ಅಪ್ಪು ಮತ್ತು ನಾನು ಈ ಚಿತ್ರ ಮಾಡುವ ಯೋಜನೆ ಹಾಕಿದ್ವಿ ಎಂದ ರಮ್ಯಾ; ಮಿಸ್ ಆಯ್ತು ದೊಡ್ಡ ಸಿನಿಮಾ!
ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ಮರಣದಿಂದ ಸಂತೋಷ್ ಆನಂದ್ರಾಮ್ ಅವರ ಸಿನಿಮಾ, ಪವನ್ ಕುಮಾರ್ ನಿರ್ದೇಶನದ ದ್ವಿತ್ವ, ದಿನಕರ್ ತೂಗುದೀಪ ನಿರ್ದೇಶನದ ಚಿತ್ರ, ಹೀಗೆ ಹಲವು ಸಿನಿಮಾಗಳು ಆರಂಭವಾಗದೆಯೇ ಉಳಿದಿವೆ. ಹೀಗೆ ತಮ್ಮ ನೆಚ್ಚಿನ ನಟ ಅಭಿನಯಿಸಬೇಕಿದ್ದ ಈ ಕತೆಗಳಲ್ಲಿ ಯಾವ ನಟರು ಅಭಿನಯಿಸಬಹುದು ಎಂದು ಅಪ್ಪು ಅಭಿಮಾನಿಗಳು ಬೇಸರದಿಂದಲೇ ಕಾಯುತ್ತಿದ್ದಾರೆ. ಅದರಲ್ಲಿಯೂ ಪುನೀತ್ ದ್ವಿತ್ವ ಸಿನಿಮಾ ಮೇಲೆ ಅಭಿಮಾನಿಗಳಲ್ಲಿ ಕೇವಲ ಚಿತ್ರದ ಶೀರ್ಷಿಕೆ ಹಾಗೂ ಫರ್ಸ್ಟ್ ಲುಕ್ ಪೋಸ್ಟರ್ನಿಂದಲೇ ಅಪಾರವಾದ ನಿರೀಕ್ಷೆ ನಿರ್ಮಾಣವಾಗಿತ್ತು. ಪುನೀತ್ ನಿಧನದ ನಂತರ ಅಪ್ಪು ಇದೊಂದು ಚಿತ್ರವನ್ನು ಮಾಡಬೇಕಿತ್ತು ಎಂದು ಕೊರಗಿದವರು ಅಪಾರ.
ಇದೀಗ ಅಪ್ಪು ಅಭಿನಯಿಸದೇ ಬಿಟ್ಟುಹೋದ ಸಿನಿಮಾಗಳ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಗೊಂಡಿದ್ದು, ಇದು ಪುನೀತ್ ಮತ್ತು ರಮ್ಯಾ ಇಬ್ಬರ ಅಭಿಮಾನಿಗಳಲ್ಲಿಯೂ ಅಪಾರವಾದ ಬೇಸರವನ್ನು ಮೂಡಿಸದೇ ಇರಲಾರದು. ಹೌದು, ಪುನೀತ್ ಮತ್ತು ರಮ್ಯಾ ಜೋಡಿ ನಾಲ್ಕನೇ ಬಾರಿಗೆ ಅಭಿನಯಿಸಬೇಕಿದ್ದ ಚಿತ್ರದ ಕುರಿತು ಖುದ್ದಾಗಿ ಅಪ್ಪು ಮತ್ತು ರಮ್ಯಾ ಚರ್ಚಿಸಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ. ಈ ಕುರಿತಾಗಿ ಸ್ವತಃ ನಟಿ ರಮ್ಯಾ ಅವರೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಇನ್ನು ಪುನೀತ್ ರಾಜ್ಕುಮಾರ್ ಹಾಗೂ ರಮ್ಯಾ ಅಭಿನಯಿಸಬೇಕಿದ್ದ ಚಿತ್ರ ಈ ಹಿಂದೆ ಅಣ್ಣಾವ್ರು ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರದ ಮರುಸೃಷ್ಟಿ ಎಂಬುದು ವಿಶೇಷ. ಅಂದು ಅಣ್ಣಾವ್ರು ಅಭಿನಯಿಸಿದ್ದ ಚಿತ್ರವನ್ನು ಅಪ್ಪು ಅವರು ರಿಕ್ರಿಯೇಟ್ ಮಾಡುವ ಯೋಜನೆ ಹೊಂದಿದ್ರು ಎಂಬ ವಿಷಯವನ್ನು ಸಿನಿ ಪತ್ರಕರ್ತೆಯೋರ್ವರು ಟ್ವೀಟ್ ಮಾಡಿದ್ದು ಈ ಟ್ವೀಟ್ಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ಅಣ್ಣಾವ್ರ ಎವರ್ಗ್ರೀನ್ ಸಿನಿಮಾ ರಿಕ್ರಿಯೇಟ್ ಆಗ್ಬೇಕಿತ್ತು
ಲಕ್ಕಿಮ್ಯಾನ್ ಬಿಡುಗಡೆ ಕುರಿತು ವೆಬ್ತಾಣವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದ ಡಾರ್ಲಿಂಗ್ ಕೃಷ್ಣ 1976ರಲ್ಲಿ ತೆರೆಕಂಡಿದ್ದ ಡಾ. ರಾಜ್ಕುಮಾರ್ ಹಾಗೂ ನಟಿ ಲಕ್ಷ್ಮಿ ಅಭಿನಯದ ನಾ ನಿನ್ನ ಮರೆಯಲಾರೆ ಚಿತ್ರವನ್ನು ರಿ ಕ್ರಿಯೇಟ್ ಮಾಡುವ ಕುರಿತಾಗಿ ಪುನೀತ್ ಸರ್ ನನ್ನ ಜೊತೆ ಲಕ್ಕಿಮ್ಯಾನ್ ಶೂಟಿಂಗ್ ವೇಳೆ ಚರ್ಚಿಸಿದ್ದರು ಎಂದು ತಿಳಿಸಿದರು.

