ಪತಿಯನ್ನು ಕಳೆದುಕೊಂಡ ದುಃಖದಲ್ಲೇ ಭಾವುಕ ಪತ್ರ ಬರೆದ ನಟಿ ಮಾಲಾಶ್ರೀ
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೋಟಿ ರಾಮು ಏಪ್ರಿಲ್ 26 ರಂದು ಕೊರೊನಾಗೆ ಬಲಿಯಾಗಿದ್ದಾರೆ. ರಾಮು ಅವರನ್ನು ಕಳೆದುಕೊಂಡ ನಟಿ ಮಾಲಾಶ್ರೀ ಮತ್ತು ಅವರ ಕುಟುಂಬ ದುಃಖದಲ್ಲಿ ಮುಳುಗಿದೆ. ರಾಮು ಇಲ್ಲದ ಜೀವನವನ್ನು ಮಾಲಾಶ್ರೀಗೆ ಊಹಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ.
Recommended Video
ನೋವಿನಲ್ಲಿರುವ ನಟಿ ಮಾಲಾಶ್ರೀಗೆ ಚಿತ್ರರಂಗದ ಅನೇಕರು ಧೈರ್ಯ ತುಂಬುತ್ತಿದ್ದಾರೆ. ಭೇಟಿಯಾಗಿ ಮಾತನಾಡಿಸಿ, ಕಣ್ಣೀರು ಒರೆಸುವಂತ ಸ್ಥಿತಿಯೂ ಇಲ್ಲವಲ್ಲ ಎಂದು ಅನೇಕರು ನೊಂದುಕೊಳ್ಳುತ್ತಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಅನೇಕರು ಸಾಮಾಜಿಕ ಜಾಲತಾಣದ ಮೂಲಕವೇ ಸಾಂತ್ವನ ಹೇಳುತ್ತಿದ್ದಾರೆ.
ಇದೀಗ ನಟಿ ಮಾಲಾಶ್ರೀ ಎಲ್ಲರಿಗೂ ಧನ್ಯವಾದ ತಿಳಿಸುವ ಮೂಲಕ ಭಾವುಕ ಪತ್ರ ಹಂಚಿಕೊಂಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬಿ ಬೆಂಬಲ ನೀಡಿದ ಪ್ರತಿಯೋಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಲಾಶ್ರೀ ಹೃದಯಸ್ಪರ್ಶಿ ಪತ್ರ ಹಂಚಿಕೊಂಡಿದ್ದಾರೆ.

ಕಳೆದ 12 ದಿನಗಳು ತೀರ ನೋವಿನಿಂದ ಕೂಡಿದೆ
'ಕಳೆದ 12 ದಿನಗಳು ನನಗೆ ನನ್ನ ಕುಟುಂಬಕ್ಕೆ ತುಂಬಾ ನೋವಿನಿಂದ ಕೂಡಿದೆ. ನನಗೆ ದಾರಿ ಕಾಣದಾಗಿದೆ. ಪತಿ ರಾಮು ಅಗಲಿಕೆಯಿಂದ ನನ್ನ ಹೃದಯ ಛಿದ್ರವಾಗಿದೆ. ಅವರು ಯಾವಾಗಲು ನಮಗೆ ಬೆನ್ನೆಲುಬಾಗಿ ಇದ್ದರು. ಮತ್ತು ಸದಾ ಸಲಹೆ ನೀಡುತ್ತಿದ್ದರು' ಎಂದಿದ್ದಾರೆ.

ಕಷ್ಟದಲ್ಲಿ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ
'ಈ ಸಂಕಷ್ಟದ ಸಮಯದಲ್ಲಿ ಇಡೀ ಚಿತ್ರರಂಗ ಪ್ರೀತಿ ಮತ್ತು ಬೆಂಬಲ ತೋರಿದೆ. ಇದಕ್ಕೆ ನಾವು ಚಿರಋಣಿ. ಕಷ್ಟದ ಸಮಯದಲ್ಲಿ ಪ್ರೀತಿ, ಬೆಂಬಲ ತೋರಿದ ಪ್ರತಿಯೊಬ್ಬ ಸಿನಿಮಾ ಮಂದಿ, ಮಾಧ್ಯಮ, ಕಲಾವಿದರು, ನಿರ್ಮಾಪಕರು ತಂತ್ರಜ್ಞರು, ರಾಮು ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಶಿಗಳಿಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

ನಿಮ್ಮ ಪ್ರೀತಿ ಪಾತ್ರರರನ್ನು ಚೆನ್ನಾಗಿ ನೋಡಿಕೊಳ್ಳಿ
'ಇಂಥ ಕಠಿಣ ಪರಿಸ್ಥಿತಿಯಲ್ಲಿ ಮನೆಯಲ್ಲೇ ಇರಿ ಸುರಕ್ಷಿತರಾಗಿರಿ. ನಿಮ್ಮ ಪ್ರೀತಿ ಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದು ವಿನಂತಿ ಮಾಡಿಕೊಂಡಿದ್ದಾರೆ. ಪತ್ರ ಶೇರ್ ಮಾಡಿ ಪ್ರೀತಿಯ ಪತಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ನಟಿ ಮಾಲಾಶ್ರೀಗೆ ಚಿತ್ರರಂಗದ ಅನೇಕ ಗಣ್ಯರು ಸಾಂತ್ವನ ಹೇಳಿದ್ದಾರೆ. ಹಿರಿಯ ನಟಿ ಶ್ರುತಿ ಇತ್ತೀಚಿಗೆ ಗೆಳತಿ ಮಾಲಾಶ್ರೀಗೆ ದೀರ್ಘವಾದ ಪತ್ರ ಬರೆದಿದ್ದರು.

ಏಪ್ರಿಲ್ 26ರಂದು ರಾಮು ನಿಧನ
ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ ಕೋಟಿ ರಾಮು ಕೊರೊನಾ ಪಾಸಿಟಿವ್ ನಿಂದ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಅನೇಕ ದಿನಗಳು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ರಾಮು ಇನ್ನೇನು ಗುಣಮುಖರಾಗಿ ಮನೆಗೆ ಮರಳುತ್ತಾರೆ ಎನ್ನುವಷ್ಟೊತ್ತಿಗೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 26ರ ಸಂಜೆ ರಾಮು ಕೊನೆಯುಸಿರೆಳೆದಿದ್ದಾರೆ.


Click it and Unblock the Notifications











