"ಶಿವಣ್ಣಗೆ 6 ಆಪರೇಷನ್ ಮಾಡಿ, 190 ಹೊಲಿಗೆ ಹಾಕಲಾಗಿದೆ"; ಮಧು ಬಂಗಾರಪ್ಪ
ನಟ ಶಿವರಾಜ್ಕುಮಾರ್ ಚಿಕಿತ್ಸೆಗಾಗಿ ಅಮೇರಿಕಾ ಪ್ರವಾಸದಲ್ಲಿದ್ದಾರೆ. ಡಿಸೆಂಬರ್ 25ರಂದು ಅಲ್ಲಿನ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಸದ್ಯ ಶಿವಣ್ಣ ಚೇತರಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ.
ಶಿವಣ್ಣನಿಗೆ ನಡೆದ ಗಂಭೀರ ಶಸ್ತ್ರಚಿಕಿತ್ಸೆ ಬಗ್ಗೆ ಭಾವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನಿಮ್ಮ ಶಿವಣ್ಣ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮೊದಲಿಗಿಂತ ಹೆಚ್ಚು ಫಿಟ್ ಅಂಡ್ ಫೈನ್ ಆಗಿದ್ದಾರೆ. ಆದಷ್ಟು ಬೇಗ ನೀವು ಅವರನ್ನು ನೋಡಬಹುದು. ಮೊದಲಿಗಿಂತಲೂ ಚೆನ್ನಾಗಿ ಸಿನಿಮಾಗಳಲ್ಲಿ ನಟಿಸುತ್ತಾರೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

ತಮ್ಮ ತಂದೆ-ತಾಯಿ ಆಶೀರ್ವಾದ, ಅಭಿಮಾನಿಗಳ ಹಾರೈಕೆ ಹಾಗೂ ವೈದ್ಯರ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ಡಾ. ಮುರುಗೇಶ್ ಮನೋಹರ್ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಿವಣ್ಣ ಕ್ಯಾನ್ಸರ್ ಮುಕ್ತ ಎಂದು ಖುದ್ದು ಅವರೇ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಮಾಹಿತಿಗಳು ಹರಿದಾಡಿತ್ತು. ತಪ್ಪು ಮಾಹಿತಿ ಹರಡುವುದು ಸರಿಯಲ್ಲ ಎಂದಿದ್ದಾರೆ.
ಕ್ಯಾನ್ಸರ್ ತಗುಲಿದ್ದ ಮೂತ್ರಕೋಶ ತೆಗೆದು, ಸರ್ಜರಿ ಬಳಿಕ ಅವರದ್ದೇ ಕರಳು ಬಳಸಿ ಕೃತಕ ಮೂತ್ರಕೋಶ ಮತ್ತೆ ಅಳವಡಿಸಲಾಗಿದೆ. ಶಿವಣ್ಣಾವರ ಮೆದುಳಿನಲ್ಲಿ ಒಂದು ಸ್ಟೆಂಟ್ ಇದೆ, ಹೃದಯಲ್ಲಿ ಒಂದು ಸ್ಟೆಂಟ್ ಇದೆ. ಅವರಿಗೆ ಯಾಕೆ ಹಿಂಗೆ ಎನಿಸುತ್ತಿತ್ತು. ಆದರೆ ಎಲ್ಲವನ್ನು ಮೆಟ್ಟಿ ಹರೊ ಬಂದಿದ್ದಾರೆ. ಈಗ ಚೆನ್ನಾಗಿ ವಾಕ್ ಮಾಡುತ್ತಾರೆ. ಶಿವಣ್ಣ ಬಹಳ ಫಿಟ್ ಎಂದು ವೈದ್ಯರು ಹೇಳಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

