ಕಾಂತಾರ ಚಿತ್ರಕ್ಕೆ ತಮಿಳಿನ ಈ ನಿರ್ದೇಶಕ ಸ್ಪೂರ್ತಿ ಎಂದ ರಿಷಬ್ ಶೆಟ್ಟಿ!
ಕಾಂತಾರ ಕನ್ನಡ ಚಿತ್ರರಂಗದವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಚಿತ್ರಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಕಳೆದ ವರ್ಷ 400 ಕೋಟಿ ಕ್ಲಬ್ ಸೇರಿದ ಕೆಲವು ಚಿತ್ರಗಳಲ್ಲಿ ಒಂದಾಗಿದ್ದ ಕಾಂತಾರ ಕಡಿಮೆ ಬಜೆಟ್ನಲ್ಲಿ ತಯಾರಾಗಿ ದೊಡ್ಡ ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿತು.
ಇನ್ನು ಕಾಂತಾರ ತುಂಬಾ ವಿಭಿನ್ನ ಎನಿಸುವ ಅಂಶಗಳನ್ನು ಹೊಂದಿದ್ದ ಸಿನಿಮಾವಾಗಿತ್ತು. ಕಮರ್ಷಿಯಲ್, ಐತಿಹಾಸಿಕ, ಪೌರಾಣಿಕ ಚಿತ್ರಗಳನ್ನು ನೋಡಿದ್ದ ಸಿನಿ ರಸಿಕರು ಇದೇ ಮೊದಲ ಬಾರಿಗೆ ಕರ್ನಾಟಕದ ಕರಾವಳಿ ಭಾಗವನ್ನು ಹಾಗೂ ಅಲ್ಲಿನ ಜನರ ಆಚರಣೆಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ಕಂಡು ಫಿದಾ ಆಗಿದ್ದರು.

ಅದರಲ್ಲಿಯೂ ಅಲ್ಲಿನ ಆಚರಣೆಗಳಾದ ಭೂತಕೋಲ ಹಾಗೂ ಪಂಜುರ್ಲಿ ದೇವರುಗಳನ್ನು ಆಧಾರವಾಗಿ ಕಥೆ ರಚಿಸಿದ್ದು, ಚಿತ್ರದ ಗೆಲುವಿಗೆ ಪ್ರಮುಖ ಕಾರಣವಾಗಿತ್ತು. ಭೂತ ಎಂದರೆ ಆಶ್ಚರ್ಯವನ್ನು ಹೊಂದಿದ್ದ ಜನರು ಕುತೂಹಲದಿಂದಲೇ ಚಿತ್ರಮಂದಿರಗಳಿಗೆ ಕಾಲಿಟ್ಟಿದ್ದರು.
ಹೀಗೆ ವಿಭಿನ್ನವಾದ ಪ್ರಯತ್ನವಾದ ಕಾರಣಕ್ಕೆ ಕಾಂತಾರ ಒಂದಷ್ಟು ಹೆಚ್ಚಿನ ಮಟ್ಟದ ಯಶಸ್ಸು ಗಳಿಸಿತು ಎಂದೇ ಹೇಳಬಹುದು. ಹೀಗೆ ಈ ಚಿತ್ರ ಯಶಸ್ಸು ಸಾಧಿಸಿದ ಬೆನ್ನಲ್ಲೇ ರಿಷಬ್ ಶೆಟ್ಟಿ ಒಪ್ಪಿಕೊಂಡಿದ್ದ ಉಳಿದೆಲ್ಲಾ ಚಿತ್ರಗಳನ್ನು ಬಿಟ್ಟು ಕಾಂತಾರ ಸೀಕ್ವೆಲ್ ಚಿತ್ರಕ್ಕಾಗಿ ಕಥೆ ರಚಿಸುವಲ್ಲಿ ನಿರತರಾಗಿದ್ದಾರೆ.
