ನಿರ್ದೇಶಕ ಶ್ರೀಕುಮಾರ್ ವಿರುದ್ಧ ನಟಿ ಮಂಜು ವಾರಿಯರ್ ಪೊಲೀಸ್ ದೂರು
ಮಲಯಾಳಂನ ಖ್ಯಾತ ನಿರ್ದೇಶಕ ಶ್ರೀಕುಮಾರ್ ವಿರುದ್ಧ ನಟಿ ಮಂಜು ವಾರಿಯರ್ ಕೇರಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶ್ರೀಕುಮಾರ್ ಅವರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಕೇರಳ ಡಿಜಿಪಿ ಲೋಕನಾಥ್ ಬೆಹೆರಾ ಅವರಿಗೆ ಕಂಪ್ಲೆಂಟ್ ನೀಡಿದ್ದಾರೆ.
ಮಂಜು ವಾರಿಯರ್ ಅವರ ದೂರಿನ ಅನ್ವಯ ಕೇರಳ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. 'ಶ್ರೀಕುಮಾರ್ ಅವರಿಂದ ನನಗೆ ಬೆದರಿಕೆ ಇದೆ, ಮತ್ತು ಸಾಮಾಜಿಕ ಜಾಲತಾಣದಲ್ಲಿ ನನ್ನ ಮಾನಹಾನಿ ಮಾಡಲಾಗಿದೆ' ಎಂದು ದೂರಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳನ್ನ ಗಮನಿಸಿದರೆ, 'ಚಿತ್ರದ ಶೂಟಿಂಗ್ ಸೆಟ್ಗಳಲ್ಲಿ ಮತ್ತು ಚಿತ್ರದ ನಿರ್ಮಾಣ, ಪ್ರಚಾರ ಮತ್ತು ಬಿಡುಗಡೆಯ ವಿವಿಧ ಹಂತಗಳಲ್ಲಿ ನಿರ್ದೇಶಕರು ಮೌಖಿಕವಾಗಿ ನಿಂದಿಸಿದ್ದಾರೆ. ಅವರ ವರ್ತನೆಯು ನನಗೆ ಮಾನಸಿಕ ಯಾತನೆಗೆ ಕಾರಣವಾಗಿದೆ'' ಎಂದು ಪ್ರಸ್ತಾಪಿಸಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀಕುಮಾರ್ ''ಮಂಜು ಅವರು ದೂರಿನ ವಿಚಾರವಾಗಿ ನನಗೆ ಅಚ್ಚರಿಯಾಗಿದೆ. ಪೊಲೀಸರಿಗೆ ನಾನು ಎಲ್ಲ ರೀತಿಯಲ್ಲೂ ಸಹಕರಿಸುತ್ತೇನೆ. ಆದರೆ, ಮಂಜು ಅವರು ಒಂದನ್ನ ಸ್ಮರಿಸಬೇಕಾಗಿದೆ. ಅವರು ಕಷ್ಟಕಾಲದಲ್ಲಿದ್ದಾಗ ನಾನು ಅವರಿಗೆ ಎಷ್ಟು ಸಹಾಯ ಮಾಡಿದ್ದೆ, ಅವರ ನೋವಿನಲ್ಲಿ ನಾನು ಭಾಗಿಯಾಗಿದ್ದೆ. ಎಲ್ಲವನ್ನು ಮರೆತಿದ್ದಾರೆ'' ಎಂದಿದ್ದಾರೆ.
ಇದರ ಜೊತೆಗೆ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ (FEFKA) - (Film Employees Federation of Kerala) ಸಂಸ್ಥೆಯಲ್ಲೂ ಶ್ರೀಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಶ್ರೀಕುಮಾರ್ ನಿರ್ದೇಶಕ ಸಂಘದ ಸದಸ್ಯನಾಗಿರುವ ಅವರನ್ನ ಸಂಘಟನೆಯಿಂದ ಹೊರಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕಳೆದ ವರ್ಷ ತೆರೆಕಂಡಿದ್ದ 'ಒಡಿಯನ್' ಸಿನಿಮಾವನ್ನ ಶ್ರೀಕುಮಾರ್ ನಿರ್ದೇಶಿಸಿದ್ದರು. ಮೋಹನ್ ಲಾಲ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಈ ಚಿತ್ರದಲ್ಲಿ ಮಂಜು ವಾರಿಯರ್ ಕೂಡ ಕಾಣಿಸಿಕೊಂಡಿದ್ದರು.


Click it and Unblock the Notifications