ಈ ಶಸ್ತ್ರ ಚಿಕಿತ್ಸೆ ವೇಳೆ ಒಟ್ಟು 6 ಸಣ್ಣ ಸಣ್ಣ ಶಸ್ತ್ರಚಿಕಿತ್ಸೆ ನಡೆಯುತ್ತದೆ. ಒಳಗೆ ಸುಮಾರು 190 ಹೊಲಿಗೆ ಹಾಕಲಾಗುತ್ತದೆ. ನಿಜಕ್ಕೂ ಬಹಳ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಇದು. 5 ಗಂಟೆಗಳ ಕಾಲ ನಡೆಯಿತು. ಯಾವುದೇ ಸಮಸ್ಯೆ ಆಗಲಿಲ್ಲ. ಸರ್ಜರಿ ನಡೆದ 4 ಗಂಟೆಗಳ ಬಳಿಕ ನಾವು ಹೋಗಿ ಶಿವಣ್ಣ ಅವರನ್ನು ಮಾತನಾಡಿಸಿದ್ದೆವು. ತಾವೇ ಶಸ್ತ್ರಚಿಕಿತ್ಸೆ ಮಾಡಬೇಕಾ? ರೋಬೊಟಿಕ್ ಮಾಡಬೇಕಾ? ಎಂದು ಮೊದಲು ಯೋಚಿಸಿದ್ದರು. ಕೊನೆಗೆ ವೈದ್ಯರು ತಾವೇ ಶಸ್ತ್ರ ಚಿಕಿತ್ಸೆ ನೆರವೇರಿಸಿದರು ಎಂದು ಮಧು ಬಂಗಾರಪ್ಪ ವಿವರಿಸಿದ್ದಾರೆ.
ಶಿವಣ್ಣ ಈ ಕೂಡಲೇ ಭಾರತಕ್ಕೆ ಬರೋಕೆ ಸಿದ್ಧರಿದ್ದಾರೆ. ಆದರೆ ಸಂಪೂರ್ಣವಾಗಿ ಚೇತರಿಸಿಕೊಂಡು ಬರಲು ಹೇಳಿದ್ದೇವೆ. ಸರ್ಜರಿ ಆಗಿರುವ ಗಾಯ ಮಾಗಬೇಕಿದೆ. ಜನವರಿ 25ರಂದು ಅವರು ವಾಪಸ್ ಬರ್ತಾರೆ. ಒಂದು ಟ್ಯೂಬ್ ಇದೆ ಅದನ್ನು ಜನವರಿ 16ರಂದು ತೆಗೆಯುತ್ತಾರೆ. ಅದು ಮುಗಿದರೆ ಎಲ್ಲಾ ಮುಗಿದಂತೆ, ನಮ್ಮ ನಿಮ್ಮಂತೆ ನಾರ್ಮಲ್ ಆಗಿಬಿಡುತ್ತಾರೆ ಎಂದಿದ್ದಾರೆ. ಮಧು ಬಂಗಾರಪ್ಪ ಕೂಡ ಸರ್ಜರಿ ವೇಳೆ ಅಲ್ಲೇ ಇದ್ದರು. ಎರಡು ದಿನಗಳ ಹಿಂದೆ ಭಾರತಕ್ಕೆ ವಾಪಸ್ ಬಂದಿದ್ದಾರೆ.
ಸೆಂಚುರಿ ಸ್ಟಾರ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಭೈರತಿ ರಣಗಲ್' ಸಿನಿಮಾ ಸೂಪರ್ ಹಿಟ್ ಆಗಿದೆ. ಮುಂದೆ ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಬಿಡುಗಡೆ ಆಗಬೇಕಿದೆ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಟೀಸರ್ ಸಮೇತ ಚಿತ್ರತಂಡ ಘೋಷಿಸಿದೆ. 'ಭೈರವನ ಕೊನೆಪಾಠ' ಹಾಗೂ 'ಎ ಫಾರ್ ಆನಂದ್' ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ರವಿ ಬಸ್ರೂರು ಒಂದು ಸಿನಿಮಾ ಘೋಷಣೆ ಮಾಡಿದ್ದಾರೆ. 'ವೀರಚಂದ್ರಹಾಸ' ಚಿತ್ರದಲ್ಲಿ ಯಕ್ಷಗಾನ ಕಲಾವಿದರಾಗಿ ಶಿವಣ್ಣ ನಟಿಸಲಿದ್ದಾರೆ.


Click it and Unblock the Notifications











