ತಂದೆ ತಾಯಿ ಪ್ರೀತಿ ವಂಚಿತ ಅಮೆರಿಕ
ಭೂತಯ್ಯನ ಮಗ ಅಯ್ಯು ಚಿತ್ರ ನೋಡಿದ್ದೀರಾ? ಹಾಗಾದರೆ, ನಿಮಗೆ ಉಪ್ಪಿನಕಾಯಿಗೆ ಅಂಗಲಾಚುವ ವ್ಯಕ್ತಿಯ ಪಾತ್ರ ನೆನಪಿದೆ ಅಲ್ಲವೇ? ಲೋಕನಾಥ್ ಕನ್ನಡ ಚಿತ್ರರಂಗದಲ್ಲಿ ನೆಲೆನಿಂತಿದ್ದು, ಆ ಚಿತ್ರದಿಂದಲೇ, ಸಿಂಗಪೂರ್ನಲ್ಲಿ ರಾಜಾಕುಳ್ಳ, ಮಿಂಚಿನ ಓಟ ಮೊದಲಾದ ಚಿತ್ರಗಳಲ್ಲಿ ನಟಿಸಿದ ಲೋಕನಾಥ್ ಇತ್ತೀಚೆಗೆ ಉದಯಟಿವಿಯಲ್ಲಿ ಪ್ರಸಾರವಾದ ಶಕ್ತಿ ಮೆಗಾ ಧಾರಾವಾಹಿಯಲ್ಲಿ ಮಿಂಚಿದ್ದರು. ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಬಹುತೇಕ ನಟರಾಗೇ ತಮ್ಮನ್ನು ಗುರುತಿಸಿಕೊಂಡಿದ್ದ ಲೋಕನಾಥ್ ಈಗ ಚಿತ್ರ ನಿರ್ಮಾಣ ಹಾಗೂ ನಿರ್ದೇಶನಕ್ಕೂ ಕೈಹಾಕಿದ್ದಾರೆ.
70ರ ಹರೆಯದ ಲೋಕನಾಥ್ ನಾಲ್ಕು ತಿಂಗಳ ಹಿಂದೆ ತಮ್ಮ ಪುತ್ರ ಅಶ್ವಿನಿ ಶಾಂಡಿಲ್ಯ, ಸೊಸೆ ಹಾಗೂ ಮೊಮ್ಮಗನ ನೋಡಲು ಅಮೆರಿಕಕ್ಕೆ ಹೋಗಿದ್ದರಂತೆ. ಮಗ ಸೊಸೆ ಇಬ್ಬರೂ ಅಮೆರಿಕದಲ್ಲಿ ನೌಕರಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯರ ಮಕ್ಕಳು ತಂದೆ ತಾಯಿಗಳ ಪ್ರೀತಿ - ಮಮತೆ ವಾತ್ಸಲ್ಯದಿಂದ ವಂಚಿತರಾಗುವ ಪರಿ ಲೋಕನಾಥರ ಮನ ಕಲಕಿತು.
\ಮಾತಾ ಪಿತೃಗಳ ಪ್ರೀತಿ ವಂಚಿತರಾಗಿ ಬೆಳೆವ ಭಾರತೀಯ ಮಕ್ಕಳ ಅನುಭವವನ್ನೆಲ್ಲಾ ಸಂಗ್ರಹಿಸಿದ ಲೋಕನಾಥ್ ಅನೀಶ್ ಹಾಗೂ ಆತನ ಸೋದರಿ ಶಾರದಾರ ಸುತ್ತ ನಡೆಯುವ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು 39 ದಿನಗಳ ಕಾಲ 36 ಲಕ್ಷ ರುಪಾಯಿ ವೆಚ್ಚದಲ್ಲಿ 29 ದಿನಗಳ ಕಾಲ ಅನೀಶ್ ಎಂಬ ಹೆಸರಿನ ಟೆಲಿ ಚಿತ್ರದ ಚಿತ್ರೀಕರಣ ಪೂರೈಸಿದ್ದಾರೆ. ಈ ಚಿತ್ರೀಕರಣ ಸಂದರ್ಭದಲ್ಲಿ ಕನ್ನಡ ನಾಡಿನಿಂದ ಬಂದಿದ್ದ ಕಲಾವಿದರು ಉತ್ತಮವಾಗಿ ಸಹಕರಿಸಿದರು ಎಂಬುದು ಲೋಕನಾಥರ ಹೇಳಿಕೆ.
ಆದರೆ, ಈ ಕಲಾವಿದರಲ್ಲಿ ಅಸಮಾಧಾನದ ಹೊಗೆ ಆಡುತ್ತಿದೆ. ಚಿತ್ರೀಕರಣ ಸಂದರ್ಭದಲ್ಲಿ ಕಲಾವಿದರು ಪಟ್ಟ ಪಾಡು ಅಷ್ಟಿಷ್ಟಲ್ಲ . ವಾರಕ್ಕೊಮ್ಮೆ ಶೂಟಿಂಗ್, ಉಳಿದ ದಿನವೆಲ್ಲ ಗೃಹಬಂಧನ, ಯಾಕಪ್ಪಾ ಈ ಗೋಳು ಎಂದು ಕೆಲವರು ಗುಟ್ಟಾಗಿ ಗೊಣಗಾಡಿದ್ದಾರೆ. ಅದೇನೇ ಇರಲಿ, ಈ ಚಿತ್ರದಲ್ಲಿ ದೇವರ ಸ್ತೋತ್ರಗಳಲ್ಲದೆ ನಾಲ್ಕು ಗೀತೆಗಳೂ ಇವೆ. ಭಾರತೀಯ ದಂಪತಿಗಳ ಮಕ್ಕಳಾದ ಅನೀಶ್ ಹಾಗೂ ಶಾರಾದಾ ಈ ಚಿತ್ರದ ನಾಯಕ - ನಾಯಕಿಯರಾದರೂ, ವಿನಯಾ ಪ್ರಸಾದ್, ರಾಮಕೃಷ್ಣ ಮುಖ್ಯ ಭೂಮಿಕೆಯಲ್ಲಿದ್ದಾರೆ.
ತಾಯಿ ಮಮತೆ ವಂಚಿತ ಮಕ್ಕಳಿಗೆ ತಾತ ರಂಗಣ್ಣನ ಆಗಮನದ ನಂತರ ವಾತ್ಸಲ್ಯ ಉಕ್ಕಿ ಹರಿಯುತ್ತದೆ. ಮುರಳೀಧರ್ ಛಾಯಾಗ್ರಹಣ, ಕುಮಾರ್ ಈಶ್ವರ್ ಸಂಗೀತ, ಸುನಿಲ್ ಕುಮಾರ್ ಸಂಭಾಷಣೆ ಇರುವ ಈ ಚಿತ್ರದ ಕತೆ, ಚಿತ್ರಕತೆ, ನಿರ್ದೇಶನ ಲೋಕನಾಥರದೇ.
ತಾರಾಬಳಗದಲ್ಲಿ ಅನೀಶ್ ಶಾಂಡಿಲ್ಯ, ರಾಮಕೃಷ್ಣ, ವಿನಯಾ ಪ್ರಸಾದ್, ಲಿಂಗದೇವರು, ಮುರಳಿ ಜೊತೆಗೆ ತಾತನ ಪಾತ್ರದಲ್ಲಿ ಲೋಕನಾಥ್ ಇದ್ದಾರೆ.


Click it and Unblock the Notifications