Breaking News: ಕನ್ನಡ ಸಿನಿರಸಿಕರಿಗೆ ಸಿಹಿಸುದ್ದಿ; ಶೀಘ್ರದಲ್ಲೇ ಸಂತೋಷ್- ನರ್ತಕಿ ಥಿಯೇಟರ್ ರೀ-ಓಪನ್!
ಯಾವುದೇ ಕನ್ನಡ ಸಿನಿಮಾ ಆದರೂ ಕೆಜಿ ರಸ್ತೆಯ ಥಿಯೇಟರ್ನಲ್ಲಿ ರಿಲೀಸ್ ಆದರೆ ಆ ಖದರೇ ಬೇರೆ. ಎಷ್ಟೇ ಮಲ್ಟಿಫ್ಲೆಕ್ಸ್ಗಳು ಬರಲಿ, ಸೂಪರ್ ಸ್ಟಾರ್ಗಳ ಸಿನಿಮಾಗಳಿಗೆ ಗಾಂಧಿನಗರದ ಮೇನ್ ಥಿಯೇಟರ್ ಬೇಕೇಬೇಕು. ಆದರೆ ದಿನದಿಂದ ದಿನಕ್ಕೆ ಕೆಜಿ ರಸ್ತೆಯ ಥಿಯೇಟರ್ಗಳು ಒಂದೊಂದಾಗಿ ನೆಲಸಮ ಆಗ್ತಿದೆ.
ಸಂತಸದ ವಿಚಾರ ಏನಪ್ಪಾ ಅಂದರೆ, ಕಳೆದ 10 ತಿಂಗಳಿನಿಂದ ಬಂದ್ ಆಗಿದ್ದ ಸಂತೋಷ್, ನರ್ತಕಿ ಥಿಯೇಟರ್ಗಳಲ್ಲಿ ಶೀಘ್ರದಲ್ಲೇ ಸಿನಿಮಾ ಪ್ರದರ್ಶನ ಶುರುವಾಗುತ್ತೆ ಎನ್ನಲಾಗುತ್ತಿದೆ. ಈಗಾಗಲೇ ಸಿನಿಮಾ ಪ್ರದರ್ಶನಕ್ಕೆ ಥಿಯೇಟರ್ಗಳಲ್ಲಿ ಸಿದ್ಧತೆ ಕೂಡ ಶುರುವಾಗಿದೆಯಂತೆ. ಈ ಸುದ್ದಿ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ತಂದುಕೊಟ್ಟಿದೆ. ಕೆಜಿ ರಸ್ತೆಯಲ್ಲಿ ಒಂದೊಂದೇ ಥಿಯೇಟರ್ ಬಂದ್ ಆಗುತ್ತಿದ್ದಂತೆ ಮೇನ್ ಥಿಯೇಟರ್ಗಾಗಿ ಮಾಗಡಿ ರಸ್ತೆ ಕಡೆ ವಾಲುವಂತಾಗಿತ್ತು. ಅದರಲ್ಲೂ ನರ್ತಕಿ ಹಾಗೂ ಸಂತೋಷ್ ಥಿಯೇಟರ್ಗಳು ಪ್ರದರ್ಶನ ನಿಲ್ಲಿಸಿದ್ದು, ಚಿತ್ರರಂಗಕ್ಕೆ ಸಮಸ್ಯೆ ತಂದೊಡ್ಡಿತ್ತು.
ಗಾಂಧಿನಗರದ ಮೇನ್ ಥಿಯೇಟರ್ನಲ್ಲಿ ಸಿನಿಮಾ ರಿಲೀಸ್ ಆಗುವುದು, ಅಲ್ಲಿ ಸ್ಟಾರ್ಗಳ ದೊಡ್ಡ ದೊಡ್ಡ ಕಟೌಟ್ ನಿಲ್ಲಿಸುವುದು, ಅಭಿಮಾನಿಗಳ ಫಸ್ಟ್ ಡೇ ಥಿಯೇಟರ್ನಲ್ಲಿ ಸೆಲೆಬ್ರೇಷನ್ ಮಾಡುವುದನ್ನು ನೋಡುವುದೇ ಚೆಂದ. ಇನ್ನು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಲು ಸ್ಟಾರ್ಗಳು ಥಿಯೇಟರ್ಗೆ ಬಂದರೆ ಹಬ್ಬವೇ ಸರಿ. ಇಂತಹ ಸೆಲೆಬ್ರೇಷನ್ಗೆ ಸಂತೋಷ್ ಹಾಗೂ ನರ್ತಕಿ ಥಿಯೇಟರ್ ಅಂಗಳ ಹೇಳಿ ಮಾಡಿಸಿದಂತಿದೆ. ಹಾಗಾಗಿನೇ ಈ ಎರಡೂ ಥಿಯೇಟರ್ಗಳು ಬಂದ್ ಆಗಿದ್ದು, ಸಿನಿಮಾ ನಿರ್ಮಾಪಕರಿಗಷ್ಟೇ ಅಲ್ಲ, ಸಿನಿರಸಿಕರಿಗೂ ಬೇಸರ ತಂದಿತ್ತು.

