ಶಿವರಾಜ್ ಕುಮಾರ್ ಇನ್ನೊಂದು 6 ವರ್ಷ, ದರ್ಶನ್ ಸತ್ತೋದ ; ಮಡೆನೂರು ಮನು ಬಾಯಲ್ಲಿ ಇದೆಂಥಾ ಮಾತು?
ಯಾವುದಾದರೂ ಕಾರ್ಯಕ್ರಮದ ಮೂಲಕ ಚೂರೇ ಚೂರು ಹೆಸರು.. ಕೀರ್ತಿ.. ಹಣ.. ಸಿಕ್ಕರೆ ಸಾಕು ಅನೇಕರು ದೇಶ ಗೆದ್ದು ಬಂದವರಂತೆ ಬೀಗುತ್ತಾರೆ. ತಲೆ ನಿಲ್ಲದವರಂತೆ ವರ್ತಿಸುತ್ತಾರೆ. ಜನಪ್ರಿಯತೆ ಸಿಕ್ಕ ತಕ್ಷಣ ಮೈ ಮರೆಯುತ್ತಾರೆ. ಬೆಳೆಯುವ ಸಮಯದಲ್ಲಿ ಶೋಕಿ ಮಾಡಲು ಮುಂದಾಗುತ್ತಾರೆ. ಮಾಡಬಾರದ್ದನ್ನೆಲ್ಲ ಮಾಡಿ ಆ ನಂತರ ಪೊಲೀಸ್ ಠಾಣೆಯಲ್ಲಿ ದಿನ ದೂಡುತ್ತಾರೆ. ಇದಕ್ಕೆ ಜ್ವಲಂತ ಉದಾಹರಣೆಯಂತೆ ಇರುವ..
ಮಡೆನೂರು ಮನು ಸದ್ಯ ಅತ್ಯಾಚಾರದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು ಮೂಲಕ ಜನ ಮನ ಗೆದ್ದು ಈಗ ಬೆಳ್ಳಿತೆರೆಯಲ್ಲಿ ನಾಯಕನಾಗಿ ಮಿಂಚಲು ರೆಡಿಯಾಗಿರುವ ಮಡೆನೂರು ಮನು ಸದ್ಯ ನಿಜ ಜೀವನದಲ್ಲಿ ಯುವತಿಯ ಪಾಲಿಗೆ ಖಳನಾಯಕನಾಗಿದ್ದಾರೆ.

ಮಡೆನೂರು ಮನು ಮೇಲೆ ಯುವತಿ ಅತ್ಯಾಚಾರದ ಆರೋಪವನ್ನು ಮಾಡಿದ್ದು, ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಸದ್ಯ ದೂರು ದಾಖಲಾಗಿದೆ. ಇನ್ನು ಮಡೆನೂರು ಮನು ತನ್ನ ಮೇಲೆ ನಡೆಸಿದ ದೌರ್ಜನ್ಯದ ಕುರಿತು ಸಂತ್ರಸ್ತ ಯುವತಿ ಮಾಧ್ಯಮದವರ ಮುಂದೆ ಒಂದೊಂದೇ ಕತೆಯನ್ನು ಹೇಳುತ್ತಿದ್ದಾರೆ. ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ.
ಇದರ ನಡುವೆ ಮಡೆನೂರು ಮನು ಅವರದ್ದು ಎನ್ನಲಾದ ಹಲವು ಆಡಿಯೋಗಳು ಕೂಡ ವೈರಲ್ ಆಗಿವೆ. ಹೀಗಿರುವಾಗ ಇದೀಗ ಇನ್ನೊಂದು ಆಡಿಯೋ ವೈರಲ್ ಆಗಿದ್ದು ಕನ್ನಡ ಚಿತ್ರ ಪ್ರೇಮಿಗಳನ್ನು ಈ ಆಡಿಯೋ ಬೆಚ್ಚಿ ಬೀಳಿಸುವಂತೆ ಇದೆ.
