ಕರ್ನಾಟಕ ಬಂದ್ ನಡೆದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೆ: ನಿರ್ಮಾಪಕ ಗುರು ದೇಶಪಾಂಡೆ
ಮಹಾಷ್ಟ್ರದಲ್ಲಿ ಕರ್ನಾಟಕ ಧ್ವಜ ಸುಟ್ಟ ಘಟನೆ ಹಾಗೂ ಬೆಳಗಾವಿಯಲ್ಲಿ ಎಂಇಎಸ್ನ ಪುಂಡಾಟಿಕೆಗೆ ವಿರೋಧ ವ್ಯಕ್ತಪಡಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31 ಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಚಿತ್ರರಂಗ ಸಹ ಬಂದ್ಗೆ ಬೆಂಬಲ ನೀಡಿದೆ.
ಡಿಸೆಂಬರ್ 31ರಂದು ಚಿತ್ರಮಂದಿರಗಳ ಚಟುವಟಿಗೆಗಳು ಬಂದ್ ಆಗಿರಲಿವೆ. ಚಿತ್ರಮಂದಿರಗಳು ಸಹ ಬಂದ್ ಆಗಿರಲಿವೆ. ಆದರೆ ಅದೇ ದಿನ ಬಿಡುಗಡೆ ಆಗಲಿರುವ ಕನ್ನಡದ 'ಲವ್ ಯು ರಚ್ಚು' ಸಿನಿಮಾದ ನಿರ್ಮಾಪಕರು ಬಂದ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದೊಟ್ಟಿಗೆ ತಮ್ಮ ಅಸಮಾಧಾನ ತೋಡಿಕೊಂಡಿರುವ 'ಲವ್ ಯು ರಚ್ಚು' ಸಿನಿಮಾದ ನಿರ್ಮಾಪಕ ಗುರು ದೇಶಪಾಂಡೆ, ''ಕನ್ನಡ ಹೋರಾಟ ಎನ್ನುವುದು ಕನ್ನಡಿಗರ ವಿರುದ್ಧವಾದ ಹೋರಾಟ ಆಗಬಾರದು. ಕನ್ನಡಿಗರನ್ನು ಹಾಳು ಮಾಡುವಂತಹಾ ಹೋರಾಟ ಆಗಬಾರದು. ಕನ್ನಡಿಗರನ್ನು ನಂಬಿಕೊಂಡು ನಾವು ಸಿನಿಮಾ ಮಾಡಿದ್ದೇವೆ. ನಮ್ಮ ಜೀವ ಹೋಗುವಂತಹಾ ಹೋರಾಟ ಆಗಬಾರದು'' ಎಂದರು.

''ಡಿಸೆಂಬರ್ 31 ರಂದು ಬಂದ್ ಆದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಷ್ಟೆ. ಒಂದು ತಿಂಗಳಿನಿಂದಲೂ ನಾವು ಸಿನಿಮಾ ಬಿಡುಗಡೆಗೆ ತಯಾರಿ ಮಾಡಿದ್ದೇವೆ. ಸಿನಿಮಾ ಮೇಲೆ ಕೋಟ್ಯಂತರ ರುಪಾಯಿ ಹಣ ಹೂಡಿದ್ದೇವೆ. ಪ್ರಚಾರಕ್ಕೂ ಕೋಟ್ಯಂತರ ಹಣ ಖರ್ಚು ಮಾಡಿದ್ದೇವೆ. ಆದರೆ ಈಗ ಬಂದ್ ಮಾಡಿದರೆ ನಾವು ಹಣ ಹೂಡಿರುವ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಷ್ಟೆ ಅಥವಾ ಯಾರನ್ನಾದರೂ ಹೋಗಿ ಕೊಲೆ ಮಾಡಬೇಕು ಅಷ್ಟೆ ಆ ಹಂತ ಬಂದು ತಲುಪುತ್ತದೆ ಪರಿಸ್ಥಿತಿ'' ಎಂದರು ಗುರು ದೇಶಪಾಂಡೆ.
''ಎಷ್ಟು ಸಮಸ್ಯೆ ಇದೆ ನಮ್ಮ ಸಿನಿಮಾಕ್ಕೆ. ಮೊದಲನೇಯದಾಗಿ ನಮ್ಮ ಹೀರೋ (ಅಜಯ್ ರಾವ್) ನಮಗೆ ಬೆಂಬಲ ನೀಡಲ್ಲ ಅಂತಿದ್ದಾನೆ. ಇನ್ನೊಂದು ಕಡೆ ಜನವರಿ 7ನೇ ತಾರೀಖು 'ಆರ್ಆರ್ಆರ್' ಸಿನಿಮಾ ಬಿಡುಗಡೆ ಆಗುತ್ತಿದೆ. ಈಗ ನೋಡಿದರೆ ಸಿನಿಮಾ ಬಿಡುಗಡೆ ದಿನವೇ ಬಂದ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಎಲ್ಲಿ ಅಂತ ನಾವು ಹೋರಾಟ ಮಾಡೋಣ. ಸಿನಿಮಾ ಮಾಡೋದೆ ತಪ್ಪಾ? ಸಿನಿಮಾ ಚೇಂಬರ್ನವರೇ, ಶುಕ್ರವಾರ ಬಂದ್ ಎನ್ನುತ್ತಿದ್ದಾರೆ. ಇವರಿಗೆ ಯೋಚಿಸುವ ಶಕ್ತಿಯೇ ಇಲ್ಲವಾ? ಕೋಟ್ಯಂತರ ಹಣ ಹಾಕಿರುವ ಸಿನಿಮಾಗಳು ಶುಕ್ರವಾರ ಬಿಡುಗಡೆ ಆಗುತ್ತವೆ ಅಂದು ಬಂದ್ ಮಾಡಬಾರದು ಎಂಬ ಕನಿಷ್ಟ ಜ್ಞಾನವೂ ಅವರಿಗೆ ಇಲ್ಲವೇ?'' ಎಂದು ಗುರು ದೇಶಪಾಂಡೆ ಪ್ರಶ್ನೆ ಮಾಡಿದ್ದಾರೆ.
''ಬಂದ್ ಮಾಡುವುದು ಖಾಯಂ ಆದರೆ ನಾವು ಸಿನಿಮಾ ಬಿಡುಗಡೆ ಮಾಡಬೇಕೆ ಬೇಡವೇ ಎಂಬ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ನಾನು ನಾಳೆ ಚೇಂಬರ್ನವರನ್ನು ಭೇಟಿ ಆಗಲಿದ್ದೇನೆ. ಅವರಲ್ಲಿ ಮನವಿ ಮಾಡಿಕೊಳ್ಳಲಿದ್ದೇನೆ. ಬಂದ್ ದಿನ ಬದಲಾಯಿಸಿ ಎಂದು ಕೇಳಿಕೊಳ್ಳಲಿದ್ದೇನೆ. ಆ ನಂತರ ನಮ್ಮ ಸಿನಿಮಾ ಬಿಡುಗಡೆ ಮಾಡಬೇಕೆ ಬೇಡವೆ ಎಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದ್ದೇನೆ. ಸದ್ಯಕ್ಕೆ ನಾನು ಸ್ವತಃ ಗೊಂದಲದಲ್ಲಿದ್ದೇನೆ'' ಎಂದಿದ್ದಾರೆ ಗುರು ದೇಶಪಾಂಡೆ.
'ಲವ್ ಯು ರಚ್ಚು' ಸಿನಿಮಾಕ್ಕೆ ಆರಂಭದಿಂದಲೂ ಒಂದಲ್ಲ ಒಂದು ವಿಘ್ನಗಳು ಕಾಡುತ್ತಲೇ ಇವೆ. ಸಿನಿಮಾದ ಚಿತ್ರೀಕರಣ ನಡೆವ ಸಂದರ್ಭದಲ್ಲಿ ವಿದ್ಯುತ್ ಅವಘಡ ನಡೆದು ಸಾಹಸ ಕಲಾವಿದ ವಿವೇಕ್ ಸಾವನ್ನಪ್ಪಿದ. ಮತ್ತೊಬ್ಬ ಕಲಾವಿದ ಗಾಯಗೊಂಡ. ಸಿನಿಮಾದ ನಿರ್ದೇಶಕ, ಸಾಹಸ ನಿರ್ದೇಶಕ ಹಾಗೂ ಮತ್ತೊಬ್ಬ ವ್ಯಕ್ತಿ ಬಂಧನಕ್ಕೆ ಒಳಗಾದರು. ನಿರ್ಮಾಪಕ ಗುರು ದೇಶಪಾಂಡೆ ತಲೆಮರೆಸಿಕೊಂಡರು. ಅವರಿಗೆ ಬೇಲ್ ದೊರೆತು ಹಾಗೋ ಹೀಗೋ ಸಿನಿಮಾದ ಚಿತ್ರೀಕರಣ ಪೂರ್ಣ ವಾಯಿತು, ಪ್ರಚಾರದ ವೇಳೆಗೆ ನಿರ್ಮಾಪಕ ಹಾಗೂ ನಾಯಕ ನಟ ಅಜಯ್ ರಾವ್ ಬಗ್ಗೆ ಮುನಿಸು ಏರ್ಪಟ್ಟಿತು. ಇದೀಗ ಸಿನಿಮಾವು ಡಿಸೆಂಬರ್ 31 ರಂದು ಬಿಡುಗಡೆ ಘೊಷಿಸಲಾಗಿದೆ ಆದರೆ ಈಗ ಅದೇ ದಿನ ಕರ್ನಾಟಕ ಬಂದ್ ಘೋಷಿಸಲಾಗಿದೆ.


Click it and Unblock the Notifications











