'ರಾಜಾಹುಲಿ' ಯಶ್ ವಿರುದ್ಧ ಅಣ್ತಮ್ಮಂದಿರು ತಿರುಗಿಬಿದ್ದಿರುವುದೇಕೆ?
ಸೈಲೆಂಟ್ ಆಗಿ ತೆರೆಗೆ ಬಂದು ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸುತ್ತಿರುವ ನಟ ರಾಕಿಂಗ್ ಸ್ಟಾರ್ ಯಶ್. ಸತತ ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದಿರುವ ಯಶ್ ಗೀಗ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ.
ಯಶ್ ಹೋದ ಕಡೆಯೆಲ್ಲಾ ಜೈಕಾರ ಹಾಕೋಕೆ ಅಭಿಮಾನಿಗಳ ದಂಡು ರೆಡಿ ಇರುತ್ತದೆ. ಆದ್ರೆ, ಇತ್ತೀಚೆಗಷ್ಟೇ ಯಶ್ ಮಾಡಿಕೊಂಡಿರುವ ಒಂದು ಎಡವಟ್ಟು ಮಂಡ್ಯ ಹೈಕ್ಳ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಯಶ್ ಬೇಜವಾಬ್ದಾರಿ ಇಂದ ಆಡಿರುವ ಮಾತಿನಿಂದ ಮಂಡ್ಯ ರೈತರು ಬೀದಿಗಿಳಿದಿದ್ದಾರೆ. 'ಯಶ್ ಗೆ ಧಿಕ್ಕಾರ' ಅಂತ ಸಾರಿ ಸಾರಿ ಕೂಗಿ ಹೇಳುತ್ತಿದ್ದಾರೆ. 'ಬಹಿರಂಗವಾಗಿ ಯಶ್ ಕ್ಷಮೆ ಕೇಳುವವರೆಗೂ ಬಿಡಲ್ಲ' ಅಂತ ಮಂಡ್ಯ 'ಅಣ್ತಮ್ಮಂದಿರು' ಪಟ್ಟು ಹಿಡಿದು ಕೂತಿದ್ದಾರೆ. ಇದಕ್ಕೆಲ್ಲಾ ಕಾರಣವೇನು.? ಮುಂದೆ ಓದಿ.....

ಬೀದಿಗಿಳಿದಿದ್ದಾರೆ ಮಂಡ್ಯದ ಜನ
ಮಂಡ್ಯದ ಮೂಲೆ ಮೂಲೆಯಲ್ಲೂ ಸದ್ಯ ಕೇಳಿ ಬರುತ್ತಿರುವ ಕೂಗು ಒಂದೇ. ಅದು 'ರಾಕಿಂಗ್ ಸ್ಟಾರ್ ಯಶ್ ಗೆ ಧಿಕ್ಕಾರ' ಅಂತ. ಜೈಕಾರ ಹಾಕ್ಬೇಕಿದ್ದ ಜಾಗದಲ್ಲಿ ಯಶ್ ಅಭಿಮಾನಿಗಳು ಧಿಕ್ಕಾರ ಕೂಗುತ್ತಿರುವುದಕ್ಕೆ ಕಾರಣ 'ಮಂಡ್ಯ ಸ್ಟಾರ್' ಚಿತ್ರತಂಡ. ಯುವ ಪ್ರತಿಭೆಗಳು ಕೂಡಿ ಮಾಡುತ್ತಿರುವ 'ಮಂಡ್ಯ ಸ್ಟಾರ್' ಚಿತ್ರದಲ್ಲಿ ಕೆಲವೇ ಸೆಕೆಂಡುಗಳಿರುವ ಸಣ್ಣ ಪಾತ್ರವೊಂದರಲ್ಲಿ ಯಶ್ ಕಾಣಿಸಿಕೊಂಡರೆ ಚೆನ್ನ ಅಂತ ಚಿತ್ರತಂಡ ಯಶ್ ಸಂಪರ್ಕ ಮಾಡಿದೆ. ಆಗ ಯಶ್ ಕೊಟ್ಟ ಪ್ರತಿಕ್ರಿಯೆ ಮಂಡ್ಯ ಜನರು ಉರಿದುಬೀಳುವ ಹಾಗೆ ಮಾಡಿದೆ.

