ಆ ಬರಸಿಡಿಲು ಬಡಿದು ಇಂದಿಗೆ 6 ವರ್ಷ: ಆದಷ್ಟು ಬೇಗ ಸಿಹಿಸುದ್ದಿ ಸಿಗುತ್ತಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದ್ಕಾಲದಲ್ಲಿ ಕುಚಿಕು ಗೆಳೆಯರಾಗಿದ್ದರು. 6 ವರ್ಷಗಳ ಹಿಂದೆ ಇಬ್ಬರೂ ದೂರಾಗಿ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ಶಾಕ್ ಕೊಟ್ಟಿದ್ದರು. ಅಂದು ದರ್ಶನ್ ಮಾಡಿದ್ದ ಆ ಟ್ವೀಟ್ ನಿಜಕ್ಕೂ ಬರ ಸಿಡಿಲಿನಂತೆ ಬಂದೆರಗಿತ್ತು. ಇಬ್ಬರೂ ಯಾಕೆ ದೂರಾದರೂ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ.
ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಸುದೀಪ್ ಹಾಗೂ ದರ್ಶನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇಬ್ಬರು ತಮ್ಮದೇ ಸಿನಿಮಾಗಳ ಮೂಲಕ ಅಭಿಮಾನಿ ಬಳಗ ಸೃಷ್ಟಿಸಿಕೊಂಡರು. ಇಬ್ಬರು ಸೂಪರ್ ಸ್ಟಾರ್ಗಳಾಗಿ ಗುರ್ತಿಸಿಕೊಂಡಿದ್ದಾರೆ. 6 ವರ್ಷಗಳ ಹಿಂದೆ ಇಬ್ಬರು ಜೀವಕ್ಕೆ ಜೀವಕ್ಕೆ ಕೊಡಲು ಸ್ನೇಹಿತರಾಗಿದ್ದರು. ಹೋದಲ್ಲಿ ಒಂದಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ವಿಷ್ಣು- ಅಂಬಿ ನಂತರ ಸ್ನೇಹದಲ್ಲಿ ದರ್ಶನ್- ಸುದೀಪ್ ಎನ್ನುವಂತೆ ಇದ್ದರು. ಆದರೆ ಅದು ಬಹಳ ದಿನ ಉಳಿಯಲಿಲ್ಲ.

ಸರಿಯಾಗಿ ಇವತ್ತಿಗೆ 6 ವರ್ಷಗಳ ಹಿಂದೆ ಏಕಾಏಕಿ ದರ್ಶನ್ ಒಂದು ಟ್ವೀಟ್ ಮಾಡಿ ಸುದೀಪ್ ಜೊತೆಗಿನ ಸ್ನೇಹಕ್ಕೆ ಇತಿಶ್ರೀ ಹಾಡಿದ್ದರು. "ನಾನು ಹಾಗೂ ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟರು ಮಾತ್ರ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ. ಇದು ಇಲ್ಲಿಗೆ ಮುಗಿಯಿತು" ಎಂದು ಬರೆದುಕೊಂಡಿದ್ದರು. ಆ ಟ್ವೀಟ್ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಇದನ್ನು ಖಂಡಿತ ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ.
ಮೊದಲಿಗೆ ಯಾರು ಕೂಡ ದರ್ಶನ್ ಮಾಡಿದ್ದ ಟ್ವೀಟ್ ನಂಬಲಿಲ್ಲ. ಯಾರೋ ಅಕೌಂಟ್ ಹ್ಯಾಕ್ ಮಾಡಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ನಂತರ ಮತ್ತೊಂದು ಟ್ವೀಟ್ ಮಾಡಿ ದರ್ಶನ್ ಸ್ಪಷ್ಟನೆ ನೀಡಿದ್ದರು. ಅಲ್ಲಿಗೆ ಅದು ಖಚಿತವಾಗಿತ್ತು. ಆ ನಂತರ ದರ್ಶನ್ ಈ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. ಸುದೀಪ್ ಮಾತ್ರ ಇದಕ್ಕೆ ತಿರುಗೇಟು ನೀಡಲಿಲ್ಲ. ಬದಲಿಗೆ ತಮ್ಮಿಬ್ಬರ ಸ್ನೇಹದ ಬಗ್ಗೆ ಹಲವು ಬಾರಿ ಮಾತನಾಡಿದರು. ಎರಡ್ಮೂರು ಬಾರಿ ದರ್ಶನ್ಗೆ ಬೆಂಬಲಿಸಿ ಸುದೀಪ್ ಟ್ವೀಟ್ ಸಹ ಮಾಡಿದ್ದರು. ದರ್ಶನ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದಾಗ ಶೀಘ್ರ ಚೇತರಿಕೆಗಾಗಿ ಸುದೀಪ್ ಪ್ರಾರ್ಥಿಸಿದ್ದರು.
ದರ್ಶನ್ ಹಾಗೂ ಸುದೀಪ್ ಮತ್ತೆ ಒಂದಾಗಬೇಕು ಎನ್ನುವುದು ಸಾಕಷ್ಟು ಅಭಿಮಾನಿಗಳ ಆಸೆಯಾಗಿದೆ. ಇಬ್ಬರು ಮತ್ತೆ ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈಹಾಕಿಕೊಂಡು ಓಡಾಡುವುದನ್ನು ನೋಡಬೇಕು ಎಂದು ಸಾಕಷ್ಟು ಜನ ಕಾಯುತ್ತಿದ್ದಾರೆ. ನಟ ಜಗ್ಗೇಶ್ ಕೂಡ ಇತ್ತೀಚೆಗೆ ಈ ಆಸೆಯನ್ನು ವ್ಯಕ್ತಪಡಿಸಿದ್ದರು. ಅಂಬಿ ಸಂಭ್ರಮ ಕಾರ್ಯಕ್ರಮದಲ್ಲಿ ಇಬ್ಬರು 'ಕುಚಿಕು ಕುಚಿಕು' ಹಾಡಿಗೆ ಹೆಜ್ಜೆ ಹಾಕಿದ್ದರು. ಅದೇ ರೀತಿ ಮತ್ತೆ ಒಂದಾಗಿರಬೇಕು ಎನ್ನುವುದ ಹಲವರ ಅಭಿಲಾಷೆ. ಆ ದಿನ ಬಂದೇ ಬರುತ್ತದೆ ಎಂದು ಕಾಯುತ್ತಿದ್ದಾರೆ.

ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಕಿಡಿಗೇಡಿ ಚಪ್ಪಲಿ ತೂರಿದ ಘಟನೆ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದರು. ಸುದೀರ್ಘ ಪತ್ರ ಬರೆದು ಸ್ನೇಹಿತ ದರ್ಶನ್ ಬೆಂಬಲಕ್ಕೆ ನಿಂತಿದ್ದರು. ಸುದೀಪ್ ಬೆಂಬಲಕ್ಕೆ ನಟ ದರ್ಶನ್ ಕೂಡ ರಿಪ್ಲೇ ಮಾಡಿ ಧನ್ಯವಾದ ತಿಳಿಸಿದ್ದರು. ಇದನ್ನು ನೋಡಿ ಇಬ್ಬರು ಮತ್ತೆ ಬೇಗ ಒಂದಾಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ದರ್ಶನ್ ನಟನೆಯ 'ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದರು.
ಒಬ್ಬರೊಟ್ಟಿಗೆ ಸ್ನೇಹ ಕಡಿದುಕೊಂಡಾಗ ಯಾರೇ ಆಗಲಿ ಸೈಲೆಂಟ್ ಆಗಿ ಇದ್ದು ಬಿಡ್ತಾರೆ. ಆದರೆ ದರ್ಶನ್ ಮಾತ್ರ ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಘೋಷಿಸಿದ್ದು ಕೆಲವರಿಗೆ ವಿಚಿತ್ರವಾಗಿ ಕಂಡಿದ್ದು ಸುಳ್ಳಲ್ಲ. ಸುದೀಪ್ ಟಿವಿ9 ಸಂದರ್ಶನದ ವೇಳೆ ನೀಡಿದ್ದ ಹೇಳಿಕೆ ಇದಕ್ಕೆ ಕಾರಣ ಎನ್ನುವಂತೆ ದರ್ಶನ್ ಪ್ರತಿಕ್ರಿಯಿಸಿದ್ದರು. 'ಮೆಜೆಸ್ಟಿಕ್' ಚಿತ್ರಕ್ಕೆ ದರ್ಶನ್ ಹೆಸರನ್ನು ನಾನೇ ಸೂಚಿಸಿದ್ದು ಎಂದು ಸುದೀಪ್ ಸಂದರ್ಶನದಲ್ಲಿ ಹೇಳಿದ್ದರು. ಇದನ್ನು ನೋಡಿ ದರ್ಶನ್ ಬೇಸರಗೊಂಡಿದ್ದರು. "ಮೆಜೆಸ್ಟಿಕ್ ಚಿತ್ರಕ್ಕೆ ನನ್ನ ಹೆಸರು ಸೂಚಿಸಿದ್ದು ಸುದೀಪ್ ಅಲ್ಲ' ಎಂದು ದರ್ಶನ್ ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದರು.


Click it and Unblock the Notifications











