ಮಚ್ಚು ಹಿಡಿದು ರೀಲ್ಸ್ ಪ್ರಕರಣ; ಬಿಗ್ಬಾಸ್ ವಿನಯ್ ಹಾಗೂ ರಜತ್ಗೆ ರಿಲೀಫ್
ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಗೌಡಗೆ ರಿಲೀಫ್ ಸಿಕ್ಕಿದೆ. ಇಬ್ಬರಿಗೂ ಷರತ್ತುಬದ್ಧ ಜಾಮೀನು ನೀಡಿ 24ನೇ ಎಸಿಜೆಎಂ ಕೋರ್ಟ್ ಆದೇಶ ಹೊರಡಿಸಿದೆ.
ದರ್ಶನ್ ನಟನೆಯ 'ಕರಿಯ' ಚಿತ್ರದ ಲುಕ್ನಲ್ಲಿ ರಜತ್ ಹಾಗೂ ಪುಷ್ಪರಾಜ್ ಅವತಾರದಲ್ಲಿ ವಿನಯ್ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ಸಂಬಂಧ ದೂರು ದಾಖಲಾಗಿ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಮಾರ್ಚ್ 25ರಂದು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದರು. 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿತ್ತು. ಬಳಿಕ ವಿಚಾರಣೆ ಮುಂದುವರೆಸಲಾಗಿತ್ತು. ರೀಲ್ಸ್ ವೇಳೆ ಬಳಸಿದ್ದ ಮಚ್ಚು ನಾಪತ್ತೆ ಆಗಿತ್ತು.

ರೀಲ್ಸ್ ಮಾಡಲು ಬಳಸಿದ್ದ ಮಚ್ಚನ್ನು ಪೊಲೀಸರು ಕೇಳಿದ್ದರು. ಆದರೆ ರಜತ್ ಹಾಗೂ ವಿನಯ್ ಫೈಬರ್ ಮಚ್ಚನ್ನು ಕೊಟ್ಟಿದ್ದರು. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಾಗರಬಾವಿಯ ಅಕ್ಷಯ ಸ್ಟೂಡಿಯೋದಲ್ಲಿ ರೀಲ್ಸ್ ಚಿತ್ರೀಕರಣ ನಡೆದಿತ್ತು. ಬಿಗ್ಬಾಸ್ ಶೋ ಬಳಿಕ ವಿನಯ್ ಹಾಗೂ ರಜತ್ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮಕ್ಕಾಗಿ ಈ ರೀಲ್ಸ್ ಮಾಡಿದ್ದರು ಎನ್ನಲಾಗ್ತಿದೆ.
ಜಾಮೀನು ಪ್ರಕ್ರಿಯೆ ಆರಂಭವಾಗಿದ್ದು ಜೈಲಿನಲ್ಲಿ ಪ್ರಕ್ರಿಯೆ ಮುಗಿದರೆ ಇಂದೇ ಇಬ್ಬರೂ ಬಿಡುಗಡೆ ಆಗಲಿದ್ದಾರೆ. ಜಾಮೀನು ಪ್ರತಿ ಜೈಲು ಅಧಿಕಾರಿಗಳಿಗೆ ತಲುಪುತ್ತಿದ್ದಂತೆ ಬಿಡುಗಡೆ ಭಾಗ್ಯ ಸಿಗಲಿದೆ. ಸದ್ಯ ರಜತ್ ಹಾಗೂ ವಿನಯ್ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಬೆನ್ನಲ್ಲೇ ಜಾಮೀನು ಸಿಕ್ಕಿದ್ದು ಇಬ್ಬರೂ ನಿಟ್ಟುಸಿರು ಬಿಟ್ಟಿದ್ದಾರೆ.
ಏಪ್ರಿಲ್ 9ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅಷ್ಟರಲ್ಲೇ ಇಬ್ಬರ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮುಗಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆ ಜಾಮೀನು ಲಭಿಸಿದೆ. ರೀಲ್ಸ್ ಮಾಡಿ ಸೋಶಿಯಲ್ ಮೀಡಿಐಯಾದಲ್ಲಿ ಸದ್ದು ಮಾಡಲು ಯತ್ನಿಸಿದವರಿಗೆ ಭಾರೀ ಸಂಕಷ್ಟ ಎದುರಾಗಿದ್ದು ಮಾತ್ರ ವಿಪರ್ಯಾಸ. ಇದು ಇನ್ನು ಮುಂದೆ ಇಂತಹ ಹುಚ್ಚಾಟ ಆಡುವವರಿಗೆ ಎಚ್ಚರಿಕೆ ಗಂಟೆಯಾಗಿದೆ.
10 ಸಾವಿರ ರೂಪಾಯಿ ಶೂರಿಟಿ ನೀಡುವ ಷರತ್ತನ್ನು ನ್ಯಾಯಾಲಯಾ ವಿನಯ್ ಹಾಗೂ ರಜತ್ಗೆ ವಿಧಿಸಿದೆ. ಸುಮೋಟೊ ಪ್ರಕರಣ ದಾಖಲಿಸಿ, ಸಾಕ್ಷ್ಯನಾಶದ ಆರೋಪದಡಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪೊಲೀಸರು ನಮಗೆ ಇಬ್ಬರ ಕಸ್ಟಡಿಗೆ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಕೋರ್ಟ್ ಜಾಮೀನು ನೀಡಿದೆ. ಆರೋಪಿಗಳ ಪರ ವಕೀಲರು ಕೋರ್ಟ್ನಲ್ಲಿ ಮಾತನಾಡಿ ಮುಂದಿನ ವಿಚಾರಣೆಗೆ ಇಬ್ಬರೂ ಸಹಕರಿಸುತ್ತಾರೆ. ವಿನಯ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಬೇಕು ಹಾಗಾಗಿ ಜಾಮೀನು ನೀಡಿ ಎಂದು ಮನವಿ ಮಾಡಿದ್ದರು.
ಬಿಗ್ಬಾಸ್ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಉದ್ಯಮಿ ರಜತ್ ಮನೆಯೊಳಗೆ ಹೋಗಿದ್ದರು. ತಮ್ಮ ಆರ್ಭಟದ ಆಟದಿಂದ ಬಹಳ ಬೇಗ ವೀಕ್ಷಕರ ಗಮನ ಸೆಳೆದಿದ್ದರು. 50 ದಿನಗಳ ಕಾಲ ದೊಡ್ಮನೆ ಒಳಗೆ ಇದ್ದು ಗ್ರ್ಯಾಂಡ್ ಫಿನಾಲೆ ತಲುಪಿದ್ದರು. ಸೆಕೆಂಡ್ ರನ್ನರ್ ಅಪ್ ಆಗಿದ್ದ ರಜತ್ಗೆ ಒಟ್ಟು 10 ಲಕ್ಷ ರೂ. ಬಹುಮಾನದ ಹಣ ಸಿಕ್ಕಿತ್ತು.
ವಿನಯ್ ಗೌಡ ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಆಗಿದ್ದರು. 100 ದಿನಗಳ ಕಾಲ ಮನೆಯಲ್ಲಿದ್ದ ವಿನಯ್ ಫಿನಾಲೆ ತಲುಪಿದ್ದರು. ಅಂತಿಮವಾಗಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಬಳಿ ರಜತ್ ಹಾಗೂ ವಿನಯ್ ಇಬ್ಬರೂ ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ತಿದ್ದಾರೆ.


Click it and Unblock the Notifications