ಸಂತೋಷ್ನಲ್ಲಿ 'ರವಿಬೋಪಣ್ಣ'?
ಮುಂದಿನ ಶುಕ್ರವಾರ ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶಿಸಿ ನಟಿಸಿರೋ 'ರವಿಬೋಪಣ್ಣ' ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಕೆಜಿ ರಸ್ತೆಯ ಸಂತೋಷ್ ಥಿಯೇಟರ್ನಲ್ಲಿ ಸಿನಿಮಾ ಪ್ರದರ್ಶನ ಆಗುವುದಾಗಿ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಆದರೆ ಈ ಬಗ್ಗೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ.

ಎರಡ್ಮೂರು ವಾರಗಳಲ್ಲಿ ಸಿನಿಮಾ ಪ್ರದರ್ಶನ
ಗಾಂಧಿನಗರದ ಮೂಲಗಳ ಪ್ರಕಾರ ಸಂತೋಷ್ ಥಿಯೇಟರ್ನಲ್ಲಿ ಮತ್ತೆ ಸಿನಿಮಾ ಪ್ರದರ್ಶನ ಮಾಡಲು ಮಾಲೀಕರು ಶ್ರಮಿಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಎರಡ್ಮೂರು ವಾರಗಳಲ್ಲಿ ಸಂತೋಷ್ ಥಿಯೇಟರ್ ಪರದೆ ಮೇಲೆ ಸಿನಿಮಾ ಮೂಡುವುದು ಬಹುತೇಕ ಖಚಿತ ಅನ್ನಲಾಗುತ್ತಿದೆ.

ನರ್ತಕಿ ಥಿಯೇಟರ್ನಲ್ಲಿ ಯಾವಾಗ?
ಮೆಜೆಸ್ಟಿಕ್ನಲ್ಲಿರೋ ಸಂತೋಷ್, ನರ್ತಕಿ ಹಾಗೂ ಸಪ್ನಾ ಚಿತ್ರಮಂದಿರಗಳಿಗೆ ಮಾಲೀಕರು ಒಬ್ಬರೇ ಆಗಿದ್ದರು. ಈಗ ನರ್ತಕಿ ಥಿಯೇಟರ್ ಮತ್ತೊಬ್ಬರ ಪಾಲಾಗಿದೆ. ನರ್ತಕಿ ಥಿಯೇಟರ್ ಮಾಲೀಕರು ಸಹ ಶೀಘ್ರದಲ್ಲೇ ಸಿನಿಮಾ ಪ್ರದರ್ಶನ ಮಾಡವ ಸಾಧ್ಯತೆಯಿದೆ. ಒಟ್ಟಾರೆ ಎರಡೂ ಥಿಯೇಟರ್ಗಳಲ್ಲಿ ಮತ್ತೆ ಸಿನಿಮಾ ಪ್ರದರ್ಶನ ಶುರುವಾಗುವ ಸೂಚನೆ ಸಿಕ್ಕಿರುವುದು ಸಂತಸದ ವಿಚಾರ.

