ಈ ವರ್ಷ ನಿರೀಕ್ಷೆ ಹುಟ್ಟಾಕಿ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದ ಕನ್ನಡ ಸಿನಿಮಾಗಳ ಲಿಸ್ಟ್
ಸಿನಿಮಾ ಸಕ್ಸಸ್ ಸೂತ್ರ ಯಾರಿಗೂ ಗೊತ್ತಿಲ್ಲ. ನಿಜಕ್ಕೂ ಅದು ಗೊತ್ತಿದ್ದರೆ ಯಾವುದೇ ಸಿನಿಮಾ ಸೋಲುತ್ತಿರಲಿಲ್ಲ. ಇವತ್ತಿನ ಕಾಲದಲ್ಲಿ ಪ್ರೇಕ್ಷಕರನ್ನು ರಂಜಿಸುವುದು ಅಷ್ಟು ಸುಲಭವಲ್ಲ. ಸಿನಿರಸಿಕರು ಈಗ ಬಹಳ ಬುದ್ಧಿವಂತರಾಗಿದ್ದಾರೆ. ಪ್ರತಿ ದೃಶ್ಯ, ಪ್ರತಿ ಪಾತ್ರ, ಪ್ರತಿ ವಿಭಾಗದ ಕೆಲಸದ ಬಗ್ಗೆ ಮಾತನಾಡುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ರಿವ್ಯೂ ಬರೆಯುವವರ ಸಂಖ್ಯೆ ಜಾಸ್ತಿ ಆಗಿದೆ. ಅದನ್ನೆಲ್ಲಾ ಮೀರಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಅಷ್ಟು ಸುಲಭವಲ್ಲ. ಈ ವರ್ಷ 200ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಕೊನೆ ತಿಂಗಳಲ್ಲಿ 'ಡೆವಿಲ್', '45' ಹಾಗೂ 'ಮಾರ್ಕ್' ಬಾಕ್ಸಾಫೀಸ್ ಕದನಕ್ಕೆ ಇಳಿಯುತ್ತಿವೆ. ಈ ವರ್ಷ ಕನ್ನಡದ ಕೆಲ ಚಿತ್ರಗಳು ಬ್ಲಾಕ್ಬಸ್ಟರ್ ಹಿಟ್ ಆಗಿದ್ದರೆ ಮತ್ತೆ ಕೆಲವು ಸೋಲುಂಡಿವೆ.
ಸ್ಟಾರ್ ಕಾಸ್ಟ್, ಟ್ರೈಲರ್, ಸಾಂಗ್ಸ್ ಮೂಲಕ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾಗಳು ತೆರೆಕಂಡು ಮುಗ್ಗರಿಸಿವೆ. ಕೆಲ ಸಿನಿಮಾಗಳು ಯಾವುದೇ ನಿರೀಕ್ಷೆ ಇಲ್ಲದೇ ಬಂದು ಗೆದ್ದಿವೆ. 2025ರಲ್ಲಿ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದ ಸಿನಿಮಾಗಳ ಕಂಪ್ಲೀಟ್ ಲಿಸ್ಟ್ ಮುಂದೆ ಇದೆ ಓದಿ.

ಎಕ್ಕ
ಯುವ ರಾಜ್ಕುಮಾರ್ ನಟನೆಯ 'ಎಕ್ಕ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು ಗೊತ್ತೇಯಿದೆ. ರೋಹಿತ್ ಪದಕಿ ನಿರ್ದೇಶನದ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಇತ್ತು. ಚಿತ್ರದ ಆಲ್ಬಮ್ ಹಿಟ್ ಆಗಿ ಹೈಪ್ ಕ್ರಿಯೇಟ್ ಮಾಡಿತ್ತು. ಅದರಲ್ಲೂ 'ಬ್ಯಾಂಗಲ್ ಬಂಗಾರಿ' ವರ್ಷ ಟಾಪ್-1 ಸಾಂಗ್ ಎನ್ನಬಹುದು. 'ಎಕ್ಕ' ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿತ್ತು. ಆದರೆ ಬಳಿಕ ಸಿನಿಮಾ ಗೆಲ್ಲಲಿಲ್ಲ. 'ಸು ಫ್ರಂ ಸೋ' ಆರ್ಭಟದ ಮುಂದೆ ಸಿನಿಮಾ ಸೋಲುಂಡಿತ್ತು.
ಸಂಜು ವೆಡ್ಸ್ ಗೀತಾ-2
ಈ ವರ್ಷದ ಆರಂಭವೇ ಕನ್ನಡ ಚಿತ್ರರಂಗಕ್ಕೆ ಅಷ್ಟೇನು ಚೆನ್ನಾಗಿರಲಿಲ್ಲ. 'ಛೂ ಮಂತರ್' ಸಿನಿಮಾ ತಕ್ಕಮಟ್ಟಿಗೆ ಗೆದ್ದರೂ 'ಸಂಜು ವೆಡ್ಸ್ ಗೀತಾ-2' ಹೀನಾಯವಾಗಿ ಸೋತಿತ್ತು. ರೀ-ರಿಲೀಸ್ ಮಾಡಿದ್ರು ಪ್ರಯೋಜನವಾಗಲಿಲ್ಲ. ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟನೆಯ ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದರು.
ಸಿದ್ಲಿಂಗು-2
ಲೂಸ್ ಮಾದ ಯೋಗಿ ಹಾಗೂ ವಿಜಯ ಪ್ರಸಾದ್ ಜೋಡಿಯ 'ಸಿದ್ಲಿಂಗು' ಸಿನಿಮಾ 10 ವರ್ಷಗಳ ಹಿಂದೆ ಗೆದ್ದಿತ್ತು. ಆ ಚಿತ್ರದಲ್ಲಿ ರಮ್ಯಾ ಕೂಡ ನಟಿಸಿದ್ದು ಪ್ಲಸ್ ಆಗಿತ್ತು. ಆದರೆ ಸತತ ಸೋಲುಗಳಿಂದ ಕಂಗೆಟ್ಟಿದ್ದ ಯೋಗಿ ಹಾಗೂ ವಿಜಯ ಪ್ರಸಾದ್ 'ಸಿದ್ಲಿಂಗು'-2 ಮಾಡಿ ಈ ವರ್ಷ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಮನದ ಕಡಲು
ಮುಂಗಾರು ಮಳೆ ಸಿನಿಮಾ ಖ್ಯಾತಿಯ ಇ. ಕೃಷ್ಣಪ್ಪ ನಿರ್ಮಾಣದಲ್ಲಿ ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಸಿನಿಮಾ ಪ್ರೇಕ್ಷಕರ ಮನಗೆಲ್ಲಲಿಲ್ಲ. ಸುಮುಖ ಜೊತೆ ರಾಶಿಕಾ ಹಾಗೂ ಅಂಜಲಿ ಚಿತ್ರದಲ್ಲಿ ನಟಿಸಿದ್ದರು. ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿತ್ತು.

