3ನೇ ಭಾನುವಾರ 'ಮ್ಯಾಕ್ಸ್' ಕಥೆ ಏನಾಯ್ತು? 'ರಾಬರ್ಟ್' ದಾಖಲೆ ಮುರಿದ್ನಾ?
ಹೊಸ ವರ್ಷದಲ್ಲೂ 'ಮ್ಯಾಕ್ಸ್' ಕಿಚ್ಚ ಸುದೀಪ್ ದರ್ಬಾರ್ ಜೋರಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಮತ್ತಷ್ಟು ಸದ್ದು ಮಾಡುವ ಸುಳಿವು ಸಿಗುತ್ತಿದೆ. ಮೂರನೇ ವಾರ ಆಕ್ಷನ್ ಥ್ರಿಲ್ಲರ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 19ನೇ ದಿನವೂ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ.
ವರ್ಷದ ಆರಂಭದಲ್ಲಿ ಯಾವುದೇ ದೊಡ್ಡ ಕನ್ನಡ ಸಿನಿಮಾ ಬರಲಿಲ್ಲ. 'ಛೂ ಮಂತರ್' ಸಿನಿಮಾ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಂಕ್ರಾಂತಿಗೆ ಬಂದ ತೆಲುಗು, ತಮಿಳಿನ ಸಿನಿಮಾಗಳು ಕರ್ನಾಟಕದಲ್ಲಿ ದೊಡ್ಡದಾಗಿ ಅಬ್ಬರಿಸುತ್ತಿಲ್ಲ. ಹಾಗಾಗಿ ಸುಗ್ಗಿ ಸಂಭ್ರಮದಲ್ಲೂ ಮ್ಯಾಕ್ಸಿಮಮ್ ಮನರಂಜನೆಗಾಗಿ ಪ್ರೇಕ್ಷಕರು 'ಮ್ಯಾಕ್ಸ್' ಮೊರೆ ಹೋಗುವ ಲೆಕ್ಕಾಚಾರ ನಡೀತಿದೆ.

ಡಿಸೆಂಬರ್ 25ರಂದು ಕ್ರಿಸ್ಮಸ್ ಸಂಭ್ರಮದಲ್ಲಿ 'ಮ್ಯಾಕ್ಸ್' ಸಿನಿಮಾ ತೆರೆಗೆ ಬಂದಿತ್ತು. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಬಳಿಕ ಸಿಕ್ಕ ರಜಾ ದಿನಗಳು ಚಿತ್ರದ ಗಳಿಕೆಗೆ ಪ್ಲಸ್ ಆಗಿತ್ತು. ಹೊಸ ವರ್ಷದ ಸಂಭ್ರಮದಲ್ಲಿ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ಮುಖ್ಯವಾಗಿ ಸಂಜೆ ಶೋಗಳು ಹೌಸ್ಫುಲ್ ಆಗುತ್ತಿತ್ತು. ಕೆಲವರು ಮತ್ತೆ ಮತ್ತೆ ನೋಡಲು ಆರಂಭಿಸಿದ್ದು 'ಮ್ಯಾಕ್ಸ್' ಸಿನಿಮಾ ಕಲೆಕ್ಷನ್ ಹೆಚ್ಚುವಂತಾಯಿತು.
ಬರೀ ಬುಕ್ಮೈಶೋನಲ್ಲಿ ಮಾತ್ರ ಒಟ್ಟು 19 ದಿನಕ್ಕೆ 'ಮ್ಯಾಕ್ಸ್' ಚಿತ್ರದ 7 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ. ಚಿತ್ರದ ಯಶಸ್ಸು ಹೇಗಿದೆ ಎನ್ನುವುದು ಇದರಲ್ಲೇ ಗೊತ್ತಾಗುತ್ತಿದೆ. sacnilk.com ವೆಬ್ಸೈಟ್ ವರದಿ ಪ್ರಕಾರ ಚಿತ್ರದ ಗ್ರಾಸ್ ಕಲೆಕ್ಷನ್ ಈಗಾಗಲೇ 50 ಕೋಟಿ ರೂ. ದಾಟಿದೆ. ಆ ಲೆಕ್ಕದಲ್ಲಿ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ದಾಖಲೆ ಹಿಂದಿಕ್ಕಿರುವ ಅಂದಾಜಿದೆ. 'ರಾಬರ್ಟ್' ಸಿನಿಮಾ ಹೆಚ್ಚು ಕಮ್ಮಿ 50 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೇಳಿಕೊಂಡಿದ್ದರು. ಆದರೆ ಸಿನಿಮಾ ಕಲೆಕ್ಷನ್ ಬಗ್ಗೆ ಅಧಿಕೃತವಾಗಿ 'ಮ್ಯಾಕ್ಸ್' ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.
