ಸುಹಾಸಿನಿ ಹಾಗಂದಿದ್ದಕ್ಕೆ ಮಣಿರತ್ನಂ ಹೀಗೆಂದರು!
ನಟಿ ಸುಹಾಸಿನಿ ಅವರ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಹಾಗೆಯೇ ಅವರ ಪತಿ ಮಣಿರತ್ನಂ ಅವರ ಬಗ್ಗೆಯೂ ಅಷ್ಟೇ. ಗಂಡ ಹೆಂಡತಿ ಎಂದ ಮೇಲೆ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಜೊತೆಗೆ ಅವರ ಮೇಲೆ ಇವರಿಗೆ, ಇವರ ಮೇಲೆ ಅವರಿಗೆ ಪ್ರೀತಿ ಗೌರವ ಇದ್ದೇ ಇರುತ್ತದೆ.
ಈ ತಾರಾದಂಪತಿಗಳಿಗೆ ತಮ್ಮದೇ ಅಭಿಮಾನಿ ಬಳಗವಿದೆ. ಮಣಿರತ್ನಂ ಅವರು ಒಂದು ಭರ್ಜರಿ ಗೆಲುವಿಗಾಗಿ ಹಾತೊರೆಯುತ್ತಿದ್ದಾರೆ. ಅವರ 'ಕಡಲ್' ಚಿತ್ರಕ್ಕೆ ನಿರೀಕ್ಷಿಸಿದಷ್ಟು ಲಾಭವಾಗಲಿಲ್ಲ. ಇದೀಗ ಅವರು ಮತ್ತೊಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ತೆಲುಗು ಹಾಗೂ ತಮಿಳಿನಲ್ಲಿ ಈ ಚಿತ್ರ ಏಕಕಾಲಕ್ಕೆ ತೆರೆಕಾಣುತ್ತಿದೆ. ತಮಿಳಿನಲ್ಲಿ 'ಓ ಕಾದಲ್ ಕಣ್ಮಣಿ' ಎಂದು ಹೆಸರಿಡಲಾಗಿದ್ದು, ತೆಲುಗಿನಲ್ಲಿ 'ಓಕೆ ಬಂಗಾರಂ' ಎಂದಿಡಲಾಗಿದೆ. ಮಣಿರತ್ನಂ ಅವರೇನೋ ತಮ್ಮ ಪಾಡಿಗೆ ತಾವು ಚಿತ್ರದಲ್ಲಿ ಬಿಜಿಯಾಗಿದ್ದರು. ಆದರೆ ಅವರ ಪತ್ನಿ ಆಡಿದ ಕಟು ಮಾತು ಈಗ ಚರ್ಚೆಗೆ ಕಾರಣವಾಗಿದೆ.

ಈ ಚಿತ್ರ ಆಡಿಯೋ ಸಕ್ಸಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸುಹಾಸಿನಿ, "ಚಿತ್ರವೊಂದರ ವಿಮರ್ಶೆ ಮಾಡಬೇಕಾದರೆ ನಿಮಗೆ ಆ ಅರ್ಹತೆ ಇದೆಯೇ ಎಂಬುದನ್ನು ಮೊದಲು ವಿಶ್ಲೇಷಿಸಿಕೊಳ್ಳಿ" ಎಂದಿದ್ದರು. ಅವರು ಈ ರೀತಿ ಹೇಳಿದ್ದು ವಿಮರ್ಶಕರನ್ನು ಉದ್ದೇಶಿಸಿ.
ಇನ್ನೂ ಮುಂದುವರಿದ ಅವರು, ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಸಿನಿಮಾ ಒಂದರ ಮೇಕಿಂಗ್ ಬಗ್ಗೆ ಗೊತ್ತಿಲ್ಲದವರೆಲ್ಲಾ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದಿದ್ದರು. ಈ ಮಾತುಗಳು ಹಲವರ ಕಣ್ಣು ಕೆಂಪಾಗುವಂತೆ ಮಾಡಿತ್ತು.
ತಮ್ಮ ಪತ್ನಿ ಹೀಗಂದಿದ್ದಾರಲ್ಲಾ ನೀವೇನಂತೀರಿ ಎಂದು ಮಣಿರತ್ನಂ ಅವರನ್ನು ಮಾತಿಗೆಳೆದಾಗ. ಅವರು ಮೊದಲು ಮಾತಿಗೆ ನಿರಾಕರಿಸಿದರೂ, ಬಳಿಕ ತಮ್ಮ ಪತ್ನಿಯ ಬೆಂಬಲಕ್ಕೆ ನಿಂತಿದ್ದಾರೆ. ಬಹುಶಃ ಸುಹಾಸಿನಿ ಅವರ ಮಾತುಗಳನ್ನು ತಿರುಚಲಾಗಿದೆ.
"ಯಾರೇ ಆಗಲಿ ಜನರ ಮಾತಿಗೆ ಬ್ರೇಕ್ ಹಾಕಲು ಸಾಧ್ಯವಿಲ್ಲ. ಅದು ಅವರ ಸ್ವಾತಂತ್ರ್ಯ. ಚಿತ್ರದ ಬಗ್ಗೆ ಮಾತನಾಡುವ ಸಂಪೂರ್ಣ ಹಕ್ಕು ಅವರಿಗಿದೆ. ಅದನ್ನು ಪ್ರಶ್ನಿಸಲು ನಾವ್ಯಾರು. ಅವರ ಪಾಡಿಗೆ ಅವರು ಮಾತನಾಡಿಕೊಳ್ಳಲಿ ಬಿಡಿ. ಅಷ್ಟೂ ಸ್ವಾತಂತ್ರ್ಯವಿಲ್ಲವೇ ಅವರಿಗೆ" ಎಂದಿದ್ದಾರೆ.
ಚಿತ್ರದ ಬಗೆಗಿನ ಜನರ ಅಭಿಪ್ರಾಯಗಳು ಯಾವುದೇ ಚಿತ್ರದ ಅದೃಷ್ಟವನ್ನು ಬದಲಾಯಿಸಲು ಸಾಧ್ಯವಿಲ್ಲ. ಕೊನೆಗೆ ಗೆಲ್ಲುವುದು ಚಿತ್ರದಲ್ಲಿನ ಖಡಕ್ ಕಥೆಯೇ ಎಂದಿದ್ದಾರೆ. ಮಣಿರತ್ನಂ ಅವರ ಮಾತಿಗೆ ಎಲ್ಲರೂ 'ಓಕೆ ಬಂಗಾರಂ' ಎಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications











