ಬಿಗ್ಬಾಸ್ ಗೆದ್ದ ಮಂಜು ಪಾವಗಡಗೆ ಸಿನಿಮಾ ಅವಕಾಶಗಳ ಸುರಿಮಳೆ
ಬಿಗ್ಬಾಸ್ ಮನೆಗೆ ಹೋಗಿ ಬಂದ ಮೇಲೆ ಜನಪ್ರಿಯತೆ ಹೆಚ್ಚಾಗುವುದು ಸಾಮಾನ್ಯ, ಸಿನಿಮಾ ನಟರಲ್ಲದವರಿಗೂ ಸಿನಿಮಾದ ಅವಕಾಶಗಳು ಅರಸಿ ಬರುತ್ತವೆ.
ಈ ಬಾರಿಯ ಕನ್ನಡ ಬಿಗ್ಬಾಸ್ ಅನ್ನು ಹಾಸ್ಯ ನಟ ಮಂಜು ಪಾವಗಡ ಗೆದ್ದಿದ್ದಾರೆ. ಅವರಿಗೂ ಹಲವು ಸಿನಿಮಾ ಅವಕಾಶಗಳು ಒಂದರ ಮೇಲೊಂದರಂತೆ ಅರಸಿ ಬರುತ್ತಿವೆ. ಕೆಲವು ಸಿನಿಮಾಗಳನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ ಮಂಜು.
ಬಿಗ್ಬಾಸ್ ಮನೆಯಲ್ಲಿ ಮಂಜು ಪಾವಗಡ ಜೊತೆ ಸಹ ಸ್ಪರ್ಧಿಯಾಗಿದ್ದ ರಾಜೀವ್ ನಟಿಸುತ್ತಿರುವ ಸಿನಿಮಾ ಒಂದರಲ್ಲಿ ಮಂಜು ಪಾವಗಡ ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದು ಮಾತ್ರವೇ ಅಲ್ಲದೆ ಇನ್ನೂ ಕೆಲವು ಸಿನಿಮಾಗಳಲ್ಲಿ ಮಂಜು ಪಾವಗಡ ನಟಿಸುತ್ತಿದ್ದಾರೆ.

ರಾಜೇಶ್ ನಟಿಸುತ್ತಿರುವ 'ಉಸಿರೆ ಉಸಿರೆ' ಸಿನಿಮಾದಲ್ಲಿ ಮಂಜು ಪಾವಗಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕತೆಗೆ ಮುಖ್ಯವಾದ ಟ್ವಿಸ್ಟ್ ಕೊಡುವ ಪಾತ್ರ ಮಂಜು ಪಾವಗಡ ಅವರದ್ದಂತೆ. ಬಿಗ್ಬಾಸ್ ಆರಂಭವಾಗುವ ಮೊದಲೇ 'ಉಸಿರೇ ಉಸಿರೆ' ಸಿನಿಮಾ ಕಾರ್ಯ ಆರಂಭವಾಗಿತ್ತು. ಮಂಜು ಪಾವಗಡ ಅವರನ್ನು ತದ ನಂತರ ಆ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ.
