ಅಪ್ಪು ಮರೆಯಾಗಿ ಒಂದು ವರ್ಷ: ಪುನೀತ್ ನಟಿಸದೇ ಬಿಟ್ಟುಹೋದ ಚಿತ್ರಗಳ ಪಟ್ಟಿ
ಪುನೀತ್ ರಾಜ್ಕುಮಾರ್ ಅಣ್ಣಾವ್ರ ಮಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ತನ್ನದೇ ಆದ ಸ್ಟಾರ್ಡಂ ಅನ್ನು ಕಟ್ಟಿಕೊಂಡಂತಹ ನಟ. ಸ್ಟಾರ್ ನಟರ ಮಕ್ಕಳೆಲ್ಲಾ ಸುಲಭವಾಗಿ ಸ್ಟಾರ್ ಆಗಿಬಿಡುವುದಿಲ್ಲ. ಒಳ್ಳೆಯ ಕಲೆ ಇದ್ದರೆ ಹಾಗೂ ಜನರು ಮೆಚ್ಚಿಕೊಳ್ಳುವಂತ ಚಿತ್ರ ಮಾಡಿದರೆ ಮಾತ್ರ ಸ್ಟಾರ್ ನಟರ ಮಕ್ಕಳು ಸ್ಟಾರ್ ಆಗುತ್ತಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್.
ಹೀಗೆ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ ಇಂಡಸ್ಟ್ರಿಯ ಪ್ರಮುಖ ಸ್ಟಾರ್ ನಟನಾಗಿ ಗುರುತಿಸಿಕೊಂಡ ಪುನೀತ್ ರಾಜ್ಕುಮಾರ್ ಜತೆ ಕೆಲಸ ಮಾಡುವುದು ಕನ್ನಡ ಚಲನಚಿತ್ರರಂಗದ ಪ್ರತಿಯೊಬ್ಬ ನಿರ್ದೇಶಕನ ಕನಸು ಎಂದೇ ಹೇಳಬಹುದು. ಪುನೀತ್ ಚಿತ್ರವೊಂದರ ಚಿತ್ರೀಕರಣದಲ್ಲಿ ಬ್ಯುಸಿ ಇದ್ದರೆ ಹಲವಾರು ಚಿತ್ರಗಳ ಕತೆ ಕೇಳಿ ಸಹಿ ಹಾಕುತ್ತಿದ್ದರು. ಹೋಮ್ ಬ್ಯಾನರ್ ಮೂಲಕ ಲಾಂಚ್ ಆದ ಪುನೀತ್ ರಾಜ್ಕುಮಾರ್ ಮೇಲೆ ಕೋಟಿ ಕೋಟಿ ಸುರಿಯಲು ನಿರ್ಮಾಪಕರು ಸಹ ತುದಿಗಾಲಲ್ಲಿ ನಿಂತಿದ್ದರು.
ಸದ್ಯ ಕಿಂಗ್ ಮೇಕರ್ ಎನಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಓರ್ವ ನಟನಿಗೆ ಅತಿ ಹೆಚ್ಚಾಗಿ ಚಿತ್ರವನ್ನು ನಿರ್ಮಿಸಿದೆ ಎಂದರೆ ಅದು ಪುನೀತ್ ರಾಜ್ಕುಮಾರ್ ರಾಜ್ಕುಮಾರ್ ಅವರಿಗೆ ಮಾತ್ರ. ಹೀಗೆ ದೊಡ್ಡ ದೊಡ್ಡ ಬ್ಯಾನರ್ಗಳಿಂದ ಹಾಗೂ ನಿರ್ದೇಶಕರಿಂದ ಬೃಹತ್ ಬೇಡಿಕೆ ಹೊಂದಿದ್ದ ಪುನೀತ್ ರಾಜ್ಕುಮಾರ್ ನಿಧನ ಹೊಂದಿದ ನಂತರ ಅವರು ನಟಿಸಬೇಕಿದ್ದ ಹಲವಾರು ಚಿತ್ರಗಳು ಹಾಗೆಯೇ ಉಳಿದುಕೊಂಡಿವೆ. ಕೆಲವು ಚಿತ್ರಗಳು ಘೋಷಣೆಯಾಗಿದ್ದರೆ, ಇನ್ನೂ ಕೆಲ ಚಿತ್ರಗಳು ಘೋಷಣೆಯಾಗಿರಲಿಲ್ಲ. ಹೀಗೆ ಅಪ್ಪು ನಟಿಸಬೇಕಿದ್ದ ಎಲ್ಲಾ ಚಿತ್ರಗಳು ಯಾವುದು ಎಂಬುದರ ಕುರಿತಾದ ಪಟ್ಟಿ ಇಲ್ಲಿದೆ.

