ಡ್ಯಾಶಿಂಗ್ ಡೈರೆಕ್ಟರ್ ಜೊತೆ ಸೂಪರ್ ಸ್ಟಾರ್; ಮುಂಬರುವ ಡೆಡ್ಲಿ ಕಾಂಬಿನೇಷನ್ ಸಿನಿಮಾಗಳಿವು
ಒಂದು ಚಿತ್ರಕ್ಕೆ ಹೀರೋ ಎಷ್ಟು ಮುಖ್ಯವೋ ನಿರ್ದೇಶಕ ಕೂಡ ಅಷ್ಟೇ ಮುಖ್ಯ. ಒಂದು ಕಥೆಯನ್ನು ಕಲ್ಪಿಸಿಕೊಂಡು, ಅದನ್ನು ದೃಶ್ಯ ರೂಪಕ್ಕೆ ಇಳಿಸುವ ಮಾಂತ್ರಿಕ ನಿರ್ದೇಶಕ. ಹೀರೊ ಚಿತ್ರಕ್ಕೆ ಮುಖವಾಣಿ ಆಗಬಹುದು. ಆದರೆ ಆ ಸಿನಿಮಾ ಸೃಷ್ಟಿಕರ್ತ ನಿರ್ದೇಶಕ ಎನ್ನುವುದನ್ನು ಒಪ್ಪಲೇಬೇಕು.
ಸ್ಟಾರ್ ನಟರ ಆರ್ಭಟದ ನಡುವೆ ನಿರ್ದೇಶಕರು ಗೌಣವಾಗಿಬಿಡುತ್ತಾರೆ. ಆದರೂ ಕೆಲವೊಮ್ಮೆ ನಿರ್ದೇಶಕರು ತಮ್ಮ ನಾಮಬಲದಿಂದಲೇ ಪ್ರೇಕ್ಷಕರನ್ನು ಸೆಳೆಯುವುದು, ಸಿನಿಮಾಗಳನ್ನು ಗೆಲ್ಲಿಸುವುದನ್ನು ನೋಡಿದ್ದೇವೆ. ಹೀರೊ ಯಾರೇ ಇರಲಿ ನಿರ್ದೇಶಕರ ಮೇಲೆ ನಂಬಿಕೆ ಇಟ್ಟು ಸಿನಿಮಾ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದು ಇದೆ.

ಕನ್ನಡದಲ್ಲಿ ಸಿದ್ಧಲಿಂಗಯ್ಯ, ಪುಟ್ಟಣ್ಣ ಕಣಗಲ್, ಶಂಕರ್ ನಾಗ್, ಉಪೇಂದ್ರ, ಕಾಶಿನಾಥ್, ರವಿಚಂದ್ರನ್, ರಿಷಬ್ ಶೆಟ್ಟಿ ಸೇರಿದಂತೆ ಸಾಕಷ್ಟು ನಿರ್ದೇಶಕರು ತಮ್ಮ ಸಿನಿಮಾಗಳ ಮೂಲಕ ಸದ್ದು ಮಾಡಿದ್ದಾರೆ. ತೆಲುಗಿನಲ್ಲಿ ವಿಟ್ಟಲಾಚಾರ್ಯ, ಬಾಪು, ಕೆ. ವಿಶ್ವನಾಥ್, ಕೆ. ರಾಘವೇಂದ್ರ ರಾವ್, ರಾಜಮೌಳಿ, ಪೂರಿ ಜಗನ್ನಾಥ್ ಹೀಗೆ ಸಾಕಷ್ಟು ಸ್ಟಾರ್ ನಿರ್ದೇಶಕರಿದ್ದಾರೆ. ತಮಿಳಿನಲ್ಲಿ ಕೆ. ಬಾಲಚಂದನ್, ಭಾರತಿರಾಜಾ, ಶಂಕರ್, ಕೆ. ಎಸ್ ರವಿಕುಮಾರ್ ಹೀಗೆ ಸಾಕಷ್ಟು ಘಟಾನುಘಟಿ ಫಿಲ್ಮ್ ಮೇಕರ್ಸ್ ಚಿತ್ರರಂಗದಲ್ಲಿ ಮೆರೆದಿದ್ದಾರೆ.
