ರಿಷಬ್ ಶೆಟ್ಟಿ ಕೈಬಿಟ್ಟ ಈ ದೊಡ್ಡ ಚಿತ್ರ ಲೂಸ್ ಮಾದ ಯೋಗಿ ಪಾಲು!

ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ 2010ರಲ್ಲಿ ತೆರೆಕಂಡ 'ನಮ್ ಏರಿಯಾಲ್ ಒಂದ್ ದಿನ' ಎಂಬ ಚಿತ್ರದ ಮೂಲಕ ಒಟ್ಟಿಗೆ ಕನ್ನಡ ಚಲನಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದ ಬಳಿಕ ಇಬ್ಬರೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದು, ಒಂದೊಂದೇ ಹೆಜ್ಜೆ ಇಡುತ್ತಾ ಮೇಲೆ ಬಂದವರು. ಮೊದಲಿಗೆ ಇಬ್ಬರು ನಟರಿದ್ದ ಪಾತ್ರದಲ್ಲಿ ನಟಿಸಿ ನಂತರ ಏಕನಾಯಕನಿರುವ ಚಿತ್ರಗಳ ಅವಕಾಶ ಪಡೆದುಕೊಂಡ ರಕ್ಷಿತ್ ಶೆಟ್ಟಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಬ್ರೇಕ್ ಪಡೆದು ಬಳಿಕ ತಾವೇ ನಟನಾಗಿ ಹಾಗೂ ನಿರ್ದೇಶಕನಾಗಿ ಉಳಿದವರು ಕಂಡಂತೆ ಚಿತ್ರ ಮಾಡಿ ಗೆದ್ದರು. ಈ ಚಿತ್ರದಲ್ಲಿ ರಿಷಬ್ ಶೆಟ್ಟಿಯೂ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಇತ್ತ ಸಹ ನಟನಾಗಿ ಹಲವು ಚಿತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ರಿಷಬ್ ಶೆಟ್ಟಿ ರಿಕ್ಕಿ ಎಂಬ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದರು. ಈ ಚಿತ್ರದಲ್ಲಿ ನಾಯಕನನ್ನಾಗಿ ತಮ್ಮ ಗೆಳೆಯ ರಕ್ಷಿತ್ ಶೆಟ್ಟಿಯನ್ನು ರಿಷಬ್ ಆರಿಸಿಕೊಂಡಿದ್ದರು. ಹೀಗೆ ಇಬ್ಬರೂ ಸಹ ತಮ್ಮ ನಿರ್ದೇಶನದ ಮೊದಲ ಚಿತ್ರಗಳಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಆಯ್ಕೆ ಮಾಡಿಕೊಂಡಿದ್ದ ಈ ಜೋಡಿ ತಮ್ಮ ನಂತರದ ಬಹುತೇಕ ಎಲ್ಲಾ ಚಿತ್ರಗಳಲ್ಲೂ ಒಟ್ಟಿಗೆ ಕಾಣಿಸಿಕೊಂಡಿತ್ತು.
ಅದರಲ್ಲಿಯೂ ಕಿರಿಕ್ ಪಾರ್ಟಿ ರೀತಿಯ ಬೃಹತ್ ಚಿತ್ರವನ್ನು ನೀಡಿದ ಈ ಸ್ನೇಹಿತರು ಮತ್ತೊಮ್ಮೆ 'ಬ್ಯಾಚುಲರ್ ಪಾರ್ಟಿ'ಗಾಗಿ ಒಂದಾಗಿದ್ದರು. ಹೌದು, ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ರಿಷಬ್ ಶೆಟ್ಟಿ, ಅಚ್ಯುತ್ ಕುಮಾರ್ ಹಾಗೂ ದಿಗಂತ್ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ ಎಂದು ಪೋಸ್ಟರ್ ಅನ್ನೂ ಸಹ ಬಿಡುಗಡೆಗೊಳಿಸಲಾಗಿತ್ತು. ಆದರೆ ಕಾಂತಾರ ಬಳಿಕ ರಿಷಬ್ ಶೆಟ್ಟಿ ಈ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈಗ ಚಿತ್ರದಲ್ಲಿ ರಿಷಬ್ ಶೆಟ್ಟಿ ನಿರ್ವಹಿಸಬೇಕಿದ್ದ ಪಾತ್ರಕ್ಕೆ ಬದಲಿ ನಟನ ಆಯ್ಕೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ರಿಷಬ್ ಬದಲಾಗಿ ಯೋಗಿ ಆಯ್ಕೆ
ಅಭಿಜಿತ್ ಮಹೇಶ್ ನಿರ್ದೇಶನದ ಬ್ಯಾಚುಲರ್ ಪಾರ್ಟಿಯಲ್ಲಿ ರಿಷಬ್ ಶೆಟ್ಟಿ ನಿರ್ವಹಿಸಬೇಕಿದ್ದ ಪಾತ್ರದಲ್ಲಿ ಲೂಸ್ ಮಾದ ಯೋಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಇದೀಗ ಹರಿದಾಡುತ್ತಿದೆ. ಕೆಲವರು ಇದು ಸರಿಯಾದ ಆಯ್ಕೆ ಎಂದಿದ್ದರೆ, ಇನ್ನೂ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಲೂಸ್ ಮಾದ ಯೋಗಿ ಇದೇ ವರ್ಷ ತೆರೆಕಂಡಿದ್ದ 'ಹೆಡ್ ಬುಷ್' ಚಿತ್ರದಲ್ಲಿ ಗಂಗಾ ಎಂಬ ಪಾತ್ರವನ್ನು ಮಾಡಿ ಜನರ ಮನ ಗೆದ್ದು ಮತ್ತಷ್ಟು ಚಿತ್ರಗಳಲ್ಲಿ ನಟಿಸಿ ನಿಮ್ಮನ್ನು ರಂಜಿಸಲು ಇಚ್ಛಿಸುತ್ತೇನೆ ಎಂದಿದ್ದರು.

