ಅನುಶ್ರೀಗೆ ಕಿಚ್ಚನ ಚಾಲೆಂಜ್; ಸೋತ್ರೆ ಒಂದು ವರ್ಷ ಯಾವುದೇ ಇಂಟರ್ವ್ಯೂ ಮಾಡುವಂತಿಲ್ಲ
'ಮ್ಯಾಕ್ಸ್' ಸಿನಿಮಾ ಪ್ರಚಾರದಲ್ಲಿ ನಟ ಕಿಚ್ಚ ಸುದೀಪ್ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಕೂಡ ನಡೀತು. ಸದ್ಯ ಆಕ್ಷನ್ ಪ್ಯಾಕ್ಡ್ ಟ್ರೈಲರ್ ಸಹ ರಿಲೀಸ್ ಆಗಿ ಸದ್ದು ಮಾಡ್ತಿದೆ. ಸಿನಿಮಾ ಬಿಡುಗಡೆಗೆ ಒಂದು ದಿನ ಮಾತ್ರ ಬಾಕಿಯಿದೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಮ್ಯಾಕ್ಸ್' ದೊಡ್ಡಮಟ್ಟದಲ್ಲಿ ತೆರೆಗೆ ಬರ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳಿನಲ್ಲಿ ಕೂಡ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ ಹೊರ ರಾಜ್ಯಗಳಲ್ಲಿ ಚಿತ್ರದ ಪ್ರಚಾರ ಮಾಡುತ್ತಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.

ಅನುಶ್ರೀ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಕೂಡ ಸುದೀಪ್ ಭಾಗಿ ಆಗಿದ್ದರು. ಇದೇ ಮೊದಲ ಬಾರಿಗೆ ಅನುಶ್ರೀ ಚಾನಲ್ಗೆ ಸಂದರ್ಶನ ನೀಡಿದ್ದಾರೆ. 'ಮ್ಯಾಕ್ಸ್' ಸಿನಿಮಾ ಜೊತೆಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಕೊನೆಗೆ ಅನುಶ್ರೀಗೆ ಸುದೀಪ್ ಒಂದು ಚಾಲೆಂಜ್ ಕೂಡ ಹಾಕಿದ್ದಾರೆ. ಸೋತರೆ ಶಿಕ್ಷೆ ಏನು? ಎಂದು ಕೂಡ ಹೇಳಿದ್ದಾರೆ.
ಮಾತಿನ ಮಲ್ಲಿ ಅನುಶ್ರೀ ಕನ್ನಡದ ಜನಪ್ರಿಯ ನಿರೂಪಕಿ. ಕಿರುತೆರೆ ಮಾತ್ರವಲ್ಲ ವೇದಿಕೆಗಳಲ್ಲಿ ಕೂಡ ತಮ್ಮ ಸೊಗಸಾದ ನಿರೂಪಣೆಯಿಂದ ಗಮನ ಸೆಳೆಯುತ್ತಾರೆ. ಇನ್ನು ಅವರ ಯೂಟ್ಯೂಬ್ ಚಾನಲ್ ಸಂದರ್ಶನಗಳಲ್ಲಿ ಪುನೀತ್ ರಾಜ್ಕುಮಾರ್, ಸಾಯಿ ಪಲ್ಲವಿ ಸೇರಿದಂತೆ ಹಲವರು ಮಾತನಾಡಿದ್ದಾರೆ. ಬಹಳ ತಮಾಷೆಯಾಗಿ ಅನುಶ್ರೀ ಪ್ರಶ್ನೆಗಳನ್ನು ಕೇಳುತ್ತಾರೆ. ಅತಿಥಿಗಳು ಮನಬಿಚ್ಚಿ ನಗುತ್ತಾರೆ. ಆದರೆ ಅವರೊಬ್ಬರನ್ನು ನಗಿಸೋಕೆ ನಿಮ್ಮಿಂದ ಸಾಧ್ಯವಿಲ್ಲ ಎಂದು ಸುದೀಪ್ ಹೇಳಿದ್ದಾರೆ.