ಮೊನ್ನೆ ಶನಿವಾರ(ಡಿಸೆಂಬರ್ 11) ಬುಕ್ಮೈಶೋನಲ್ಲಿ 10 ಸಾವಿರ ಟಿಕೆಟ್ ಬುಕ್ ಆಗಿತ್ತು. ಇನ್ನು 3ನೇ ಭಾನುವಾರ 8 ಸಾವಿರದ 900 ಟಿಕೆಟ್ ಬುಕ್ ಆಗಿ ಸದ್ದು ಮಾಡಿದೆ. 19ನೇ ದಿನವೂ BMSನಲ್ಲಿ ಟಿಕೆಟ್ ಬುಕ್ಕಿಂಗ್ ಟ್ರೆಂಡಿಂಗ್ ಜೋರಾಗಿದೆ. ನಾಳೆ(ಡಿಸೆಂಬರ್ 14) ಸಂಕ್ರಾಂತಿ ರಜೆ ಚಿತ್ರಕ್ಕೆ ವರವಾಗುವ ಸಾಧ್ಯತೆಯಿದೆ. 'ಮ್ಯಾಕ್ಸ್' ಆರ್ಭಟದ ಬೆನ್ನಲ್ಲಿ ಉಪೇಂದ್ರ ನಿರ್ದೇಶಿಸಿ ನಟಿಸಿದ 'ಯುಐ' ಅಬ್ಬರ ಕಮ್ಮಿ ಆಗಿತ್ತು.

ಎರಡೂವರೆ ವರ್ಷದ ಬಳಿಕ ಸುದೀಪ್ ನಟಿಸಿದ 'ಮ್ಯಾಕ್ಸ್' ಸಿನಿಮಾ ತೆರೆಗೆ ಬಂದಿತ್ತು. ಪಕ್ಕಾ ಆಕ್ಷನ್ ಎಂಟರ್ಟೈನರ್ ಸಿನಿಮಾ ಕಟ್ಟಿಕೊಟ್ಟು ವಿಜಯ್ ಕಾರ್ತಿಕೇಯನ್ ಸಕ್ಸಸ್ ಕಂಡಿದ್ದರು. ತಮಿಳು ನಿರ್ಮಾಪಕ ಕಲೈಪುಲಿ ಎಸ್ ತನು ಚಿತ್ರಕ್ಕೆ ಹಣ ಹೂಡಿದ್ದರು. ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿತ್ತು.
ತೆಲುಗು, ತಮಿಳಿಗೂ 'ಮ್ಯಾಕ್ಸ್' ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಆದರೆ ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಅಷ್ಟೇನು ಸದ್ದು ಮಾಡಲಿಲ್ಲ. ಸಿನಿಮಾ ನೋಡಿದ ಕೆಲವರು ಮೆಚ್ಚಿಕೊಂಡಿದ್ದರು. ಚೆನ್ನೈನಲ್ಲಿ ಬೆರಳೆಣಿಯಷ್ಟು ಶೋಗಳಲ್ಲಿ ಸಿನಿಮಾ ಸದ್ಯ ಪ್ರದರ್ಶನವಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಲೇಯಿದೆ.
ಸದ್ಯ ನಟ ಸುದೀಪ್ ಸಿಸಿಎಲ್ ಕ್ರಿಕೆಟ್ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಆ ಬಳಿಕ ಹೊಸ ಸಿನಿಮಾ ಘೋಷಣೆ ಆಗುವ ನಿರೀಕ್ಷೆಯಿದೆ. ತಮಿಳಿನ ಚೇರನ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ನಟಿಸಬೇಕಿದೆ. 'ಬಿಲ್ಲ ರಂಗ ಬಾಷ' ಸಿನಿಮಾ ಪ್ರಾರಂಭಿಸಲು ಅನೂಪ್ ಭಂಡಾರಿ ಸಿದ್ಧತೆ ನಡೆಸಿದ್ದಾರೆ. ಎರಡರಲ್ಲಿ ಯಾವ ಸಿನಿಮಾ ಮೊದಲು ಶುರುವಾಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications











