Don't Miss!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇ 20 ಕ್ಕೆ ಬರುತ್ತಿವೆ 11 ಕನ್ನಡ ಸಿನಿಮಾಗಳು: ನಿಮ್ಮ ಆಯ್ಕೆ ಯಾವುದು?
ಚಿತ್ರಮಂದಿರಗಳಿಂದ ಕೊರೊನಾ ಕರಿನೆರಳು ಪೂರ್ಣ ಸರಿದಿದೆ. ಸಿನಿಮಾಗಳ ಮೇಲೆ ಸಿನಿಮಾಗಳು ಬಿಡುಗಡೆ ಆಗುತ್ತಿವೆ, ಹಿಟ್ ಸಹ ಆಗುತ್ತಿವೆ.
'ಕೆಜಿಎಫ್ 2' ಸಿನಿಮಾ ಅಂತೂ ಕೊರೊನಾದಿಂದ ಕಳೆದೆರಡು ವರ್ಷಗಳಿಂದ ತತ್ತರಿಸಿದ್ದ ರಾಜ್ಯದ ಚಿತ್ರಮಂದಿರಗಳಿಗೆ ಹೊಸ ಹುರುಪು ತಂದಿದೆ. 'ಕೆಜಿಎಫ್ 2' ನೀಡಿದ ಹುರುಪಿನಲ್ಲಿ ಕನ್ನಡದ ಹಲವು ಸಿನಿಮಾಗಳು ಒಂದರ ಹಿಂದೊಂದರಂತೆ ತೆರೆಗೆ ಬರುತ್ತಿವೆ.
ಇದೀಗ ಮತ್ತೊಂದು ಶುಕ್ರವಾರ ಬಂದಿದ್ದು ಹಲವು ಕನ್ನಡ ಸಿನಿಮಾಗಳು ಅದೃಷ್ಟ ಪರೀಕ್ಷೆಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ. ಜನಪ್ರಿಯ ನಟ-ನಟಿಯರ ಸಿನಿಮಾಗಳ ಜೊತೆಗೆ ಹೊಸಬರ ಸಿನಿಮಾಗಳು, ಪ್ರಯೋಗಾತ್ಮಕ ಸಿನಿಮಾಗಳು ಈ ಶುಕ್ರವಾರ (ಮೇ 19) ರಂದು ಬಿಡುಗಡೆ ಆಗಲಿದೆ. ಈ ವಾರ ಬಿಡುಗಡೆ ಆಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.
ಡಾಲಿ ಧನಂಜಯ್ ನಟನೆಯ '21 ಹವರ್ಸ್'
ಡಾಲಿ ಧನಂಜಯ್ ನಟನೆಯ '21 ಹವರ್ಸ್' ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಪತ್ತೆಧಾರಿ ಕತೆಯನ್ನು ಈ ಸಿನಿಮಾ ಹೊಂದಿದ್ದು, ಸಿನಿಮಾದ ಟ್ರೇಲರ್ ಈಗಾಗಲೇ ಗಮನ ಸೆಳೆದಿದೆ. ಸಿನಿಮಾವನ್ನು ಈಗಾಗಲೇ ವೀಕ್ಷಿಸಿರುವ ಕಿಚ್ಚ ಸುದೀಪ್, ಸಿನಿಮಾ ಬಗ್ಗೆ ಒಳ್ಳೆಯ ಮಾತನ್ನಾಡಿರುವುದು ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾವನ್ನು ಜೈಶಂಕರ್ ಪಂಡಿತ್ ನಿರ್ದೇಶನ ಮಾಡಿದ್ದಾರೆ.
'ಸಾರಾ ವಜ್ರ'
ಲೇಖಕಿ ಸಾರಾ ಅಬೂಬ್ಕರ್ ವಿರಚಿತ 'ವಜ್ರಗಳು' ಕಾದಂಬರಿ ಆಧರಿತ ಸಿನಿಮಾ 'ಸಾರಾ ವಜ್ರ' ಸಿನಿಮಾ ಮೇ 20 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಅನುಪ್ರಭಾಕರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಾಜಿ ಬಿಗ್ಬಾಸ್ ಸ್ಪರ್ಧಿ ರೆಹಮಾನ್ ಸಹ ಸಿನಿಮಾದಲ್ಲಿದ್ದಾರೆ. ರಮೇಶ್ ಭಟ್, ಸುಧಾ ಬೆಳವಾಡಿ ಇನ್ನೂ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ನಿರ್ದೇಶನ ಅರ್ನಾ ಸಾಧ್ಯ ಅವರದ್ದು.
ರವಿಚಂದ್ರನ್ ಪುತ್ರನ 'ಪ್ರಾರಂಭ'
ರವಿಚಂದ್ರನ್ ಪುತ್ರ ಮನೊರಂಜನ್ ನಟನೆಯ 'ಪ್ರಾರಂಭ' ಸಿನಿಮಾ ಸಹ ಇದೇ ಶುಕ್ರವಾರ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಪ್ರೀತಿ ಮತ್ತು ಆಕ್ಷನ್ ಅಂಶಗಳನ್ನು ಒಟ್ಟಿಗೆ ಒಳಗೊಂಡಿರುವ ಸಿನಿಮಾದ ಟ್ರೇಲರ್ ಈಗಾಗಲೇ ಗಮನ ಸೆಳೆದಿದೆ. ಮನೊರಂಜನ್ ಎದುರು ಕೀರ್ತಿ ಕಲಕೇರಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಮನು ಕಲ್ಯಾಡಿ. ಪ್ರೀತಿ, ಬ್ರೇಕ್ ಅಪ್ ಆ ಬಳಿಕ ಪ್ರೇಮಿಗಳಿಬ್ಬರ ಜೀವನ ಇತರೆ ಅಂಶಗಳನ್ನು ಸಿನಿಮಾ ಒಳಗೊಂಡಿದೆ.
'ಸಕುಟುಂಬ ಸಮೇತ'
ಆಧುನಿಕ ಕುಟುಂಬಗಳ ನಡುವಿನ ತೊಳಲಾಟ, ಪ್ರೇಮ-ವಿವಹಾದ ಕುರಿತು ಹೊಸ ಜನರೇಷನ್ನ ಲೆಕ್ಕಾಚಾರಗಳು, ಸಂಭ್ರಮಗಳ ಆತಂಕಕಗಳ ಕತೆ ಹೇಳುವ 'ಸಕುಟುಂಬ ಸಮೇತ' ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಭರತ್ ಜಿಬಿ, ಶ್ರೀ ರವಿಕುಮಾರ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ರಾಹುಲ್ ಪಿಕೆ.
ಎಡಿಟರ್ ಕತೆ 'ಕಟಿಂಗ್ ಶಾಪ್'
ಎಡಿಟರ್ ಒಬ್ಬನ ಕತೆ ಹೊಂದಿರುವ 'ಕಟಿಂಗ್ ಶಾಪ್' ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಸಿನಿಮಾದಲ್ಲಿ ಹೊಸ ಪ್ರತಿಭೆ ಕೆಬಿ ಪ್ರವೀಣ್ ನಾಯನಕನಾಗಿ ನಟಿಸಿದ್ದಾರೆ. ಎಡಿಟರ್ ಒಬ್ಬ ಏನೆಲ್ಲ ಕಷ್ಟಗಳನ್ನು, ಅಪಮಾನಗಳನ್ನು ಅನುಭವಿಸಿ ಅಂದುಕೊಂಡಿದ್ದನ್ನು ಸಾಧಿಸುತ್ತಾನೆ ಎಂಬ ಕತೆಯನ್ನು ಹಾಸ್ಯದ ಲೇಪನದೊಂದಿಗೆ ಹೇಳಹೊರಟಿದ್ದಾರೆ ನಿರ್ದೇಶಕ ಪವನ್ ಭಟ್. ಸಿನಿಮಾದಲ್ಲಿ ಹಿರಿಯ ನಿರ್ದೇಶಕ ಭಗವಾನ್, ಓಮ್ ಪ್ರಕಾಶ್ ರಾವ್ ಇನ್ನೂ ಕೆಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.
'ಕಾಣೆಯಾದವರ ಬಗ್ಗೆ ಪ್ರಕಟಣೆ'
ಸಾಮಾಜಿಕ ಸಂದೇಶದ ಜೊತೆಗೆ ಥ್ರಿಲ್ಲರ್ ಅಂಶಗಳನ್ನು ಹೊಂದಿರುವ 'ಕಾಣೆಯಾದವರ ಬಗ್ಗೆ ಪ್ರಕಟಣೆ' ಸಿನಿಮಾ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ರಂಗಾಯಣ ರಘು, ರವಿಶಂಕರ್, ಚಿಕ್ಕಣ್ಣ, ತಬಲಾ ನಾಣಿ, ಆಶಿಕಾ ರಂಗನಾಥ್ ಇನ್ನೂ ಕೆಲವು ಪ್ರತಿಭಾವಂತ ನಟರಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಜಿತೇಂದ್ರ ಮಂಜುನಾಥ್ ಮತ್ತು ಅನಿಲ್ ಕುಮಾರ್. ನಿರ್ದೇಶನ ಮಾಡಿರುವುದು ಅನಿಲ್ ಕುಮಾರ್. ವಯಸ್ಸಾದ ಪೋಷಕರನ್ನು ಹೇಗೆ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಕತೆಯ ಜೊತೆಗೆ ಸರಣಿ ಕೊಲೆಗಳ ಥ್ರಿಲ್ಲರ್ ಕತೆಯೂ ಸಿನಿಮಾದಲ್ಲಿದೆ.
