ಅಂಬರೀಶ್ ಕುರಿತು ಹೇಳಿಕೆ: ಕುಮಾರಸ್ವಾಮಿ ವಿರುದ್ಧ ಮಾಜಿ ಆಪ್ತ ಮಧು ಬಂಗಾರಪ್ಪ ವಾಗ್ದಾಳಿ
ದಿವಂಗತ ನಟ ಅಂಬರೀಶ್ ಬಗ್ಗೆ ಕುಮಾರಸ್ವಾಮಿ ಆಡಿದ್ದ ಮಾತುಗಳು ಅಂಬರೀಶ್ ಅಭಿಮಾನಿಗಳನ್ನು ಹಾಗೂ ಅಂಬರೀಶ್ ಆಪ್ತ ಗೆಳೆಯರನ್ನು ಕೆರಳಿಸಿದೆ.
ಸುಮಲತಾ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದ ಕುಮಾರಸ್ವಾಮಿ, ಆ ಮಾತುಗಳಿಗೆ ವಿರೋಧವಾಗುತ್ತಿದ್ದಂತೆ ಅದಕ್ಕೆ ಸ್ಪಷ್ಟನೆ ಕೊಡುತ್ತಾ ಅಂಬರೀಶ್ ವಿಷಯವನ್ನು ಎಳೆದು ತಂದಿದ್ದರು. ''ಆ ಯಮ್ಮನ ಗಂಡ ಏನೇನು ಮಾಡಿದ್ದ ಗೊತ್ತ?'' ಎಂದು ಅಂಬರೀಶ್ ಬಗ್ಗೆ ಲಘುವಾಗಿ ಮಾತನಾಡಿದ್ದರು. ಇದಕ್ಕೆ ಅಂಬರೀಶ್ ಅಭಿಮಾನಿಗಳು, ಗೆಳೆಯರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಕುಮಾರಸ್ವಾಮಿ ಅವರ ಮಾಜಿ ಆಪ್ತ ಮಧು ಬಂಗಾರಪ್ಪ, ''ಅಂಬರೀಶ್, ನಾವು ಕುಟುಂಬದ ಸದಸ್ಯರಿದ್ದಂತೆ, ಅವರ ಮೇಲಿನ ಗೌರವ ಯಾರೂ ಕಿತ್ತುಕೊಳ್ಳಲು ಆಗಲ್ಲ, ಅವರೀಗ ಇಲ್ಲ, ಅವರ ಹೆಸರಿಗೆ ಚ್ಯುತಿ ತರುವ ಕೆಲಸ ಮಾಡಬಾರದು'' ಎಂದಿದ್ದಾರೆ.

''ವೈಯುಕ್ತಿಕವಾಗಿ ಮಾತನಾಡುವುದರಿಂದ ನೋವಾಗುತ್ತೆ, ಅಂಬರೀಶ್ ಅವರನ್ನ ಅಣ್ಣ ಅಂತಿರಲಿಲ್ಲ, ನಾನು ಅವರನ್ನು ಮಾವ ಅಂತಾ ಕರೆಯುತ್ತಿದ್ದೆ, ನಾವೆಲ್ಲ ಅವರ ಅಭಿಮಾನಿಗಳು, ಅವರ ಹೆಸರನ್ನು ದೀರ್ಘಕಾಲ ಕಾಪಾಡಬೇಕು, ಕಾಪಾಡಿಕೊಂಡು ಹೋಗಲು ನಾವು ಇದ್ದೇವೆ'' ಎಂದಿದ್ದಾರೆ ಮಧು ಬಂಗಾರಪ್ಪ.
ಮಧು ಬಂಗಾರಪ್ಪ ಈ ಮುಂಚೆ ಜೆಡಿಎಸ್ ಪಕ್ಷದಲ್ಲಿದ್ದರು, ಕುಮಾರಸ್ವಾಮಿ ಅವರಿಗೆ ಬಹು ಆತ್ಮೀಯರಾಗಿದ್ದರು. ಆದರೆ ಈಗ ಕಾಂಗ್ರೆಸ್ ಪಕ್ಷದೆಡೆಗೆ ವಾಲಿದ್ದಾರೆ. ಮಧು ಬಂಗಾರಪ್ಪ ಅವರ ಸಹೋದರಿ, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಕಾಂಗ್ರೆಸ್ ಕಡೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ.
Recommended Video
ಕುಮಾರಸ್ವಾಮಿ ಅವರು ಸುಮಲತಾ ಹಾಗೂ ಅಂಬರೀಶ್ ಕುರಿತ ಹೇಳಿಕೆಗೆ ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸುಮಲತಾ ವಿರುದ್ಧ ಕುಮಾರಸ್ವಾಮಿ ಬಳಸಿದ ಪದಗಳಿಗೆ ಜೆಡಿಎಸ್ನ ಕೆಲವು ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


Click it and Unblock the Notifications











