ನನ್ನ ಬಗ್ಗೆ ಮಾತಾಡಿ, ಪಕ್ಕದ್ಮನೆ ಬಗ್ಗೆ ಅಲ್ಲ- ವಿಜಯಲಕ್ಷ್ಮಿ ಬಗ್ಗೆ ಕೇಳಿದ ಪ್ರಶ್ನೆಗೆ ಸುದೀಪ್ ರಿಯಾಕ್ಷನ್
ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಸುದೀಪ್ ನಟಿಸಿದ 'ಮಾರ್ಕ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಬಾಕ್ಸಾಫೀಸ್ನಲ್ಲಿ ಸಖತ್ ಸದ್ದು ಮಾಡ್ತಿದೆ. ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕಿಚ್ಚ 'ಮಾರ್ಕ್' ಸಿನಿಮಾ ನೋಡಿ ಖುಷಿಪಟ್ಟರು. ಬಳಿಕ ಮೈಸೂರಿಗೆ ತೆರಳಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.
ಡಿಸೆಂಬರ್ 25ರಂದು ತೆರೆಕಂಡ 'ಮಾರ್ಕ್' ಸಿನಿಮಾ ಅಭಿಮಾನಿಗಳ ಮನಗೆದ್ದಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರಿಗೆ ಸಖತ್ ಮಜಾ ಕೊಡ್ತಿದೆ. 18 ಗಂಟೆಗಳಲ್ಲಿ ನಡೆಯುವ ಕಥೆ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಂತಿದೆ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಜಮಾಯಿಸಿದ್ದರಿಂದ ಸುದೀಪ್ ಒಳಗೆ ಹೋಗಲು ಕಷ್ಟಪಡುವಂತಾಗಿದೆ. ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ ಬಳಿಕ ಪೈರಸಿ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಸುದೀಪ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ತಮ್ಮ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವರ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ದೂರು ನೀಡಿದ್ದಾರೆ. ಸ್ಕ್ರೀನ್ ಶಾಟ್ ಸಮೇತ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಮಾಹಿತಿ ನೀಡಿದ್ದರು. ಕ್ರಮಕ್ಕೆ ಆಗ್ರಹಿಸಿದ್ದರು. ಡಿಸೆಂಬರ್ 24ರಂದು ವಿಜಯಲಕ್ಷ್ಮಿ ದೂರು ನೀಡಿದ್ದರು. ಆದರೆ ಪ್ರಕರಣ ಸಂಬಂಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸುದೀಪ್ ಒಪ್ಪಲಿಲ್ಲ.
ವಿಜಯಲಕ್ಷ್ಮಿ ದೂರು ಎಂದು ಪ್ರಶ್ನೆ ಕೇಳುತ್ತಿದ್ದಂತೆ ಸುದೀಪ್ ಮಾತನಾಡಲು ನಿರಾಕರಿಸಿದ್ದಾರೆ. "ನನ್ನ ಲೈಫಲ್ಲಿ ನನ್ನ ಬಗ್ಗೆ ಮಾತಾಡಿ, ಪಕ್ಕದ್ಮನೆ ಬಗ್ಗೆ ಅಲ್ಲ" ಎಂದು ಸುದೀಪ್ ಹೇಳಿ ಸುಮ್ಮನಾಗಿದ್ದಾರೆ. ಈಗಾಗಲೇ ಮತ್ತೊಮ್ಮೆ ವಿಜಯಲಕ್ಷ್ಮಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ದೂರಿನ ಬಗ್ಗೆ ನೆನಪಿಸಿ ಬಂದಿದ್ದಾರೆ. ಈ ಹಿಂದೆ ನಟಿ ರಮ್ಯಾ ತಮಗೆ ಕೆಟ್ಟದಾಗಿ ಮೆಸೇಜ್ ಮಾಡಿದವರ ವಿರುದ್ಧ ದೂರು ನೀಡಿದ್ದರು. ಕೂಡಲೇ ಕೆಲವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಆ ವಿಚಾರವನ್ನು ವಿಜಯಲಕ್ಷ್ಮಿ ಪ್ರಸ್ತಾಪಿಸಿ "ಬೇರೊಬ್ಬ ಮಹಿಳೆಯ ದೂರಿನ ಮೇಲೆ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬುದು ನನಗೆ ಆಶ್ಚರ್ಯ ತಂದಿದೆ. ನನ್ನ ದೂರು ಕಡಿಮೆ ಮುಖ್ಯವೇ ಅಥವಾ ಮಾನ್ಯವೇ" ಎಂದು ಪ್ರಶ್ನಿಸಿದ್ದಾರೆ.

ವಿಜಯಲಕ್ಷ್ಮಿ ಆರೋಪಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. "ಈ ಕೇಸ್ ಮಾತ್ರವಲ್ಲ, ಪ್ರತಿಯೊಂದು ಕೇಸ್ ಅನ್ನು ನಾವು ಸಮಾನವಾಗಿ ನೋಡುತ್ತೇವೆ" ಎಂದಿದ್ದಾರೆ. ವಿಜಯಲಕ್ಷ್ಮಿ ಪೋಸ್ಟ್ ಬಗ್ಗೆ ಮಾತನಾಡಿ "ಪ್ರಕರಣ ದಾಖಲಾದ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಕೆಲವು ಸೈಬರ್ ಅಥವಾ ತಾಂತ್ರಿಕ ಪ್ರಕರಣಗಳಲ್ಲಿ ತಕ್ಷಣಕ್ಕೆ ಸುಳಿವು ಸಿಗುವುದಿಲ್ಲ. ಅದಕ್ಕೆ ಸಮಯ ಬೇಕಾಗುತ್ತದೆಯೇ ಹೊರತು, ಬೇರೆ ಯಾವುದೇ ಉದ್ದೇಶ ಇರಲ್ಲ. ಒಂದು ವೇಳೆ ನಮ್ಮ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲು ನಾವು ಹಿಂಜರಿಯುವುದಿಲ್ಲ" ಎಂದು ತಿಳಿಸಿದ್ದಾರೆ.
ವಾರದ ಹಿಂದೆ ವಿಜಯಲಕ್ಷ್ಮಿ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ದೂರು ಕೊಟ್ಟಿದ್ದರು. ಆದರೆ ಅಂದು ಆಯುಕ್ತರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಇಂದು ನೇರವಾಗಿ ಮಾತನಾಡಿ ದೂರಿನ ವಿವರಗಳನ್ನು ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮಿ "ಕ್ಲಾಸ್ ಫ್ಯಾನ್ಸ್" ಎಂದು ಹೇಳಿದ್ದು ಯಾರಿಗೆ ಎನ್ನುವ ಚರ್ಚೆ ನಡೀತಿದೆ. ರಮ್ಯಾ ಅವರಿಗೆ ಒಂದು ನ್ಯಾಯ, ವಿಜಯಲಕ್ಷ್ಮಿ ದರ್ಶನ್ ಅವರಿಗೆ ಒಂದು ನ್ಯಾಯ ಯಾಕೆ? ಎಂದು ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











