'ಮಂಡ್ಯದ ಗಂಡೇ' ಆದರೂ ಅಂಬರೀಶ್ 'ಮೈಸೂರು ಜಾಣ'.! ಹೇಗೆ ಅಂತೀರಾ.?
ಮೈಸೂರು: ರೆಬೆಲ್ ಸ್ಟಾರ್ ಅಂಬರೀಶ್ ಗೆ ಮೈಸೂರಿನೊಂದಿಗೂ ನಿಕಟ ನಂಟಿತ್ತು. ಇವರು ಮಂಡ್ಯದ ಗಂಡೇ ಆದರೂ ಹುಟ್ಟಿದ್ದು ಮೈಸೂರಿನಲ್ಲಿ. ಹಾಗಾಗಿ, ಮೈಸೂರೆಂದರೆ ಅವರಿಗೆ ವಿಶೇಷ ಅಭಿಮಾನವಿತ್ತು.
ಮೈಸೂರಿನ ಸರಸ್ವತಿಪುರಂನ ತೆಂಗಿನತೋಪು ಬಳಿ ಅಂಬರೀಶ್ ಅವರ ಮನೆಯಿತ್ತು. ಇಲ್ಲಿ ಮನೆ ಮಾತಾಗಿದ್ದ ಪಿಟೀಲು ಚೌಡಯ್ಯ ಅವರ ಮೊಮ್ಮಗನಾಗಿದ್ದ ಅಂಬರೀಶ್ ಅವರಿಗೆ ಕಲೆ ರಕ್ತದಲ್ಲೇ ಬೆರೆತು ಹೋಗಿತ್ತು.
ಚೌಡಯ್ಯ ಅವರ ಪುತ್ರಿಯ ಮಗ. ಅದೇ ನಂಟಿನಲ್ಲಿ ಕಲೆಯ ವಾತಾವರಣದಲ್ಲೇ ತಮ್ಮ ಬಾಲ್ಯವನ್ನೂ ಕಳೆದರು. ಇವರ ವ್ಯಾಸಂಗವೂ ಮೈಸೂರಿನಲ್ಲಿ ಕೆಲಕಾಲ ನಡೆದಿತ್ತು. ಪಿ.ಯು ಶಿಕ್ಷಣದ ಎರಡನೇ ವರ್ಷ ಮೈಸೂರಿನ ಶಾರದಾ ವಿಲಾಸ ಪಿಯು ಕಾಲೇಜಿನಲ್ಲಿ ನಡೆಯಿತು. ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಅಂಬರೀಶ್ ಕಾಲೇಜಿನಲ್ಲಿ ಎಲ್ಲರ ಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ಮುಂದೆ ಓದಿರಿ...

ಮೈಸೂರು ಜಾಣ
ಅಂಬರೀಶ್ ಗೆ ಮೈಸೂರಿನ ಮೇಲೆ ಎಷ್ಟು ಅಭಿಮಾನವಿತ್ತೆಂದರೆ 1992ರಲ್ಲಿ ಮೈಸೂರು ಜಾಣ ಎಂಬ ಸಿನಿಮಾದಲ್ಲಿ ಅಭಿನಯಿಸಿದರು. ಬಹುಭಾಷಾ ನಿರ್ದೇಶಕ ಎ.ಟಿ.ರಘು ನಿರ್ಮಾಣ, ನಿರ್ದೇಶನದ ಈ ಚಿತ್ರ ಅಂದಿನ ದಿನಗಳಲ್ಲಿ ಬಾಕ್ಸ್ ಆಫೀಸಿನಲ್ಲಿ ದಾಖಲೆ ಪ್ರದರ್ಶನ ಕಂಡಿತ್ತು. ರಘು ಅವರೊಂದಿಗೆ ಸತತವಾಗಿ ಚರ್ಚಿಸಿ ಚಿತ್ರದಲ್ಲಿ ಮೈಸೂರಿನ ಅಂದವನ್ನು ಕಟ್ಟಿಕೊಡುವಂತೆ ಇವರು ಕೋರಿಕೊಂಡಿದ್ದರು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಈ ಸಿನಿಮಾಕ್ಕಾಗಿ 'ಜಾಣ ಜಾಣ ಮೈಸೂರು ಜಾಣ..' ಎಂಬ ಹಾಡು ಹೇಳಿದ್ದು ಅಂಬಿ ಅಭಿಮಾನಿಗಳನ್ನು ಸಂತಸದ ಅಲೆಯಲ್ಲಿ ತೇಲಿಸಿತ್ತು.

ಪ್ರೀಮಿಯರ್ ಸ್ಟುಡಿಯೋ
ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುವಾಗ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು 'ನಾಗರಹಾವು' ಚಿತ್ರದ ಖಳನಾಯಕನ ಪಾತ್ರಕ್ಕೆ ಆಯ್ಕೆ ಮಾಡಿದ್ದೂ ಕೂಡ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ.

ರೇಸ್ ಕ್ಲಬ್
ಕುದುರೆ ರೇಸ್ ಪ್ರಿಯರಾಗಿದ್ದ ಅಂಬರೀಶ್ ಮೈಸೂರಿನ ರೇಸ್ ಕ್ಲಬ್ ಸದಸ್ಯತ್ವವನ್ನು ಹೊಂದಿದ್ದರು. ಇಲ್ಲಿ ರೇಸ್ ಗಳು ನಡೆಯುವಾಗ ಹಾಜರಾಗಿ, ಕುದುರೆಗಳು ಓಡುವುದನ್ನು ಕಂಡು ಸಂಭ್ರಮಿಸುತ್ತಿದ್ದರು.

ಅಚ್ಚುಮೆಚ್ಚಿನ ತಾಣಗಳು
ಮೈಸೂರಿನ ಚಾಮುಂಡಿಬೆಟ್ಟ, ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ ಮುಂತಾದವು ಅಂಬಿಗೆ ಅಚ್ಚುಮೆಚ್ಚಿನ ತಾಣಗಳಾಗಿದ್ದವು. ಇನ್ನು ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಅಂಬರೀಶ್, ತಾವು ಮೈಸೂರಿನ ಜೊತೆ ಹೊಂದಿದ್ದ ಬಾಂಧವ್ಯದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪರ ಪ್ರಚಾರಕ್ಕಿಳಿದಿದ್ದನ್ನೂ ಮರೆಯಲು ಸಾಧ್ಯವಿಲ್ಲ.


Click it and Unblock the Notifications











