ಮಲೇಷಿಯಾಕ್ಕೆ ಮೂಗೂರು ಸುಂದರಂ ಸಂಸಾರದ‘ಮನಸ್ಸೆಲ್ಲಾ ನೀನೇ’
ಫಳಫಳ ಹೊಳೆಯುವ ಕನಸಿನ ಬೆಳಕಲಿ ಸೂರ್ಯೋದಯ ತಳಮಳ ಕವಿದಿದೆ ಮನಸಿಗೆ ಚುಮುಚುಮು ಚಂದ್ರೋದಯ.
ಕಳೆದ ವಾರವಷ್ಟೇ ಈ ಹಾಡಿನ ಸಾಹಿತ್ಯವನ್ನು ಚಿತ್ರೀಕರಿಸಿಕೊಂಡಿರುವ ಮನಸ್ಸೆಲ್ಲಾ ನೀನೇ ಚಿತ್ರ ತಂಡ ಈಗ ಮಲೇಷಿಯಾಕ್ಕೆ ತೆರಳಲು ಗಂಟುಮೂಟೆ ಕಟ್ಟುತ್ತಿದೆ. ಚಿತ್ರದ ಕೆಲವು ಗೀತೆಗಳು ಹಾಗೂ ದೃಶ್ಯಗಳನ್ನು ಮಲೇಷಿಯಾದ ಸುಂದರ ಹೊರಾಂಗಣದಲ್ಲಿ ಚಿತ್ರೀಕರಿಸಿಕೊಳ್ಳುವುದು ಚಿತ್ರತಂಡದ ಉದ್ದೇಶ.
ಈಗಾಗಲೇ ಬೆಂಗಳೂರು ಹಾಗೂ ಸಕಲೇಶಪುರಗಳಲ್ಲಿ ಚಿತ್ರೀಕರಣ ನಡೆಸಿರುವ ಮನಸ್ಸೆಲ್ಲಾ ನೀನೇ ಚಿತ್ರದ ನಿರ್ದೇಶಕರು ಮೂಗೂರು ಸುಂದರಂ. ಹಲವಾರು ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿರುವುದು ಇವರ ಹೆಮ್ಮೆಯಾದರೆ, ಮೂಳೆರಹಿತ ಮಾನವ ಎಂದು ಹೆಸರಾದ ಪ್ರಭುದೇವ್ ಹಾಗೂ ಬಸವರಾಜ್ ಅವರ ಅಪ್ಪ ಅನ್ನುವುದು ಗರ್ವ. ಇದೇ ಮೊದಲ ಬಾರಿಗೆ ಸುಂದರಂ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ನಾಯಕ ಅವರ ಇನ್ನೊಬ್ಬ ಪುತ್ರ- ಪ್ರಸಾದ್!
ಮಲೇಷಿಯಾದಲ್ಲಿ ಮನಸ್ಸೆಲ್ಲಾ ನೀನೇ ಚಿತ್ರದ ಕೆಲವು ಗೀತೆಗಳನ್ನು ಚಿತ್ರೀಕರಿಸಿಕೊಳ್ಳಲಾಗುವುದು ಎಂದು ಸುಂದರಂ ಹೇಳಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿ ಬರುತ್ತಿದೆ ಎಂದು ಸಂತೋಷ ವ್ಯಕ್ತಪಡಿಸುವ ಸುಂದರಂ, ಮೂಲತಃ ತಾವೊಬ್ಬ ನೃತ್ಯ ನಿರ್ದೇಶಕರಾದ ಕಾರಣ ಹಾಡಿನಲ್ಲಿನ ರಿದಂ ತಮಗೆ ಅರ್ಥವಾಗುತ್ತದೆ ಎನ್ನುತ್ತಾರೆ. ಪ್ರಭುದೇವ್ ಹಾಗೂ ಬಸವರಾಜ್ ಕೂಡಾ ಮನಸ್ಸೆಲ್ಲಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಬ್ಬರದೂ ಅತಿಥಿ ನಟರ ಪಾತ್ರ. ಮೂವರು ಮಕ್ಕಳ ಜೊತೆಗೆ ಅಪ್ಪ ಸುಂದರಂ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿಗೆ, ಇದು ಸುಂದರಂ ಸಂಸಾರ ನಟಿಸಿರುವ ಈ ಚಿತ್ರವನ್ನು ಕುಟುಂಬ ಸಮೇತ ನೋಡಬಹುದು ಎನ್ನಲಿಕ್ಕಡ್ಡಿಯಿಲ್ಲ .
ಅನಂತ್ನಾಗ್, ಚಿತ್ರಾ ಶೆಣೈ, ಎಂ.ಎನ್. ಲಕ್ಷ್ಮೀದೇವಿ, ಕೃತಿಕಾ, ಕರಿಬಸವಯ್ಯ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ರವಿರಾಜ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ವಿ.ಕೆ.ಕಣ್ಣನ್ ಅವರದು. ಮಾತು ಬರೆದವರು ಬಿ. ಮಲ್ಲೇಶ್.


Click it and Unblock the Notifications