದೆ. 'ಶಟರ್' ಚಿತ್ರದ ರೀಮೇಕ್ ಆಗಿರುವ ಈ ಚಿತ್ರದಲ್ಲಿ ಸುಧಾ ಬೆಳವಾಡಿ, ನಟಿ ಪ್ರಿಯಾಮಣಿ, ಅಚ್ಯುತ್ ಕುಮಾರ್ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದಾರೆ.

'ಜಾಗ್ವಾರ್'
ಭರ್ತಿ 75 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ, ಈ ವರ್ಷದ ಬಹು ನಿರೀಕ್ಷಿತ ಸಿನಿಮಾ 'ಜಾಗ್ವಾರ್' ಅಕ್ಟೋಬರ್ 6, ದಸರಾ ಹಬ್ಬದ ಸಮಯದಲ್ಲೇ ತೆರೆಗೆ ಬರುತ್ತಿದೆ. ನಿಖಿಲ್ ಕುಮಾರ್ ಅವರ ಚೊಚ್ಚಲ ಚಿತ್ರವಾದ 'ಜಾಗ್ವಾರ್' ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿದೆ. ಅನಿತಾ ಕುಮಾರಸ್ವಾಮಿ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ವಿಜಯೇಂದ್ರ ಅವರು ಕಥೆ ಬರೆದಿದ್ದು, ಮಹದೇವ್ ನಿರ್ದೇಶನ ಮಾಡಿದ್ದಾರೆ. ನಟಿ ದೀಪ್ತಿ ಸತಿ ನಿಖಿಲ್ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ.

'ದನ ಕಾಯೋನು'
ಯೋಗರಾಜ್ ಭಟ್ರು ನಿರ್ದೇಶನ ಮಾಡಿರುವ 'ದನ ಕಾಯೋನು' ಚಿತ್ರ ಕೂಡ ದಸರಾ ಹಬ್ಬದ ಸಂದರ್ಭದಲ್ಲಿ ತೆರೆಗೆ ಅಪ್ಪಳಿಸಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸೆನ್ಸಾರ್ ಅಂಗಳಕ್ಕೆ ಕಾಲಿಡಲಿರುವ 'ದನ ಕಾಯೋನು', ಸೆನ್ಸಾರ್ ಆದ ನಂತರ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದಾರೆ. ಆದ್ರೆ ಮೂಲಗಳ ಪ್ರಕಾರ ಅಕ್ಟೋಬರ್ 7ಕ್ಕೆ ಸಿನಿಮಾ ಬಿಡುಗಡೆ ಮಾಡಲು ಭಟ್ರು ಪ್ಲ್ಯಾನ್ ಮಾಡುತ್ತಿದ್ದಾರಂತೆ.

'ಬದ್ಮಾಶ್'
ಸ್ಪೆಷಲ್ ಹೀರೋ ಧನಂಜಯ್ ಮತ್ತು ಸಂಚಿತಾ ಶೆಟ್ಟಿ ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ಬದ್ಮಾಶ್' ಚಿತ್ರವನ್ನು ಅಕ್ಟೋಬರ್ 14 ರಂದು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಚಿತ್ರಕ್ಕೆ ಆಕಾಶ್ ಶ್ರಿವತ್ಸ ಅವರು ಆಕ್ಷನ್-ಕಟ್ ಹೇಳಿದ್ದು, ರವಿ ಕಶ್ಯಪ್ ಅವರು ಬಂಡವಾಳ ಹೂಡಿದ್ದಾರೆ. ಈಗಾಗಲೇ ಚಿತ್ರದ ಆಡಿಯೋ ಸೂಪರ್ ಹಿಟ್ ಆಗಿದೆ.[ಸ್ಪೆಷಲ್ ವ್ಯಕ್ತಿಯಿಂದ 'ಬದ್ಮಾಶ್' ಸ್ಪೆಷಲ್ ಟ್ರೈಲರ್ ಬಿಡುಗಡೆ]

'ನಾಗರಹಾವು'
'ಬಾಹುಬಲಿ' ಚಿತ್ರಕ್ಕೆ ಸೆಡ್ಡು ಹೊಡೆದು ನಿಂತಿರುವ ಕನ್ನಡ ಚಿತ್ರ 'ನಾಗರಹಾವು' ಕೂಡ ದಸರಾ ಹಬ್ಬದ ಸಂದರ್ಭದಲ್ಲಿ ತೆರೆ ಕಾಣಲಿದೆ ಅಂತ ನಿರ್ಮಾಪಕರು ಸುಳಿವು ಕೊಟ್ಟಿದ್ದಾರೆ. ಆದ್ರೆ ಯಾವಾಗ ಎಂಬುದು ಇನ್ನೂ ಪಕ್ಕಾ ಆಗಿಲ್ಲ. ಈಗಾಗಲೇ ತೆರೆಕಂಡಿರುವ ಚಿತ್ರದ ಟ್ರೈಲರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ವಿಷ್ಣುದಾದಾ ಅವರು ಕೂಡ ಮಿಂಚಿದ್ದು ವಿಶೇಷ. ಇನ್ನುಳಿದಂತೆ ರಮ್ಯಾ, ದಿಗಂತ್, ಸಾಯಿ ಕುಮಾರ್ ಪ್ರಮುಖವಾಗಿ ಮಿಂಚಿದ್ದಾರೆ. ಕೋಡಿ ರಾಮಕೃಷ್ಣ ನಿರ್ದೇಶನದ ಚಿತ್ರಕ್ಕೆ ಸಾಜೀದ್ ಖುರೇಷಿ ಬಂಡವಾಳ ಹೂಡಿದ್ದಾರೆ.

ಇನ್ಯಾವ ಸಿನಿಮಾ ತಯಾರಾಗಿದೆ
ಇನ್ನುಳಿದಂತೆ 'ನಟರಾಜ ಸರ್ವಿಸ್', 'ನಾನು ಮತ್ತು ವರಲಕ್ಷ್ಮಿ', ಜಾನ್ ಜಾನಿ ಜನಾರ್ದನ್', 'ಮಾದ ಮಾನಸಿ' ಮುಂತಾದ ಸಿನಿಮಾಗಳು ತೆರೆಗೆ ಬರಲು ತಯಾರಾಗಿ ನಿಂತಿದ್ದು, ಇನ್ನೂ ದಿನಾಂಕ ಫಿಕ್ಸ್ ಆಗಲಿಲ್ಲ.


Click it and Unblock the Notifications