ಇತ್ತೀಚೆನ ವರ್ಷಗಳಲ್ಲಿ ಹೊಸ ನಿರ್ದೇಶಕರ ದರ್ಬಾರ್ ಜೋರಾಗಿದೆ. ಮಾಸ್ ಸಬ್ಜೆಕ್ಟ್, ಎಲಿವೇಷನ್ಸ್ ಮೂಲಕ ದರ್ಬಾರ್ ನಡೆಸುತ್ತಿದ್ದಾರೆ. ಕ್ರೇಜಿ ಕಾಂಬಿನೇಷನ್ನಲ್ಲಿ ಸಿನಿಮಾಗಳನ್ನು ಮಾಡಿ ಮೋಡಿ ಮಾಡುತ್ತಿದ್ದಾರೆ. ಮುಂದಿನ ಸ್ಟಾರ್ ಡೈರೆಕ್ಟರ್ ಹಾಗೂ ಸೂಪರ್ ಸ್ಟಾರ್ ಡೆಡ್ಲಿ ಕಾಂಬಿನೇಷನ್ನಲ್ಲಿ ಒಂದಷ್ಟು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಮೇಕಿಂಗ್ ಹಂತದಲ್ಲೇ ಆ ಸಿನಿಮಾಗಳು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬಾಕ್ಸಾಫೀಸ್ನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡುವ ಚರ್ಚೆ ನಡೀತಿದೆ.

ರಜನಿಕಾಂತ್- ಲೋಕೇಶ್
ಸೂಪರ್ ಹಿಟ್ ಸಿನಿಮಾಗಳ ಮೂಲಕ ಲೋಕೇಶ್ ಕನಕರಾಜ್ ಕಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. 'ಕೈದಿ', 'ಮಾಸ್ಟರ್', 'ವಿಕ್ರಂ', 'ಲಿಯೋ' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ಇದೀಗ ಲೋಕೇಶ್ ಜೊತೆ ಸೂಪರ್ ಸ್ಟಾರ್ ರಜನಿಕಾಂತ್ ಕೈ ಜೋಡಿಸಿದ್ದಾರೆ. 'ಕೂಲಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಉಪೇಂದ್ರ, ಸತ್ಯರಾಜ್, ವರಲಕ್ಷ್ಮಿ ಶರತ್ಕುಮಾರ್ ಸೇರಿದಂತೆ ದೊಡ್ಡ ತಾರಾಗಣ 'ಕೂಲಿ' ಚಿತ್ರದಲ್ಲಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಆಮೀರ್ ಖಾನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅನಿರುದ್ದ್ ರವಿಚಂದರ್ ಮ್ಯೂಸಿಕ್ ಚಿತ್ರಕ್ಕಿದ್ದು ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ.
ಮಹೇಶ್ -ಮೌಳಿ
ನಿರ್ದೇಶಕ ರಾಜಮೌಳಿ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿರುವ ಜಕ್ಕಣ್ಣ 'RRR' ಬಳಿಕ ಹೊಸ ಸಿನಿಮಾ ಆರಂಭಿಸಿದ್ದಾರೆ. ಮಹೇಶ್ ಬಾಬು ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ SSMB29 ಸಿನಿಮಾ ನಿರ್ಮಾಣವಾಗುತ್ತಿದೆ.
ಎರಡು ಭಾಗಗಳಾಗಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಹೇಶ್- ಮೌಳಿ ಕಾಂಬಿನೇಷನ್ನಲ್ಲಿ ಬಹಳ ಹಿಂದೆಯೇ ಸಿನಿಮಾ ನಿರ್ಮಾಣವಾಗಬೇಕಿತ್ತು. ಕಾರಣಾಂತರಗಳಿಂದ ತಡವಾಗಿತ್ತು. ಈ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಲೆಕ್ಕಾಚಾರ ನಡೀತಿದೆ.
ಎನ್ಟಿಆರ್- ನೀಲ್
ಮಾಸ್ ಸಿನಿಮಾಗಳ ಸರದಾರ ಪ್ರಶಾಂತ್ ನೀಲ್. 'ಕೆಜಿಎಫ್' ಸರಣಿ ಬಳಿಕ 'ಸಲಾರ್' ಸಿನಿಮಾ ಮಾಡಿ ನೀಲ್ ಗೆದ್ದಿದ್ದಾರೆ. ಇದೀಗ ತೆಲುಗು ನಟ ಜ್ಯೂ. ಎನ್ಟಿಆರ್ ಜೊತೆ ಹೊಸ ಸಿನಿಮಾ ಆರಂಭಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಕೂಡ ಆರಂಭವಾಗಿದೆ. ಮುಂದಿನ ವರ್ಷ ಏಪ್ರಿಲ್ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಎನ್ಟಿಆರ್ ಅಭಿಮಾನಿ ನೀಲ್. ಹಾಗಾಗಿ ತಮ್ಮ ನೆಚ್ಚಿನ ನಟನನ್ನು ಹೇಗೆ ತೆರೆಮೇಲೆ ತೋರಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ಚಿತ್ರದ ಟೈಟಲ್ 'ಡ್ರ್ಯಾಗನ್' ಎನ್ನಲಾಗ್ತಿದೆ.
ಪ್ರಭಾಸ್- ನೀಲ್
ಈಗಾಗಲೇ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ 'ಸಲಾರ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರದ ಸೀಕ್ವೆಲ್ ಕೂಡ ಬರಲಿದೆ. ಇದು ನನ್ನ ಕರಿಯರ್ನಲ್ಲೇ ದೊಡ್ಡ ಸಿನಿಮಾ ಎಂದು ಪ್ರಶಾಂತ್ ನೀಲ್ ಹೇಳುತ್ತಾ ಬರ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಲಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ನಿರ್ಮಾಣವಾಗಲಿದೆ. 'ಡ್ರ್ಯಾಗನ್' ಸಿನಿಮಾ ಬಳಿಕ 'ಸಲಾರ್-2' ಬರುವ ಸಾಧ್ಯತೆಯಿದೆ.
ಅರ್ಜುನ್ - ಅಟ್ಲಿ
ತಮಿಳು ನಿರ್ದೇಶಕ ಅಟ್ಲಿ ಕೂಡ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಗೆದ್ದಿದ್ದಾರೆ. ಬಳಿಕ ಯಾವುದೇ ಸಿನಿಮಾ ಕೈಗೆತ್ತಿಕೊಂಡಿರಲಿಲ್ಲ. ಇತ್ತ 'ಪುಷ್ಪ' ಸರಣಿ ಸಿನಿಮಾಗಳಲ್ಲಿ ನಟಿಸಿ ಅಲ್ಲು ಅರ್ಜುನ್ ಸಕ್ಸಸ್ ಕಂಡಿದ್ದರು. ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಇತ್ತು. ಅಚ್ಚರಿ ಎನ್ನುವಂತೆ ಅಲ್ಲು ಅರ್ಜುನ್- ಅಟ್ಲಿ ಕಾಂಬಿನೇಷನ್ನಲ್ಲಿ ಸಿನಿಮಾ ಘೋಷಣೆ ಆಗಿದೆ.
ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಅಲ್ಲು ಅರ್ಜುನ್- ಅಟ್ಲಿ ಜೋಡಿಯ ಸಿನಿಮಾ ನಿರ್ಮಾಣವಾಗಲಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರ ನಿರ್ಮಾಣ ಮಾಡಲಿದೆ. ಭಾರೀ ಗ್ರಾಫಿಕ್ಸ್ ಬಳಸಿ ಅದ್ಭುತ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಸಿನಿಮಾ ಬಜೆಟ್ 700 ಕೋಟಿ ರೂ. ಎನ್ನಲಾಗ್ತಿದೆ. ಇತ್ತೀಚೆಗೆ ಬನ್ನಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಪೆಷಲ್ ಪ್ರೋಮೊ ರಿಲೀಸ್ ಮಾಡಿ ಸಿನಿಮಾ ಘೋಷಣೆ ಮಾಡಲಾಗಿತ್ತು. ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಯಶ್- ನೀಲ್
'ಕೆಜಿಎಫ್' ಸರಣಿ ಸಿನಿಮಾಗಳು ಬರೆದ ದಾಖಲೆ ಅಷ್ಟಿಷ್ಟಲ್ಲ. ಚಾಪ್ಟರ್-2 ಬಳಿಕ ಯಶ್ ಹಾಗೂ ನೀಲ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇಬ್ಬರೂ ಜೊತೆಯಾಗಿ 'ಕೆಜಿಎಫ್'-3 ಸಿನಿಮಾ ಮಾಡಬೇಕಿದೆ. ಆದಷ್ಟು ಬೇಗ ಇಬ್ಬರು ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ. ಇದು ಮತ್ತೊಂದು ಡೆಡ್ಲಿ ಕಾಂಬಿನೇಷನ್ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ.
ಹೊಂಬಾಳೆ ಸಂಸ್ಥೆಯೇ ಸಿನಿಮಾ ನಿರ್ಮಾಣ ಮಾಡಲಿದೆ. ಇತ್ತೀಚೆಗೆ ಚಾಪ್ಟರ್-2 ಸಿನಿಮಾ 3 ವರ್ಷ ಪೂರೈಸಿತ್ತು. ಈ ವೇಳೆ ಸ್ಪೆಷಲ್ ವೀಡಿಯೋ ರಿಲೀಸ್ ಮಾಡಿತ್ತು ಚಿತ್ತತಂಡ. ಆದಷ್ಟು ಬೇಗ ರಾಕಿಭಾಯ್ ಬರ್ತಾನೆ ಎಂದು ಕೂಡ ಹೇಳಿದೆ. ಇದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಪ್ರಭಾಸ್- ವಂಗಾ
'ಅರ್ಜುನ್ ರೆಡ್ಡಿ', 'ಅನಿಮಲ್' ರೀತಿಯ ಬ್ಲಾಕ್ಬಸ್ಟರ್ ಹಿಟ್ ಕೊಟ್ಟ ಸಂದೀಪ್ ರೆಡ್ಡಿ ವಂಗಾ ಮುಂದೆ ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. 'ಸ್ಪಿರಿಟ್' ಎಂದು ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಇವರಿಬ್ಬರ ಕಾಂಬಿನೇಷನ್ ಚಿತ್ರಕ್ಕಾಗಿ ಅಭಿಮಾನಿಗಳು ಬೆರಗುಗಣ್ಣಿನಿಂದ ಕಾಯುತ್ತಿದ್ದಾರೆ.
ಇನ್ನುಳಿದಂತೆ ರಜನಿಕಾಂತ್ ಹಾಗೂ ನೆಲ್ಸನ್ ಜೋಡಿಯ 'ಜೈಲರ್-2', ರಾಮ್ಚರಣ್ ಬುಚ್ಚಿ ಬಾಬು ಕಾಂಬಿನೇಷನ್ 'ಪೆದ್ದಿ', ಸುಕುಮಾರ್ ಹಾಗೂ ರಾಮ್ಚರಣ್ ಹೊಸ ಸಿನಿಮಾ, ಪ್ರಭಾಸ್- ಹನು ರಾಘವಪುಡಿ ಜೋಡಿಯ 'ಫೌಜಿ' ಹೀಗೆ ಒಂದಷ್ಟು ಕ್ರೇಜಿ ಕಾಂಬಿನೇಷನ್ ಸಿನಿಮಾಗಳು ಕುತೂಹಲ ಮೂಡಿಸಿದೆ. ಬಾಕ್ಸಾಫೀಸ್ನಲ್ಲಿ ದೊಡ್ಡದಾಗಿ ಸದ್ದು ಮಾಡುವ ಸಾಧ್ಯತೆಯಿದೆ.


Click it and Unblock the Notifications











