ಬೆಂಗಳೂರಲ್ಲಿ ಬುಧವಾರ ಸಂಜೆ 6.30ಕ್ಕೆ ‘ಮಧ್ಯಾಹ್ನದ ಹಾಡು’
ಬೆಂಗಳೂರು : ನಿಮಗಿದೋ ಒಂದು ಅಪರೂಪದ ಅವಕಾಶ. ಡಿಆರ್ಎನ್ ಸ್ಮೃತಿ ತನ್ನ ಮೊದಲ ಚಿತ್ರ 'ಮಧ್ಯಾಹ್ನದ ಹಾಡು" (ಆಫ್ಟರ್ನೂನ್ ಸಾಂಗ್) ಎರಡನೇ ಬಾರಿಗೆ ತೆರೆ ಕಾಣಲಿದೆ. ಬುಧವಾರ, ಏಪ್ರಿಲ್ 11ರ ಸಂಜೆ 6.30ಕ್ಕೆ ಅಲಯನ್ಸ್ ಫ್ರಾಂಕೈಸ್ ಡಿ, ಬೆಂಗಳೂರಲ್ಲಿ ಪ್ರದರ್ಶನ.
ಅವತರಣಿಕೆ- ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ
ಅವಧಿ- 23 ನಿಮಿಷಗಳು
ಚಿತ್ರಕಥೆ ಹಾಗೂ ನಿರ್ದೇಶನ- ಎಂ.ಎಸ್.ಪ್ರಕಾಶ್ ಬಾಬು
ಛಾಯಾಗ್ರಹಣ- ಬಿ.ಆರ್.ವಿಶ್ವನಾಥ್
ಸಂಪಾದನೆ- ಅಶ್ವಿನ್ ರಾಮನಾಥನ್
ಸಂಗೀತ- ಎಸ್.ಆರ್.ರಾಮಕೃಷ್ಣ
ನಿರ್ಮಾಣ- ಡಿಎನ್ಆರ್ ಸ್ಮೃತಿ ಚಿತ್ರ
ಪಾತ್ರ ವರ್ಗ- ಕಿರಣ್ ಸುಬ್ಬಯ್ಯ, ರೀಮಾ, ಆಳ್ವ, ಮಂಜು
ಚಿತ್ರಸಾರ
ವ್ಯಕ್ತಿತ್ವವಾದದ ಹಳಿ ಮೇಲೆ ಮನಸ್ಸೆಂಬ ರೈಲಿನ ಯಾನ ಎಂತು ? ಸಾಂಸ್ಕೃತಿಕ ಮೌಲ್ಯಗಳನ್ನು ಪಕ್ಕಕ್ಕೆ ಸರಿಸಿದ ಜಗತ್ತು ಕೇಳುವುದು ನಮ್ಮತನಕ್ಕೆ ಮೀರಿದ ಗುರಿಯನ್ನು . ನನ್ನತನ- ಜಗತ್ತೆಂಬ ಮಾರುಕಟ್ಟೆಯ ನಡುವಿನ ಹೊಯ್ದಾಟ- ದ್ವಂದ್ವ ಬಿಂಬಿಸುತ್ತದೆ ಮುಖ್ಯ ಪಾತ್ರ.
ಸಾಮಾಜಿಕ ಏಕತೆಯ ಕುಸಿತ ಹಾಗೂ ಕ್ಷೀಣಿಸಿದ ತೀಕ್ಷ್ಣತೆಯನ್ನ 1970 ರ ದಶಕದಲ್ಲಿ ತುರ್ತುಪರಿಸ್ಥಿತಿಯ ನಂತರದ ಸಾಂಸ್ಕೃತಿಕ ಚಳವಳಿ ತೋರಿದ್ದೆಂತು? ಇದರ ವಿವಿಧ ಮಜಲುಗಳನ್ನು ಹಲವು ನೆಳಲು- ಬೆಳಕಿನ ಕಾಂಟ್ರಾಸ್ಟಿನ ಮೂಲಕ ಹೇಳುತ್ತದೆ ಚಿತ್ರ. ಆದರೆ ಮುಖ್ಯ ಪಾತ್ರಕ್ಕೆ ತಾರ್ಕಿಕ ಅಂತ್ಯ ಸಿಕ್ಕುವುದಿಲ್ಲ . ಆದರ್ಶ ಮತ್ತು ಹಕೀಕತ್ತುಗಳ ಕಂದು ಪದರದಲ್ಲಿ ನಾಯಕ ಸೇರಿಹೋಗುತ್ತಾನೆ.
ನಿರ್ದೇಶಕರ ಪರಿಚಯ
1968ರಲ್ಲಿ ಹುಟ್ಟಿದ ಕನ್ನಡಿಗ ಎಂ.ಎಸ್. ಪ್ರಕಾಶ್ ಬಾಬು ಚಿತ್ರದ ಗೀಳು ಇಟ್ಟುಕೊಂಡವರು. ಇವರು ಚಿತ್ರಕಾರ ಕೂಡ ಹೌದು. ಹೊಸತರ ಜಾಡು ಹಿಡಿದು ಹೊರಡುವ ಮನಸ್ಸು ಈತನದು. ಪುಣೆ ಮೂಲದ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಫಿಲ್ಮ್ ಅಪ್ರಿಸಿಯೇಷನ್ ಕೋರ್ಸ್ ಮಾಡಿದ್ದಾರೆ.
ಶಾಂತಿನಿಕೇತನದಲ್ಲಿ ಚಿತ್ರಕಲೆ ಕರಗತ ಮಾಡಿಕೊಂಡ ಪ್ರಕಾಶ್ ತಮ್ಮ ಚಿತ್ರಕಲಾ ಪ್ರತಿಭೆಯನ್ನು ಬೆಂಗಳೂರು ಹಾಗೂ ದೆಹಲಿಯಲ್ಲಿ ಪ್ರದರ್ಶಿಸಿದ್ದಾರೆ. ಚಿತ್ರಕಾರರ ಸಮೂಹದಲ್ಲಿ ತಾವೂ ಸೇರಿ ಕಲೆಯನ್ನು ವಿವಿಧೆಡೆ ಬಿಂಬಿಸಿದ್ದಾರೆ. 1995ರ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿರುವ ಬಾಬು, ಟೈಮ್ಸ್ ಆಫ್ ಇಂಡಿಯಾ, ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರಕ್ಕೊಮ್ಮೆ ಮುದ್ರಿತವಾಗುವ ಇವರ 'ಸಂಡೇಪಂಚ್" ಅಂಕಣ ಸಾಕಷ್ಟು ಜನಪ್ರಿಯ. ಈತ ಬೆಂಗಳೂರು ಫಿಲ್ಮ್ ಸೊಸೈಟಿಯ ಕ್ರಿಯಾಶೀಲ ಸದಸ್ಯರೂ ಹೌದು.(ಇನ್ಫೋ ವಾರ್ತೆ)


Click it and Unblock the Notifications