ಇನ್ನೊಂದು ಮ್ಯಾಚ್ ಬೇಕಾದ್ರೂ ಸೋತುಬಿಡಿ ಆದ್ರೆ ಆ ತಂಡದ ಮೇಲೆ ಮಾತ್ರ ಗೆಲ್ಲಲೇಬೇಕು; ಆರ್ಸಿಬಿಗೆ ಸುನಿ ಮನವಿ
ಸದ್ಯ ಎಲ್ಲೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಹಾವಳಿ ಜೋರಾಗಿದ್ದು, ಲೀಗ್ ಹಂತದ ಪಂದ್ಯಗಳ ಆರಂಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾಕೋ ಅತ್ಯುತ್ತಮ ಆರಂಭವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಹಾಗೂ ಮೂರನೇ ಪಂದ್ಯಗಳಲ್ಲಿ ಸೋಲನ್ನು ಕಂಡು ಹಿನ್ನಡೆ ಅನುಭವಿಸಿದೆ.
ಅದರಲ್ಲಿಯೂ ಮೊನ್ನೆ ( ಏಪ್ರಿಲ್ 10 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೃಹತ್ ಮೊತ್ತವನ್ನು ದಾಖಲಿಸಿ ಕಠಿಣ ಸವಾಲನ್ನು ನೀಡಿದರೂ ಸಹ ಸೋಲನ್ನು ಅನುಭವಿಸಿದೆ. ಹೌದು, ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 212 ರನ್ಗಳನ್ನು ಕಲೆಹಾಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 213 ರನ್ಗಳ ಗುರಿ ನೀಡಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೆಜಿಎಫ್ ಎಂದೇ ಖ್ಯಾತಿಯನ್ನು ಪಡೆದಿರುವ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಭರ್ಜರಿ ಆಟದ ನೆರವಿನಿಂದ ಆರ್ಸಿಬಿ ಈ ಬೃಹತ್ ಮೊತ್ತವನ್ನು ಕಲೆಹಾಕಿ ಗೆಲ್ಲುವ ಭರವಸೆ ಮೂಡಿಸಿತ್ತು. ಆದರೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಮಾರ್ಕಸ್ ಸ್ಟೊಯ್ನಿಸ್ ಹಾಗೂ ನಿಕೋಲಸ್ ಪೂರನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿ ಒಂದು ವಿಕೆಟ್ ಅಂತರದ ರೋಚಕ ಜಯ ಕಂಡಿತ್ತು.
ಹೀಗೆ ಅಷ್ಟು ದೊಡ್ಡ ಮೊತ್ತ ಕಲೆಹಾಕಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಬೌಲಿಂಗ್ನಿಂದಾಗಿ ಸೋತಿದ್ದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾಭಿಮಾನಿಯಾಗಿರುವ ನಿರ್ದೇಶಕ ಸಿಂಪಲ್ ಸುನಿ ಸಹ ಈ ಪಂದ್ಯ ಮುಕ್ತಾಯವಾದ ಬಳಿಕ ಟ್ವೀಟ್ ಮಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮನವಿಯೊಂದನ್ನು ರವಾನಿಸಿದ್ದಾರೆ.

"ಈ ಮ್ಯಾಚ್ ಅಷ್ಟೇ ಅಲ್ಲಾ ಬೇಕಾದರೆ 15 ನೇ ತಾರೀಖು ಇರೋ ಇನ್ನೊಂದ್ ಮ್ಯಾಚ್ ಕೂಡ ಸೋತುಬಿಡಿ ಆದ್ರೆ, 17ನೇ ತಾರೀಖು ನೆಡೆಯೋ ಮ್ಯಾಚ್ ಮಾತ್ರ ನಮ್ದೇ ಆಗ್ಬೇಕು. Rcbಕೆಂಪು cskಹಳದಿ ಸೇರಿದ ಸ್ಟೇಡಿಯಂಲಿ ಶಿಳ್ಳೆ ಅಲ್ಲಾ ನಮ್ ಕಹಳೆನೇ ಮೊಳಗಬೇಕು. ಧೋನಿ ಮೇಲೆ respect ಇದೆ, ಆದ್ರೆ CSK ಮೇಲೆ ಜಿದ್ದಿದೆ. #RCB ಮೇಲೆ ಪ್ರಾಣನೇ ಇದೆ#rcbforever"ಎಂದು ಬರೆದುಕೊಂಡು ಮುಂದಿನ ಪಂದ್ಯವನ್ನು ಬೇಕಾದ್ರೂ ಸೋಲಿ, ಆದರೆ 17ನೇ ತಾರೀಖು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಮಾತ್ರ ಸೋಲಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಸಿಂಪಲ್ ಸುನಿ "ವೈಡ್ ಬಾಲ್ ಹಾಕೋದು ಬಿಡೋಲ್ಲ, ಬ್ಯಾಟಿಂಗ್ ಚೆನ್ನಾಗಿ ಮಾಡುದ್ರೆ ಬೌಲಿಂಗ್ ಮಾಡೋಲ್ಲ, ಬೌಲಿಂಗ್ ಮಾಡುದ್ರೆ ಬ್ಯಾಟಿಂಗ್ ಆಡೋಲ್ಲ, ಕರ್ನಾಟಕ ಪ್ಲೇಯರ್ಸ್ ನ ತಗೋಳೋಲ್ಲ, Bangaloreನ BENGALURU ಮಾಡೋಲ್ಲ, ಆದ್ರೂ ನಮ್ ಕರ್ಮ ನಿಮ್ನ ದ್ವೇಷಿಸೋಕೆ, ನಮಿಗ್ ಬರೋಲ್ಲ, ನಿಮ್ಮ ಮೇಲೆ ಅಭಿಮಾನ ಕಮ್ಮಿ ಆಗಿಲ್ಲ, RCBforever status ಹಾಕ್ದೆ ಮಲಗೋಲ್ಲ" ಎಂದು ಬರೆದುಕೊಂಡು ಎಷ್ಟೇ ನೆಗೆಟಿವ್ ಅಂಶಗಳಲಿದ್ದರೂ ತಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೆಂಬಲ ನೀಡೋದು ಬಿಡಲ್ಲ ಎಂದು ತಿಳಿಸಿದ್ದಾರೆ.


Click it and Unblock the Notifications











