ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ತಾರೆಯರು ಯಾರ್ಯಾರು? ಯಾರ ಭವಿಷ್ಯ ಏನಾಗಲಿದೆ?
ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. 7 ಹಂತಗಳಲ್ಲಿ ಈ ಬಾರಿಯ ಚುನಾವಣೆ ಮತದಾನ ಪ್ರಕ್ರಿಯೆ ನಡೆಯಿತು. ಭರ್ಜರಿ ಪ್ರಚಾರದಿಂದ ಚುನಾವಣೆ ಕಣ ರಂಗೇರಿತ್ತು. ಲೋಕಸಭೆ ಚುನಾವಣೆ ಜೊತೆಗೆ ದೇಶದ ರಾಜ್ಯಗಳ ವಿಧಾನಸಭೆ ಚುನಾವಣೆ ಕೂಡ ನಡೆದಿದೆ. ಎಲ್ಲಾ ಕ್ಷೇತ್ರಗಳ ಫಲಿತಾಂಶ ನಾಳೆ(ಜೂನ್ 4) ಹೊರಬೀಳಲಿದೆ.
ರಾಜಕೀಯರಂಗ ಹಾಗೂ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧ. ಸಿನಿಮಾ ತಾರೆಯರು ರಾಜಕೀಯ ಪ್ರವೇಶಿಸುವುದು ದಶಕಗಳಿಂದ ನಡೆದುಬಂದಿದೆ. ಇನ್ನು ಈ ಬಾರಿ ಲೋಕಸಭೆ ಚುನಾವಣೆಗೆ ಸಾಕಷ್ಟು ಸಿನಿಮಾ ತಾರೆಯರು ಸ್ಪರ್ಧಿಸಿದ್ದಾರೆ. ಎಲ್ಲರ ರಾಜಕೀಯ ಭವಿಷ್ಯ ಆದಷ್ಟು ಗೊತ್ತಾಗಲಿದೆ. ಕಂಗನಾ ರಾಣಾವತ್, ಅರುಣ್ ಗೋವಿಲ್ ಸೇರಿದಂತೆ ಬಾಲಿವುಡ್ನಲ್ಲಿ ಹಲವರು ಕಣದಲ್ಲಿದ್ದಾರೆ.

ಖ್ಯಾತ ನಟಿ ಹೇಮಾ ಮಾಲಿನಿ ಮಥುರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕಳೆದ ಎರಡು ಬಾರಿ ಸಂಸದೆಯಾಗಿ ಸೇವೆ ಸಲ್ಲಿಸಿರುವ ಆಕೆ ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಲ್ಲಿ ಹಿರಿಯ ನಟ ಶತ್ರುಘ್ನ ಸಿನ್ಹಾ ತ್ರುಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಭೋಜ್ಪುರಿ ನಟ ಪವನ್ ಸಿಂಗ್ ಸ್ವತಂತ್ರ ಅಭ್ಯರ್ಥಿಯಾಗಿ ಸವಾಲ್ ಹಾಕಿದ್ದಾರೆ.
ಮೀರತ್ ಕ್ಷೇತ್ರದಿಂದ ನಟ ಅರುಣ್ ಗೋವಿಲ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ರಾಮಾಯಣ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿ ಅರುಣ್ ಪ್ರಖ್ಯಾತರಾಗಿದ್ದರು. ಇನ್ನು ಗೋರಖ್ ಪುರ ಕ್ಷೇತ್ರದಿಂದ ಪೋಷಕ ನಟ ರವಿ ಕಿಶನ್ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಕೂಡ ಅವರು ನಟಿಸಿದ್ದಾರೆ.