ಕಾಂತಾರ 2ನಲ್ಲಿ ರಿಷಬ್ ಬ್ಯುಸಿ ಎಂದಿದ್ರು ದಿಗಂತ್
ಇನ್ನು ರಿಷಬ್ ಶೆಟ್ಟಿ ಕಾಂತಾರ 2 ಚಿತ್ರದ ಕತೆ ಬರೆಯುವ ಕೆಲಸದಲ್ಲಿ ನಿರತರಾಗಿದ್ದಾರೆ, ಅವರು ನಮ್ಮ ಕೈಗೆ ಸಿಗ್ತಾ ಇಲ್ಲ, ಬ್ಯಾಚುಲರ್ ಪಾರ್ಟಿಯಲ್ಲಿ ಅವರು ನಟಿಸುತ್ತಿಲ್ಲ, ಅವರ ಬದಲಾಗಿ ಬೇರೆ ನಟನನ್ನು ಆಯ್ಕೆ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಬ್ಯಾಚುಲರ್ ಪಾರ್ಟಿಯ ಮತ್ತೋರ್ವ ನಟ ದಿಗಂತ್ ಸಂದರ್ಶನವೊಂದರಲ್ಲಿ ಹೇಳಿಕೆ ನೀಡುವುದರ ಮೂಲಕ ಚಿತ್ರದಿಂದ ರಿಷಬ್ ಶೆಟ್ಟಿ ಹೊರನಡೆದಿರುವುದನ್ನು ಖಚಿತಪಡಿಸಿದ್ದರು.

ಸಾಲು ಸಾಲು ಚಿತ್ರಗಳಲ್ಲಿ ಯೋಗಿ ಬ್ಯುಸಿ
ಕಾಮಿಡಿ ಎಂಟರ್ಟೈನರ್ ಚಿತ್ರಗಳಲ್ಲಿ ತಾನು ನಿಸ್ಸೀಮ ಎಂಬುದನ್ನು ಈ ಹಿಂದೆಯೇ ನಿರೂಪಿಸಿಕೊಂಡಿರುವ ಲೂಸ್ ಮಾದ ಯೋಗಿ ಇದೀಗ ಬ್ಯಾಚುಲರ್ ಪಾರ್ಟಿಯಲ್ಲಿ ನಟಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಿದೆ. ಸದ್ಯ ಯೋಗೇಶ್ ಅಭಿನಯದ 'ನಾನು ಅದು ಮತ್ತು ಸರೋಜ' ಬಿಡುಗಡೆಗೆ ಸಿದ್ಧವಿದ್ದು, 'ಪರಿಮಳ ಲಾಡ್ಜ್' ಸಹ ತೆರೆ ಕಾಣಬೇಕಿದೆ. ಇನ್ನುಳಿದಂತೆ ಕಿರಿಕ್ ಶಂಕರ್, ಲಂಕಾಸುರ ಹಾಗೂ ಆಡಿದ್ದೇ ಆಟ ಚಿತ್ರಗಳಲ್ಲಿ ಲೂಸ್ ಮಾದ ಯೋಗಿ ನಟಿಸಿದ್ದಾರೆ.


Click it and Unblock the Notifications











