'ಮೊದಲ ಸಲ' ಚಿತ್ರ ನಿರ್ಮಿಸಿ ನಷ್ಟ ಆಯ್ತು, ಬಡ್ಡಿ ಬೆಳೀತು, ಬೇರೆ ಬ್ಯುಸಿನೆಸ್ ಕೂಡ ಕೈಹಿಡಿಲಿಲ್ಲ; ಮಲ್ಲಿಕಾರ್ಜುನ್
ಸಾಲದ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮತ್ತೆ ಪ್ರತ್ಯಕ್ಷವಾಗಿದ್ದಾರೆ. 7 ವರ್ಷಗಳ ಬಳಿಕ ಮಾಧ್ಯಮಗಳ ಮುಂದೆ ಬಂದು ಮಾತನಾಡಿದ್ದಾರೆ. ಏಳೆಂಟು ಕೋಟಿ ರೂ. ಸಾಲ ಆಗಿತ್ತು. ಅಷ್ಟು ಹಣ ವಾಪಸ್ ತೀರಿಸೋಕೆ ಸಾಧ್ಯವಿಲ್ಲ ಎಂದಾಗ ಪತ್ನಿ ಜೊತೆ ಸೇರಿ ಸಾಯೋಕೆ ಬಯಸಿದ್ದೆ. ಆದರೆ ಧೈರ್ಯ ಇಲ್ಲದೇ ಊರು ಬಿಡುವಂತಾಯಿತು ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ದರ್ಶನ್ ಆಪ್ತ ಬಳಗದಲ್ಲಿದ್ದ ಮಲ್ಲಿಕಾರ್ಜುನ್ ಕೆಲ ಸಿನಿಮಾಗಳ ನಿರ್ಮಾಣ, ವಿತರಣೆ ಸಹ ಮಾಡಿದ್ದರು. ಆದರೆ ಯಾವುದೂ ಕೈಹಿಡಿಯಲಿಲ್ಲ. ಬೇರೆ ಬೇರೆ ಬ್ಯುಸಿನೆಸ್ ಮಾಡಿ ಕೂಡ ನಷ್ಟವಾಗಿತ್ತು ಎಂದಿದ್ದಾರೆ. ಸಾಲದ ವಿಚಾರ ಪತ್ನಿಗೆ ಗೊತ್ತಾಗಿ ಇಬ್ಬರು ಸಾಯಬೇಕು ಎಂದು ನಿರ್ಧರಿಸಿದ್ದೆವು. ಬಾಮೈದನ ಮದುವೆ ಅದೇ ಸಮಯದಲ್ಲಿ ಮದುವೆ ಫಿಕ್ಸ್ ಆಗಿತ್ತು. ಇಂತಹ ಸಮಯದಲ್ಲಿ ನಾವು ಏನಾದರೂ ಮಾಡ್ಕೊಂಡು ಸತ್ತರೆ ಮದುವೆಗೆ ಸಮಸ್ಯೆ ಆಗುತ್ತದೆ ಎಂದು ಒಂದು ವಾರ ಸಾಯುವ ನಿರ್ಧಾರ ಮುಂದೆ ಹಾಕಿದ್ವಿ. ಮದುವೆ ಸಮಯದಲ್ಲಿ ಹಿರಿಯರೊಬ್ಬರಿಗೆ ಈ ವಿಷಯ ಗೊತ್ತಾಗಿ, ಸಾಯುವ ನಿರ್ಧಾರ ಬೇಡ ಅಂದ್ರು. ಹಾಗಾಗಿ ಸಾಯುವುದು ಬೇಡ ಎಂದು ನಿರ್ಧರಿಸಿ 2018, ಜುಲೈ 7ರಂದು ಮನೆಬಿಟ್ಟು ಹೋದೆ, ಯಾರಿಗೂ ಹೇಳದೇ ಹೊರಟುಬಿಟ್ಟೆ. ಅವತ್ತೇ ಫೋನ್ ಸ್ವಿಚ್ ಆಫ್ ಮಾಡ್ದೆ ಎಂದು ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಸಾಲದ ಸುಳಿಗೆ ಸಿಲುಕ್ಕಿದ್ದು ಹೇಗೆ ಎನ್ನುವುದನ್ನು ಮಲ್ಲಿಕಾರ್ಜುನ್ ವಿವರಿಸಿದ್ದಾರೆ. "ಚಿತ್ರರಂಗಕ್ಕೆ ಬಂದಾಗ ಎಂ. ಎಸ್ ರಮೇಶ್ ಅವರ ಬಳಿ ಸಹಾಯಕನಾಗಿ ಕೆಲಸ ಮಾಡ್ದೆ. ನಿರ್ಮಾಪಕನಾಗಿ, ವಿತರಕನಾಗಿ, ದರ್ಶನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಎಲ್ಲವೂ ಚೆನ್ನಾಗಿ ನಡೀತಿತ್ತು. ಆದರೆ 'ಮೊದಲ ಸಲ' ಸಿನಿಮಾ ನಿರ್ಮಾಣ ಮಾಡಿದಾಗ ನಷ್ಟವಾಗಿತ್ತು. ಅಲ್ಲಿಂದ ಸ್ವಲ್ಪ ಸ್ವಲ್ಪ ಸಮಸ್ಯೆಗಳು ಶುರುವಾಯಿತು. ಬಡ್ಡಿ, ಚಕ್ರಬಡ್ಡಿ, ಮೀಟರ್ ಬಡ್ಡಿ ಕಟ್ಟಿ ಕಟ್ಟಿ ಸುಸ್ತಾಗಿದ್ದೆ. ಇದೇ ಸಮಯದಲ್ಲಿ ನಿರ್ದೇಶನ, ವಿತರಣೆ ಎಲ್ಲಾ ಮಾಡ್ದೆ. ಕೆಲ ಸಿನಿಮಾಗಳು ಕೈ ಹಿಡಿದರೆ ಕೆಲವು ಕೈಕೊಡ್ತು" ಎಂದು ಮಲ್ಲಿಕಾರ್ಜುನ್ ನೆನಪಿಸಿಕೊಂಡಿದ್ದಾರೆ.
ಒಂದಲ್ಲ ಒಂದು ಸಿನಿಮಾ ಗೆಲ್ಲುತ್ತೆ, ಎಲ್ಲಾ ಸಾಲ ತೀರಿಸಿ ಕಂಬ್ಯಾಕ್ ಮಾಡ್ತೀನಿ ಎಂದುಕೊಂಡಿದ್ದೆ. ಪದೇ ಪದೆ ಸಾಲ ಮಾಡಿ ಜೀವನ ನಡೆಸುತ್ತಿದ್ದೆ. ಸಾಕಷ್ಟು ಸಿನಿಮಾಗಳಲ್ಲಿ ನಷ್ಟ ಅನುಭವಿಸಿದೆ. 2018ರ ಜುಲೈ 1ರಂದು ಬೆಂಗಳೂರು ಬಿಟ್ಟೆ. ಆಗ ನನ್ನ ಕೈಯಲ್ಲಿ 15 ಸಾವಿರ ರೂಪಾಯಿ ಮಾತ್ರ ಇತ್ತು. "ಸಿನಿಮಾ ಮಾತ್ರವಲ್ಲ, ಬೇರೆ ಬೇರೆ ಬ್ಯುಸಿನೆಸ್ ಮಾಡಿದ್ದೆ. ವಿಜಯನಗರದಲ್ಲಿ ಒಂದು ಖಾನಾವಳಿ ತೆರೆದಿದ್ದೆ. ಒಂದು ಸಾಫ್ಟ್ವೇರ್ ಕಂಪನಿ ಮಾಡ್ದೆ, ಸ್ನೇಹಿತರ ಜೊತೆ ಸೇರಿ ಸ್ಯಾನಿಟರಿವೇರ್ ಬ್ಯುಸಿನೆಸ್ ಮಾಡಿದ್ದೆ, ಗಣಿಗಾರಿಕೆ ಮಾಡ್ದೆ, ಯಾವುದು ಕೈಹಿಡಿಯಲಿಲ್ಲ. ಹೋಟೆಲ್ ಮಾತ್ರ ಕೊಂಚ ಪರವಾಗಿಲ್ಲ, ಎನಿಸಿತ್ತು. ಆದರೆ ಅದು ಬಹಳ ದಿನ ಉಳಿಯಲಿಲ್ಲ" ಎಂದು ತಿಳಿಸಿದ್ದಾರೆ.

ದರ್ಶನ್ ಹಾಗೂ ದಿನಕರ್ ಬಹಳ ಆಪ್ತರು. ತೂಗುದೀಪ ಪ್ರೊಡಕ್ಷನ್ಸ್ ಹಾಗೂ ಡಿಸ್ಟ್ರಿಬ್ಯೂಷನ್ ನನ್ನ ಕೈ ಹಿಡೀತು. ಅದು ನನ್ನ ಫ್ಯಾಮಿಲಿ. ನನ್ನ ಸ್ವಂತ ಮಗನ ರೀತಿ ನೋಡಿಕೊಂಡಿದ್ದಾರೆ. ಇವತ್ತಿಗೂ ದರ್ಶನ್ ಸರ್ ನನ್ನನ್ನು ಏಕವಚನದಲ್ಲಿ ಮಾತನಾಡಿಲ್ಲ. ನನ್ನ ಅಣ್ಣನ ಸಮಾನ. ಸಾಕಷ್ಟು ಸಲ ಸಹಾಯ ಮಾಡಿದ್ದಾರೆ. ಸಾಲದ ಜೊತೆಗೆ ವೈಯಕ್ತಿಕ ಜೀವನದಲ್ಲಿ ಒಂದಷ್ಟು ಸಮಸ್ಯೆಗಳಿತ್ತು. ಹಾಗಾಗಿ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಷ್ಟರಮಟ್ಟಿಗೆ ಸಾಲ ಆಗಿತ್ತು ಬರೋಬ್ಬರಿ 8 ಕೋಟಿ ರೂ, ಅಂದ್ರೆ ತಿಂಗಳಿಗೆ 15 ಲಕ್ಷ ರೂ. ಬರೀ ಬಡ್ಡಿ ಕಟ್ಟುವಂತಾಗಿತ್ತು ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.


Click it and Unblock the Notifications