ಹೀಗೆ ಕಥೆ ರಚಿಸುವಲ್ಲಿ ಬ್ಯುಸಿ ಇರುವ ರಿಷಬ್ ಶೆಟ್ಟಿ ವಿವಿಧ ಪತ್ರಿಕೆಗಳು ಹಾಗೂ ವೆಬ್ ತಾಣಗಳು ನಡೆಸುವ ಸಂದರ್ಶನಗಳು ಹಾಗೂ ಚರ್ಚೆಗಳಲ್ಲಿ ಭಾಗವಹಿಸಿ ಮಾತನಾಡುತ್ತಿದ್ದಾರೆ. ಇಂಡಿಯಾ ಟುಡೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಹೇಳಿಕೆಗಳಿಂದ ಎಲ್ಲರ ಮನ ಗೆದ್ದಿದ್ದ ರಿಷಬ್ ಶೆಟ್ಟಿ ಇದೀಗ ಇಂಡಿಯಾ ಗ್ಲಿಟ್ಸ್ ವೆಬ್ ತಾಣ ನಡೆಸಿದ ಸಿಐಐ ದಕ್ಷಿಣ್ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕನ್ನಡ ಚಿತ್ರರಂಗದಿಂದ ರಿಷಬ್ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ, ತಮಿಳು ಚಿತ್ರರಂಗದಿಂದ ನಿರ್ದೇಶಕ ವೆಟ್ರಿಮಾರನ್ ಹಾಗೂ ಮಲಯಾಳಂ ಚಿತ್ರರಂಗದಿಂದ ಬಸಿಲ್ ಜೋಸೆಫ್ ಭಾಗವಹಿಸಿದ್ದರು. ಇವರ ಜತೆಗೆ ದಂತಕತೆ ಮಣಿರತ್ನಂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಎಲ್ಲರೂ ಸಹ ಹಿರಿಯ ನಿರ್ದೇಶಕ ಮಣಿರತ್ನಂ ಅವರನ್ನು ಹೊಗಳಿ ಮಾತನಾಡಿದರು. ಅದೇ ರೀತಿ ಕನ್ನಡದ ರಿಷಬ್ ಶೆಟ್ಟಿ ಸಹ ಮಣಿರತ್ನಂ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಅವರೇ ನಮಗೆಲ್ಲಾ ಸ್ಪೂರ್ತಿ ಎಂದು ಹೇಳಿದರು.
ಮೊದಲಿಗೆ ಮಣಿರತ್ನಂ ಅವರು ಮಾತನಾಡಿ ನಿರ್ದೇಶಕನ ಚಿಂತನೆಗೆ ಮಿತಿಯಿಲ್ಲ, ವೆಟ್ರಿಮಾರನ್ ಸಿನಿಮಾಗಳನ್ನು ನೋಡಿ, ಕಾಂತಾರ ನೋಡಿ ಅವುಗಳಲ್ಲಿ ನಿರ್ದೇಶಕರು ಮಿತಿ ಎಂಬುದು ತುಂಬಾ ಎತ್ತರದಲ್ಲಿದೆ ಎಂಬುದನ್ನು ತೋರಿಸಿಕೊಟ್ಟರು, ಅದು ಸ್ಪೂರ್ತಿದಾಯಕ ಎಂದು ಹೇಳಿದರು.
ಈ ಹೇಳಿಕೆಗೆ ಸ್ಪಂದಿಸಿದ ರಿಷಬ್ ಶೆಟ್ಟಿ "ಕಾಂತಾರ ಚಿತ್ರಕ್ಕೆ ಮಣಿರತ್ನಂ ಸ್ಪೂರ್ತಿ. ಏಕೆಂದರೆ ಅವರು ಓಕೆ ಕಣ್ಮಣಿ ರೀತಿಯ ಸಿನಿಮಾಗಳನ್ನು ಮಾಡಿದ್ದಾರೆ ಹಾಗೆಯೇ ಪೊನ್ನಿಯಿನ್ ಸೆಲ್ವನ್ ರೀತಿಯ ಸಿನಿಮಾವನ್ನೂ ಸಹ ನಿರ್ದೇಶಿಸಿದ್ದಾರೆ. ಓರ್ವ ನಿರ್ದೇಶಕನಾಗಿ ಈ ವಿಷಯ ನನಗೆ ಸ್ಪೂರ್ತಿಯಾಗಿದೆ. ಇವುಗಳು ಮಿತಿಯನ್ನು ದಾಟಿ ಚಿತ್ರಗಳನ್ನು ಮಾಡಲು ಪ್ರೇರಣೆ ಮಾಡಿವೆ. ವಿವಿಧ ಕಥಾಹಂದರವಿರುವ ಚಿತ್ರಗಳನ್ನು ಮಾಡಲು ಸ್ಪೂರ್ತಿಯಾಗಿವೆ. ಹೀಗಾಗಿ ಕಾಂತಾರ ಚಿತ್ರಕ್ಕೆ ಮಣಿರತ್ನಂ ಸ್ಪೂರ್ತಿ" ಎಂದು ಹೇಳಿದರು. ಈ ಹೇಳಿಕೆಗೆ ನೆರೆದಿದ್ದವರ ಮೆಚ್ಚುಗೆ ವ್ಯಕ್ತವಾಯಿತು.


Click it and Unblock the Notifications











