ಕನಸಿನ ರಾಣಿ ಮಾಲಾಶ್ರೀಗೆ ಸಿಕ್ತು ಮಕ್ಕಳಿಂದ ಸುಂದರ ಉಡುಗೊರೆ
ಸ್ಯಾಂಡಲ್ ವುಡ್ ನ ಕನಸಿನ ರಾಣಿ ಅಂತನೆ ಖ್ಯಾತಿಗಳಿಸಿರುವ ನಟಿ ಮಾಲಾಶ್ರೀ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತಿ ರಾಮು ಇದಲ್ಲದ ಮೊದಲ ಹುಟ್ಟುಹಬ್ಬ ಇದಾಗಿದೆ. ಪತಿಯ ಅಗಲಿಕೆ ನೋವಿನಲ್ಲಿರುವ ಮಾಲಾಶ್ರೀ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಆದರೆ ಮಕ್ಕಳು ತಾಯಿಯ ಹುಟ್ಟುಹಬ್ಬವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದ್ದಾರೆ.
ಪತಿಯ ನೆನಪಿನಲ್ಲೇ ಕಾಲಕಳೆಯುತ್ತಿರುವ ಮಾಲಾಶ್ರೀಗೆ ಈಗ ಮಕ್ಕಳೇ ಎಲ್ಲಾ. ಹುಟ್ಟುಹಬ್ಬದ ದಿನ ಪ್ರೀತಿಯ ತಾಯಿಗೆ ಮುದ್ದಾದ ಮಕ್ಕಳು ಸುಂದರ ಉಡುಗೊರೆ ನೀಡುವ ಮೂಲಕ ತಾಯಿಗೆ ಸರ್ಪ್ರೈಸ್ ನೀಡಿದ್ದಾರೆ. ಮಾಲಾಶ್ರೀ ಮತ್ತು ರಾಮು ದಂಪತಿಗೆ ಇಬ್ಬರು ಮಕ್ಕಳು. ಅನನ್ಯಾ ಮತ್ತು ಆರ್ಯನ್. ಈ ಇಬ್ಬರೂ ಮಕ್ಕಳು ಈಗ ಮಾಲಾಶ್ರೀಯ ಸಂಭ್ರಮವನ್ನು ಹೆಚ್ಚಿಸಿದ್ದಾರೆ.
ಹುಟ್ಟುಹಬ್ಬದ ದಿನ ಮುದ್ದಾದ ನಾಯಿ ಮರಿಯನ್ನು ಉಡುಗೊರೆ ನೀಡುವ ಮೂಲಕ ಮಾಲಾಶ್ರೀ ಸಂತಸವನ್ನು ಹೆಚ್ಚಿಸಿದ್ದಾರೆ. ನಾಯಿ ಮರಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ನಾಯಿ ಮರಿಯ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

ಕನಸಿನ ರಾಣಿಗೆ 47ನೇ ವರ್ಷದ ಹುಟ್ಟುಹಬ್ಬ
ನಟಿ ಮಾಲಾಶ್ರೀ ಇತ್ತೀಚಿಗಷ್ಟೆ 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪತಿಯನ್ನು ಕಳೆದುಕೊಂಡು ನೋವಿನಲ್ಲಿರುವ ಮಾಲಾಶ್ರೀ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕನಸಿನ ರಾಣಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸಿದ್ದಾರೆ.

ಮಕ್ಕಳಿಂದ ನಾಯಿಮರಿ ಗಿಫ್ಟ್
ಮಾಲಾಶ್ರೀ ಮಕ್ಕಳು ಉಡುಗೊರೆಯಾಗಿ ನೀಡಿದ ನಾಯಿಮರಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಮುದ್ದಾದ ನಾಯಿ ಮರಿಯ ಹೆಸರನ್ನು ಬಹಿರಂಗ ಪಡಿಸಿದ್ದಾರೆ. "ನನ್ನ ಮಕ್ಕಳು ನನ್ನ ಹುಟ್ಟುಹಬ್ಬಕ್ಕೆ ಪಿಟ್ಬುಲ್ ನಾಯಿಮರಿಯನ್ನು ಉಡುಗೊರೆ ನೀಡಿದ್ದಾರೆ. ನಿಮಗೆ ಬಘೀರಾ ಅಕಾ ಬಗ್ಗಿಯನ್ನು ಪರಿಚಯಿಸುತ್ತಿದ್ದೀನಿ. ಮನೆಗೆ ಸ್ವಾಗತ ಬೇಬಿ" ಎಂದು ಬರೆದುಕೊಂಡಿದ್ದಾರೆ.

ಒಂದು ಕಾಲದ ಜನಪ್ರಿಯ ನಟಿ ಮಾಲಾಶ್ರೀ
90 ದಶಕದ ಜನಪ್ರಿಯ ನಟಿ ಮಾಲಾಶ್ರೀ ಇಂದಿಗೂ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ. ಒಂದು ಕಾಲದಲ್ಲಿ ಮಾಲಾಶ್ರೀ ಸಿನಿಮಾ ರಿಲೀಸ್ ಆಗುತ್ತೆ ಅಂದರೆ ಸಾಕು ಸಿನಿಪ್ರಿಯರು ಹುಚ್ಚೆದ್ದು ಕುಣಿಯುತ್ತಿದ್ದರು. ಕ್ಯೂನಿಂತು ಟಿಕೆಟ್ ಪಡೆದು, ತೆರೆಮೇಲೆ ಮಾಲಾಶ್ರೀ ನೋಡಿ ಎಂಜಾಯ್ ಮಾಡುತ್ತಿದ್ದರು. 90 ದಶಕದಲ್ಲಿ ಕನಸಿನ ರಾಣಿ ಮಾಲಶ್ರೀಗೆ ಇದ್ದ ಹವಾ ಯಾವ ಸ್ಟಾರ್ ನಟರಿಗಿಂತ ಕಮ್ಮಿ ಇರಲಿಲ್ಲ.

ಬಾಲನಟಿಯಾಗಿ ಚಿತ್ರರಂಗ ಪ್ರವೇಶ
1979ರಲ್ಲಿ ಬಾಲನಟಿಯಾಗಿ ತಮಿಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಅವರು ತಮಿಳು ಮತ್ತು ತೆಲುಗಿನಲ್ಲಿ ಸುಮಾರು 34 ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಅದರಲ್ಲಿ 26 ಚಿತ್ರಗಳಲ್ಲಿ ಹುಡುಗನ ಪಾತ್ರಗಳಲ್ಲಿಯೇ ನಟಿಸಿದ್ದರು ಎನ್ನುವುದು ವಿಶೇಷ. ತಮಿಳುನಾಡಿನಲ್ಲಿ ಹುಟ್ಟಿ, ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿ ಕೊನೆಗೆ ಕನ್ನಡತಿಯಾಗಿ ಗುರುತಿಸಿಕೊಂಡವರು ನಟಿ ಮಾಲಾಶ್ರೀ.

ಮಾಲಾಶ್ರೀ ಮೊದಲ ಹೆಸರು ಶ್ರೀದುರ್ಗಾ
ಶ್ರೀದುರ್ಗಾ ಎಂಬ ಹೆಸರಿನ ಅವರು 'ಮಾಲಾಶ್ರೀ'ಯಾಗಿ ಬದಲಾಗಿದ್ದು, 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ವೇಳೆ.
ಸಿನಿಮಾದಲ್ಲಿ ಮಾಲಾಶ್ರೀ ಇದ್ದಾರೆ ಅಂದರೆ ಸಾಕು ಆ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ಮಾತು ಪ್ರಚಲಿತದಲ್ಲಿತ್ತು. ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ ಕ್ರೇಜ್ ಹುಟ್ಟಿಸಿದವರೆಂದರೆ ಅದು ಮಾಲಾಶ್ರೀ. ತಮ್ಮದೇ ದೊಡ್ಡ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದ ಅವರು, ಚಿತ್ರರಂಗವನ್ನು ಆಳಿದ ಕೆಲವೇ ನಟಿಯರಲ್ಲಿ ಒಬ್ಬರು. 1998ರ ಬಳಿಕ ಮಾಲಾಶ್ರೀ ಸಿನಿಮಾಗಳು ನಟಿಸುವುದು ಕಡಿಮೆಯಾದರೂ ಈಗಲೂ ಅಭಿಮಾನಿಗಳನ್ನು ಉಳಿಸಿಕೊಂಡಿದ್ದಾರೆ.

ಕೊರೊನಾಗೆ ಬಲಿಯಾದ ಪತಿ ರಾಮು
ಕೊರೊನಾ ಎರಡನೇ ಅಲೆ ಭೀಕರತೆ ಸಮಯದಲ್ಲಿ ಮಾಲಾಶ್ರೀ ಪತಿಯನ್ನು ಕಳೆದುಕೊಂಡರು. ಕೊರೊನಾ ಮಹಾಮಾರಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಅವರನ್ನು ಬಲಿ ಪಡೆಯಿತು. ಸದ್ಯ ರಾಮು ಬಿಟ್ಟುಹೋದ ನಿರ್ಮಾಣ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಮಾಲಾಶ್ರೀ, ಸಿನಿಮಾಗಳ ಕಡೆ ಹರಿಸಿದ್ದಾರೆ. ಮಾಲಾಶ್ರೀ ಕೊನೆಯದಾಗಿ ಉಪ್ಪು ಹುಳಿ ಖಾರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.


Click it and Unblock the Notifications











