'ಮಲಯಾಳಂ' ಮೋಹ ; ಬೆಂಗಳೂರಿನಲ್ಲಿ ಆರಿದ 'ಶಾಖ', 'ನಮ್ಮ ಜೊತೆ ನಿಲ್ಲಿ' ಎಂದ ಚಿತ್ರತಂಡ..!
ಕನ್ನಡದ ಚಿತ್ರಗಳಿಗೆ ಕರ್ನಾಟಕದಲ್ಲಿಯೇ ನೆಲೆ ಇಲ್ಲ, ಬೆಲೆ ಇಲ್ಲ. ಈ ಮಾತು ಇಂದು ನಿನ್ನೆಯದ್ದಲ್ಲ. ಅನಾದಿಕಾಲದಿಂದಲೂ ಪರಭಾಷೆ ಸಿನಿಮಾಗಳ ಹಾವಳಿಯಿಂದ ನೊಂದು ಬೆಂದು ಹೋದ ನಿರ್ದೇಶಕರು, ನಿರ್ಮಾಪಕರು ಈ ವಿಚಾರದಲ್ಲಿ ಬಾಯಿ ಬಡಿದುಕೊಳ್ಳುತ್ತಲೇ ಇದ್ದಾರೆ. ಆದರೆ ಕೇಳಿಸಿಕೊಳ್ಳುವವರು, ಕಷ್ಟಕ್ಕೆ ಮಿಡಿಯುವವರು ಯಾರು ಇಲ್ಲ. ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಲಾಪ್ರೇಮಿಗಳ ಈ ದಿವ್ಯ ಮೌನದ ಪ್ರತಿಫಲವೆನ್ನುವಂತೆ ಇದೀಗ ಕನ್ನಡದ ಮತ್ತೊಂದು ಚಿತ್ರದ ಕಗ್ಗೊಲೆಯನ್ನ ಮಾಡಲಾಗಿದೆ.
ಹೌದು, ಕನ್ನಡದಲ್ಲಿ 'ಶಾಖಾಹಾರಿ' ಎಂಬ ಚೆಂದದ ಸಿನಿಮಾ, ಕಳೆದ ಫೆಬ್ರವರಿ 16ಕ್ಕೆ ತೆರೆಗೆ ಬಂದಿತ್ತು. ವಿಮರ್ಷಕರ ಹಾಗೂ ಪ್ರೇಕ್ಷಕರ ಪ್ರೀತಿಗೆ ಪಾತ್ರವೂ ಆಗಿತ್ತು.ಇದಕ್ಕೆ ಸಾಕ್ಷಿ ಎಂಬಂತೆ
ರಂಗಾಯಣ ರಘು ಹಾಗೂ ಗೋಪಾಲ್ ದೇಶಪಾಂಡೆ ಅವರನ್ನ ಹೊರತು ಪಡಿಸಿ, ಯಾವ 'ಸ್ಟಾರ್ ಅಟ್ರ್ಯಾಕ್ಷನ್' ಇರದ ಈ ಸಿನಿಮಾ '25' ದಿನಗಳನ್ನ ಪೂರೈಸಿತ್ತು. '50'ನೇ ದಿನದತ್ತ ಮುನ್ನುಗ್ಗುತ್ತಿತ್ತು.

ಆದರೆ ಈಗ ಮಲಯಾಳಂ ಮೇಲೀನ ಮೋಹಕ್ಕಾಗಿ ಬೆಂಗಳೂರಿನ ಲುಲು ಮಾಲ್ನ ಸಿನೆ ಪೋಲೀಸ್ನಲ್ಲಿಲ್ಲಿ ಈ ಚಿತ್ರವನ್ನ ಬಲಿ ಕೊಡಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಚೆನ್ನಾಗಿ ಓಡುತ್ತಿರುವ ಕನ್ನಡ ಚಿತ್ರಗಳ 'ಶಾಖ'ವನ್ನ ಆರಿಸಿ, ಪರಭಾಷೆ ಸಿನಿಮಾಗಳನ್ನ ಹೊತ್ತು ಮೆರೆಸುವ ಸಂಪ್ರದಾಯವನ್ನೂ ಮುಂದುವರೆಸಲಾಗಿದೆ.
ಇನ್ನೂ ವಾರಕ್ಕೆ ಅರ್ಧ ಡಜನ್ ಸಿನಿಮಾ ತೆರೆಗೆ ಬರುತ್ತಿರುವ ಈ ಸಮಯದಲ್ಲಿ, ಚಿತ್ರವೊಂದು ಚಿತ್ರಮಂದಿರದಲ್ಲಿ ಒಂದು ವಾರ ಉಳಿಯುವುದೇ ಕಷ್ಟವೆನ್ನುವ ವಾತಾವರಣ ಇದೆ. ಅಂಥದ್ದರಲ್ಲಿ ಶಾಖಾಹಾರಿ ಚಿತ್ರ 25 ದಿನ ಪೂರೈಸಿದೆ. ಜನ ಬೆಂಬಲ ಇಲ್ಲದೇ ಇಂಥಹದ್ದೊಂದು ಸಾಧನೆ ನಿಜಕ್ಕೂ ಅಸಾಧ್ಯ. ಇದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ಶುಕ್ರವಾರ ಚಿತ್ರವನ್ನ ಎತ್ತಂಗಡಿ ಮಾಡಿದ ಜಾಗದಲ್ಲಿ 22 ಜನ ಸಿನಿಮಾ ನೋಡಿದ್ದರು, ಶನಿವಾರ ಈ ಸಂಖ್ಯೆ ಮೂರು ಪೆಟ್ಟು ಹೆಚ್ಚಾಗಿತ್ತು. 111 ಜನ ಸಿನಿಮಾ ನೋಡಿ ಖುಷಿ ಪಟ್ಟಿದ್ದರು. ಭಾನುವಾರ 68 ಜನ ಸಿನಿಮಾ ನೋಡಿದ್ದರು. ಮತ್ತೆ ಸೋಮವಾರ 20ಕ್ಕೂ ಹೆಚ್ಚು ಜನ ಸಿನಿಮಾ ನೋಡಿದ್ದರು. ಆದರೆ ಈ ಅಂಕಿ ಸಂಖ್ಯೆಗಳನ್ನ ಲೆಕ್ಕಕ್ಕೆ ತೆಗೆದುಕೊಳ್ಳದೇ ಬೆಂಗಳೂರಿನ ಲುಲು ಮಾಲ್ನ ಸಿನೆ ಪೋಲೀಸ್ ನಲ್ಲಿ ಮಂಗಳವಾರ ಚಿತ್ರವನ್ನ ಹೇಳದೇ ಕೇಳದೇ ತೆಗೆದು ಹಾಕಲಾಗಿದೆ. ಶಾಖಾಹಾರಿ ಬದಲು, ಮಲಯಾಳಂ ಸಿನಿಮಾಗೆ ನಾಲ್ಕು ಪ್ರದರ್ಶನವನ್ನೂ ಬಿಟ್ಟು ಕೊಡಲಾಗಿದೆ.

ಮಲ್ಟಿಪ್ಲೆಕ್ಸ್ ನಲ್ಲಿ ತಮಗಾದ ಈ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂಬ ಮನವಿಯನ್ನ ಈಗ ನಿರ್ದೇಶಕ ಸಂದೀಪ್ ಸುಂಕದ ಹಾಗೂ ನಿರ್ಮಾಪಕ ರಾಜೇಶ್ ಕಿಳಂಬಿ ಮಾಡಿದ್ದಾರೆ. ನಮ್ಮ ಜೊತೆ ದಯವಿಟ್ಟು ನಿಲ್ಲಿ ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ. ಬೇರೆ ಕೆಲವು ಸಿನಿಮಾಗಳಿಗೆ ಹೋಲಿಸಿದರೆ ನಮ್ಮ ಸಿನಿಮಾದ ಪ್ರದರ್ಶನ ಚೆನ್ನಾಗಿಯೇ ಇತ್ತು. ಪ್ರೇಕ್ಷಕರು ಸಹ ಬರುತ್ತಿದ್ದರು, ಹಾಗಿದ್ದರೂ ನಮ್ಮ ಸಿನಿಮಾವನ್ನು ಕೊಂದು, ಮಲಯಾಳಂ ಸಿನಿಮಾಕ್ಕೆ ಅವಕಾಶ ಕೊಡಲಾಯ್ತು. ಎಂದಿರುವ ನಿರ್ದೇಶಕ ಹಾಗೂ ನಿರ್ಮಾಪಕರು, ನಾವು ಲುಲು ಮಾಲ್ ನ ಸಿನೆಪೊಲೀಸ್ ಮುಖ್ಯಸ್ಥ ಕಾರ್ತಿಕ್ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದೆವು. ಅದಕ್ಕೆ ಆತ ಇಲ್ಲ ತಾಂತ್ರಿಕ ಸಮಸ್ಯೆ ಆಗಿರಬಹುದು ಎಂಬ ಹಾರಿಕೆಯ ಉತ್ತರ ಕೊಟ್ಟು ನಮ್ಮನ್ನ ಕಳಿಸಿದರು. ಮತ್ತೆ ಶೋ ಕೊಡಬಹುದು ಎಂಬ ಭರವಸೆಯ ಜೊತೆ ಮರಳಿ ಬಂದು ನಾವು ಕೂಡ ಕಾದೆವು, ಆದರೆ ಶೋ ಕೊಡಲಿಲ್ಲ ಎಂದಿದ್ದಾರೆ.