ಹೌದು ಈ ಸುದ್ದಿ ನಿಜ ಎಂದ ರಮ್ಯಾ
ಇನ್ನು ಈ ಟ್ವೀಟ್ ಅನ್ನು ಶೇರ್ ಮಾಡಿರುವ ನಟಿ ರಮ್ಯಾ ಹೌದು, ಇದು ಸತ್ಯ, ನಾ ನಿನ್ನ ಮರೆಯಲಾರೆ ಮರು ನಿರ್ಮಾಣದ ಕುರಿತಾಗಿ ನಾನು ಅಪ್ಪು ಮಾತನಾಡಿದ್ವಿ, ನಾವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಹಾಗೂ ಇದೇ ಸಮಯದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಪುನೀತ್ ರಾಜ್ಕುಮಾರ್ ಅಭಿನಯದ ಲಕ್ಕಿಮ್ಯಾನ್ ಚಿತ್ರಕ್ಕೂ ಸಹ ರಮ್ಯಾ ಶುಭಕೋರಿದ್ದಾರೆ.

ಇದೇ ಶುಕ್ರವಾರ ಲಕ್ಕಿಮ್ಯಾನ್ ತೆರೆಗೆ
ಪುನೀತ್ ರಾಜ್ಕುಮಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಕಿಮ್ಯಾನ್ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ. ಚಿತ್ರ ಸೆಪ್ಟೆಂಬರ್ 9ರ ಶುಕ್ರವಾರದಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಗುರುವಾರ ಸಂಜೆಯೇ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಪ್ರೀಮಿಯರ್ ಶೋಗಳು ಆಯೋಜನೆಗೊಂಡಿವೆ.

ಮತ್ತೊಂದು ಬ್ಲಾಕ್ಬಸ್ಟರ್ ಮಿಸ್ ಆಯ್ತು ಎಂದ ಫ್ಯಾನ್ಸ್
ಇನ್ನು ರಮ್ಯಾ ಅವರ ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಅಪ್ಪು ಇಲ್ಲದಿರುವ ಕಾರಣ ಈ ಬ್ಲಾಕ್ಬಸ್ಟರ್ ಸಿನಿಮಾವನ್ನು ಮಿಸ್ ಆಯ್ತು ಎಂದಿದ್ದಾರೆ. ಅಪ್ಪು - ರಮ್ಯಾ ಜೋಡಿಯ ನಾಲ್ಕನೇ ಚಿತ್ರವನ್ನು ಕೈತುಂಬಿಕೊಳ್ಳಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