ಇನ್ನು ಕೇರಳದ ತಿಶೂರ್ನಿಂದ ಎನ್ಡಿಎ ಅಭ್ಯರ್ಥಿಯಾಗಿ ನಟ ಸುರೇಶ್ ಗೋಪಿ ಸ್ಪರ್ಧಿಸಿದ್ದಾರೆ. ಚುನಾವಣೆ ಫಲಿತಾಂಶದ ಹೊಸ್ತಿಲಲ್ಲಿ ಎಟ್ಟುಮನೂರ್ ದೇವಸ್ಥಾನದಲ್ಲಿ ತುಲಾಭಾರ ನಡೆಸಿ ಪ್ರಾರ್ಥಿಸಿದ್ದಾರೆ. ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಟಿ ನವ್ನೀತ್ ಕೌರ ಕಣದಲ್ಲಿದ್ದಾರೆ. ಆಕೆ ಕನ್ನಡದ 'ದರ್ಶನ್' ಚಿತ್ರದಲ್ಲಿ ಮಿಂಚಿದ್ದರು.

ತಮಿಳು ನಟಿ ರಾಧಿಕಾ ಶರತ್ಕುಮಾರ್ ತಮಿಳುನಾಡಿನ ವಿರುದುನಗರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ಪಕ್ಷದಿಂದ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಪರವಾಗಿ ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಸ್ಪರ್ಧಿಸಿದ್ದು ಗೆಲ್ಲುವ ತವಕದಲ್ಲಿದ್ದಾರೆ. ಬಹಳ ವರ್ಷಗಳಿಂದ ಆಕೆ ರಾಜಕೀಯ ಪ್ರವೇಶಿಸುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕೊನೆಗೂ ಬಿಜೆಪಿ ಸೇರಿ ಸ್ಪರ್ಧಿಸಿದ್ದರು.
ಕರ್ನಾಟಕದಲ್ಲಿ ಸ್ಟಾರ್ ನಟರು ಯಾರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿಲ್ಲ. ಆದರೆ ನಟ ಶಿವರಾಜ್ಕುಮಾರ್ ಪತ್ನಿ, ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ. ಬೈ ರಾಘವೇಂದ್ರ ಹಾಗೂ ಸ್ವತಂತ್ರ ಅಭ್ಯರ್ಥಿ ಈಶ್ವರಪ್ಪ ಅವರನ್ನು ಎದುರುಸಿದ್ದಾರೆ. ಶಿವಣ್ಣ ಕೂಡ ಪತ್ನಿ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಮಂಡ್ಯದಲ್ಲಿ ಮಾಜಿ ಸಿಎಂ, ಸಿನಿಮಾ ನಿರ್ಮಾಪಕ, ವಿತರಕ ಕುಮಾರಸ್ವಾಮಿ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಆದರೆ ಅವರ ಎದುರಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಪ್ರಚಾರ ನಡೆಸಿದ್ದು ಭಾರೀ ಸದ್ದು ಮಾಡಿತ್ತು.
ಆಂಧ್ರ ವಿಧಾನ ಸಭೆ ಚುನಾವಣೆಯಲ್ಲಿ ನಟರಾದ ಪವನ್ ಕಲ್ಯಾಣ್ ಹಾಗೂ ಬಾಲಕೃಷ್ಣ ಮತದಾರರ ಆಶೀರ್ವಾದ ಪಡೆಯಲು ಕಾಯುತ್ತಿದ್ದಾರೆ. ಹಿಂದೂಪುರ ಕ್ಷೇತ್ರದಿಂದ 3ನೇ ಬಾರಿ ಬಾಲಯ್ಯ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಜನಸೇನಾ ಪಕ್ಷ ಕಟ್ಟಿ ಕಳೆದ ಬಾರಿ ಸೋಲುಂಡಿದ್ದ ಪವನ್ ಕಲ್ಯಾಣ್ ಈ ಬಾರಿ ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಪಿಠಾಪುರಂ ಕ್ಷೇತ್ರದ ಶಾಸಕರಾಗಿ ಪವರ್ ಸ್ಟಾರ್ ಗೆಲ್ಲುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ನಗರಿ ಕ್ಷೇತ್ರದಿಂದ 3ನೇ ಬಾರಿ ನಟಿ ರೋಜಾ ಸ್ಪರ್ಧಿಸಿದ್ದಾರೆ. ವೈಎಸ್ಆರ್ಪಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಕೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications











