ಉದ್ದೇಶದಿಂದ ಅವಘಡ ನಡೆಯಲ್ಲ, ನಾನು ಸ್ಥಳದಲ್ಲಿ ಇರಲಿಲ್ಲ: ರಚಿತಾ ರಾಮ್
'ಲವ್ ಯೂ ರಚ್ಚು' ದುರಂತಕ್ಕೆ ಸಂಬಂಧಪಟ್ಟಂತೆ ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಇತ್ತೀಚಿಗಷ್ಟೆ ಖಾಸಗಿ ಜಮೀನಿನಲ್ಲಿ ಲವ್ ಯೂ ರಚ್ಚು ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಹೈ ಟೆನ್ಷನ್ ವೈರ್ ತಗುಲಿ ಸಾಹಸ ಕಲಾವಿದ ವಿವೇಕ್ ಮೃತಪಟ್ಟಿದ್ದರು.
Recommended Video

ಈ ಅವಘಡ ಹಿನ್ನೆಲೆ ಬಿಡದಿ ಪೊಲೀಸ್ ಠಾಣೆಯಲ್ಲಿ ಸುಮೋಟೊ ಕೇಸ್ ದಾಖಲಿಸಿಕೊಂಡಿದ್ದು, ಚಿತ್ರ ನಿರ್ದೇಶಕ ಶಂಕರ್, ಫೈಟ್ ಮಾಸ್ಟರ್ ವಿನೋದ್ ಹಾಗು ಕ್ರೇನ್ ಆಪರೇಟರ್ ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ ನ್ಯಾಯಾಲಯವೂ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಘಟನೆ ನಡೆದ ವೇಳೆ ಚಿತ್ರದ ನಟ ಅಜಯ್ ರಾವ್ ಸ್ಥಳದಲ್ಲಿದ್ದರು. ಆದರೆ, ನಟಿ ರಚಿತಾ ರಾಮ್ ಸೆಟ್ನಲ್ಲಿ ಇರಲಿಲ್ಲ ಎಂದು ತಿಳಿದು ಬಂದಿತ್ತು. ಆದರೂ ಈ ಕೇಸ್ ಸಂಬಂಧ ಹೇಳಿಕೆ ನೀಡುವಂತೆ ಪೊಲೀಸರು ಸೂಚಿಸಿದ್ದರು. ಹಾಗಾಗಿ, ಮಂಗಳವಾರ ಸಂಜೆ ವೇಳೆ ಬಿಡದಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ರಚಿತಾ ರಾಮ್ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ರಚಿತಾ ರಾಮ್, ''ನಾನು ವಿಚಾರಣೆಗಾಗಿ ಇವತ್ತು ಬಂದಿದ್ದೇನೆ. ಅವಘಡ ನಡೆದ ಸಂದರ್ಭದಲ್ಲಿ ನಾನು ಸ್ಥಳದಲ್ಲಿ ಇರಲಿಲ್ಲ, ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೆ. ಹಾಗಾಗಿ ನನಗೆ ಗೊತ್ತಿದ್ದ ವಿಚಾರವನ್ನ ತಿಳಿಸಿದ್ದೇನೆ'' ಎಂದು ಲವ್ ಯು ರಚ್ಚು ಚಿತ್ರದ ನಾಯಕಿ ಮಾಹಿತಿ ನೀಡಿದ್ದಾರೆ. ಮುಂದೆ ಓದಿ...

ಶೂಟಿಂಗ್ ವೇಳೆ ನಾನು ಇರಲಿಲ್ಲ
''ಚಿತ್ರೀಕರಣ ವೇಳೆ ನಡೆದ ದುರಂತದ ಸಂದರ್ಭದಲ್ಲಿ ನಾನು ಸ್ಥಳದಲ್ಲಿ ಇರಲಿಲ್ಲ. ಅದನ್ನ ಹೇಳಲು ಅಷ್ಟೇ ನಾನು ಪೊಲೀಸ್ ಠಾಣೆಗೆ ಬಂದಿದ್ದೇನೆ. ಮಾಧ್ಯಮಗಳಲ್ಲಿ ನೋಡಿದ ಬಳಿಕ ಫೈಟರ್ ವಿವೇಕ್ ಸಾವಿನ ವಿಚಾರ ತಿಳಿಯಿತು. ಆದರೆ ಹೇಗಾಯಿತು ಎಂಬುದು ನನಗೆ ಗೊತ್ತಿಲ್ಲ. ನಾನು ಹಳೇ ಶೆಡೂಲ್ ನಲ್ಲಿ ಇದ್ದೇ, ಆದರೆ ಇದು ಹೊಸ ಶೆಡೂಲ್ ಶೂಟಿಂಗ್ನಲ್ಲಿ ನಾನು ಇರಲಿಲ್ಲ. ಟಿವಿ ಮಾಧ್ಯಮಗಳು ಹಳೇ ವಿಡಿಯೋಗಳು ಹಾಕಿದ್ದಾರೆ ಅಷ್ಟೇ, ಚಿತ್ರದ ಫೈಟಿಂಗ್ ಸೀನ್ ನಲ್ಲಿ ಹೀರೋಯಿನ್ಗೆ ಕೆಲಸ ಇರೋದಿಲ್ಲ. ಹಾಗಾಗಿ ಯಾವ ರೀತಿಯ ಶೂಟ್ ಕಂಪೋಸ್ ಮಾಡಿದ್ದರೂ ಎಂಬ ಮಾಹಿತಿ ನನಗೆ ಇಲ್ಲ.'' ಎಂದು ರಚಿತಾ ತಿಳಿಸಿದರು.

ಉದ್ದೇಶಪೂರ್ವಕವಾಗಿ ನಡೆಯಲ್ಲ
''ಇದರಲ್ಲಿ ನಿರ್ಲಕ್ಷ್ಯ ಮಾಡೋದು ಅಥವಾ ಉದ್ದೇಶಪೂರ್ವಕವಾಗಿ ಮಾಡೋದು ಏನು ಇಲ್ಲ. ಅದು ಅನಿರೀಕ್ಷಿತವಾಗಿ ನಡೆದ ಅನಾಹುತ. ಅದಕ್ಕೆ ತುಂಬಾ ಬೇಸರವಿದೆ. ಬರಿ ಸ್ಟಂಟ್ ವೇಳೆ ಮಾತ್ರವಲ್ಲ, ಯಾವುದೇ ಸೀನ್ ಇದ್ದರೂ ಮುಂಜಾಗ್ರತಾ ಕ್ರಮವಹಿಸಬೇಕು. ಅಜಯ್ ರಾವ್ ಅವರು ಸ್ಥಳದಲ್ಲಿ ಇದ್ದ ಬಗ್ಗೆ ನನಗೆ ಗೊತ್ತಿಲ್ಲ. ಯಾಕೆಂದರೆ ನಾನು ಸ್ಥಳದಲ್ಲಿ ಇರಲಿಲ್ಲ, ಹಾಗಾಗಿ ಆ ಬಗ್ಗೆ ಏನು ಹೇಳಲು ಆಗಲ್ಲ'' ಎಂದು ರಚಿತಾ ಸ್ಪಷ್ಟನೆ ನೀಡಿದ್ದಾರೆ.

ನನ್ನ ವಿಚಾರಣೆ ಮುಗಿದಿದೆ
''ಚಿತ್ರೀಕರಣ ವೇಳೆ ಇಂತಹ ಘಟನೆಗಳು ನಡೆದಾಗ ಎಲ್ಲರೂ ಹೋಗಬೇಕು. ಆ ಕ್ಷಣದಲ್ಲಿ ನಮಗೆ ಏನಾದರೂ ಆದರೆ ಎಲ್ಲರೂ ಬರುತ್ತಾರೆ. ಹಾಗಾಗಿ ಅಲ್ಲಿ ಯಾರೇ ಇದ್ದರೂ ಹೋಗಬೇಕಾಗುತ್ತೆ. ಆದರೆ ಅಜಯ್ ರಾವ್ ಇದ್ದ ಬಗ್ಗೆ ಗೊತ್ತಿಲ್ಲ ಎಂದರು. ಇನ್ನು ಇಂದಿನ ನನ್ನ ವಿಚಾರಣೆ ಮುಗಿದಿದೆ. ಎಲ್ಲಾ ಪ್ರಶ್ನೆಗೆ ಉತ್ತರ ನೀಡಿದ್ದೇನೆ. ಡಿವೈಎಸ್ಪಿ ಮೋಹನ್ ಕುಮಾರ್ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ನೀಡಿದ್ದೇನೆ'' ಎಂದು ಡಿಂಪಲ್ ಕ್ವೀನ್ ಹೇಳಿದರು.

ಜೈಲಿನಲ್ಲಿ ಮೂವರು
ಸಾಹಸ ನಿರ್ದೇಶಕ ವಿನೋದ್, ಸಿನಿಮಾ ನಿರ್ದೇಶಕ ಶಂಕರ್ ಹಾಗೂ ಕ್ರೇನ್ ಆಪರೇಟರ್ ರಾಮನಗರ ಜೈಲಿನಲ್ಲಿದ್ದಾರೆ. ಮತ್ತೊಂದೆಡೆ ಚಿತ್ರದ ನಿರ್ಮಾಪಕ ಗುರುದೇಶಪಾಂಡೆ ತಲೆಮರೆಸಿಕೊಂಡಿದ್ದಾರೆ. ನಿರ್ಮಾಪಕರ ಪರವಾಗಿ ಪತ್ನಿ ಸುದ್ದಿಗೋಷ್ಠಿ ನಡೆಸಿ, ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದರು. ಇನ್ನು ವಿವೇಕ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾನು ಚಿತ್ರೀಕರಣ ಮಾಡಲ್ಲ ಎಂದು ನಟ ಅಜಯ್ ರಾವ್ ಹೇಳಿದ್ದರು.


Click it and Unblock the Notifications