ಕೊತ್ತಲವಾಡಿ
ನಟ ಯಶ್ ತಾಯಿ ಪುಷ್ಪಾ ಅರುಣ್ಕುಮಾರ್ ನಿರ್ಮಾಣದ 'ಕೊತ್ತಲವಾಡಿ' ಸಿನಿಮಾ ಗೆಲ್ಲುವ ನಿರೀಕ್ಷೆ ಮೂಡಿಸಿತ್ತು. ಪೃಥ್ವಿ ಅಂಬರ್ ಜೋಡಿಯಾಗಿ ಕಾವ್ಯಾ ಶೈವ ನಟಿಸಿದ್ದರು. ಬಿಡುಗಡೆಗೂ ಮುನ್ನ ಬಹಳ ಸದ್ದು ಮಾಡಿದ್ದು ಸಿನಿಮಾ ಪ್ರೇಕ್ಷಕರ ಮುಂದೆ ಬಂದು ಸೈಲೆಂಟ್ ಆಗಿತ್ತು. 'ಸು ಫ್ರಂ ಸೋ' ಹಾಗೂ 'ಮಹಾವತಾರ್ ನರಸಿಂಹ' ಸಿನಿಮಾಗಳ ಆರ್ಭಟದ ನಡುವೆ 'ಕೊತ್ತಲವಾಡಿ' ಕಮಾಲ್ ಮಾಡಲಿಲ್ಲ.
ಗತವೈಭವ
ಸಿಂಪಲ್ ಸುನಿ ನಿರ್ದೇಶಣದ 'ಗತವೈಭವ' ಸಿನಿಮಾ ಕೂಡ ಭಾರೀ ನಿರೀಕ್ಷೆ ಹುಟ್ಟಾಕ್ಕಿತ್ತು. ದುಷ್ಯಂತ್ ಜೊತೆ ಆಶಿಕಾ ರಂಗನಾಥ್ ನಾಯಕಿಯಾಗಿ ಮಿಂಚಿದ್ದರು. ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿತ್ತು. ಆದರೆ ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಲೇ ಇಲ್ಲ.
ಇನ್ನುಳಿದಂತೆ ದಿನಕರ್ ತೂಗುದೀಪ ನಿರ್ದೇಶನದ 'ರಾಯಲ್' ಸಿನಿಮಾ ಕೂಡ ಗೆಲ್ಲುವ ನಿರೀಕ್ಷೆ ಮೂಡಿಸಿತ್ತು. ಆದರೆ ಚಿತ್ರಕ್ಕೆ ಭಾರೀ ಹಿನ್ನಡೆ ಆಗಿತ್ತು. ಧನಂಜಯ್ ನಿರ್ಮಾಣದ 'ವಿದ್ಯಾಪತಿ', ದಿಗಂತ್ ನಟನೆಯ 'ಎಡಗೈ ಅಪಘಾತಕ್ಕೆ ಕಾರಣ' ಹಾಗೂ ಎಸ್. ನಾರಾಯಣ್ ನಿರ್ದೇಶನದ 'ಮಾರುತ' ಸಿನಿಮಾಗಳು ಕೂಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿದ್ದವು.


Click it and Unblock the Notifications











