ಮಾದನಿಗೆ ಮಾನಸಿಯಾಗಿ 'ರಾಟೆ' ರಾಣಿ ಶ್ರುತಿ ಹರಿಹರನ್
ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಬ್ಯುಸಿ ನಟಿ ಯಾರೂ ಅಂದ್ರೆ ಕಣ್ಮುಂದೆ ಬರೋದು ಶ್ರುತಿ ಹರಿಹರನ್ ಮುಖ. ಹೌದು 'ಗೋಧಿ ಬಣ್ಣ ಸಾಧರಣ ಮೈ ಕಟ್ಟು', ಎ.ಹರ್ಷ ಅವರ 'ಮಾರುತಿ 800', ಮುಂತಾದ ಚಿತ್ರಗಳನ್ನು ಕೈಯಲ್ಲಿ ಹಿಡಿದು ಓಡಾಡುತ್ತಿರುವ ಇವರು ಇದೀಗ ಪ್ರಜ್ವಲ್ ದೇವರಾಜ್ ಜೊತೆ ಮತ್ತೊಂದು ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ.
ಹೌದು ಮನೋಮೂರ್ತಿ ಹಾಗು ನರಸಿಂಹಮೂರ್ತಿ ಬಂಡವಾಳ ಹಾಕುತ್ತಿರುವ, ಪ್ರಜ್ವಲ್ ದೇವರಾಜ್, ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಪ್ರಾಜೆಕ್ಟ್ 'ಮಾದ-ಮಾನಸಿ' ಚಿತ್ರದಲ್ಲಿ ಶ್ರುತಿ ಹರಿಹರನ್ ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

'ಅಭಿನೇತ್ರಿ' ಚಿತ್ರದ ನಂತರ ನಿರ್ದೇಶಕ ಸತೀಶ್ ಪ್ರಧಾನ್ ಮತ್ತೆ ಪ್ರಜ್ವಲ್ ದೇವರಾಜ್ ಹಾಗೂ ಶ್ರುತಿ ಹರಿಹರನ್ ಜೊತೆ 'ಮಾದ-ಮಾನಸಿ' ಮೂಲಕ ಜೊತೆಯಾಗಿದ್ದಾರೆ. ಅಂದಹಾಗೆ ಆಗಸ್ಟ್ 13ರಿಂದ 'ಮಾದ-ಮಾನಸಿ' ಸೆಟ್ಟೇರುತ್ತಿದ್ದು, ಕ್ಯಾಮರಾಮೆನ್ ಚಂದ್ರಶೇಖರ್ ಕೈಚಳಕದಲ್ಲಿ 'ಮಾದ-ಮಾನಸಿ' ಮೂಡಿಬರುತ್ತಿದ್ದಾರೆ.
ಈಗಾಗಲೇ 'ಅಂಗಾರಕ', 'ಮೃಗಶಿರ', ;ಸವಾಲ್', ಚಿತ್ರದಲ್ಲಿ ಅಷ್ಟೇನು ಯಶಸ್ಸು ಗಳಿಸದೇ, ಸದ್ಯಕ್ಕೆ 'ಭುಜಂಗ' ಹಾಗೂ 'ಅರ್ಜುನ' ಚಿತ್ರದಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್ ದೇವರಾಜ್ ಸದ್ಯದಲ್ಲೇ 'ಮಾದ-ಮಾನಸಿ' ತಂಡಕ್ಕೆ ಜೊತೆಯಾಗಲಿದ್ದಾರೆ.
ಚಿತ್ರವನ್ನು ಎರಡು ಭಾಗಗಳಾಗಿ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಮೊದಲ ಶೆಡ್ಯೂಲ್ ನಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಶ್ರುತಿ ಹರಿಹರನ್ ಚಿತ್ರೀಕರಣ ಮುಗಿಸಿದರೆ, ಎರಡನೇ ಶೆಡ್ಯೂಲ್ ಗೆ ರಂಗಾಯಣ ರಘು, ಬುಲ್ಲೆಟ್ ಪ್ರಕಾಶ್, ಶೋಭರಾಜ್, ಮತ್ತಿತ್ತರ ಮುಖ್ಯ ಪಾತ್ರ ವಹಿಸುವ ಪಾತ್ರಧಾರಿಗಳ ಚಿತ್ರೀಕರಣ ಸಾಗಲಿದೆ.
ಒಟ್ನಲ್ಲಿ ಶ್ರುತಿ ಹರಿಹರನ್ ಗೆ 'ರಾಟೆ' ಅಷ್ಟರಮಟ್ಟಿಗೆ ಯಶಸ್ಸು ತಂದುಕೊಡದಿದ್ದರೂ, ಇದೀಗ ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್ ಗಳು ಯಶಸ್ಸು ತಂದುಕೊಡುತ್ತವೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.


Click it and Unblock the Notifications











