ಅಯ್ಯೋ ಇದೇನ್ ಆಗಿದೆ ಕನ್ನಡ ಚಿತ್ರರಂಗಕ್ಕೆ!? ರಾಜನ್ ನಿಧನಕ್ಕೆ ಮರುಗಿದ ಮಂಡ್ಯ ರಮೇಶ್
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ರಾಜನ್ (ರಾಜನ್-ನಾಗೇಂದ್ರ ಸಹೋದರರು) ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಸುಮಾರು ಐದು ದಶಕಗಳ ಕಾಲ ಸಿನಿಮಾ ಜಗತ್ತಿಗೆ ಆಧಾರವಾಗಿದ್ದ ಲೆಜೆಂಡ್ ಸಂಗೀತ ನಿರ್ದೇಶಕರು ರಾಜನ್ ನಾಗೇಂದ್ರ ಜೋಡಿ ಇನ್ನು ನೆನಪು ಮಾತ್ರ ಎಂದು ಸಂಗೀತ ಪ್ರಿಯರು ಕಂಬನಿ ಮಿಡಿದಿದ್ದಾರೆ.
ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್ ಸೇರಿದಂತೆ ದಿಗ್ಗಜ ನಟರ ಚಿತ್ರಗಳಿಗೆ ಇವರೇ ಜೀವಾಳ ಆಗಿದ್ದ ಕಾಲವೂ ಒಂದಿತ್ತು. ನಾಗೇಂದ್ರ ಅವರು 2000ರಲ್ಲಿ ವಿಧಿವಶರಾಗಿದ್ದರು. ಈಗ ರಾಜನ್ ಅವರು ಕೊನೆಯುಸಿರೆಳೆದಿದ್ದಾರೆ. ರಾಜನ್-ನಾಗೇಂದ್ರ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗದ ಸಂಗೀತ ಲೋಕ ಅನಾಥವಾಗಿದೆ.
ರಾಜನ್ ಅವರ ಅಗಲಿಕೆಗೆ ಮಂಡ್ಯ ರಮೇಶ್ ಸಂತಾಪ ಸೂಚಿಸಿದ್ದಾರೆ. ರಾಜನ್ ಸಾವಿನ ಬಗ್ಗೆ "ಇವರು ಯಾಕೆ ಹೀಗೆ ಪರಿತಪಿಸುತ್ತಿದ್ದಾರೆ"!? ಎಂದು ಕೇಳುವ ಈ ಜಮಾನದ ಹುಡುಗರಿಗೆ ರಾಜನ್-ನಾಗೇಂದ್ರ ಯಾರೆಂದು ಅರ್ಥವಾಗುವಂತೆ ಮಂಡ್ಯ ರಮೇಶ್ ವಿವರಿಸಿದ್ದಾರೆ. ಮುಂದೆ ಓದಿ....

ಅಯ್ಯೋ ಇದೇನ್ ಆಗಿದೆ ಕನ್ನಡ ಚಿತ್ರರಂಗಕ್ಕೆ!?
''ರಾಜನ್-ನಾಗೇಂದ್ರ ಹಾಡುಗಳನ್ನು ಕೇಳುವುದೆಂದರೆ ಅದೊಂದು ಶ್ರೇಷ್ಠ, ಸದಭಿರುಚಿಯ ಗಾಯನವೆಂದೆ ಮನಸಿದ್ದೆವು! ದಶಕಗಳ ಕಾಲ... ಶತಮಾನಕ್ಕೂ ಅರ್ಧ ಶತಮಾನಕ್ಕೂ ಹೆಚ್ಚು ಕಾಲ! ಈಗವರು ನಮ್ಮ ಜೊತೆ ಇಲ್ಲವಾಗಿದ್ದಾರೆ! ಈ ಜಮಾನದ ಹುಡುಗರು "ಇವರು ಯಾಕೆ ಹೀಗೆ ಪರಿತಪಿಸುತ್ತಿದ್ದಾರೆ"!? ಎಂದು ಅನುಮಾನಿಸಿದರೆ, ಅವರಿಗೆ ಅರ್ಥ ಮಾಡಿಸುವುದು ಹೇಗೆ !? ಸಂಗೀತ-ಗಾಯನ- ಸಾಹಿತ್ಯ -ರಂಗಭೂಮಿ ಸಿನಿಮಾ.. ಎಲ್ಲ ವಿಚಾರಗಳಲ್ಲೂ ಈ ತಲೆಮಾರುಗಳ ನಡುವಿನ ಅಂತರವನ್ನು, ಬಿಕ್ಕಟ್ಟನ್ನು( Genrasthion gap) ತುಂಬಿಸುವುದು ಹೇಗೆ!?'' ಎಂದು ಮಂಡ್ಯ ರಮೇಶ್ ಪ್ರಶ್ನಿಸಿಕೊಂಡಿದ್ದಾರೆ.

