'ಕಾಟೇರ' ಮತ್ತೊಂದು ಅಪ್ಡೇಟ್ ಹಂಚಿಕೊಂಡ ತರುಣ್ ಸುಧೀರ್; ತಾರಾಗಣಕ್ಕೆ ಮತ್ತಿಬ್ಬರು ಕಲಾವಿದರ ಸೇರ್ಪಡೆ
ಕಾಟೇರ, ಈ ವರ್ಷ ಬಿಡುಗಡೆಗೊಳ್ಳಲಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ ಎಂಬ ಕಾರಣಕ್ಕೆ ದೊಡ್ಡ ನಿರೀಕ್ಷೆ ಹುಟ್ಟುಹಾಕಿರುವ ಕಾಟೇರ ಚಿತ್ರ ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಶನ್ನ ಎರಡನೇ ಚಿತ್ರ ಎಂಬ ಕಾರಣಕ್ಕೆ ಮತ್ತಷ್ಟು ಹೈಪ್ ಹೆಚ್ಚಿಸಿದೆ.
ಹೌದು, 2021ರಲ್ಲಿ ರಾಬರ್ಟ್ ರೀತಿಯ ಬ್ಲಾಕ್ಬಸ್ಟರ್ ಚಿತ್ರವನ್ನು ನೀಡಿದ್ದ ಈ ಜೋಡಿ ಈಗ ಮತ್ತೊಂದು ಚಿತ್ರಕ್ಕೆ ಕೈ ಜೋಡಿಸಿರುವುದು ಈ ಹೈಪ್ ಹೆಚ್ಚಲು ಕಾರಣವಾಗಿದೆ. ಇನ್ನು ಕಾಟೇರ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ನಿರ್ದೇಶಕ ತರುಣ್ ಸುಧೀರ್ ಚಿತ್ರದ ತಾರಾಗಣವನ್ನು ಸಿಕ್ಕಾಪಟ್ಟೆ ಗಮನ ಸೆಳೆಯುವ ಹಾಗೆ ಆರಿಸುತ್ತಿದ್ದಾರೆ.

ಮೊದಲಿಗೆ ಚಿತ್ರದ ತಾರಾಗಣದ ಬಗ್ಗೆ ಹೆಚ್ಚೇನೂ ಮಾಹಿತಿ ಬಿಟ್ಟುಕೊಡದಿದ್ದ ತರುಣ್ ಸುಧೀರ್ ಬಳಿಕ ಒಂದೊಂದೇ ಅಪ್ಡೇಟ್ ಮೂಲಕ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತಿದ್ದಾರೆ.
ಅದೇ ರೀತಿ ಇಂದು ( ಜೂನ್ 26 ) ತರುಣ್ ಸುಧೀರ್ ಕಾಟೇರ ಚಿತ್ರದಲ್ಲಿ ನಟಿಸುತ್ತಿರುವ ಮತ್ತಿಬ್ಬರು ಕಲಾವಿದರ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ. ಹೌದು, ಇಂದು ಬೆಳಗ್ಗೆ ಟ್ವಿಟರ್ನಲ್ಲಿ ಟ್ವೀಟ್ ಮಾಡಿ ಓರ್ವ ಹಿರಿಯ ಕಲಾವಿದ ಹಾಗೂ ಓರ್ವ ಬಾಲನಟನ ಹುಟ್ಟುಹಬ್ಬದ ಅಪ್ಡೇಟ್ ಅನ್ನು ಸಂಜೆ 4.02ಕ್ಕೆ ಹಂಚಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದರು.
ಅದರಂತೆ ಇದೀಗ ಆ ಅಪ್ಡೇಟ್ ಏನೆಂಬುದನ್ನು ತರುಣ್ ಸುಧೀರ್ ಬಿಚ್ಚಿಟ್ಟಿದ್ದು, "ಹಿರಿಯ ಪ್ರತಿಭಾವಂತ ಕಲಾವಿದರಾದ ಬಿರಾದಾರ್ ಸರ್ ರವರಿಗೆ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭೆ ಮಾಸ್ಟರ್ ರೋಹಿತ್ ಗೆ ಜನ್ಮದಿನದ ಪ್ರೀತಿಯ ಶುಭಾಶಯಗಳು" ಎಂದು ಬರೆದುಕೊಂಡು ಚಿತ್ರದಲ್ಲಿ ಹಿರಿಯ ಕಲಾವಿದ ಬಿರಾದರ್ ಹಾಗೂ ಬಾಲನಟ ರೋಹಿತ್ ನಟಿಸುತ್ತಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.
ಚಿತ್ರದಲ್ಲಿ ವೈಜನಾಥ್ ಬಿರಾದರ್ ಚೊಂಗ್ಲಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಾಸ್ಟರ್ ರೋಹಿತ್ ಪುಟ್ಟರಾಜು ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಾಸ್ಟರ್ ರೋಹಿತ್ ಪಾಂಡವಪುರ 2018ರಲ್ಲಿ ಬಿಡುಗಡೆಗೊಂಡಿದ್ದ ಸತ್ಯ ಪ್ರಕಾಶ್ ನಿರ್ದೇಶನದ 'ಒಂದಲ್ಲಾ ಎರಡಲ್ಲಾ' ಎಂಬ ಚಿತ್ರದಲ್ಲಿ ನಟಿಸಿ ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ 66ನೇ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಇನ್ನು ಕಾಟೇರ ಚಿತ್ರ 70ರ ದಶಕದ ಕಾಲಘಟ್ಟದಲ್ಲಿ ನಡೆಯುವ ಚಿತ್ರಕಥೆಯನ್ನು ಹೊಂದಿದ್ದು, ದರ್ಶನ್ ನಾಯಕನಾಗಿ ನಟಿಸುತ್ತಿದ್ದು, ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಜತೆಗೆ ಜಗಪತಿ ಬಾಬು ಹಾಗೂ ಕುಮಾರ್ ಗೋವಿಂದ್ ರೀತಿಯ ದೊಡ್ಡ ಕಲಾವಿದರೂ ಸಹ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಹಲವು ತಿಂಗಳುಗಳ ಹಿಂದೆಯೇ ಬಿಡುಗಡೆಗೊಂಡಿದ್ದು, ಚಿತ್ರ 'ಉಳುವವನೇ ಭೂಮಿಯ ಒಡೆಯ' ಎಂಬ ಕಾನ್ಸೆಪ್ಟ್ ಆಧಾರಿತ ಚಿತ್ರ ಎಂಬ ಸುದ್ದಿಗಳಿವೆ.
ದರ್ಶನ್ ಇತ್ತೀಚೆಗಷ್ಟೇ ರೈತರು ಬಳಸುವ ಹಸಿರು ಶಾಲನ್ನು ಬಾವುಟದ ರೀತಿ ಹಿಡಿದು ನಿಂತಿದ್ದ ಚಿತ್ರದ ಚಿತ್ರೀಕರಣದ ಸಂದರ್ಭದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಚಿತ್ರಕ್ಕೆ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದು, ಹಳ್ಳಿಯಲ್ಲಿ ನಡೆಯುವ ಈ ಕಥೆಗೆ ವಿಶೇಷವಾಗಿ ದೊಡ್ಡ ಗ್ರಾಮದ ಸೆಟ್ ಹಾಕಿ ರಿಚ್ ಆಗಿ ಚಿತ್ರವನ್ನು ತಯಾರಿಸಲಾಗಿದೆ.


Click it and Unblock the Notifications











