'ಆಕ್ಷನ್ ಕಟ್ ರಾಜ'ನಾಗಲಿರುವ ಚಿತ್ರಸಾಹಿತಿ ಕವಿರಾಜ್
ನಿಮ್ಮ ನೆಚ್ಚಿನ 'ಫಿಲ್ಮಿಬೀಟ್ ಕನ್ನಡ' ಜೊತೆ ಸಹಸ್ರ ಸಂಭ್ರಮದ ಸಂತಸವನ್ನ ಹಂಚಿಕೊಳ್ಳುತ್ತಿದ್ದಾಗ ಗೀತ ಸಾಹಿತಿ ಕವಿರಾಜ್ ತಮ್ಮ ದೀರ್ಘಕಾಲದ ಆಸೆಯನ್ನ ನಮ್ಮ ಮುಂದೆ ವ್ಯಕ್ತಪಡಿಸಿದ್ದರು.
13-14 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಸಾಹಿತಿಯಾಗಿರುವ ಕವಿರಾಜ್ ಗೆ ಚಿತ್ರ ನಿರ್ದೇಶನ ಮಾಡಬೇಕೆನ್ನುವುದು ಬಹುದಿನಗಳ ಕನಸು. ಆ ಕನಸು ಇದೀಗ ನನಸಾಗುವ ಸನ್ನೀಹದಲ್ಲಿದೆ.
ಸದ್ಯದಲ್ಲೇ ಗೀತ ಸಾಹಿತಿ ಕವಿರಾಜ್ ನಿರ್ದೇಶಕರಾಗುತ್ತಿದ್ದಾರೆ. ಹಾಗೆ, ಕವಿರಾಜ್ ಗೆ ಚಿತ್ರ ನಿರ್ದೇಶನದ ಚಾನ್ಸ್ ನೀಡುತ್ತಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತೂಗುದೀಪ ಪ್ರೊಡಕ್ಷನ್ಸ್ ಸಂಸ್ಥೆ.

ಕವಿರಾಜ್ ನಿರ್ದೇಶನ ಮಾಡಲಿರುವ ಚಿತ್ರಕ್ಕೆ ದರ್ಶನ್ ಸಹೋದರ ದಿನಕರ್ ತೂಗುದೀಪ ಬಂಡವಾಳ ಹಾಕಲಿದ್ದಾರೆ. ತೂಗುದೀಪ ಕುಟುಂಬದ ಜೊತೆ ಕವಿರಾಜ್ ಒಡನಾಟ ಇಂದು ನಿನ್ನೆಯದಲ್ಲ.
'ಕರಿಯ' ಚಿತ್ರದಿಂದ ಹಿಡಿದು ದರ್ಶನ್ ಅಭಿನಯದ ಅನೇಕ ಚಿತ್ರಗಳಿಗೆ ಕವಿರಾಜ್ ಸಾಹಿತ್ಯ ಬರೆದುಕೊಟ್ಟಿದ್ದಾರೆ. ಅಲ್ಲದೇ ದರ್ಶನ್ ನಟನೆಯ ಬ್ಲಾಕ್ ಬಸ್ಟರ್ ಚಿತ್ರ 'ಬುಲ್ ಬುಲ್'ಗೆ ಕವಿರಾಜ್ ಕೋ-ಪ್ರೊಡ್ಯೂಸರ್ ಕೂಡ ಹೌದು. [ಸಹಸ್ರ ಸಂಭ್ರಮದಲ್ಲಿ ಕನ್ನಡ ಗೀತಸಾಹಿತಿ 'ಕವಿರಾಜ್']
ಇದೀಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ಕವಿರಾಜ್ ಆಕ್ಷನ್ ಕಟ್ ಹೇಳುವುದಕ್ಕೆ ನಿರ್ಧರಿಸಿದ್ದಾರೆ. ಅದಕ್ಕೆ ಸಹಕಾರ ನೀಡುವುದಕ್ಕೆ ದಿನಕರ್ ಮುಂದೆ ಬಂದಿದ್ದಾರೆ. ಅಂದ್ಹಾಗೆ 'ದಾಸ' ದರ್ಶನ್ ಅಭಿನಯಿಸಲಿರುವ 50 ನೇ ಚಿತ್ರ 'ಸರ್ವಾಂತರ್ಯಾಮಿ'ಗೆ ದಿನಕರ್ ನಿರ್ದೇಶನ ಮಾಡಬೇಕು. ಅದು ಮುಗಿದ ಬಳಿಕ ಕವಿರಾಜ್ ಚೊಚ್ಚಲ ನಿರ್ದೇಶನದ ಚಿತ್ರ ಶುರು. (ಏಜೆನ್ಸೀಸ್)


Click it and Unblock the Notifications