ಸಂದರ್ಶನದ ಕೊನೆಗೆ ಅನುಶ್ರೀ ಸರ್, ಕಾರ್ಯಕ್ರಮ ಹೇಗಿತ್ತು? ಎಂಜಾಯ್ ಮಾಡಿದ್ರಾ? ಎಂದು ಕೇಳಿದ್ದಾರೆ. ಹೌದು ಬಹಳ ಚೆನ್ನಾಗಿತ್ತು. ನೀವು ಬಹಳ ತಮಾಷೆಯಾಗಿ ಕಾರ್ಯಕ್ರಮ ನಡೆಸಿಕೊಡುತ್ತೀರಾ ಎಂದು ಕೇಳಿದ್ದೆ. ಆದರೆ ನಿಮಗೆ ಒಂದು ಚಾಲೆಂಜ್, ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ನಗಿಸಬೇಕು, ಬಿದ್ದು ಬಿದ್ದು ನಗುವಂತೆ ಮಾಡಬೇಕು ಎಂದು ಸುದೀಪ್ ಹೇಳಿದ್ದಾರೆ. ಅದಕ್ಕೆ ಅನುಶ್ರೀ ಸೈ ಅಂತ ಒಪ್ಪಿಕೊಂಡಿದ್ದಾರೆ.
ಒಂದು ವೇಳೆ ಚಾಲೆಂಜ್ ಪ್ರಕಾರ ಅನುಶ್ರೀ ಸಂದರ್ಶನ ಮಾಡಿ ನಗಿಸದೇ ಸೋತರೆ ಮತ್ತೆ ನಿಮ್ಮೊಟ್ಟಿಗೆ ಇನ್ನುಂದು ಇಂಟರ್ವ್ಯೂ ಮಾಡ್ತೀನಿ ಎಂದು ಅನುಶ್ರೀ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್, "ಒಂದು ವರ್ಷ ನೀವು ಯಾವುದೇ ಇಂಟರ್ವ್ಯೂ ಮಾಡುವಂತಿಲ್ಲ" ಎಂದಿದ್ದಾರೆ. ಇದನ್ನು ಕೇಳಿ ಅನುಶ್ರೀ ಶಾಕ್ ಆಗಿದ್ದಾರೆ.
ನನಗೆ ಅನೂಪ್ ಭಂಡಾರಿ ಮೇಲೆ ಅಷ್ಟು ನಂಬಿಕೆ ಇದೆ. ಅದಕ್ಕೆ ಹೀಗೆ ಹೇಳುತ್ತಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ. 'ರಂಗಿತರಂಗ' ಚಿತ್ರದ ಮೂಲಕ ಅನೂಪ್ ಚಿತ್ರರಂಗಕ್ಕೆ ಬಂದರು. ಬಳಿಕ 'ರಾಜರಥ' ಚಿತ್ರ ಮಾಡಿ ಸೋತರು. ಬಳಿಕ 'ವಿಕ್ರಾಂತ್ ರೋಣ' ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದಾರೆ. ಸದ್ಯ ಸುದೀಪ್ ಜೊತೆ 'ಬಿಲ್ಲ ರಂಗ ಬಾಷ' ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ.
ಅನೂಪ್ ಭಂಡಾರಿ ಬಹಳ ಗಂಭೀರ ಸ್ವಭಾವದವರು. ಅವರು ಕಾಮಿಡಿ ಸನ್ನಿವೇಶವನ್ನು ಹೇಳುವಾಗಲೂ ಗಂಭೀರವಾಗಿಯೇ ಹೇಳುತ್ತಾರೆ. ಅವರ ಮುಂದೆ ಕಾಮಿಡಿ ಕಲಾವಿದರು ಮಾತನಾಡಲು ಭಯಪಡುತ್ತಾರೆ. ಅನೂಪ್ ಭಂಡಾರಿ ನಗುವುದೇ ಇಲ್ಲ. ಅಷ್ಟು ಗಂಭೀರವಾಗಿರುತ್ತಾರೆ. ಅವರು ನಗುವುದು ಯಾರಿಗೂ ಗೊತ್ತೇ ಆಗುವುದಿಲ್ಲ ಎಂದು ಸುದೀಪ್ ತಮಾಷೆ ಮಾಡಿದ್ದಾರೆ. ಕೊನೆಗೆ ಅನುಶ್ರೀ ಚಾಲೆಂಜ್ ಅಕ್ಸೆಪ್ಟ್ ಮಾಡಿಕೊಂಡಿದ್ದಾರೆ. ಯಾವಾಗ ಅನೂಪ್ ಸಂದರ್ಶನ ನಡೆಸುತ್ತಾರೆ, ಚಾಲೆಂಜ್ ಗೆಲ್ಲುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