ಆಕ್ಷನ್ ಥ್ರಿಲ್ಲರ್ ಸಿನಿಮಾ 'ಗರುಡ'
ಪಕ್ಕಾ ಆಕ್ಷನ್ ಕತೆಯುಳ್ಳ 'ಗರುಡ' ಸಿನಿಮಾ ಇದೇ ಶುಕ್ರವಾರ ಚಿತ್ರಮಂದಿರಕ್ಕೆ ಬರುತ್ತಿದೆ. ಶ್ರೀನಗರ ಕಿಟ್ಟಿ, ಐಂದ್ರಿತಾ ರೆ, ಆಶಿಕಾ ರಂಗನಾಥ್, ರಾಜೇಶ್ ನಟರಂಗ, ರಂಗಾಯಣ ರಘು, ಆದಿ ಲೋಕೇಶ್, ರಮೇಶ್ ಪಂಡಿತ್, ರವಿಶಂಕರ್ ಇನ್ನೂ ಹಲವು ಪ್ರತಿಭಾವಂತ ನಟರನ್ನು ಸಿನಿಮಾ ಒಳಗೊಂಡಿದ್ದು, ನಾಯಕನಟನಾಗಿ ಸಿದ್ಧಾರ್ಥ್ ಮಹೇಶ್ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಧನಾ ಕುಮಾರ್.
'ದಾರಿ ಯಾವುದಯ್ಯ ವೈಕುಂಟಕ್ಕೆ'
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ(2021-22) ಆಯ್ಕೆಯಾಗಿ, ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ "ಅತ್ಯುತ್ತಮ ಕನ್ನಡ ಚಿತ್ರ" ಪ್ರಶಸ್ತಿಯನ್ನು ಈ ಚಿತ್ರ ತನ್ನ ಮುಡಿಗೇರಿಸಿಕೊಂಡಿರುವ 'ದಾರಿ ಯಾವುದಯ್ಯ ವೈಕುಂಟಕ್ಕೆ' ಸಿನಿಮಾ ಮೇ 20 ಕ್ಕೆ ಬಿಡುಗಡೆ ಆಗುತ್ತಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನವನ್ನು ಸಿದ್ದು ಪೂರ್ಣಚಂದ್ರ ಅವರದ್ದು. ಈ ಚಿತ್ರದಲ್ಲಿ ರಾಜ್ಯಪ್ರಶಸ್ತಿ ವಿಜೇತೆ "ತಿಥಿ ಖ್ಯಾತಿಯ ಪೂಜಾ" ಅಭಿನಯಿಸಿದ್ದಾರೆ. ಜೊತೆಗೆ ವರ್ಧನ್, ಬಲ ರಾಜ್ವಾಡಿ, ಅನುಷಾ, ಶೀಬಾ, ಸ್ಪಂದನ ಪ್ರಸಾದ್, ಅರುಣ್ ಮೂರ್ತಿ, ಸುಚಿತ್, ಸುಧಾ, ಪ್ರಣಯ ಮೂರ್ತಿ, ಸಿದ್ದಾರ್ಥ್, ಗೌಡಿ, ಡಿ.ವಿ ನಾಗರಾಜ್, ಸಂಗೀತ, ಪ್ರಶಾಂತ್ ರಾವ್ ವರ್ಕು, ದಯಾನಂದ್, ಶಶಿಧರ್, ಸುರಂಜನ್, ಮಹೇಶ, ಅರುಣ್ ನಾಯಂಡಹಳ್ಳಿ, ಶಿವು ರಾಮನಗರ, ಇನ್ನೂ ಮುಂತಾದವರು ನಟಿಸಿದ್ದಾರೆ.
'ಕಂಡ್ಹಿಡಿ ನೋಡೋಣ', 'ಪ್ರೀತ್ಸು' ಮತ್ತು 'ಆಂಗರ್'
ದಕ್ಷ ಪೊಲೀಸ್ ಅಧಿಕಾರಿಯೊಬ್ಬನ ಜೀವನ ಬದಲಾಯಿಸಿದ ಕೇಸೊಂದನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ 'ಕಂಡ್ಹಿಡಿ ನೋಡೋಣ'. ಈ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಹೊಸಬರ ಸಿನಿಮಾ 'ಪ್ರೀತ್ಸು' ಇದೇ ವಾರ ಬಿಡುಗಡೆ ಆಗಲಿದೆ. ವಿಚಿತ್ರವಾದ ಕತೆಯನ್ನು ಸಿನಿಮಾ ಹೊಂದಿರುವುದು ಟ್ರೇಲರ್ನಿಂದ ಗೊತ್ತಾಗುತ್ತಿದೆ. ಜೊತೆಗೆ ಅಲ್ಲಲ್ಲಿ ಹಸಿ-ಬಿಸಿ ದೃಶ್ಯಗಳು ಸಹ ಇವೆ. 'ಆಂಗರ್' ಹೆಸರಿನ ಆಕ್ಷನ್ ಕನ್ನಡ ಸಿನಿಮಾ ಸಹ ಇದೇ ವಾರ ಬಿಡುಗಡೆ ಆಗಲಿದೆ.