''ಮಂಡ್ಯ ಜನರಿಗೆ ಮಾಡಲು ಕೆಲಸವಿಲ್ಲ''
ಯಶ್ ಕಾಲ್ ಶೀಟ್ ಕೇಳೋಕಂತ 'ಮಂಡ್ಯ ಸ್ಟಾರ್' ಚಿತ್ರತಂಡ ಯಶ್ ಮನೆಗೆ ತೆರಳಿದೆ. ಯಶ್ ಮನೆಯಲ್ಲಿದ್ದರೂ, ನೋಡೋಕೆ ಬಿಡದೆ ''ಇಲ್ಲ'' ಅಂತ ಯಶ್ ಅವರ ತಾಯಿ ಹೇಳಿದರಂತೆ. ಇದರ ಜೊತೆಗೆ, ''ಮಂಡ್ಯದವರಿಗೆ ಮಾಡೋಕೆ ಕೆಲಸವಿಲ್ಲ. ಇಲ್ಯಾಕೆ ಬಂದಿರಿ. ಯಶ್ ಮನೆಯಲ್ಲಿಲ್ಲ. ಹೋಗಿ ಗಾಂಧಿನಗರದಲ್ಲಿ ಹುಡುಕಿಕೊಳ್ಳಿ'' ಅಂತ ಹೇಳಿದರಂತೆ. ['ಯಶ್' ಮುಂದೆ ಮಂಡಿಯೂರುತ್ತಿವೆ ಪರಭಾಷಾ ಚಿತ್ರಗಳು]

ರೈತರ ಕುರಿತಾದ ಚಿತ್ರ 'ಮಂಡ್ಯ ಸ್ಟಾರ್'
'ಮಂಡ್ಯ ಸ್ಟಾರ್' ಕಥಾಹಂದರ ರೈತರ ಕುರಿತಾಗಿರುವುದು. ಹಲವು ಸಿನಿಮಾಗಳಲ್ಲಿ ಮಂಡ್ಯದ ಹುಡುಗನಾಗಿ 'ಅಣ್ತಮ್ಮ' ಹೆಸರಲ್ಲಿ ಫೇಮಸ್ ಆಗಿರುವ ಯಶ್, ರೈತರ ಸಿನಿಮಾಗೆ ಬೆಂಬಲಿಸಬೇಕು ಎನ್ನುವುದು 'ಮಂಡ್ಯ ಸ್ಟಾರ್' ಚಿತ್ರತಂಡದ ಆಶಯ. ಇದಕ್ಕಾಗಿ ಯಶ್ ಗೆ ಫೋನ್ ಮಾಡಿದಾಗ, ಸಿಕ್ಕ ಪ್ರತಿಕ್ರಿಯೆ ರೈತರನ್ನ ಕೆರಳಿಸಿದೆ.

''ರೈತರು ಹೇಳಿದ ತಕ್ಷಣ ಬರೋಕೆ ಆಗುತ್ತಾ?''
'ಮಂಡ್ಯ ಸ್ಟಾರ್' ಚಿತ್ರತಂಡ ಯಶ್ ಗೆ ಫೋನ್ ಮಾಡಿ ಮಾತನಾಡಿದಾಗ, ''ದಿನಕ್ಕೆ ನೂರೈವತ್ತು ರೈತರು ಫೋನ್ ಮಾಡ್ತಾರೆ. ಅದಕ್ಕೆಲ್ಲಾ ಬರೋಕೆ ಆಗುತ್ತಾ'' ಅಂತ ಹೇಳಿದ್ದಾರಂತೆ. ಮೈಸೂರು-ಮಂಡ್ಯದ ಸುತ್ತಮುತ್ತಲೇ ಹುಟ್ಟಿ ಬೆಳೆದಿರುವ ಯಶ್ ಬಾಯಿಂದ ಇಂತಹ ಮಾತುಗಳು ಬಂದಿರುವುದು ಅಲ್ಲಿನ ಜನರ ಮನಸ್ಸಿಗೆ ನೋವುಂಟು ಮಾಡಿದೆ. [ಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯ]

'ಮಂಡ್ಯ ಸ್ಟಾರ್' ಚಿತ್ರದಲ್ಲಿ ಕಿಚ್ಚು, ದಚ್ಚು, ಅಪ್ಪು, ಶಿವಣ್ಣ ಇದ್ದಾರಂತೆ!
'ಮಂಡ್ಯ ಸ್ಟಾರ್' ಹೊಸಬರ ಸಿನಿಮಾ ಆಗಿರುವುದರಿಂದ ಸ್ಟಾರ್ ನಟರ ಪ್ರೋತ್ಸಾಹ ಅತ್ಯಗತ್ಯ. ಹೀಗಾಗಿ ಶಿವಣ್ಣ, ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್ ಸ್ಕ್ರೀನ್ ಮೇಲೆ ಒಮ್ಮೆ ಕಾಣಿಸಿಕೊಳ್ಳಲಿ ಅಂತ ಚಿತ್ರತಂಡ ಇವರೆಲ್ಲರ ಬಳಿ ಮಾತುಕತೆ ನಡೆಸಿತ್ತಂತೆ. ಅದಕ್ಕೆ ಎಲ್ಲಾ ಸ್ಟಾರ್ ನಟರು ಖುಷಿಯಿಂದ ಒಪ್ಪಿಕೊಂಡಿದ್ದಾರೆ ಯಶ್ ಒಬ್ಬರನ್ನ ಬಿಟ್ಟು ಅನ್ನುತ್ತಿದೆ 'ಮಂಡ್ಯ ಸ್ಟಾರ್' ಟೀಂ. [ದರ್ಶನ್, ಕಿಚ್ಚ ಮತ್ತು ನನ್ನ ನಡುವೆ ತಂದಿಡಬೇಡಿ ಪ್ಲೀಸ್: ಯಶ್]

''ಬೇಕಂದ್ರೆ ಅವರ ಬಳಿಯೇ ಮಾಡಿಸಿಕೊಳ್ಳಿ''
ಇದೇ ವಿಚಾರವಾಗಿ ಯಶ್ ಬಗ್ಗೆ ಚರ್ಚೆ ನಡೆಸಿದಾಗ, ''ಅವರೆಲ್ಲಾ ಬಂದರೆ ನಾನೇನು ಮಾಡಲಿ. ಅವರ ಜೊತೆಗೆ ಸಿನಿಮಾ ಮಾಡಿ'' ಅಂತ ಹೇಳಿದರಂತೆ.
ಯಶ್ ಬೆಳೆದದ್ದೇ ಮಂಡ್ಯ ಜನರ ಆಶೀರ್ವಾದದಿಂದ!
'ಕಿರಾತಕ', 'ರಾಜಾಹುಲಿ', 'ಡ್ರಾಮಾ' ಸೇರಿದಂತೆ ಅನೇಕ ಚಿತ್ರಗಳಲ್ಲಿ ಮಂಡ್ಯದ ತುಂಡ ಹೈಕ್ಳಾಗಿ ಯಶ್ ಪಾತ್ರ ಮಾಡಿದ್ದಾರೆ. ಮಂಡ್ಯದ ಭಾಷೆಯಲ್ಲಿ 'ಅಣ್ತಮ್ಮ' ಅಂತ ಯಶ್ ಬಾಯ್ತುಂಬ ಕರೆದಿದ್ದಾರೆ. ಹೀಗಿದ್ದರೂ, ಅದೇ ಮಂಡ್ಯ ಮಂದಿಗೆ ಯಶ್ ಅವಮಾನ ಮಾಡಿದ್ದಾರೆ. ''ಬಹಿರಂಗವಾಗಿ ಕ್ಷಮೆ ಕೇಳುವವರೆಗೂ ಬಿಡುವುದಿಲ್ಲ'' ಅಂತ 'ಮಂಡ್ಯ ಸ್ಟಾರ್' ಚಿತ್ರತಂಡ ಮತ್ತು ರೈತರ ಸಂಘ ಪ್ರತಿಭಟನೆ ನಡೆಸುತ್ತಿದೆ.


Click it and Unblock the Notifications











