ಅಣ್ಣಾ ತಪ್ಪಾಯ್ತು ; ಶಿವರಾಜ್ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು
ಮಡೆನೂರು ಮನು ಪ್ರಾಯಶ್ಚಿತದ ಬೇಗೆಯಲ್ಲಿ ಇನ್ನೂ ಬೇಯುತ್ತಿದ್ದಾರೆ. ಮಿಂಚಿನ ಸಂಚಾರದಿಂದ ಅಲ್ಲೋಲ.. ಕಲ್ಲೋಲವಾದ ಬದುಕು ಮತ್ತೆ ಹಳಿಗೆ ಮರಳಿದ್ದರೂ ಕೂಡ ಅವತ್ತು ಆಡಿದ ಮಾತು ಮಡೆನೂರು ಮನು ಅವರ ಮಾನಸಿಕ ನೆಮ್ಮದಿಗೆ ಭಂಗ ತಂದಂತೆ ಇದೆ. ಹೀಗಾಗಿಯೇ ಕ್ಷಮಾಪಣೆ ಅರ್ಜಿಯನ್ನು ಧ್ರುವಾ ಸರ್ಜಾ ಮತ್ತು ದರ್ಶನ್ ಅವರಲ್ಲಿ ಸಲ್ಲಿಸುತ್ತಾನೇ ಬಂದ ಮಡೆನೂರು ಮನು ನನ್ನ ವೃತ್ತಿ..
ಬದುಕಿನ ಮೇಲೆ ಆಣೆ ಪ್ರಮಾಣ ಮಾಡುತ್ತೇನೆ ಉದ್ದೇಶಪೂರ್ವಕವಾಗಿ ನಾನು ಹೇಳಿದ ಮಾತುಗಳಲ್ಲ ಎಂದು ಹೇಳಿದ್ದರು. ನನ್ನಿಂದ ತಪ್ಪಾಗಿದೆ. ಒಳ್ಳೆಯ ಚಿತ್ರವನ್ನು ಕೊಂದರು. ಕಲೆ ನಂಬಿ ಬಂದಿದ್ದೇನೆ ಇನ್ನೊಂದು ಅವಕಾಶ ಮಾಡಿಕೊಡಿ ಅಣ್ಣ ಎಂದು ಮನವಿಯನ್ನು ಮಾಡಿಕೊಂಡಿದ್ದರು.

ಮಡೆನೂರು ಮನು ಅವರ ಈ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆಯನ್ನು ನೀಡಿದ್ದ ಧ್ರುವಾ ಸರ್ಜಾ ನನ್ನ ಕುರಿತು ಚಿಂತೆ ಮಾಡಬೇಡ ನಿನ್ನ ಮನೆ ಮಕ್ಕಳು ಕುಟುಂಬದ ಕುರಿತು ಕಾಳಜಿ ವಹಿಸು ಎಂದು ಹೇಳಿದ್ದರು. ಶಿವಣ್ಣ ಮತ್ತು ದರ್ಶನ್ ಸರ್ಗೆ ಕರೆ ಮಾಡಿ ಮಾತನಾಡು ಅವರು ನಮ್ಮ ಹಿರಿಯರು ಎಂದು ಹೇಳಿದ್ದರು.
ಅದ್ರಂತೆ ಮಡೆನೂರು ಮನು ಕಳೆದ ಜೂನ್ನಲ್ಲಿ ಶಿವರಾಜ್ ಕುಮಾರ್ ಅವರ ನಿವಾಸದೆದುರು ತಮ್ಮ ಪತ್ನಿ ಮತ್ತು ಮಗು ಜೊತೆ ಕಾಯುತ್ತಾ ನಿಂತಿದ್ದರು. ಹಗಲು ರಾತ್ರಿ ಎನ್ನದೇ ಶಿವರಾಜ್ಕುಮಾರ್ ನಿವಾಸದ ಎದುರು ಕಾಲ ಕಳೆದರು.
ಆದರೆ.. ಅವತ್ತು ಶಿವಣ್ಣ ಮನೆಯಲ್ಲಿ ಇರಲಿಲ್ಲ. ಅಮೆರಿಕಾಗೆ ಹೋಗಿದ್ದರು. ಆ ನಂತರ ಈ ವಿಚಾರವನ್ನು ಖುದ್ದು ಮಡೆನೂರು ಮನು ಅವರೇ ವಿಡಿಯೋ ಮೂಲಕ ಹೇಳಿದ್ದರು. ಯಾವುದೋ ಕೆಟ್ಟ ಘಳಿಗೆ, ಯಾವುದೋ ಷಡ್ಯಂತ್ರಕ್ಕೆ ಬಲಿಯಾಗಿ ಈ ರೀತಿ ಆಗಿದೆ. ನಾನು ಈಗಾಗಲೇ ಎನ್.ಆರ್.ರಮೇಶಣ್ಣ ಅವರ ಬಳಿ ಮಾತನಾಡಿದ್ದೇನೆ. ಅತಿ ಶೀಘ್ರದಲ್ಲೇ ಶಿವಣ್ಣನ ಭೇಟಿಯಾಗಿ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳೇ ಕೇಳ್ತೀನಿ. ಹಾಗಾಗಿ ಅಪಪ್ರಚಾರ ಮಾಡಬೇಡಿ ಎಂದು ಮನು ಮನವಿಯನ್ನು ಮಾಡಿಕೊಂಡಿದ್ದರು.
ಇದೀಗ ತಾವು ಹಿಂದೆ ಹೇಳಿದಂತೆ ಶಿವಣ್ಣ ಅವರ ಪಾದಾರವಿಂದಕ್ಕೆ ಮಡೆನೂರು ಮನು ಎಗರಿದ್ದಾರೆ. ಕ್ಷಮೆ ಕೇಳಿದ್ದಾರೆ. ಹೌದು, ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಲು ಅವಿರತ ಪ್ರಯತ್ನ ಪಡುತ್ತಿದ್ದ ಮಡೆನೂರು ಮನು ಇಂದು ಕಂಠೀರವ ಸ್ಟುಡಿಯೋಗೆ ಶಿವಣ್ಣ ಬರುವ ಸುದ್ದಿ ಕೇಳಿ ಅಲ್ಲಿಗೆ
ಹೋಗಿದ್ದರು. ಶಿವಣ್ಣ ಆಗಮನಕ್ಕೆ ಕಾಯುತ್ತಿದ್ದರು. ಇದೇ ವೇಳೆ ಶಿವಣ್ಣ ಬಂದಿದ್ದು ಶಿವಣ್ಣ ತಮ್ಮ ಕಾರಿಂದ ಇಳಿಯುತ್ತಿದ್ದಂತೆಯೇ ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.

