ನಿರ್ದೇಶಕ ಮಧುಚಂದ್ರರ ಮಧುರ ಪ್ರೇಮ ಕಾವ್ಯ
ಚಿತ್ರದ ಶೀರ್ಷಿಕೆ 'ಬಸೈರ್ ದೊಗಯುಳ್ ವಯುವನ ರಧುಮ ಕಾಪ್ರೇವ್ಯಂಮ'. ಇದೇನಿದು ಅರ್ಥವಿಲ್ಲದ ಮೂರಡಿ ಉದ್ದದ ಶೀರ್ಷಿಕೆ ಎಂದುಕೊಳ್ಳುತ್ತಿದ್ದೀರಾ. ಶೀರ್ಷಿಕೆಯೇನೋ ಮೂರಡಿನೇ. ಆದರೆ ಇದರಲ್ಲಿನ ಅಕ್ಷರಗಳು ಮಾತ್ರ ಸ್ಥಾನಪಲ್ಲಟವಾಗಿವೆ. ಇವೆಲ್ಲವನ್ನೂ ಕ್ರಮವಾಗಿ ಜೋಡಿಸಿದರೆ ಸೂಕ್ತ ಶೀರ್ಷಿಕೆ ಪತ್ತೆಯಾಗುತ್ತದೆ.
ಸದ್ಯಕ್ಕೆ ಈ ರೀತಿಯ ಪ್ರಕಟಣೆ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಈ ಅಕ್ಷರಗಳೆಲ್ಲವನ್ನೂ ಕ್ರಮವಾಗಿ ಜೋಡಿಸಿ ಸಿನಿಮಾ ಹೆಸರು ಸೂಚಿಸಿದವರಿಗೆ ಸೂಕ್ತ ಬಹುಮಾನವನ್ನೂ ನೀಡುವುದಾಗಿ ಘೋಷಿಸಿದ್ದಾರೆ ಚಿತ್ರದ ನಿರ್ಮಾಪಕರು.
"ಸಾಕಾಯ್ತು ಕಣ್ಣಾಮುಚ್ಚಾಲೆ ಆಟ ಆಡಿ, ಈಗ ನೋಡಿ ನಮ್ಮ ಸಿನಿಮಾ ಜೋಡಿ, ಸಿನಿಮಾ ಹೆಸರು ಮಾತ್ರ ನೀವೇ ಸರಿ ಮಾಡಿ" ಎಂಬ ಪ್ರಕಟಣೆ ನಾಡಿನ ಜನಪ್ರಿಯ ಪತ್ರಿಕೆಗಳಲ್ಲಿ ಅಚ್ಚಾಗಿದೆ. ಸೂಕ್ತ ಶೀರ್ಷಿಕೆ ಸೂಚಿಸಿದವರಿಗೆ ರು.10,000 ಬಹುಮಾನವನ್ನೂ ಘೋಷಿಸಿದ್ದಾರೆ.
ಇಷ್ಟು ದಿನ ಚಿತ್ರದ ಹೆಸರು ಮತ್ತು ಕಲಾವಿದರ ಹೆಸರು ತಿಳಿಸದೆ ನಿರ್ದೇಶಕರು ಗುಟ್ಟಾಗಿ ಚಿತ್ರೀಕರಣ ಮುಗಿಸಿದ್ದರು. ಮೊನ್ನೆ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕರೆದು ಚಿತ್ರದಲ್ಲಿನ ಕಲಾವಿದರನ್ನು ಪರಿಚಯಿಸಿದರು. ಸುವರ್ಣ ವಾಹಿನಿಯ 'ಲಕುಮಿ' ಧಾರಾವಾಹಿಯಲ್ಲಿ ಅಭಿನಯಿಸಿದ್ದ ಗುರುನಂದನ್ ಚಿತ್ರದ ನಾಯಕ ನಟ. ಚಿತ್ರದ ನಿರ್ಮಾಪಕರು ಅಶ್ವಿನ್ ವಿಜಯಕುಮಾರ್.
'ಆ ದಿನಗಳು' ಚಿತ್ರದಲ್ಲಿ ಕೊತ್ವಾಲ್ ಹೆಂಡತಿ ಪಾತ್ರ ಪೋಷಿಸಿದ್ದ ಶ್ವೇತಾ ಶ್ರೀವಾತ್ಸವ್ ನಾಯಕಿ. ಪೋಷಕ ಪಾತ್ರಗಳಲ್ಲಿ ಶರತ್ ಲೋಹಿತಾಶ್ವ, ವೀಣಾಕೋಟೆ, ಮನೋಜ್ ವಾ, ಸುಂದರ್, ವೀಣಾ ಸುಂದರ್ ಸೇರಿದಂತೆ ಹಲವಾರು ಕಲಾವಿದರಿದ್ದಾರೆ.
ಈ ಚಿತ್ರದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಎಚ್ಚರಿಕೆಯ ಗಂಟೆಯಾಗಿ ಸಂದೇಶವೂ ಇದೆಯಂತೆ. ರಘು ದೀಕ್ಷಿತ್ ಅವರ ಸಹೋದರ ವಾಸು ದೀಕ್ಷಿತ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಅಭಿಲಾಷ್ ಲಕ್ರ ಎಂಬುವರೂ ವಾಸುಗೆ ಸಾಥ್ ನೀಡುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications












