ದರ್ಶನ್ ಪ್ರಚಾರ 'ಕೈ' ಹಿಡಿಯಲಿಲ್ಲ; ಕುಮಾರಣ್ಣಂಗೆ ಜೈ ಎಂದ ಮಂಡ್ಯ ಜನ
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಬಹಳ ಕುತೂಹಲ ಮೂಡಿಸಿತ್ತು. ಕಾರಣ ಮಾಜಿ ಸಿಎಂ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಅವರ ಎದುರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಸ್ಪರ್ಧಿಸಿದ್ದರು. ಮೇಲ್ನೋಟಕ್ಕೆ ಹೆಚ್ಡಿಕೆ ಗೆಲುವು ಸುಲಭ ಎನ್ನುವಂತಾಗಿತ್ತು.
ಸದ್ಯ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಮಾಜಿ ಸಿಎಂ ಕುಮಾರಸ್ವಾಮಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮೊದಲಿನಿಂದಲೂ ಮಂಡ್ಯ ಜೆಡಿಎಸ್ ಭದ್ರಕೋಟೆ ಆಗಿದೆ. ಆದರೆ ಕಳೆದ ಚುನಾವಣೆಯಲ್ಲಿ ಆ ಮಾತು ಸುಳ್ಳಾಗಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಿ ನಿಖಿಲ್ ಸೋತಿದ್ದರು. ಈ ಬಾರಿ ಕುಮಾರಣ್ಣ ಸುಮಾರು 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ. ಅಂತರ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ್ದರು. ಇದರಿಂದ ಕೊಂಚಮಟ್ಟಿಗೆ ಕ್ಷೇತ್ರದಲ್ಲಿ ಕದನ ಕುತೂಹಲ ಮೂಡಿತ್ತು. ದರ್ಶನ್ ಹೋದ ಕಡೆಯೆಲ್ಲಾ ಜನಸಾಗರ ನೆರೆದಿತ್ತು. ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ದರ್ಶನ್ ಹಾಗೂ ಯಶ್ ಪ್ರಚಾರ ನಡೆಸಿದ್ದರು. ಸುಮಲತಾ ಸಂಸದೆಯಾಗಿ ಗೆದ್ದಿದ್ದರು. ನಿಖಿಲ್ ಕುಮಾರಸ್ವಾಮಿ ಎದುರು ಭರ್ಜರಿ ಗೆಲುವು ಸಾಧಿಸಿದ್ದರು.
ಬದಲಾದ ಸನ್ನಿವೇಶದಲ್ಲಿ ಈ ಬಾರಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್ಡಿಕೆ ಸ್ಪರ್ಧಿಸಿದ್ದರು. ಬಿಜೆಪಿಗೆ ಬೆಂಬಲ ಸೂಚಿಸಿರುವ ಸುಮಲತಾ ಅಂಬರೀಶ್, ಕುಮಾರಸ್ವಾಮಿ ಪರ ನಿಲ್ಲುವಂತಾಯಿತು. ಹಾಗಾಗಿ ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರ ನಡೆಸಿದ್ದು ಅಚ್ಚರಿ ಮೂಡಿಸಿತ್ತು. ಬಳಿಕ ದರ್ಶನ್ ನನ್ನ ಪ್ರಚಾರ ಪಕ್ಷದ ಪರ ಅಲ್ಲ, ಅಭ್ಯರ್ಥಿಗಳ ಪರ ಎಂದಿದ್ದರು. ಸುಮಲತಾ ಕೂಡ ಅದು ದರ್ಶನ್ ಇಷ್ಟ ನಾನು ಏನು ಹೇಳಲು ಸಾಧ್ಯವಿಲ್ಲ ಎಂದಿದ್ದರು.
ಈ ಬಾರಿ ಮಾಜಿ ಸಿಎಂ ಕುಮಾರಸ್ವಾಮಿ ಒಟ್ಟು 851881 ಮತಗಳನ್ನು ಗಳಿಸಿ, 284620 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು 567261 ಮತಗಳನ್ನು ಪಡೆದು 2ನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ.


Click it and Unblock the Notifications