ಇನ್ನು ಇದೇ ಸಮಯದಲ್ಲಿ ತಮ್ಮ''ಕುಲದಲ್ಲಿ ಕೀಳ್ಯಾವುದೋ'' ಚಿತ್ರವನ್ನು ಮರು ಬಿಡುಗಡೆ ಮಾಡಲು ಬಯಸಿದ್ದೇವೆ ನಿಮ್ಮ ಒಪ್ಪಿಗೆ ಬೇಕು ಅಣ್ಣ ಎಂದು ಮಡೆನೂರು ಮನು ಕೇಳಿದ್ದು ಮಾಡಿ ಒಳ್ಳೆಯ ಟೈಟಲ್ ಆದರೆ ಯಾರು ಕೀಳಲ್ಲ.. ಮೇಲಲ್ಲ.. ಎಲ್ಲರೂ ಒಂದೇ, ಒಳ್ಳೆಯದಾಗಲಿ ಎಂದು ಶಿವಣ್ಣ ಹೇಳಿದ್ದಾರೆ.
ಸದ್ಯ ಧ್ರುವಾ ಸರ್ಜಾ ಮತ್ತು ಶಿವಣ್ಣ ಅವರ ಬಳಿ ಮಡೆನೂರು ಮನು ಕ್ಷಮೆ ಕೇಳಿದಂತಾಗಿದೆ. ದರ್ಶನ್ ಹೊರಗಡೆ ಇದ್ದಿದ್ದರೆ ಅವರಲ್ಲಿಯೂ ಮಡೆನೂರು ಮನು ಹೇಗಾದರೂ ಮಾಡಿ ಕ್ಷಮೆ ಕೇಳುತ್ತಿದ್ದರೇನೋ ? ಆದರೆ ದರ್ಶನ್ ಸದ್ಯ ಮತ್ತೆ ಕಂಬಿ ಹಿಂದೆ ಹೋಗಿದ್ದಾರೆ. ಇನ್ನೊಂದು ಕಡೆ ಚಿತ್ರವನ್ನು ರೀ ರಿಲೀಸ್ ಮಾಡಲು ಮಡೆನೂರು ಮನು ಮುಂದಾಗಿದ್ದು ಚಿತ್ರದ ಬಿಡುಗಡೆಯ ದಿನಾಂಕವನ್ನು ಮಡೆನೂರು ಮನು ಶೀಘ್ರದಲ್ಲಿಯೇ ಘೋಷಿಸುವ ಸಾಧ್ಯತೆ ಇದೆ.


Click it and Unblock the Notifications