'ಉಸಿರೆ ಉಸಿರೆ' ಸಿನಿಮಾದ ಬಗ್ಗೆ ಮಂಜು ಪಾವಗಡ ಸಾಕಷ್ಟು ನಿರೀಕ್ಷೆ ಇರಿಸಿದ್ದಾರೆ. ಈ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ನಟ ಸುದೀಪ್ ಇತ್ತೀಚೆಗಷ್ಟೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಶ್ರೀಜಿತಾ ಘೋಷ್ 'ಉಸಿರೆ ಉಸಿರೆ' ಸಿನಿಮಾದ ನಾಯಕಿಯಾಗಿ ನಟಿಸುತ್ತಿದ್ದಾರೆ. ತೆಲುಗಿನ ಖ್ಯಾತ ಹಾಸ್ಯನಟ ಆಲಿ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿಎಂ ವಿಜಯ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
'ಉಸಿರೆ ಉಸಿರೆ' ಮಾತ್ರವೇ ಅಲ್ಲದೆ ಇನ್ನೂ ಹಲವು ಸಿನಿಮಾ ಅವಕಾಶಗಳು ಮಂಜು ಪಾವಗಡಗೆ ಬರುತ್ತಿವೆ. ''ಹಲವು ಕತೆಗಳನ್ನು ಕೇಳುತ್ತಿದ್ದೇನೆ. ಹಾಸ್ಯ ಪ್ರಧಾನ ಕತೆಗಳೇ ಹೆಚ್ಚಿಗೆ ಬರುತ್ತಿವೆ. ಹಾಸ್ಯಾತ್ಮಕ ಪಾತ್ರಗಳಿಗಷ್ಟೆ ನನ್ನನ್ನು ಸೀಮಿತಗೊಳಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಹಾಗಾಗಿ ಬೇರೆ ರೀತಿಯ ಕತೆಗಳನ್ನು ಸಹ ಕೇಳುತ್ತಿದ್ದೇನೆ. ಸಿನಿಮಾದ ಜೊತೆಗೆ ಕಿರುತೆರೆಯಲ್ಲಿಯೂ ನಾನು ಸಕ್ರಿಯನಾಗಿರುತ್ತೇನೆ. ಕಿರುತೆರೆಯಿಂದಲೇ ನಾನು ಈ ಹಂತಕ್ಕೆ ಬೆಳೆದೆ ಹಾಗಾಗಿ ಕಿರುತೆರೆಯನ್ನು ನಾನು ಬಿಡುವುದಿಲ್ಲ ಎಂದಿದ್ದಾರೆ ಮಂಜು ಪಾವಗಡ.
ಮಂಜು ಪಾವಗಡ ಈ ಬಾರಿಯ ಬಿಗ್ಬಾಸ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಫೈನಲ್ಗೆ ಅರವಿಂದ್ ಹಾಗೂ ಮಂಜು ಪಾವಗಡ ಬಂದಿದ್ದರು. ಇಬ್ಬರ ನಡುವೆ ಮಂಜು ಪಾವಗಡ ವಿಜೇತರೆಂದು ಘೋಷಿಸಲಾಯ್ತು. ಬಿಗ್ಬಾಸ್ ಗೆದ್ದ ಮೇಲೆ ಮೊದಲಿಗೆ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು ಮಂಜು ಆ ನಂತರ ಧರ್ಮಸ್ಥಳ ಮತ್ತಿತರ ಕಡೆ ಕುಟುಂಬದೊಂದಿಗೆ ಸುತ್ತಾಡಿ ಕಾಲ ಕಳೆದು ಈಗ ಮತ್ತೆ ಚಿತ್ರೀಕರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಬಿಗ್ಬಾಸ್ ಮನೆಗೆ ಹೋಗಿ ಬಂದವರು, ವಿಜೇತರಾದವರು ಸಿನಿಮಾಗಳಲ್ಲಿ ಬ್ಯುಸಿಯಾದ ಹಲವು ಉದಾಹರಣೆಗಳು ಇವೆ. ಸಿನಿಮಾ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದಿದ್ದ ಕಿರಿಕ್ ಕೀರ್ತಿ ಸಿನಿಮಾಗಳಲ್ಲಿ ತೊಡಗಿಕೊಂಡರು, ಪ್ರಥಮ್ ಸಹ ಸಿನಿಮಾಳಗಳನ್ನು ಮಾಡಿದರು. ಈ ಬಾರಿ ಬಿಗ್ಬಾಸ್ ಮನೆಯಲ್ಲಿದ್ದ ದಿವ್ಯಾ ಉರುಡುಗ ಹಾಗೂ ಅರವಿಂದ್ಗೂ ಸಿನಿಮಾದ ಅವಕಾಶಗಳು ಅರಸಿ ಬರುತ್ತಿವೆ. ನಿವೇದಿತಾ, ಚಂದನ್ ಶೆಟ್ಟಿ ಇನ್ನೂ ಹಲವರಿಗೆ ಬಿಗ್ಬಾಸ್ ಮನೆಗೆ ಹೋಗಿ ಬಂದ ಮೇಲೆ ಅದೃಷ್ಟವೇ ಬದಲಾಯ್ತು.


Click it and Unblock the Notifications











