ಲವ್, ಹಾರರ್, ಕಾಮಿಡಿ, ಥ್ರಿಲ್ಲರ್: ಭಿನ್ನ ವಿಭಿನ್ನ ಜಾನರ್ನ 4 ಕನ್ನಡ ಚಿತ್ರಗಳು ಈ ವಾರ ರಿಲೀಸ್
ಮತ್ತೊಂದು ಶುಕ್ರವಾರ ಹತ್ತಿರ ಬರ್ತಿದೆ. ಸ್ಯಾಂಡಲ್ವುಡ್ನಲ್ಲಿ ಈ ವಾರ 4 ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಕಳೆದ ವಾರ 11 ಸಿನಿಮಾಗಳು ತೆರೆಗಪ್ಪಳಿಸಿದ್ದವು. ಅದರಲ್ಲಿ 'ಹೊಂದಿಸಿ ಬರೆಯಿರಿ' ಸಿನಿಮಾ ಕೊಂಚಮಟ್ಟಿಗೆ ಪ್ರೇಕ್ಷಕರ ಮನಗೆದ್ದಿತ್ತು.
ಈ ವಾರ ಬೇರೆ ಬೇರೆ ಜಾನರ್ನ ಕನ್ನಡ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗ್ತಿವೆ. ಒಂದು ಲವ್ ಸ್ಟೋರಿ ಇದೆ. ಮತ್ತೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ರೆಡಿಯಾಗಿದೆ. ಎರಡು ವರ್ಷದ ಹಿಂದೆ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಹಳ್ಳಿಸೊಗಡಿನ ಕಮರ್ಷಿಯಲ್ ಸಿನಿಮಾ ಕೂಡ ಈ ಲಿಸ್ಟ್ನಲ್ಲಿದೆ. ಇದೆಲ್ಲದರ ಜೊತೆಗೆ ಪ್ರೇಕ್ಷಕರನ್ನು ಹೆದರಿಸಲು ಒಂದು ಹಾರರ್ ಸಿನಿಮಾ ಸಹ ಈ ವಾರ ಬಿಡುಗಡೆ ಆಗುತ್ತಿದೆ.
ಈ ವರ್ಷ ಕನ್ನಡ ಚಿತ್ರರಂಗ ಇನ್ನು ದೊಡ್ಡ ಸಿನಿಮಾಗಳ ಬರ ಎದುರಿಸುತ್ತಿದೆ. ದರ್ಶನ್ ನಟನೆಯ 'ಕ್ರಾಂತಿ' ಬಿಟ್ಟರೆ ದೊಡ್ಡ ಸಿನಿಮಾಗಳು ಇನ್ನು ರಿಲೀಸ್ ಆಗಿಲ್ಲ. ಆದರೆ ಈ ವಾರ ತೆರೆಗೆ ಬರುತ್ತಿರುವ ಸಿನಿಮಾಗಳು ಕೊಂಚಮಟ್ಟಿಗೆ ಭರವಸೆ ಮೂಡಿಸಿವೆ.

ಕೃಷ್ಣ- ಮಿಲನಾ 'ಲವ್ಬರ್ಡ್ಸ್'
ರಿಯಲ್ ಲೈಫ್ನಲ್ಲಿ ಲವ್ ಮಾಡಿ ಮದುವೆ ಆದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. 'ಲವ್ಬರ್ಡ್ಸ್' ಚಿತ್ರದಲ್ಲಿ ಇಬ್ಬರು ಗಂಡ- ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ. ಆಧುನಿಕ ಯುಗದ ದಂಪತಿಗಳ ಸಮಸ್ಯೆಗಳು, ಜಗಳ ಎಲ್ಲವನ್ನು ಈ ಚಿತ್ರದಲ್ಲಿ ಚರ್ಚಿಸಲಾಗುತ್ತಿದೆ. ಪಿ. ಸಿ ಶೇಖರ್ ನಿರ್ದೇಶನದ 'ಲವ್ಬರ್ಡ್ಸ್' ಸಿನಿಮಾ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇನ್ನು ಚಿತ್ರದಲ್ಲಿ ಸಂಯುಕ್ತಾ ಹೊರನಾಡ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವ್ಯಾಲಂಟೈನ್ಸ್ ಡೇ ಬೆನ್ನಲ್ಲೇ ಸಿನಿಮಾ ತೆರೆಗೆ ಬರ್ತಿರೋದು ವಿಶೇಷ. ಈಗಾಗಲೇ ಚಿತ್ರದ ಪ್ರೀಮಿಯರ್ ಶೋ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

ಅಕ್ಷಿತ್ - ಶಶಿಕುಮಾರ್ 'ಖೆಯೊಸ್'
ಸುಪ್ರೀಂ ಹೀರೊ ಶಶಿಕುಮಾರ್ ಪುತ್ರ ಅಕ್ಷಿತ್ ಕಳೆದ ವರ್ಷ 2 ಸಿನಿಮಾಗಳಲ್ಲಿ ನಟಿಸಿದ್ದರು. ಈ ವರ್ಷ ಅಕ್ಷಿತ್ ನಟನೆಯ 3ನೇ ಸಿನಿಮಾ 'ಖೆಯೊಸ್' ರಿಲೀಸ್ಗೆ ರೆಡಿಯಾಗಿದೆ. ವಿಶೇಷ ಅಂದರೆ ಚಿತ್ರದಲ್ಲಿ ತಂದೆ ಶಶಿಕುಮಾರ್ ಕೂಡ ಬಣ್ಣ ಹಚ್ಚಿದ್ದಾರೆ. ತಂದೆ- ಮಗ ಒಟ್ಟಿಗೆ ನಟಿಸಿರುವ ಮೊದಲ ಸಿನಿಮಾ ಇದು. ಡಾಕ್ಟರ್ ಜಿ. ವಿ ಪ್ರಸಾದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮನುಷ್ಯನ ಮನಸ್ಸಿನಲ್ಲಾಗುವ ಗೊಂದಲಗಳನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ. ಈ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವನ್ನು ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ನಿರ್ಮಿಸಿದ್ದಾರೆ.

'ದೊಡ್ಡಹಟ್ಟಿ ಬೋರೇಗೌಡ'ನ ಕಥೆ
ಪಕ್ಕಾ ಹಳ್ಳಿ ಸೊಗಡಿನ ಕಮರ್ಷಿಯಲ್ ಸಿನಿಮಾ 'ದೊಡ್ಡಹಟ್ಟಿ ಬೋರೇಗೌಡ'ಗೂ ಈ ವಾರ ಬಿಡುಗಡೆ ಭಾಗ್ಯ ಸಿಗುತ್ತಿದೆ. 2021ರ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರಕ್ಕೆ ಪ್ರಶಸ್ತಿ ಕೂಡ ಸಿಕ್ಕಿತ್ತು. ಕೆ. ಎಂ ರಘು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಳ್ಳಿಯಲ್ಲಿ ಬಡವರಿಗೆ ಸರ್ಕಾರದಿಂದ ನೀಡುವ ಆಶ್ರಯ ಯೋಜನೆ ಮನೆಯನ್ನು ವ್ಯಕ್ತಿಯೊಬ್ಬ ಪಡೆದುಕೊಳ್ಳಲು ಏನೆಲ್ಲಾ ಕಷ್ಟಪಡುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಹಾಗಂತ ಇದು ಕಲಾತ್ಮಕ ಚಿತ್ರ ಅಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ.

ಹಾರರ್ ಥ್ರಿಲ್ಲರ್ 'ಸಕೂಚಿ'
ಸ್ಯಾಂಡಲ್ವುಡ್ನಲ್ಲಿ ಹಾರರ್ ಸಿನಿಮಾಗಳಿಗೆ ಬರವಿಲ್ಲ. ವಿಭಿನ್ನ ಟೈಟಲ್ನಿಂದ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡ್ತಿರುವ 'ಸಕೂಚಿ' ಸಿನಿಮಾ ಕೂಡ ಈ ವಾರ ತೆರೆಗಪ್ಪಳಿಸ್ತಿದೆ. ವಾಮಾಚಾರದ ಕಥೆ ಇಟ್ಟುಕೊಂಡು ಈ ಕಮರ್ಷಿಯಲ್ ಸಿನಿಮಾ ಕಟ್ಟಿಕೊಡಲಾಗಿದೆ. ಅಶೋಕ್ ಚಕ್ರವರ್ತಿ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ತ್ರಿವಿಕ್ರಮ ಸಾಮ್ರಾಟ್ ಹೀರೊ ಆಗಿ ನಟಿಸಿದ್ದು ನಾಯಕಿಯಾಗಿ ಡಯಾನಾ ಸಾಥ್ ಕೊಟ್ಟಿದ್ದಾರೆ.


Click it and Unblock the Notifications











