ಪಂಜುರ್ಲಿ ವೇಷ ಧರಿಸಿ ರೀಲ್ಸ್: ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ ಸಲ್ಲಿಸಿದ ಕಲಾವಿದೆ
ಕಾಂತಾರ ಚಿತ್ರದ ಪಂಜುರ್ಲಿ ದೈವದ ವೇಷವನ್ನು ಧರಿಸಿ ರೀಲ್ಸ್ ಮಾಡಿದ್ದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ವಿರುದ್ಧ ಅಸಮಾಧಾನ ಕೇಳಿ ಬಂದ ಬೆನ್ನಲ್ಲೆ ಕಲಾವಿದೆಯು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ತಪ್ಪು ಕಾಣಿಕೆ ಹಾಕಿ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಮುಂದೆ ಕ್ಷಮೆಯಾಚಿಸಿದ್ದಾರೆ.
ಕುಟುಂಬ ಸಮೇತ ಧರ್ಮಸ್ಥಳಕ್ಕೆ ಆಗಮಿಸಿದ ಪ್ರಸಾದನ ಕಲಾವಿದೆ ಶ್ವೇತಾ ರೆಡ್ಡಿ, ಅರಿಯದೆ ಮಾಡಿರುವ ಕೆಲಸಕ್ಕೆ ಕ್ಷಮೆ ನೀಡೆಂದು ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನೂ ಭೇಟಿಯಾಗಿ ಕ್ಷಮೆ ಕೋರಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ವೇತಾ ರೆಡ್ಡಿ, ''ಪಂಜುರ್ಲಿ ದೈವದ ವೇಷ ಹಾಕಿದ ಬಳಿಕ ಸಾಕಷ್ಟು ನೆಗೆಟಿವ್ ಕಮೆಂಟ್ಗಳು ಬಂತು. ನಾನು ಯಕ್ಷಗಾನ ಮತ್ತು ದೈವಾರಾಧನೆ ಒಂದೇ ಅಂತಾ ಭಾವಿಸಿದ್ದೆ. ಬೇರೆಯವರ ಭಾವನೆಗಳಿಗೆ ಘಾಸಿ ಮಾಡಿರೋದಕ್ಕೆ ಕ್ಷಮೆಯಾಚಿಸುತ್ತೇನೆ. ಧರ್ಮಸ್ಥಳ ಕ್ಕೆ ಬಂದು ಈ ಕೆಲಸ ಮಾಡಿರೋದಕ್ಕೆ ತಪ್ಪು ಕಾಣಿಕೆ ಹಾಕಿದ್ದೇನೆ'' ಎಂದರು.

''ನಾನು ಮೂಲತಃ ಬೆಂಗಳೂರಿನವಳು. ನನಗೆ ದೈವಾರಾಧನೆಯ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. 'ಕಾಂತಾರ' ಚಿತ್ರ ನೋಡಿ ಈ ತರಹದ ವೇಷ ಹಾಕಿದ್ದೇನೆ. ಆ ಬಳಿಕ ನಾನು ಮಾಡಿರೋದು ತುಂಬಾ ತಪ್ಪು ಎಂಬುದು ಗೊತ್ತಾಗಿದೆ. ಇನ್ನು ಈ ತರಹ ಮಾಡೋದಿಲ್ಲ. ಹುಡುಗಿಯರು ಈ ತರಹದ ವೇಷ ಹಾಕಬಾರದೆಂದು ಗೊತ್ತಾಗಿದೆ. ಇದಕ್ಕೂ ಬಹಳ ಕಟ್ಟುಪಾಡುಗಳಿವೆ ಅಂತಾ ಗೊತ್ತಾಗಿದೆ. ದೈವ ಕೋಲ ನೋಡಬೇಕು ಅಂತಾ ಮನಸ್ಸಿನಲ್ಲಿ ಆಸೆ ಇದೆ. ಹಿರಿಯರ ಅಭಿಪ್ರಾಯ ಪಡೆದು ಮುಂದೆ ನೋಡುತ್ತೇನೆ'' ಎಂದಿದ್ದಾರೆ ಶ್ವೇತಾ ರೆಡ್ಡಿ.
ದೈವಕ್ಕೆ, ಅದರ ಸಂಪ್ರದಾಯಕ್ಕೆ ಅಪಚಾರ ಆಗಬಾರದೆಂದು ಹಲವು ಮುಂಜಾಗೃತೆಗಳನ್ನು ತೆಗೆದುಕೊಂಡೇ ಚಿತ್ರೀಕರಣ ಮಾಡಿದ್ದೆವು ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಹಲವು ಸಂದರ್ಶನಗಳಲ್ಲಿ ಹೇಳಿದ್ದರು. ಅಲ್ಲದೆ, ದೈವ ಕೂಗುವ ರೀತಿಯನ್ನು ಅನುಕರಣೆ ಮಾಡಿ ದೈವಕ್ಕೆ ಅಪಮಾನ ಮಾಡಬೇಡಿ ಎಂದು ಸಹ ಅವರು ಮನವಿ ಮಾಡಿದ್ದರು. ಹಾಗಿದ್ದೂ ಕೆಲವರು ಸಾಮಾಜಿಕ ಜಾಲತಾಣದ ರೀಲ್ಸ್ಗಳಲ್ಲಿ ದೈವವನ್ನು ಅನುಕರಣೆ ಮಾಡುತ್ತಿದ್ದಾರೆ, ಅದರ ಕೂಗನ್ನು ಅನುಕರಣೆ ಮಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಹೀಗೆ ಪ್ರಚಾರಕ್ಕಾಗಿ ದೈವದ ರೀತಿ ವೇಷ ಧರಿಸಿ ವಿಡಿಯೋ ಹಂಚಿಕೊಳ್ಳುವವರ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click it and Unblock the Notifications