ಇಂದಿನ ಸ್ಥಿತಿ ಬಗ್ಗೆ ಬೇಸರ
"ನಾವು ಪುಟ್ಟ ಮಕ್ಕಳಿಗೆ ಹೊಂದಿಕೊಳ್ಳಬೇಕು" ಎಂದು ಸುಳ್ಳು ಸುಳ್ಳಾಗಿ ರಾಪ್ ಮ್ಯೂಸಿಕ್, ಅನ್ನು, ಚೀರಾಟದ ನ್ಯೂಸ್ ಚಾನೆಲ ಅನ್ನೋ ಬಲವಂತವಾಗಿ, ಒಟ್ಟು ಜಾಗತೀಕರಣ ಸಲುವಾಗಿ ಪಾಶ್ಚಾತ್ಯ ಸಂಸ್ಕೃತಿಯನ್ನೇನನ್ನೋ ಅವಕ್ಕೆ ಹೇರಿ... ಅವು ಅದನ್ನೇ ನಿಜವೆಂದು ನಂಬಿಕೊಂಡು ನಾವೂ ಅದನ್ನೇ ಸಮರ್ಥಿಸಿಕೊಂಡು, ಕಾಲವಾಗುತ್ತಿರುವ ಅಸಾಮಾನ್ಯರ ಬಗ್ಗೆ ಕೊಂಚವಾದರೂ ಹೇಳಿಕೊಡದೇ ಇದ್ದರೇ ಮುಂದೆ ಅನುಭವಿಸುವ ಅನಾಹುತಗಳ ಬಗ್ಗೆ ಹೊಣೆ ಯಾರು ಎಂದು ಪದೇ ಪದೇ ಆತಂಕಕ್ಕೊಳಗಾಗುತ್ತೇನೆ.!? ಪಾಶ್ಚಿಮಾತ್ಯ ಕಾದಂಬರಿಗಳ, ಮನೆಮಾತಾಗಿರುವ ಇಂಗ್ಲೀಷ್ ವೆಬ್ ಸೀರಿಯಸ್ ಗಳ ಮುಂದೆ, ಭಗವಾನರ ಮಹಿಷ ಕಲ್ಪಿತ ಸಂಸ್ಕೃತಿಗಳ ಅತಿರೇಕಗಳ ಮುಂದೆ, ತದ್ವಿರುದ್ಧವಾಗಿ ಮುಚ್ಚಿ ಹಾಕಲಾದ ಅಸಹಾಯಕರ ಹೆಣ್ಣುಮಕ್ಕಳ ಆರ್ತನಾದದ ಮುಂದೆ,..... ಮತ್ತಷ್ಟು ಆರ್ತನಾಗಿ ನಿಲ್ಲುತ್ತೇನೆ!'' ಎಂದಿದ್ದಾರೆ.