ಹೊಂಬಾಳೆ ಜತೆ ಎರಡು ಚಿತ್ರಗಳು
ಹೊಂಬಾಳೆ ಫಿಲ್ಮ್ಸ್ ಜತೆ ಮೂರು ಬಾರಿ ಕೈ ಜೋಡಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಾಲ್ಕನೇ ಚಿತ್ರವೊಂದರಲ್ಲಿ ಅಭಿನಯಿಸಲು ಸಿದ್ಧರಾಗಿದ್ದರು. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಲೂಸಿಯಾ ಪವನ್ ನಿರ್ದೇಶನದ ದ್ವಿತ್ವ ಚಿತ್ರದಲ್ಲಿ ಪುನೀತ್ ನಟಿಸಬೇಕಿತ್ತು. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳೂ ಸಹ ಆರಂಭಗೊಂಡಿದ್ದವು. ಇನ್ನು ಇದೇ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ರಾಜಕುಮಾರ, ಯುವರತ್ನ ಬಳಿಕ ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ಕಾಂಬಿನೇಷನ್ ಚಿತ್ರ ಸೆಟ್ಟೇರಬೇಕಿತ್ತು. ಎರಡು ಒಳ್ಳೆಯ ಸಂದೇಶವಿರುವ ಚಿತ್ರಗಳನ್ನು ನೀಡಿದ್ದ ಅಪ್ಪು - ಸಂತೋಷ್ ಜೋಡಿ ಮೂರನೇ ಬಾರಿಗೆ ಕೈಜೋಡಿಸುವ ಕನಸು ಕನಸಾಗಿಯೇ ಉಳಿದುಬಿಟ್ಟಿದೆ.

ಪೈಲ್ವಾನ್ ಕೃಷ್ಣ ಹಾಗೂ ದಿನಕರ್ ತೂಗುದೀಪ ಸಿನಿಮಾ
ಪುನೀತ್ ರಾಜ್ಕುಮಾರ್ ಕತೆ ಕೇಳಿ ಗ್ರೀನ್ ಸಿಗ್ನಲ್ ನೀಡಿದ್ದ ಮತ್ತೆರಡು ಚಿತ್ರಗಳೆಂದರೆ ಒಂದು ನಿರ್ದೇಶಕ ಕೃಷ್ಣ ನಿರ್ದೇಶನದ ಚಿತ್ರ ಹಾಗೂ ಮತ್ತೊಂದು ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ಚಿತ್ರ. ಈ ಎರಡೂ ಪ್ರಾಜೆಕ್ಟ್ಗಳೂ ಸಹ ಅಪ್ಪು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿತ್ತು. ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಪುನೀತ್ ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಇದಕ್ಕಾಗಿ ಬೇಕಾದ ಪೂರ್ವ ಮಾಹಿತಿಗಳನ್ನು ಕಲೆಹಾಕುವ ಕೆಲಸಕ್ಕೆ ಇಳಿದಿದ್ದರು ನಿರ್ದೇಶಕ ಕೃಷ್ಣ. ಅತ್ತ ದಿನಕರ್ ತೂಗುದೀಪ ನಿರ್ದೇಶನದ ಚಿತ್ರ ಬಹುದಿನಗಳ ನಂತರ ಬರಲಿರುವ ರಾಜ್ ಮತ್ತು ತೂಗುದೀಪ ಕುಟುಂಬದ ಕಾಂಬಿನೇಷನ್ ಚಿತ್ರ ಎಂಬ ಕಾರಣದಿಂದ ನಿರೀಕ್ಷೆ ಹುಟ್ಟುಹಾಕಿತ್ತು.

ಅಪ್ಪುಗಾಗಿ ಕಥೆ ಹೆಣೆದಿದ್ದ ಹಲವರು
ಇನ್ನು ಪುನೀತ್ ರಾಜ್ ಕುಮಾರ್ ಅವರಿಗಾಗಿ ನಿರ್ದೇಶಕ ಮಂಸೋರೆ ಮಿಷನ್ ಕೊಲಂಬಸ್ ಎಂಬ ಚಿತ್ರವನ್ನು ಪುನೀತ್ ರಾಜ್ ಕುಮಾರ್ ಅವರಿಗೆ ನಿರ್ದೇಶಿಸಲು ಯೋಜನೆ ಹಾಕಿಕೊಂಡಿದ್ದರು. ಇತ್ತೀಚೆಗಷ್ಟೆ ಕಾಂತಾರ ಚಿತ್ರವನ್ನು ಡೇಟ್ ಸಮಸ್ಯೆಯಿಂದ ಕೈಬಿಟ್ಟಿದ್ದ ಪುನೀತ್ ರಾಜ್ ಕುಮಾರ್ ಮುಂದೊಂದು ದಿನ ಬೇರೆ ಚಿತ್ರದಲ್ಲಿ ಕೆಲಸ ಮಾಡೋಣ ಎಂದು ರಿಷಬ್ ಶೆಟ್ಟಿ ಬಳಿ ಹೇಳಿದ್ದರು. ಹೀಗೆ ಅಪ್ಪು ಅಭಿನಯಿಸಬೇಕಿದ್ದ ಸಾಲು ಸಾಲು ಚಿತ್ರಗಳು ಬಿಡುಗಡೆಗೂ ಮುನ್ನವೇ ನಿಂತುಹೋಗಿವೆ.


Click it and Unblock the Notifications











