ಡಾ.ಅಶೋಕ್ ಪೈ ಅವರೊಳಗೆ ಅಡಗಿದ್ದ ಸಿನಿಮಾ ಕಲಾಕಾರ
ಶಿವಮೊಗ್ಗ ಮೂಲದ ಖ್ಯಾತ ಮಾನಸಿಕ ತಜ್ಞ ಡಾ.ಕೆ.ಎ ಅಶೋಕ್ ಪೈ ಗುರುವಾರ ಮಧ್ಯರಾತ್ರಿ 12ಕ್ಕೆ (ಭಾರತೀಯ ಕಾಲಮಾನ) ವಿಧಿವಶರಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು, ತಮ್ಮ ಪತ್ನಿ ರಜನಿ ಪೈ ಅವರೊಂದಿಗೆ ಸ್ಕಾಟ್ಲೆಂಡ್ ಗೆ ತೆರಳಿದ್ದ ಪೈ ಅವರು, ಹೋಟೆಲ್ ಒಂದರಲ್ಲಿ ತಂಗಿದ್ದರು.
ಈ ಸಂದರ್ಭದಲ್ಲಿ ಹೃದಾಯಾಘಾತ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತದರೂ, ಚಿಕಿತ್ಸೆ ಫಲಕಾರಿಯಾಗದೆ ಡಾ.ಅಶೋಕ್ ಪೈ ಅವರು ನಿಧನರಾಗಿದ್ದಾರೆ.[ಮಾನಸಿಕ ವೈದ್ಯ ಡಾ.ಅಶೋಕ್ ಪೈ ನಿಧನ]
ಮನೋರೋಗಿಗಳ ಆಶಾಕಿರಣವಾಗಿದ್ದ ಡಾ.ಅಶೋಕ್ ಪೈ ಅವರು ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷರಾಗಿದ್ದು, ಅವರಿಗೆ ಹತ್ತು-ಹಲವು ಪ್ರಶಸ್ತಿಗಳು ದಕ್ಕಿವೆ. ಗೌರವ ಡಾಕ್ಟರೇಟ್, ಆರ್ಯಭಟ ಪ್ರಶಸ್ತಿ ಸೇರಿದಂತೆ ರಾಜ್ಯೋತ್ಸವ ಪ್ರಶಸ್ತಿ, ಡಾ.ಸಿ.ರಾಯ್ ಪ್ರಶಸ್ತಿಗಳು ಸಂದಿವೆ.
ಬರೀ ವೈದ್ಯರು ಮಾತ್ರವಲ್ಲದೇ, ಇವರೊಳಗೊಬ್ಬ ಅತ್ಯುತ್ತಮ ಬರಹಗಾರ ಮತ್ತು ಸಿನಿಮಾ ಪ್ರಿಯ ಕೂಡ ಇದ್ದರು. ಇವರು ಹಲವು ಪುಸ್ತಕಗಳನ್ನು ಬರೆದಿದ್ದು, ಮೂರ್ನಾಲ್ಕು ಸಿನಿಮಾಗಳಿಗೂ ನಿರ್ಮಾಪಕರಾಗಿ ದುಡಿದಿದ್ದಾರೆ. ಅಶೋಕ್ ಪೈ ಅವರು 'ಉಷಾ ಕಿರಣ ಮೂವೀಸ್' ಸಂಸ್ಥೆಯ ಮೂಲಕ ನಿರ್ಮಾಣ ಮಾಡಿರುವ ಸಿನಿಮಾಗಳ ಬಗ್ಗೆ ತಿಳಿಯಲು ಮುಂದೆ ಓದಿ...

'ಕಾಡಿನ ಬೆಂಕಿ'
1989ರಲ್ಲಿ ತಯಾರಾದ 'ಕಾಡಿನ ಬೆಂಕಿ' ಚಿತ್ರಕ್ಕೆ ಡಾ.ಅಶೋಕ್ ಪೈ ಅವರು 'ಉಷಾ ಕಿರಣ ಮೂವೀಸ್' ಸಂಸ್ಥೆಯಡಿ ಬಂಡವಾಳ ಹೂಡಿದ್ದರು. ಈ ಚಿತ್ರಕ್ಕೆ ನಿರ್ದೇಶಕ ಸುರೇಶ್ ಹೆಬ್ಳಿಕರ್ ಆಕ್ಷನ್-ಕಟ್ ಹೇಳಿದ್ದರು. ಇನ್ನು ಈ ಸಿನಿಮಾ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಗೆದ್ದುಕೊಂಡಿತ್ತು ಅನ್ನೋದು ಇನ್ನೊಂದು ವಿಶೇಷ.

'ಪ್ರಥಮ ಉಷಾಕಿರಣ'
1990ರಲ್ಲಿ ತೆರೆಕಂಡ 'ಪ್ರಥಮ ಉಷಾಕಿರಣ' ಎಂಬ ಚಿತ್ರಕ್ಕೆ ಕೂಡ ಡಾ.ಅಶೋಕ್ ಪೈ ಅವರು ನಿರ್ಮಾಪಕರಾಗಿದ್ದರು. ಸುರೇಶ್ ಹೆಬ್ಳಿಕರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂದಿತ್ತು.

'ಆಘಾತ'
ಡಾ.ಅಶೋಕ್ ಪೈ ಅವರ ಕಾದಂಬರಿ ಆಧಾರಿತ 'ಆಘಾತ' ಚಿತ್ರ 1995 ರಲ್ಲಿ ತೆರೆಕಂಡಿತ್ತು. ಈ ಚಿತ್ರಕ್ಕೆ ಸುರೇಶ್ ಹೆಬ್ಳಿಕರ್ ಅವರೇ ನಿರ್ದೇಶನ ಮಾಡಿದ್ದರು. ಗಿರೀಶ್ ಕಾರ್ನಾಡ್, ಶ್ರುತಿ, ಸುರೇಶ್ ಹೆಬ್ಳಿಕರ್, ರಾಮಕೃಷ್ಣ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದರು.

'ಮನ ಮಂಥನ'
ಮನ ಮಂಥನ ಎಂಬ ಚಿತ್ರಕ್ಕೂ ಡಾ.ಅಶೋಕ್ ಪೈ ಅವರು ಬಂಡವಾಳ ಹೂಡಿದ್ದು, ಕಾರಣಾಂತರಗಳಿಂದ ಈ ಸಿನಿಮಾ ಇನ್ನೂ ತೆರೆ ಕಂಡಿಲ್ಲ.

ಸೀರಿಯಲ್ ದುನಿಯಾದಲ್ಲೂ ಅಶೋಕ್ ಪೈ
ಬರೀ ಸಿನಿಮಾ ಮಾತ್ರವಲ್ಲದೇ, ಸೀರಿಯಲ್ ದುನಿಯಾಕ್ಕೂ ಅಶೋಕ್ ಪೈ ಅವರು ಕೈ ಹಾಕಿದ್ದರು. 'ಅಂತರಾಳ' ಎಂಬ ಧಾರಾವಾಹಿಗೆ ಇವರು ಬಂಡವಾಳ ಹೂಡಿದ್ದರು. ಈ ಧಾರಾವಾಹಿ ಸುಮಾರು 10 ಕಂತುಗಳನ್ನು ಪೂರೈಸಿತ್ತು. ಧಾರಾವಾಹಿಯಲ್ಲಿ ನಟ ಗಿರೀಶ್ ಕಾರ್ನಾಡ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











