ಆರ್ಸಿಬಿ ಐಪಿಎಲ್ ಕಪ್ ಗೆಲ್ಲದಿರಲು ಕಾರಣ ಹೇಳಿದ ಕವಿರಾಜ್
ಪ್ರತಿ ಬಾರಿಯೂ ಐಪಿಎಲ್ ಆವೃತ್ತಿ ಶುರುವಾದಾಗ ಆರ್ಸಿಬಿ ಅಭಿಮಾನಿಗಳಲ್ಲಿ ಒಂದು ಭರವಸೆ. ಈ ಸಲ ಕಪ್ ನಮ್ದೆ ಎಂಬ ಆಸೆಯೊಂದಿಗೆ ಇಡೀ ಸೀಸನ್ ಕಾದರೂ ಕೊನೆ ಘಳಿಗೆಯಲ್ಲಿ ಕಪ್ ಗೆಲ್ಲಲು ಆರ್ಸಿಬಿಯಿಂದ ಸಾಧ್ಯವಾಗುತ್ತಿಲ್ಲ. ಆದರೂ ಆರ್ಸಿಬಿ ಮೇಲಿನ ಅಭಿಮಾನ, ನಂಬಿಕೆ ಕಳೆದಕೊಳ್ಳದ ಕ್ರಿಕೆಟ್ ಪ್ರೇಮಿಗಳು ಮುಂದಿನ ಸಲ ಕಪ್ ನಮ್ದೆ ಎಂಬ ನಿರೀಕ್ಷೆಯೊಂದಿಗೆ ಸೀಸನ್ ಮುಗಿಸ್ತಾರೆ.
ಇಷ್ಟು ವರ್ಷದ ಆಟದಲ್ಲಿ ಆರ್ಸಿಬಿ ಒಮ್ಮೆಯೂ ಕಪ್ ಗೆದ್ದಿಲ್ಲ. ಏಕೆ ಎಂದು ಅನೇಕರು ಹಲವು ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. 2021ನೇ ಸಾಲಿನಲ್ಲೂ ಆರ್ಸಿಬಿ ಫೈನಲ್ ಪ್ರವೇಶಿಸದ ಹಿನ್ನಡೆ ಅನುಭವಿಸಿದ ಹಿನ್ನೆಲೆ ಗೀತಾರಚನೆಕಾರ ಕವಿರಾಜ್ ಆರ್ಸಿಬಿ ತಂಡದ ಬಲಹೀನತೆ ಬಗ್ಗೆ ಮಾತನಾಡಿದ್ದಾರೆ.
''RCB ಯಾವತ್ತೂ 11 ಜನರ ಉತ್ತಮ ತಂಡ ಕಟ್ಟಲೇ ಇಲ್ಲ. ಪ್ರತಿ ಸೀಸನ್ನಲ್ಲೂ, ಪ್ರತಿ ಪಂದ್ಯದಲ್ಲೂ ಕನಿಷ್ಠ 2 ರಿಂದ 3, IPL ಗುಣಮಟ್ಟಕ್ಕೆ ಸಾಟಿಯಾಗದ, ತಂಡಕ್ಕೆ ಹೊರೆ ಆಗುವ ಆಟಗಾರರನ್ನು ಆಡುವ ಹನ್ನೊಂದರೊಳಗೆ ಇರಿಸಿಕೊಂಡೇ ಕಣಕ್ಕಿಳಿದಿದೆ. ಬ್ಯಾಟಿಂಗ್ ಆಗಲಿ, ಬೌಲಿಂಗ್ ಆಗಲಿ ಒಂದೇ ಒಂದು ಕೆಟ್ಟ ಅಥವಾ ಒಳ್ಳೆ ಓವರ್ ಪಂದ್ಯದ ಗತಿಯನ್ನೇ ಬದಲಿಸಿಬಿಡಬಲ್ಲ ಈ ಫಾರ್ಮ್ಯಾಟ್ ನಲ್ಲಿ ಇಷ್ಟೊಂದು ವೀಕ್ ಲಿಂಕ್ಸ್ ಇಟ್ಟುಕೊಂಡ ತಂಡ ಚಾಂಪಿಯನ್ ಆಗುವುದು ಸಾಧ್ಯವೇ ಇಲ್ಲ'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

''RCB ಈ ತನಕದ ಬಹುತೇಕ ವಿಜಯಗಳು ಒಬ್ಬರೋ ಇಬ್ಬರೋ ಆಟಗಾರರ ಅದ್ಭುತ ಪ್ರದರ್ಶನದಿಂದಲೇ ಬಂದವು. ತಂಡವಾಗಿ ಕೈ ಜೋಡಿಸಿ ಗೆದ್ದುಕೊಂಡ ಪಂದ್ಯಗಳ ಸಂಖ್ಯೆ ಕಡಿಮೆಯೇ. ಸಾಮಾನ್ಯವಾಗಿ ವೈಯಕ್ತಿಕವಾಗಿ ಒಬ್ಬ ಆಟಗಾರ ಅದೆಂತಹ ಪ್ರತಿಭೆಯಿದ್ದರು ಒಂದು ಸೀಸನ್ನಿನ 14 ಪಂದ್ಯಗಳಲ್ಲಿ ಹೆಚ್ಚೆಂದರೆ 7 ರಿಂದ 8 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬಹುದು. ಆದರೆ ಅದೊಂದು ಸಮರ್ಥ ರಚನೆಯ 11 ಆಟಗಾರ ಬಳಗವಾಗಿದ್ದರೆ 14 ರಲ್ಲಿ ಕನಿಷ್ಠ 10 ಕ್ಕೂ ಹೆಚ್ಚು ಪಂದ್ಯಗಳಲ್ಲಿ ಸಮತೋಲಿತ ಪ್ರದರ್ಶನ ನೀಡಬಲ್ಲದು. ಮುಂದಿನ ಸೀಸನ್ಗೆ ಮುನ್ನಿನ ಹರಾಜಿನಲ್ಲಿ ಬಹಳ ಜಾಣ್ಮೆಯಿಂದ ಪೂರ್ಣ ಪ್ರಮಾಣದ ಬಲಿಷ್ಠ ತಂಡ ಕಟ್ಟಿದರೆ ಮಾತ್ರ ಈ ಸಲ ಕಪ್ ನಮ್ದೇ ಅನ್ನೋ ಮಾತು ನಿಜವಾಗಬಹುದು.'' ಎಂದು ಹೇಳಿದ್ದಾರೆ.
''- ಇತೀ, ಇದೆಲ್ಲಾ ಗೊತ್ತಿದ್ದೂ ಪ್ರತಿ ಸೀಸನ್ನಿನಲ್ಲೂ ಈ ಸಲನಾದ್ರೂ ಕಪ್ ನಮ್ಮದಾಗಲಿ ಎಂಬ ಆಸೆಯಿಂದ ಕಾದು ಕುಳಿತ ಅಪ್ಪಟ RCB ಅಭಿಮಾನಿ'' ಎಂದು ಕವಿರಾಜ್ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ಎಲಿಮಿನೇಟರ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ಸಿಬಿ ಸೋಲು ಕಂಡ ನಂತರ ಸಿಂಪಲ್ ಸುನಿ ಹಾಗೂ ಸುದೀಪ್ ಸಹ ಟ್ವಿಟ್ಟರ್ ಮಾಡಿ ಬೇಸರ ವ್ಯಕ್ತಪಡಿಸಿದರು. ''ಕೆಟ್ಟ ಸಮಯ ಆರ್ಸಿಬಿ....ತುಂಬಾ ಫೈಟ್ ಇತ್ತು. ಆದರೂ ಗೆಲುವಿಗೆ ಗಟ್ಟಿಯಾಗಿ ಹೋರಾಡಿದರು. ನಾವು ವಿರಾಟ್ ಕೊಹ್ಲಿಯ ನಾಯಕತ್ವವನ್ನು ಮಿಸ್ ಮಾಡಿಕೊಳ್ಳುತ್ತೇವೆ. ನೀವು ತೆಗೆದುಕೊಂಡಿರುವುದು ಬಹಳ ಕಠಿಣವಾದ ನಿರ್ಧಾರವೆಂದು ನಮಗೆ ಗೊತ್ತಿದೆ. ಫೈನಲ್ನಲ್ಲಿ ಆರ್ಸಿಬಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆರ್ಸಿಬಿ ಫಾರ್ಎವರ್'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
''ಈ ಸಲನು ತಪ್ಪು ನಮ್ದೆ ಪರವಾಗಿಲ್ಲ
"ಮುಂದಿನ ಸಲ ಕಪ್ ನಮ್ದೆ"
ಈ #depression ಯುಗದಲ್ಲಿ
ಸೋತರು ಕುಗ್ಗದೆ, ಎದೆಏರಿಸಿ ಹುಮ್ಮಸ್ಸು
ತುಂಬುವಂತ ಅಭಿಮಾನಿಗಳು #ನಮ್ಮRCB ಅಭಿಮಾನಿಗಳು
ಇವರು ತಾಳ್ಮೆಯ ಪ್ರತಿರೂಪ.
ಆದರೂ ಯಾರದೋ ಇದೆ ಶಾಪ.
ಇರಲಿ, ಕಪ್ ಗೆಲ್ಲದಿದ್ದರೂ #ban ಆಗದೆ #fixing ಮಾಡದೆ ಪ್ರತಿಸಲವು ಮನಗೆಲ್ಲೊ ತಂಡ
#RCB
#ವಂದನೆಗಳು'' ಎಂದು ಸಿಂಪಲ್ ಸುನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











