ನಿರ್ದೇಶಕನಾದ ಗೀತರಚನೆಗಾರ ಸಂತೋಷ್ ನಾಯ್ಕ
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅನೇಕ ಗೀತರಚನೆಕಾರರು ನಿರ್ದೇಶಕರಾಗಿದ್ದಾರೆ. ಇದೀಗ ಆ ಸಾಲಿಗೆ ಮತ್ತೊಬ್ಬ ಗೀತರಚನೆಕಾರ ಸೇರಿಕೊಂಡಿದ್ದಾರೆ. ಅವರೇ ಸಂತೋಷ್ ನಾಯ್ಕ.
'ಯುವ' ಸಿನಿಮಾದ ಮೂಲಕ 2009ರಲ್ಲಿ ಸಂತೋಷ್ ಚಿತ್ರರಂಗಕ್ಕೆ ಬಂದರು. ಅಲ್ಲಿಂದ ಶುರುವಾದ ಅವರ ಕೆರಿಯರ್ ಈಗ 11 ವರ್ಷ ಪೂರೈಸಿದೆ. ಸಂಗೀತ ನಿರ್ದೇಶಕ ಗುರುಕಿರಣ್ ಸಂತೋಷ್ ರಿಗೆ ಹೆಚ್ಚು ಅವಕಾಶ ನೀಡಿದ್ದಾರೆ. ಇತ್ತೀಚಿಗೆ 'ಹೆಬ್ಬುಲಿ', 'ಆಯುಷ್ಮಾನ್ ಭವ', 'ಐ ಲವ್ ಯೂ', 'ರಾಂಬೋ 2', 'ಚೌಕ' ಸಿನಿಮಾದ ಹಾಡುಗಳನ್ನು ಸಂತೋಷ್ ಬರೆದಿದ್ದಾರೆ.
ಇದೀಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿರುವ ಸಂತೋಷ್ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿ ಚಿತ್ರದ ವಿವರ ಹಂಚಿಕೊಂಡಿದ್ದಾರೆ. ''ಕಥೆ, ಚಿತ್ರಕಥೆ ಎಲ್ಲವೂ ಸಿದ್ಧವಾಗಿದ್ದು, ಸದ್ಯ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ನಾಯಕ, ನಾಯಕಿ ಆಯ್ಕೆ ಕೊನೆಯ ಹಂತದಲ್ಲಿ ಇದೆ. ಎರಡ್ಮೂರು ತಿಂಗಳಿನಲ್ಲಿ ಸಿನಿಮಾ ಪ್ರಾರಂಭ ಆಗಲಿದೆ'' ಎಂದು ಸಂತೋಷ್ ತಿಳಿಸಿದ್ದಾರೆ.

ತಾಂತ್ರಿಕ ವರ್ಗದ ಆಯ್ಕೆ ಕೂಡ ನಡೆಯುತ್ತಿದೆ. ಗುರುಕಿರಣ್ ಹಿನ್ನಲೆ ಸಂಗೀತ ನೀಡುತ್ತಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ಹಿಡಿಯುವ ಸಾಧ್ಯತೆ ಇದೆಯಂತೆ. ಇನ್ನು ಉಳಿದ ವಿವರಗಳನ್ನು ಸದ್ಯದಲ್ಲಿಯೇ ತಿಳಿಸುವುದಾಗಿ ಸಂತೋಷ್ ಹೇಳಿದ್ದಾರೆ.
ನಿರ್ದೇಶಕರಾಗಬೇಕು ಎಂದು ಚಿತ್ರರಂಗಕ್ಕೆ ಬಂದ ಸಂತೋಷ್ ಗೀತರಚನೆಕಾರನಾಗಿ ಹೆಸರು ಮಾಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಿರ್ದೇಶಕರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಅನುಭವದ ಮೂಲಕ ಈಗ ತಾವೇ ಒಂದು ಹೊಸ ಸಿನಿಮಾ ಆರಂಭ ಮಾಡುತ್ತಿದ್ದಾರೆ.


Click it and Unblock the Notifications











