ಕಿರುಕುಳ ಆರೋಪ: ಮಲಯಾಳಂ ನಟ ವಿನಾಯಕನ್ ಬಂಧನ
ಮಲಯಾಳಂ ಚಿತ್ರರಂಗದ ಖ್ಯಾತ ನಟ ವಿನಾಯಕನ್ ಅವರ ಮೇಲೆ ಮಹಿಳಾ ಹೋರಾಟಗಾರ್ತಿಯೊಬ್ಬರು ಕಿರುಕುಳದ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಆ ನಟನನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.
ಮಹಿಳಾ ಹೋರಾಟಗಾರ್ತಿ ಮೃದುಲದೇವಿ ಶಶಿಧರನ್ ಅವರು ನಟ ವಿನಾಯಕನ್ ಅವರಿಗೆ ಫೋನ್ ಮಾಡಿ ಕಾರ್ಯಕ್ರಮವೊಂದಕ್ಕೆ ಬರುವಂತೆ ಆಹ್ವಾನಿಸಿದ್ದರಂತೆ. ಈ ವೇಳೆ ಆ ಮಹಿಳೆಯನ್ನ ನಟ ವಿನಾಯಕನ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು.
ಬಳಿಕ ಇದೇ ಸಂಬಂಧ ಕಲ್ಪೆಟ್ಟ ಪೊಲೀಸ್ ಠಾಣೆಯಲ್ಲಿ ಕಿರುಕುಳ ಆರೋಪದಡಿ ನಟನ ವಿರುದ್ಧ ದೂರು ದಾಖಲಿಸಿದ್ದಾರೆ. ಜೂನ್ 15 ರಂದು ದೂರು ದಾಖಲಿಸಿಕೊಂಡಿದ್ದ ಪೊಲೀಸರ ಎದುರು ನಟ ವಿನಾಯಕನ್ ಅವರು ನಿನ್ನೆ (ಜೂನ್ 21) ತಮ್ಮ ವಕೀಲರ ಜೊತೆ ತಾವೇ ಖುದ್ದು ಹಾಜರಾಗಿದ್ದಾರೆ. ಮಹಿಳೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವಿನಾಯಕನ್ ''ಹೌದು, ನಾನು ಪೊಲೀಸರ ಎದುರು ಹಾಜರಾಗಿದ್ದೆ. ಹಾಗಂದ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೀನಿ ಅಂತಲ್ಲ. ಈಗ ಈ ಪ್ರಕರಣ ಕೋರ್ಟ್ ನಲ್ಲಿದೆ. ಅಲ್ಲಿ ಉತ್ತರಿಸುತ್ತೇನೆ ಬಿಡಿ'' ಎಂದಿದ್ದಾರೆ.
ಈ ಬಗ್ಗೆ ವಿಚಾರಣೆ ಅಧಿಕಾರಿಗಳು ಕೂಡ ಪ್ರತಿಕ್ರಿಯಿಸಿದ್ದು ''ಮಹಿಳೆಯ ಹೇಳಿಕೆಯನ್ನ ಪಡೆದುಕೊಂಡಿದ್ದೇವೆ. ದೂರಿನ ಜೊತೆ ಫೋನ್ ನಲ್ಲಿ ಮಾತನಾಡಿರುವ ರೆಕಾರ್ಡ್ ಗಳನ್ನ ಒದಗಿಸಿದ್ದಾರೆ. ಅದನ್ನ ಸೈಬರ್ ಕ್ರೈಂ ಪೊಲೀಸರಿಗೆ ಒಪ್ಪಿಸಿದ್ದೇವೆ. ಅವರಿಂದ ವರದಿ ಬರಬೇಕಿದೆ. ಮತ್ತೊಂದೆಡೆ ವಿನಾಯಕನ್ ಅವರು ಕೂಡ ತಮ್ಮ ಹೇಳಿಕೆ ನೀಡಿದ್ದಾರೆ, ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ'' ಎಂದು ತಿಳಿಸಿದ್ದಾರೆ.
ಯಾರು ಈ ವಿನಾಯಕನ್?
ಅಂದ್ಹಾಗೆ, ವಿನಾಯಕನ್ ಮಲಯಾಳಂ ಚಿತ್ರರಂಗದ ಪೋಷಕ ನಟ. ಮೋಹನ್ ಲಾಲ್, ಮಮ್ಮುಟ್ಟಿ ಸೇರಿದಂತೆ ಹಲವು ನಟರ ಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಜೊತೆಗೆ ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ದುಲ್ಕಾರ್ ಸಲ್ಮಾನ್ ಜೊತೆ ನಟಿಸಿದ 'ಕಮ್ಮಟ್ಟಿಪಾಡಂ' ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ.


Click it and Unblock the Notifications