'ಇನ್ನೂ ಈ ವಿಷಯವನ್ನು ಕನ್ನಡ ಚಿತ್ರರಂಗದ ನಿರ್ಮಾಪಕ, ಹಿರಿಯ ವಿತರಕ ಜಯಣ್ಣ ಅವರ ಗಮನಕ್ಕೆ ತಂದೆವು, ಜಯಣ್ಣ ಅವರು ಕಾರ್ತಿಕ್ ಗೆ ಕರೆ ಮಾಡಿದಾಗಲೂ ಅದೇ ಸುಳ್ಳು ಉತ್ತರವನ್ನು ಕಾರ್ತಿಕ್ ನೀಡಿದರು ಎಂದು ಕೂಡ ಇಬ್ಬರು ಹೇಳಿದ್ದಾರೆ. ಆಗ ನಾನು ಇದು ಸುಳ್ಳು, ನಮ್ಮ ಶೋ ಅನ್ನು ಮಲಯಾಳಂ ಸಿನಿಮಾಕ್ಕೆ ಕೊಟ್ಟಿದ್ದೀರಿ ಎಂದೆ. ಆಗ ಕಾರ್ತಿಕ್, ನೀವು ಶೋ ಉಳಿಸಿಕೊಳ್ಳಲು ಅಡ್ಡದಾರಿಯಲ್ಲಿ ಟಿಕೆಟ್ ಖರೀದಿ ಮಾಡಿದ್ದೀರಿ. ಅಸಲಿಗೆ ನಿಮ್ಮ ಶೋಗೆ ಜನವೇ ಇರಲಿಲ್ಲ ಎಂಬ ಸುಳ್ಳು ಆರೋಪವನ್ನ ಸಿನಿಮಾವನ್ನು ಕೊಲ್ಲುವ ಉದ್ದೇಶದಿಂದಲೇ ನಮ್ಮ ಮೇಲೆಯೇ ಮಾಡಿದ್ದಾರೆ ಎಂದಿದ್ದಾರೆ ನಿರ್ಮಾಪಕ ರಾಜೇಶ್.

ಎಂದಿದ್ದಾನೆ. ನಮ್ಮ ಮೇಲೆ ಮೋಸದ ಆರೋಪ ಮಾಡಿದ್ದಾನೆ. ನಾವು ಮಾಸ್ ಟಿಕೆಟ್ ಖರೀದಿ ಮಾಡಿಲ್ಲ, ಈ ವರೆಗೆ ಸಿನಿಮಾ ನೋಡಿದವರು ನಿಜವಾದ ಪ್ರೇಕ್ಷಕರು. ನಮ್ಮ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ ಮಲ್ಟಿಪ್ಲೆಕ್ಸ್ ನವರು ಅವಮಾನ ಮಾಡಿದ್ದಾರೆ. ಕನ್ನಡ ಸಿನಿಮಾವನ್ನು ಕೊಲ್ಲುವ ಉದ್ದೇಶದಿಂದಲೇ ಈ ಸುಳ್ಳು ಆರೋಪವನ್ನು ಅವರು ಮಾಡಿದ್ದಾರೆ' ಎಂದಿದ್ದಾರೆ ನಿರ್ಮಾಪಕ ರಾಜೇಶ್.
ಒಟ್ಟಿನಲ್ಲಿ ಕರ್ನಾಟಕದಲ್ಲಿನ ಅಷ್ಟೂ ಮಲ್ಟಿಪ್ಲೆಕ್ಸ್ಗಳಿಗೆ ಪರಭಾಷಾ ಚಿತ್ರಗಳ ಮೇಲೇ ಪ್ರೀತಿ ಇದೆ ಅನ್ನುವ ಮಾತು ಆಗಾಗ ಕೇಳಿ ಬರುತ್ತೆ. ಈ ಮಾತು ಇನ್ನೊಮ್ಮೆ ಸಾಬೀತು ಆಗಿದೆ. ಕೇವಲ ಮಲ್ಟಿಪ್ಲೆಕ್ಸ್ ಮಾತ್ರ ಅಲ್ಲ ಥೇಟರುಗಳಲ್ಲಿಯೂ ಪರಭಾಷಾ ಚಿತ್ರಗಳದ್ದೇ ಹಾವಳಿ. ಇದರಿಂದ ಕನ್ನಡ ಚಿತ್ರಗಳು ನಷ್ಟ ಅನುಭವಿಸುತ್ತಿದ್ದರೂ ಫಿಲಂ ಚೇಂಬರ್ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಮೌನ ಮುರಿಯುವುದಿಲ್ಲ. ಮಲ್ಟಿಪ್ಲೆಕ್ಸ್ ನವರ ಜೊತೆ ಮಾತುಕಥೆಯನ್ನೂ ಮಾಡುವುದಿಲ್ಲ. ಇನ್ನಾದರೂ ಕನ್ನಡ ಚಿತ್ರರಂಗದ ಹಿರಿಯರು, ಫಿಲ್ಮ್ ಚೇಂಬರ್ ನಲ್ಲಿ ಇರುವವರು ಈ ಬಗ್ಗೆ ಗಮನ ಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಶಾಖಾಹಾರಿ ಚಿತ್ರಕ್ಕೆ ನ್ಯಾಯ ಸಿಗುತ್ತಾ ಅನ್ನುವುದನ್ನೂ ಕೂಡ ಕಾದು ನೋಡಬೇಕಿದೆ.


Click it and Unblock the Notifications











