ನಾನು ರಾಹುಲ್ ಗಾಂಧಿ ಅವರ ದೊಡ್ಡ ಅಭಿಮಾನಿ- ಶಿವಣ್ಣ
ಮೇ 07ರಂದು ಚುನಾವಣೆ ಪ್ರೀ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಲಿದೆ. 2ನೇ ಹಂತದ ಲೋಕಸಭೆ ಚುನಾವಣೆ 14 ಕ್ಷೇತ್ರಗಳಲ್ಲಿ ನಡೆಯಲಿದೆ. ಈ ಹಿನ್ನೆಲೆ ಕೊನೆ ಹಂತದ ಕಸರತ್ತು ನಡೆಯುತ್ತಿದೆ.
ಇನ್ನೂ ನಿಮಗೆ ಗೊತ್ತು.. ಕನ್ನಡ ಚಿತ್ರರಂಗದ ಸೆಂಚ್ಯೂರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಈ ಬಾರಿ ಕಣದಲ್ಲಿದ್ದಾರೆ. ಶಿವಮೊಗ್ಗದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯುವ ನಿರೀಕ್ಷೆಯಲ್ಲಿ ಅನೇಕರು ಇದ್ದಾರೆ. ಇದಕ್ಕೆ ಪೂರಕವಾಗಿ ಪತ್ನಿಯನ್ನ ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಂತೆ ಇರುವ ಡಾ.ಶಿವರಾಜ್ ಕುಮಾರ್ ಹಗಲಿರುಳು ಎನ್ನದೇ ಪತ್ನಿಯ ಪರ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಪ್ರಚಾರದ ಸಮಯದಲ್ಲಿ ನಾನು ರಾಹುಲ್ ಗಾಂಧಿ ಅವರ ಅಭಿಮಾನಿ ಎಂದು ಹೇಳಿದ್ದಾರೆ.

ಹೌದು.. ಶಿವಮೊಗ್ಗದಲ್ಲಿ ನಡೆದ ಬೃಹತ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾಗಿದ್ದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ಧರಾಮಯ್ಯ , ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ದುನಿಯಾ ವಿಜಯ್ ಕೂಡ ಇದ್ದರು. ಈ ಸಮಯದಲ್ಲಿ ಮಾತನಾಡಿದ ಶಿವಣ್ಣ, ನಾನು ರಾಹುಲ್ ಗಾಂಧಿ ಅವರ ಮನುಷ್ಯತ್ವಕ್ಕೆ ಅಭಿಮಾನಿ ಎಂದರು.
ಅವರ ದೈಹಿಕ ಸಾಮರ್ಥ್ಯ ನೋಡಿದರೆ ಖುಷಿ ಎನ್ನಿಸುತ್ತದೆ. ಏಕೆಂದರೆ ದೇಶದ ನಾಯಕರಾದವರು ಮೊದಲು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ದೈಹಿಕ ಸದೃಢತೆ ಕಾಪಾಡಿಕೊಳ್ಳಬೇಕು. ರಾಹುಲ್ ಗಾಂಧಿ ಅವರನ್ನು ನೋಡಿದಾಗ ದೈಹಿಕವಾಗಿ ಸದೃಢತೆ ಹೊಂದಿದವರು ದೇಶವನ್ನೂ ಇದೇ ರೀತಿ ಇಟ್ಟುಕೊಳ್ಳುತ್ತಾರೆ ಅನ್ನಿಸುತ್ತದೆ. ರಾಹುಲ್ ಗಾಂಧಿ ಕೂಡ ಪ್ರಧಾನಿಯಾದರೆ ದೇಶವನ್ನು ಫಿಟ್ ಆಗಿಯೇ ಇಡಬಲ್ಲರು ಎಂದು ಡಾ.ಶಿವರಾಜ್ ಕುಮಾರ್ ಹೇಳಿದರು

ಶಿವಮೊಗ್ಗದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿದ್ದೇನೆ. ಅದೂ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಂತವರೊಂದಿಗೆ ವೇದಿಕೆ ಹಂಚಿಕೊಂಡಿದ್ದೇನೆ. ನನ್ನೊಂದಿಗೆ ನಟ ದುನಿಯಾ ವಿಜಯ್ ಕೂಡ ಭಾಗಿಯಾಗಿರುವುದು ಸಂತಸ ಕೊಟ್ಟಿದೆ ಎಂದು ಶಿವರಾಜಕುಮಾರ್ ಹೇಳಿದರು.
ಉಳಿದಂತೆ 15 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಅವರ ಎದುರು ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಪಕ್ಷೇತರರಾಗಿ ಕೆ.ಎಸ್.ಈಶ್ವರಪ್ಪ ಕಣದಲ್ಲಿದ್ದಾರೆ. ಇನ್ನೂ ದಶಕದ ಹಿಂದೆ ಗೀತಾ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಆಗ ಶಿವರಾಜಕುಮಾರ್ ಪತ್ನಿ ಪರವಾಗಿ ಮತಯಾಚಿಸಿದ್ದರು. ಚುನಾವಣೆ ಮುಗಿಯುವವರಗೂ ಜತೆಯಲ್ಲಿಯೇ ಇದ್ದರು. ಈ ಬಾರಿ ಕಾಂಗ್ರೆಸ್ನಿಂದ ಗೀತಾ ಸ್ಪರ್ಧಿಸಿದ್ದು., ಈ ಬಾರಿಯೂ ಶಿವಮೊಗ್ಗದಲ್ಲೇ ಶಿವರಾಜಕುಮಾರ್ ಬೀಡು ಬಿಟ್ಟಿದ್ದಾರೆ.

ಅಂದ್ಹಾಗೇ ನಾನು ರಾಹುಲ್ ಗಾಂಧಿ ಅವರ ಅಭಿಮಾನಿ ಎಂದು ಶಿವಣ್ಣ ಹೇಳಿರುವುದು ಇದು ಮೊದಲೇನಲ್ಲ. ಹಿಂದೆಯೂ ಶಿವಣ್ಣ ಈ ಮಾತನ್ನ ಹೇಳಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಜೊತೆ ವೇದಿಕೆ ಹಂಚಿಕೊಂಡಿದ್ದ ಶಿವಣ್ಣ, ನಾನು ರಾಹುಲ್ ಗಾಂಧಿ ಅವರ ಅಭಿಮಾನಿ, ಅವರನ್ನು ನೋಡಬೇಕು ಎಂಬ ಆಸೆ, ಪ್ರೀತಿಯಿಂದ ಇಲ್ಲಿಗೆ ಬಂದಿದ್ದೇನೆ. ರಾಹುಲ್ ಗಾಂಧಿ ಒಳ್ಳೆಯ ಉದ್ದೇಶಕ್ಕಾಗಿ ಭಾರತ್ ಜೋಡೋ ಯಾತ್ರೆ ಮಾಡಿದ್ದು, ನನಗೆ ಅತ್ಯಂತ ಸ್ಫೂರ್ತಿದಾಯಕವಾಗಿತ್ತು. ಎಂದು ಹೇಳಿದ್ದರು


Click it and Unblock the Notifications











