ತನ್ನವರಿಗೆ 'ಆಸರೆ'ಯಾದ ಕ್ರೇಜಿಸ್ಟಾರ್ ಪುತ್ರ: ಮುಗಿಲ್ಪೇಟೆ ಸದಸ್ಯರಿಗೆ ತಲಾ 5 ಸಾವಿರ
ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಚಿತ್ರರಂಗ ಸಂಕಷ್ಟದಲ್ಲಿದೆ. ಸಿನಿಮಾವನ್ನೇ ನಂಬಿಕೊಂಡು ಜೀವನ ಮಾಡುವ ಕಾರ್ಮಿಕರಿಗೆ ಲಾಕ್ಡೌನ್ನಿಂದ ಸಮಸ್ಯೆಯಾಗಿದೆ. ಚಿತ್ರರಂಗದ ಶ್ರಮಿಕ ವರ್ಗಕ್ಕೆ ಹಲವರು ನೆರವಾಗಿದ್ದಾರೆ. ಇದೀಗ, ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ರವಿಚಂದ್ರನ್ ತಮ್ಮ ಮುಗಿಲ್ಪೇಟೆ ಚಿತ್ರತಂಡದ ಸದಸ್ಯರಿಗೆ ಆಸರೆಯಾಗಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಕೊರೊನಾದಿಂದ ಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮನೋರಂಜನ್ ಮುಗಿಲ್ಪೇಟೆ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ನೂರು ಜನರಿಗೆ ತಲಾ 5000 ರೂಪಾಯಿ ನೀಡಲು ನಿರ್ಧರಿಸಿದ್ದಾರೆ. ನಾಯಕನಟ ಮನೋರಂಜನ್ ಮಾನವೀಯತೆ ಕೆಲಸದಲ್ಲಿ ನಿರ್ಮಾಪಕ ರಕ್ಷಾ ವಿಜಯಕುಮಾರ್ ಸಹ ಕೈ ಜೋಡಿಸಿದ್ದಾರೆ.
''ಕೊರೊನಾ ಸಾಂಕ್ರಾಮಿಕ ವೈರಸ್ ಜಗತ್ತನ್ನು ಆವರಿಸಿ ಒಂದು ವರ್ಷಕ್ಕೂ ಜಾಸ್ತಿಯಾಗಿದೆ. ಈ ವೈರಸ್ಗೆ ಅನೇಕ ಕುಟುಂಬಗಳು ನಲುಗಿ ಹೋಗಿವೆ. ಅವುಗಳಲ್ಲಿ ನನ್ನ ಕನ್ನಡ ಸಿನಿಮಾ ಕಲಾವಿದರ ಕುಟುಂಬವು ಹೊರತಾಗಿಲ್ಲ. ಮನೆಯಲ್ಲಿದ್ದರೆ ಸುರಕ್ಷಿತವಾಗಿ ಇರ್ತೀವಿ ಅಂತ ನಾವೆಲ್ಲ ಭಾವಿಸುತ್ತೇವೆ. ಆದರೆ ನನ್ನ ಅನೇಕ ಕಲಾವಿದ ಸ್ನೇಹಿತರು ಈ ಕೊರೊನಾ ಸಂದರ್ಭದಲ್ಲಿ ಜೀವನ ನಡೆಸುವುದಕ್ಕೆ ಕಷ್ಟಪಡುತ್ತಿದ್ದಾರೆ. ಹಾಗಾಗಿ, ಈ ಸಮಯದಲ್ಲಿ ನನ್ನ ಸ್ನೇಹಿತರ ನೆರವಿಗೆ ನಿಲ್ಲಬೇಕಾದದ್ದು ನನ್ನ ಕರ್ತವ್ಯ.

ಸದ್ಯ ಮುಗಿಲ್ಪೇಟೆ ಸಿನಿಮಾದಲ್ಲಿ ನಾನು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದೇನೆ. ನನ್ನ ಈ ಒಂದು ಪ್ರಾಜೆಕ್ಟ್ನಲ್ಲಿ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ನನ್ನ ಸಿನಿಮಾಕ್ಕಾಗಿ ತನುಮನವನ್ನು ಅರ್ಪಿಸಿದ್ದಾರೆ. ಈಗ ಅವರ ಸಂಕಷ್ಟ ಕಾಲದಲ್ಲಿ ಅವರ ಜೊತೆಗೆ ಅವರ ಕಷ್ಟಕ್ಕೆ ಹೆಗಲು ಕೊಡಬೇಕಾಗಿರುವುದು ನನ್ನ ಜವಾಬ್ದಾರಿ. ಹೀಗಾಗಿ, ಮುಗಿಲ್ಪೇಟೆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ 5000 ಹಣವನ್ನು ಖಾತೆಗೆ ಹಾಕುವ ನಿರ್ಣಯ ಮಾಡಿದ್ದೇನೆ. ನನ್ನವರಿಗಾಗಿ ಈ ಸಂದರ್ಭದಲ್ಲಿ ನನ್ನ ಕೈಲಾದ ಸಹಾಯವನ್ನು ಮಾಡುವ ಕಿರು ಪ್ರಯತ್ನ'' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮುಗಿಲ್ಪೇಟೆ ಚಿತ್ರದ ಕುರಿತು
ಭರತ್ ಎಸ್ ನಾವುಂದ ನಿರ್ದೇಶಿಸುತ್ತಿರುವ ಮುಗಿಲ್ಪೇಟೆ ಚಿತ್ರದಲ್ಲಿ ಖಯಾದು ಲೋಹರ್ ನಾಯಕಿಯಾಗಿದ್ದಾರೆ. ರಕ್ಷಾ ವಿಜಯಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.


Click it and Unblock the Notifications











