ರೈತರ ಪ್ರತಿಭಟನೆ: ರೈತ ಹೋರಾಟಕ್ಕಿಂತ ಇದು ಜನಸಾಮಾನ್ಯರ ಹೋರಾಟ ಆಗಬೇಕು- ಕವಿರಾಜ್
ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದೆ. ಇಂದು (ಡಿಸೆಂಬರ್ 8) ರೈತರು ದೇಶದಾದ್ಯಂತ ಬಂದ್ ಗೆ ಕರೆ ನೀಡಿದ್ದಾರೆ. ಕೃಷಿ ಕಾಯ್ದೆಯನ್ನು ರದ್ದುಗೊಳಿಸುವಂತೆ ರೈತರು ಪಟ್ಟು ಹಿಡಿದಿದ್ದಾರೆ.
ರೈತರ ಪ್ರತಿಭಟನೆಗೆ ಅನೇಕರು ಬೆಂಬಲ ನೀಡಿದ್ದಾರೆ. ಅನೇಕ ಸಿನಿಮಾ ಮತ್ತು ಕ್ರೀಡಾ ತಾರೆಯರು ರೈತರ ಬೆನ್ನಿಗೆ ನಿಂತಿದ್ದಾರೆ. ಬಾಲಿವುಡ್ ಕಲಾವಿದರಾದ ದಿಲ್ಜಿತ್ ದೊಸಾಂಜ್, ಪ್ರಿಯಾಂಕಾ ಚೋಪ್ರಾ, ಸೋನಂ ಕಪೂರ್, ರಿತೇಶ್ ದೇಶಮುಖ್ ಸೇರಿದಂತೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ನಟ ಚೇತನ್ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಗೀತರಚನೆಗಾರ ಮತ್ತು ನಿರ್ದೇಶಕ ಕವಿ ರಾಜ್ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ.

ಹೆಚ್ಚು ಸಂಕಷ್ಟಕ್ಕೆ ಒಳಗಾಗುವುದು ಸಾಮಾನ್ಯ ನಾಗರೀಕರು
ಹೊಸ ರೈತ ಮಸೂದೆಯಿಂದ ಅಂತಿಮವಾಗಿ ರೈತರಿಗಿಂತ ಹೆಚ್ಚು ಸಂಕಷ್ಟಕ್ಕೆ ಒಳಗಾಗುವುದು ಸಾಮಾನ್ಯ ನಾಗರೀಕರೇ. ಮೂರು ಹೊತ್ತಿನ ತುತ್ತಾಗಿ ಪ್ರತಿ ಜನರ ಪ್ರತೀ ದಿನದ ಅವಶ್ಯಕತೆಯಾದ ಕೃಷಿ, ಆಹಾರ ಉತ್ಪನ್ನಗಳ ಉತ್ಪಾದನೆ ಮತ್ತು ಸರಬರಾಜು ಜಾಲವು ಒಂದು ಬಾರಿ ಸಂಪೂರ್ಣವಾಗಿ ಕಾರ್ಪೋರೇಟ್ ಕಂಪೆನಿಗಳ ಏಕಸ್ವಾಮ್ಯದ ಕಪಿಮುಷ್ಟಿಗೆ ಬಂದರೆ ಮುಗಿಯಿತು. ಖಂಡಿತಾ ಅದು ರೈತರ ಅಥವಾ ಗ್ರಾಹಕರ ಹಿತಕಾಯುವುದಿಲ್ಲ.

ಕಾರ್ಪೊರೇಟ್ ವ್ಯವಸ್ಥೆ ತೀರದ ಹಸಿವಿನ ತಿಮಿಂಗಿಲವಿದ್ದಂತೆ
ಅದರ ಮೊದಲ ಗುರಿಯೇ ತನ್ನ 'ಕಿಲ್ಲಿಂಗ್ ಇನ್ಸ್ಟಿಂಕ್ಟ್' ಉಳ್ಳ ಸ್ಪರ್ಧಾತ್ಮಕತೆಯಿಂದ ಕೆಲವೇ ವರ್ಷಗಳಲ್ಲಿ ಪರ್ಯಾಯ ವ್ಯವಸ್ಥೆ ಆಗಿರುವ ಎಪಿಎಂಸಿ ಮತ್ತು ಇನ್ನಿತರ ವ್ಯವಸ್ಥೆಯನ್ನು ಮಟ್ಟಹಾಕುವುದು. ಎಪಿಎಂಸಿ ವ್ಯವಸ್ಥೆ, ಈಗಿರುವ ದಲ್ಲಾಳಿ ವ್ಯವಸ್ಥೆ ಲಾಭಕೋರತನದಲ್ಲಿ ಮೀನಾದರೆ ಕಾರ್ಪೊರೇಟ್ ವ್ಯವಸ್ಥೆ ತೀರದ ಹಸಿವಿನ ತಿಮಿಂಗಿಲವಿದ್ದಂತೆ.

ಉತ್ಪಾದನೆಯ ಮೇಲೂ ಹಿಡಿತ ಸಾಧಿಸುವುದು ಅಪಾಯಕಾರಿ
ಎಪಿಎಂಸಿ ವ್ಯವಸ್ಥೆಗೆ ಕೇವಲ ಸರಬರಾಜಿನ ಮೇಲೆ ಹಿಡಿತ ಇತ್ತಷ್ಟೇ. ಆದರೆ ಹೊಸ ಕೃಷಿ ಕಾಯಿದೆ ಕಾರ್ಪೋರೇಟ್ ಗಳಿಗೆ ಉತ್ಪಾದನೆಯ ಮೇಲೂ ಹಿಡಿತ ಸಾಧಿಸಲು ಅವಕಾಶ ಕೊಡುತ್ತದೆ. ಅದು ಅತ್ಯಂತ ಅಪಾಯಕಾರಿ. ಕಾರ್ಪೊರೇಟ್ ಕುಳಗಳು ತಮ್ಮಲ್ಲಿರುವ ಅಪಾರ ಬಂಡವಾಳ ಹಾಗೂ ತಮ್ಮ ಕೈ ಗೊಂಬೆ ಆಗಿರುವ ರಾಜಕೀಯ ವ್ಯವಸ್ಥೆಯನ್ನು ಬಳಸಿ ಕೆಲವೇ ವರ್ಷಗಳಲ್ಲಿ ಅದರ ಹೊರತಾಗಿ ಇನ್ನಾರ ಕೈಗೂ ಕೃಷಿ ಉತ್ಪನ್ನಗಳು ಸಿಗದಂತೆ ಚಕ್ರವ್ಯೂಹ ರಚಿಸುತ್ತದೆ.

ಶೋರೂಂಗಳಲ್ಲಿ ಇಟ್ಟು ಮನಬಂದ ಬೆಲೆ ನಿಗದಿ ಮಾರುತ್ತಾರೆ
ನಂತರ ದಿನನಿತ್ಯದ ಆಹಾರಗಳನ್ನು ಚಂದವಾಗಿ ಪ್ಯಾಕಿಂಗ್ ಮಾಡೀ ಮಿರಮಿರ ಮಿಂಚುವ ಶೋರೂಂಗಳಲ್ಲಿ ಇಟ್ಟು ಮನಬಂದ ಬೆಲೆ ನಿಗದಿ ಮಾರುತ್ತಾರೆ. (ತಿಂಗಳಿಗೆ 150 ರೂಪಾಯಿಗೆ ಕೇಬಲ್ ವ್ಯವಸ್ಥೆಯಲ್ಲಿ 300 ಚಾನೆಲ್ ನೋಡುತ್ತಿದ್ದ ಜಾಗದಲ್ಲಿ ಕಾರ್ಪೋರೇಟ್ ಕಂಪೆನಿಗಳ ಪ್ರವೇಶವಾಗಿ ಐನೂರು, ಸಾವಿರ ಕೊಟ್ಟು ಒಂದಷ್ಟು ಸೆಲೆಕ್ಟೆಡ್ ಚಾನೆಲ್ಸ್ ನೋಡಿದಂತೆ) ಉಳ್ಳವರೇನೋ "ಆಹಾ ಭಾರತ ಅಮೇರಿಕಾವಾಗಿದೆ" ಎಂದು ಕೊಂಡು ತಿನ್ನುತ್ತಾರೆ . ಆದರೆ ಸಾಮಾನ್ಯ ಜನರಿಗೆ ತಳ್ಳು ಗಾಡಿಯವರ ಬಳಿ ಚೌಕಾಸಿ ಮಾಡಿ ಹತ್ತಿಪ್ಪತ್ತು ರೂಪಾಯಿ ಕಡಿಮೆ ಕೊಟ್ಟು, ಒಂದೆರೆಡು ಎಕ್ಸ್ಟ್ರಾ ಹಾಕಿಸಿಕೊಂಡು ಬಂದಂತಲ್ಲ.
Recommended Video

ಇದು ಜನಸಾಮಾನ್ಯರ ಹೋರಾಟ ಆಗಬೇಕಿತ್ತು
ದುಬಾರಿ ತರಕಾರಿ ಧಾನ್ಯಗಳನ್ನು ಕೊಳ್ಳಲಾಗದೆ ಬರೀ ಗಂಜಿ ಕುಡಿಯಬೇಕಾಗುತ್ತಷ್ಟೇ. ನಿಜ ಎಂದರೆ ಇದು ರೈತಹೋರಾಟಕ್ಕಿಂತ ಜನಸಾಮಾನ್ಯರ ಹೋರಾಟ ಆಗಬೇಕಿತ್ತು. ಆದರೆ ಜನಸಾಮಾನ್ಯರಿಗೆ ತಮ್ಮ ಬುಡಕ್ಕೆ ಬರುವವರೆಗೆ ಇದೆಲ್ಲಾ ಅರ್ಥವಾಗದಷ್ಟು ಹಗಲು ಗುರುಡು ಆವರಿಸಿದೆ.


Click it and Unblock the Notifications