ಮಡೆನೂರು ಮನು ಅವರದ್ದೇ ಆಡಿಯೋ ಇದು ಆಗಿದ್ದೇ ಆದಲ್ಲಿ ಮುಂಬರುವ ದಿನಗಳಲ್ಲಿ ಮಡೆನೂರು ಮನು ಸಂಕಷ್ಟಗಳು ಇನ್ನು ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಯಾಕೆಂದರೆ ವೈರಲ್ ಆದ ಆಡಿಯೋದಲ್ಲಿ ಮಡೆನೂರು ಮನು ಕನ್ನಡ ಚಿತ್ರರಂಗದ ಸ್ಟಾರ್ಗಳ ಬಗ್ಗೆ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಅಹಂಕಾರದಿಂದ ಮಾತನಾಡಿದ್ದಾರೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದ್ದು ಶಿವರಾಜ್ ಕುಮಾರ್ ಇನ್ನು ಐದಾರು ವರ್ಷ ಬದುಕಿದ್ದರೆ ಹೆಚ್ಚು, ಆಮೇಲೆ ಸತ್ತು ಹೋಗ್ತಾನೆ ನನಗೆ ಚೆನ್ನಾಗಿ ಗೊತ್ತು, ಧ್ರುವ ಸರ್ಜಾ ಇನ್ನೊಂದು 8 ವರ್ಷ ಮಾರ್ಕೆಟ್ನಲ್ಲಿ ಇರ್ತಾನೆ, ಇನ್ನು ದರ್ಶನ್ ಈಗಾಗಲೇ ಸತ್ತು ಹೋಗಿದ್ದಾನೆ ಇನ್ನು ನಾಲ್ಕು ವರ್ಷ ಕ್ರೇಜ್ ಇದ್ದರೆ ಅದೇ ಹೆಚ್ಚು ಎಂದು ಮಡೆನೂರು ಮನು ಮಾತನಾಡಿದ್ದಾರೆ. ಈ ಮೂವರ ನಡುವೆ ಕಾಂಪಿಟೇಶನ್ ಕೊಡಲು ನಿಂತಿರುವ ಗಂಡು ಗಲಿ ಕಣ್ರಿ ನಾನು ಎಂದು ಜನಪ್ರಿಯತೆಯ ಮದವೇರಿದಂತೆ ಮಾತನಾಡಿದ್ದಾರೆ.
ಈ ಆಡಿಯೋದಲ್ಲಿ ಇರುವುದು ಮಡೆನೂರು ಮನು ಅವರದ್ದೇ ಧ್ವನಿಯಾ ಎನ್ನುವುದು ಗೊತ್ತಿಲ್ಲವಾದರೂ ಆಡಿಯೋವನ್ನು ಕೇಳಿರುವ ಅನೇಕರು ಇದು ಮಡೆನೂರು ಮನು ಅವರದ್ದೇ ಧ್ವನಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎಣ್ಣೆ ಏಟಲ್ಲಿ ಮಡೆನೂರು ಮನು ಮಾತನಾಡಿರುವ ಸಾಧ್ಯತೆ ಇದ್ದು ಮಡೆನೂರು ಮನು ಗೆಳೆಯರ ಮುಂದೆ ಹೇಳಿರುವ ಮಾತುಗಳನ್ನು ಯಾರೋ ರೆಕಾರ್ಡ್ ಮಾಡಿಕೊಂಡು ಈಗ ವೈರಲ್ ಮಾಡಿದ್ದಾರೆ.
ಸದ್ಯ ಈ ಆಡಿಯೋ ಡಾ.ಶಿವರಾಜ್ ಕುಮಾರ್, ದರ್ಶನ್, ಧ್ರುವಾ ಸರ್ಜಾ ಅವರ ಅಭಿಮಾನಿಗಳನ್ನು ಮಾತ್ರವಲ್ಲದೇ ಹಲವರನ್ನು ಕೆರಳಿಸಿದೆ. ಮಡೆನೂರು ಮನು ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಆಡಿಯೋ ವೈರಲ್ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಕೂಡ ಈ ಆಡಿಯೋ ಸದ್ದು ಮಾಡುತ್ತಿದ್ದು ಮುಂಬರುವ ದಿನಗಳಲ್ಲಿ ಮಡೆನೂರು ಮನು ಸಂಕಷ್ಟ ಇನ್ನು ಹೆಚ್ಚಾಗುವ ಸಾಧ್ಯತೆಗಳಿವೆ.
ಇನ್ನುಳಿದಂತೆ ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಮಡೆನೂರು ಮನು ಪೊಲೀಸ್ ಕಸ್ಟಡಿಯಲ್ಲಿದ್ದು ರೇಪ್ ಆಗಿರೋದಕ್ಕೆ ಬಾಳು ಕೊಟ್ಟಿದ್ದೀನಿ ಎಂದು ಮಡೆನೂರು ಮನು ಹೇಳಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ಕೂಡ ಇದೇ ವೇಳೆ ವೈರಲ್ ಆಗಿದೆ.


Click it and Unblock the Notifications