ರಾಜನ್-ನಾಗೇಂದ್ರ ಎಂದರೆ
''ರಾಜನ್-ನಾಗೇಂದ್ರ ಎಂದರೆ ಅರ್ಧ ಶತಮಾನಕ್ಕೂ ಹೆಚ್ಚು ಕನ್ನಡ ಕಾವ್ಯಪರಂಪರೆಯನ್ನು ಜನಸಾಮಾನ್ಯರಿಗೆ ಶ್ರೇಷ್ಠವಾಗಿ ತಲುಪಿಸಿದ ಒಂದು ಗುರಿ ಅಂದುಕೊಳ್ಳುತ್ತೇನೆ! ಶುದ್ಧ ಕನ್ನಡದ, ಸ್ಫಟಿಕದಂಥ ಪದಗಳ, ಶ್ರೇಷ್ಠ ಸಂಗೀತ ಸಂಯೋಜನೆಯ ಮೂಲಕ, ಸರಳವಾಗಿ ಜನಸಾಮಾನ್ಯರಿಗೆ ತಲುಪಿಸಿದ, ಅಪರೂಪದ ಒಂದು ಮಾದರಿ ಅಂದುಕೊಂಡಿದ್ದೇನೆ'' ಎಂದು ಮಂಡ್ಯ ರಮೇಶ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ದಿಗ್ಗಜರಿಗೆ ಹೊಂದಿಕೊಳ್ಳುವ ಸಂಗೀತ ನೀಡಿದವರು
''ರಾಜಕುಮಾರ್, ವಿಷ್ಣುವರ್ಧನ್ ,ಅನಂತನಾಗ್, ಮುಂತಾದ ಅನೇಕ ದಿಗ್ಗಜರಿಗೆ ಹೊಂದಿಕೊಳ್ಳುವ ಹಾಗೆ ಸಂಗೀತ ಸಂಯೋಜಿಸಿದ ಗಾಯನವನ್ನು ನೀಡಿದ ಮಹಾಮಹಿಮರು ಅವರು. ಅವರಿಗೆ ರಿಯಾಲಿಟಿ ಶೋಗಳು ಇರಲಿಲ್ಲ, ಅವರಿಗೆ ಶಾಸ್ತ್ರೀಯ ಸಂಗೀತಗಾರರು ಬೆಲೆ ಕೊಡುತ್ತಿರಲಿಲ್ಲ! ಹಳಬರು ಕಣಿ ಜಾಸ್ತಿ! ಒಪ್ಪಿಸುವುದು ಕಷ್ಟ. ಹೀರೋಗಳನ್ನು ಬಿಟ್ಟು ಮತ್ಯಾರನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಮದರಾಸಿನಲ್ಲಿ ಭವಿಷ್ಯ ನಿರ್ಧಾರವಾಗಬೇಕಿತ್ತು!
Recommended Video

ಕನ್ನಡದ ಹಾಡು ಇರುವವರೆಗೂ ಬದುಕಿಯೇ ಇರುತ್ತಾರೆ
''ಲೆಕ್ಕಕ್ಕೆ ಬಾರದ ಅದೇನೇನೋ ಸಂಕಟಗಳು. ಅದರ ನಡುವೆ...ಇಷ್ಟೊಂದು ಸುಮಧುರ ಹಾಡುಗಳು. ಸ್ಪಷ್ಟವಾದ ಕನ್ನಡ ಮಧುರವಾದ ಭಾಷೆ....ಒಂಟಿ ಬದುಕುವುದೇ ಕಷ್ಟ, ಇನ್ನು, ಜೋಡಿಯಾಗಿ ಹೊಂದಿಕೊಂಡು ಬದುಕುವುದು ಇದೆಯಲ್ಲಾ...ಇದು ಪ್ರತಿಭೆ ಜೊತೆಗೆ ಅಧ್ಯಾತ್ಮ ಇದ್ದವರಿಗೆ ಮಾತ್ರ ಸಾಧ್ಯ! ಕನ್ನಡದ ಹಾಡು ಇರುವವರೆಗೂ ಬದುಕಿಯೇ ಇರುತ್ತಾರೆ ರಾಜನ್-ನಾಗೇಂದ್ರ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