'ನಿನ್ನ ಸನಿಹಕೆ' ಕೊನೆಯ ಪ್ರದರ್ಶನ
'ನಿನ್ನ ಸನಿಹಕೆ' ಸಂತೋಷ್ ಚಿತ್ರಮಂದಿರದಲ್ಲಿ ಕೊನೆಯದಾಗಿ ಪ್ರದರ್ಶನ ಕಂಡ ಸಿನಿಮಾ. ಆದರೆ ತಾಂತ್ರಿಕ ಕಾರಣಗಳಿಂದ ಸಿನಿಮಾ ಪ್ರದರ್ಶನ ರದ್ದು ಮಾಡಲಾಗಿತ್ತು. ಆ ನಂತರ ಮತ್ತೆ ಸಿನಿಮಾ ಪ್ರದರ್ಶನ ಆಗುತ್ತದೆ ಎಂದು ಕಾದಿದ್ದೇ ಬಂತು. ಸಿನಿಮಾ ಪ್ರದರ್ಶನ ಮಾತ್ರ ಶುರುವಾಗಲೇ ಇಲ್ಲ. ದುನಿಯಾ ವಿಜಯ್ ನಟನೆಯ 'ಸಲಗ' ಸಿನಿಮಾ ಅಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ.

ದೊಡ್ಡ ಸಿನಿಮಾಗಳಿಗೆ ಬೇಕು ಮೇನ್ ಥಿಯೇಟರ್
'ಕ್ರಾಂತಿ', 'ಕಬ್ಜ', 'ಮಾರ್ಟಿನ್' ರೀತಿಯ ದೊಡ್ಡ ದೊಡ್ಡ ಸಿನಿಮಾಗಳು ನಿರ್ಮಾಣ ಆಗುತ್ತಿದೆ. ದರ್ಶನ್, ಉಪೇಂದ್ರ, ಧ್ರುವ ಸರ್ಜಾಗೆ ದೊಡ್ಡ ಅಭಿಮಾನಿ ಬಳಗವಿದೆ. ಕೆಜಿ ರಸ್ತೆಯ ಮೇನ್ ಥಿಯೇಟರ್ಗಳಲ್ಲಿ ಸಿನಿಮಾಗಳು ರಿಲೀಸ್ ಆದರೆ ಆರ್ಭಟ ಜೋರಾಗಿರುತ್ತದೆ. ಸಂತೋಷ್, ನರ್ತಕಿ ಥಿಯೇಟರ್ಗಳು ಓಪನ್ ಆದರೆ ಗಾಂಧಿನಗರಕ್ಕೆ ಹೊಸ ಕಳೆ ಬರಲಿದೆ.

15ಕ್ಕೂ ಹೆಚ್ಚು ಥಿಯೇಟರ್ಗಳಿದ್ದವು
ಸಾಗರ್, ಕಲ್ಪನಾ, ಮೇನಕಾ, ಕೆಂಪೇಗೌಡ, ತ್ರಿಭುವನ್, ಕೈಲಾಶ್, ಸಂತೋಷ್, ನರ್ತಕಿ, ಮೆಜೆಸ್ಟಿಕ್, ಹಿಮಾಲಯ, ತ್ರಿವೇಣಿ, ಸಂಗಮ್, ಅಪರ್ಣ, ಮೂವಿಲ್ಯಾಂಡ್, ಕಪಾಲಿ ಸೇರಿ ಗಾಂಧಿನಗರದಲ್ಲಿ ಒಂದ್ಕಾಲಕ್ಕೆ 15ಕ್ಕೂ ಅಧಿಕ ಥಿಯೇಟರ್ಗಳಿದ್ದರು. ಕೆಲ ಸಿನಿಮಾಗಳು ಕನ್ನಡ ಸಿನಿಮಾಗಳಿಗೆ ಮೀಸಲಾಗಿದ್ದರೆ ಮತ್ತೆ ಕೆಲವು ಪರಭಾಷೆ ಸಿನಿಮಾಗಳಿಗೆ ಮಣೆ ಹಾಕುತ್ತಿದ್ದವು. 10ಕ್ಕೂ ಅಧಿಕ ಥಿಯೇಟರ್ಗಳು ನೆಲಸಮವಾದರೆ ಸದ್ಯ 4 ಥಿಯೇಟರ್ಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನ ನಡೀತಿದೆ.


Click it and Unblock the Notifications











