ಸೌಜನ್ಯ ಕೇಸ್ ವೀಡಿಯೋ ಸಂಬಂಧ ಸಮೀರ್ ಬೆಂಬಲಕ್ಕೆ ನಿಂತಿರುವ ಗಿರೀಶ್ ಮಟ್ಟಣ್ಣವರ್ ಹಿನ್ನೆಲೆ ಏನು?
ಧರ್ಮಸ್ಥಳದ ಸೌಜನ್ಯ ಪ್ರಕರಣ ಮತ್ತೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಸಮೀರ್ ಎಂಡಿ ಎಂಬ ಯೂಟ್ಯೂಬ್ ಪ್ರಕರಣದ ಬಗ್ಗೆ ಮಾಡಿರುವ ಒಂದು ವೀಡಿಯೋ. ಸೌಜನ್ಯ ಎಂಬ ಯುವತಿಯ ಅ*ಚಾರ ಹಾಗೂ ಹ* ನಡೆದು 13 ವರ್ಷ ಕಳೆದಿದೆ. ಅಂದಿನಿಂದಲೂ ಆಕೆಯ ಸಾವಿಗೆ ನ್ಯಾಯ ಸಿಗಬೇಕು ಎನ್ನುವ ಹೋರಾಟ ನಡೆಯುತ್ತಲೇ ಇದೆ.
ಸೌಜನ್ಯ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲೇ ಬೇಕು ಎಂದು ಪಣ ತೊಟ್ಟವರಲ್ಲಿ ಗಿರೀಶ್ ಮಟ್ಟಣ್ಣನವರ್ ಸಹ ಒಬ್ಬರು. ಅವರು ಸೌಜನ್ಯ ಹೋರಾಟ ಸಮಿತಿ ಮುಖಂಡರಾಗಿಯೂ ಗುರ್ತಿಸಿಕೊಂಡಿದ್ದಾರೆ. ಬರೀ ಸೌಜನ್ಯ ಪ್ರಕರಣ ಮಾತ್ರವಲ್ಲ ಈ ಹಿಂದೆ ಧರ್ಮಸ್ಥಳ ಭಾಗದಲ್ಲಿ ನಡೆದಿರುವ ಕೆಲ ಪ್ರಕರಣಗಳ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. ತಾರ್ಕಿಕ ಅಂತ್ಯ ಸಿಗದೇ ಜನ ಮರೆತೇ ಬಿಟ್ಟಿರುವ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ.

ಎಸ್ಐ ಆಗಿದ್ದ ಗಿರೀಶ್ ಮಟ್ಟಣ್ಣನವರ್ 22 ವರ್ಷಗಳ ಹಿಂದೆ ಶಾಸಕರ ಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಆಗಿದ್ದರು. ಭ್ರಷ್ಟ ರಾಜಕಾರಣಿಗಳನ್ನು ಬೆದರಿಸಲು ಹುಸಿ ಬಾಂಬ್ ಇಟ್ಟ ಪ್ರಕರಣದ ಬಳಿಕ ಬಾಂಬ್ ಎಸ್ಐ ಎಂದೇ ಅವರು ಜನಪ್ರಿಯರಾಗಿದ್ದರು. 13 ವರ್ಷಗಳ ಬಳಿಕ ಈ ಪ್ರಕರಣದ ಅಂತಿಮ ತೀರ್ಪು ಪ್ರಕಟವಾಗಿತ್ತು. ನಗರದ 66ನೇ ಸಿವಿಲ್ ಹಾಗೂ ಸೆಷೆನ್ಸ್ ಕೋರ್ಟ್, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಗಿರೀಶ್ ಮಟ್ಟಣ್ಣನವರ್ ಸೇರಿ ಮೂವರು ಆರೋಪಿಗಳನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು.
ಬಾಂಬ್ ಬೆದರಿಕೆ ಕರೆ ಪ್ರಕರಣದ ಬಳಿಕ ಗಿರೀಶ್ ಮಟ್ಟಣ್ಣನವರ್ ಪತ್ರಿಕೋದ್ಯಮ, ಯುವಜನ ಸಂಘಟನೆ, ಬಿಜೆಪಿ ಯುವಮೋರ್ಚಾದ ನಾಯಕತ್ವ ವಹಿಸಿಕೊಂಡಿದ್ದರು. 2009ರಲ್ಲಿ ಕಂಠೀರವ ಸ್ಟುಡಿಯೋ ನಿಯಮಿತ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದರು. ಆರ್ಎಸ್ಎಸ್ ಹಿನ್ನೆಲೆಯಿಂದ ಬಂದ ಮೆಟ್ಟಣ್ಣನವರ್ ಬಿಜೆಪಿ ಪಕ್ಷದಲ್ಲಿ ಕೂಡ ಗುರ್ತಿಸಿಕೊಂಡಿದ್ದರು. ಕೆಲ ಕನ್ನಡ ಸಿನಿಮಾಗಳಲ್ಲಿ ಕೂಡ ಗಿರೀಶ್ ಮಟ್ಟಣ್ಣನವರ್ ನಟಿಸಿದ್ದರು.
ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಗಿರೀಶ್ ಮಟ್ಟಣ್ಣನವರ್ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ಸಮೀರ್ ಎಂಡಿ ವೀಡಿಯೋ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದು ಗೊತ್ತೇಯಿದೆ. ಆತನಿಗೆ ಮಟ್ಟಣ್ಣನವರ್ ಬೆಂಬಲವಾಗಿ ನಿಂತಿದ್ದಾರೆ. ತಾವೇ ವಕೀಲರನ್ನು ನೇಮಿಸಿ ಆತ ಬಂಧನವಾಗುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೌಜನ್ಯ ಪ್ರಕರಣದ ಸಂಬಂಧ ಯಾರೇ ಹೋರಾಟ ಮಾಡಿದರೂ ಅವರಿಗೆ ನನ್ನ ಬೆಂಬಲ ಇರುತ್ತದೆ ಎಂದಿದ್ದಾರೆ.
ಸಮೀರ್ ಹಾಗೂ ಗಿರೀಶ್ ಮಟ್ಟಣ್ಣನವರ್ ಮೊನ್ನೆ ರಾತ್ರಿ 1.30ರ ಸುಮಾರಿಗೆ ಲೈವ್ ಬಂದು ಮಾತನಾಡಿದ್ದರು. ಸಮೀರ್ ಯಾವುದೇ ತಪ್ಪು ಮಾಡಿಲ್ಲ. ಆತ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡೇ ವೀಡಿಯೋ ಮಾಡಿದ್ದಾನೆ. ಇಲ್ಲದ ಕಥೆಗಳನ್ನು ಹೇಳಿಲ್ಲ. ಸುಮ್ಮನೆ ಆತನ ಮೇಲೆ ಗೂಬೆ ಕೂರಿಸಬೇಕು. ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿ. ಅದರ ಮರು ತನಿಖೆ ಆಗಿ ನ್ಯಾಯ ಸಿಗಬೇಕು. ನನಗೂ ಸಮೀರನಿಗೂ ಹಿಂದೆ ಯಾವುದೇ ಸಂಪರ್ಕ ಇರಲಿಲ್ಲ. ನನ್ನ ವೀಡಿಯೋ ಬಗ್ಗೆ ಆಕ್ರೋಶ ಶುರುವಾಗಿ ಬೆದರಿಕೆ ಬರುತ್ತಿದೆ ಎಂದು ಗೊತ್ತಾದಾಗ ನಾನು ಕರೆ ಮಾಡಿ ಗಿರೀಶ್ ಸರ್ ಜತೆ ಮಾತನಾಡಿದೆ. ಆ ಬಳಿಕವೇ ನಮ್ಮಿಬ್ಬರ ಭೇಟಿ ಆಗಿದ್ದು ಎಂದು ಸಮೀರ್ ಲೈವ್ನಲ್ಲಿ ಹೇಳಿಕೊಂಡಿದ್ದ.
ಸಮೀರ್ ಎಂಡಿಗೂ ಮುನ್ನ ಗಿರೀಶ್ ಮಟ್ಟಣ್ಣನವರ್ ಕೂಡ ಸೌಜನ್ಯ ಪ್ರಕರಣ ಸಂಬಂಧ ಸಾಕಷ್ಟು ಆರೋಪಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಕೆಲ ಯೂಟ್ಯೂಬ್ ಚಾನಲ್ಗಳಲ್ಲಿ ಕೂತು ಈ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದಾರೆ. ಆದರೆ ಅದು ಹೆಚ್ಚು ಸುದ್ದಿ ಆಗಿರಲಿಲ್ಲ. ಸಮೀರ್ ಮಾಡಿದ ವೀಡಿಯೋ ವೈರಲ್ ಬಳಿಕ ಜನ ಪ್ರಕರಣದ ಬಗ್ಗೆ ಮಟ್ಟಣ್ಣನವರ್ ಮಾತನಾಡಿರುವ ವೀಡಿಯೋಗಳನ್ನು ನೋಡುತ್ತಿದ್ದಾರೆ. ಸರ್ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಧಾರವಾಡದ ಗೊಲ್ಲರ ಓಣಿಯಲ್ಲಿ ಹುಟ್ಟಿ ಬೆಳೆದವರು ಗಿರೀಶ್ ಮಟ್ಟಣ್ಣನವರ್. ಪೋಷಕರಿಗೆ ಇಬ್ಬರು ಮಕ್ಕಳಲ್ಲಿ ಗಿರೀಶ್ ಚಿಕ್ಕವರು. ಶಾಲಾ ದಿನಗಳಲ್ಲೇ ಕವಿತೆಗಳನ್ನು ಬರೆದು ಶಹಬ್ಬಾಶ್ ಗಿಟ್ಟಿಸಿದ್ದರು. ಪೋಷಕರ ಆಸೆಯಂತೆ ಸಿಇಟಿ ಬರೆಯದೇ ಎಂಎಸ್ಸಿ ಪದವಿ ಪಡೆದರು. ಬಳಿಕ ಭಾರತೀಯ ಸೈನ್ಯ ಸೇರಬೇಕು ಅಥವಾ ಪೊಲೀಸ್ ಇಲಾಖೆ ಸೇರಿ ಸೇವೆ ಮಾಡಬೇಕು ಎನ್ನುವ ಕನಸು ಕಂಡಿದ್ದರು. ಅಣ್ಣನಿಗಾಗಿ ತಂದಿದ್ದ ಎಸ್ಐ ಪೊಲೀಸ್ ಪರೀಕ್ಷೆ ಅರ್ಜಿಯನ್ನು ನಾನು ತುಂಬಿ ಅಪ್ಲೇ ಮಾಡಿದ್ದೆ. ಇಡೀ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದಿದ್ದಾಗಿ TV9 ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು.
ಪೊಲೀಸ್ ಇಲಾಖೆ ಸೇರಲು ಇನ್ಫುಯೆನ್ಸ್ ಮಾಡಿಸಬೇಕಾ? ಲಂಚ ಕೊಡಬೇಕಾ? ಎನ್ನುವ ಗೊಂದಲಕ್ಕೆ ಬಿದ್ದಿದ್ದರಂತೆ. ತಂದೆ ರಾಜಕಾರಣ ಸಹಾಯ ಕೇಳಲು ಮುಂದಾದಾಗ ಅಕ್ಕೆ ಗಿರೀಶ್ ಮಟ್ಟಣ್ಣನವರ್ ಒಪ್ಪಿರಲಿಲ್ಲವಂತೆ. ನಾನೇ ಕಷ್ಟಪಟ್ಟು ಕೆಲಸ ಗಿಟ್ಟಿಸಿ ಕೊನೆಗೆ ಆ ರಾಜಕಾರಣಿ ಮರ್ಜಿಗೆ ಬೀಳುವುದು ಬೇಡ ಎಂದು ನಿರ್ಧರಿಸಿದ್ದರಂತೆ. ಅದಕ್ಕಾಗಿ ತಂದೆಯ ಜೊತೆ ಜಗಳ ಸಹ ನಡೆಯುತ್ತಿತ್ತು. ಕೊನೆಗೆ ಯಾರ ಸಹಾಯವೂ ಇಲ್ಲದೇ ಇಲಾಖೆಯಲ್ಲಿ ಕೆಲಸ ಪಡೆದೆ. ಅಲ್ಲಿ ಕೂಡ ವರ್ಗಾವಣೆಯಂತಹ ಶಿಕ್ಷೆ ಎದುರಿಸಿದೆ ಎಂದು ನೆನಪಿಸಿಕೊಂಡಿದ್ದರು.
ಹುಸಿ ಬಾಂಬ್ ಘಟನೆ
ಶಾಸಕರ ಭವನ ಹುಸಿಬಾಂಬ್ ಪ್ರಕರಣದಿಂದ ಗಿರೀಶ್ ಮಟ್ಟಣ್ಣನವರ್ ಹೆಸರು ರಾಜ್ಯಾದ್ಯಂತ ಭಾರೀ ಚರ್ಚೆ ಆಗಿತ್ತು. ಭ್ರಷ್ಟಾಚಾರ ನೋಡಿ ಬೇಸತ್ತಿದ್ದ ಗಿರೀಶ್ ಮೆಟ್ಟಣ್ಣವರ್ 2003ರ ನವೆಂಬರ್ 1ರಂದು ಶಾಸಕರ ಭವನದಲ್ಲಿ ಜಿಲೆಟಿನ್ ಕಡ್ಡಿ ಇಟ್ಟು ಎಸ್ಟಿಡಿ ಬೂತ್ನಿಂದ ವಿಧಾನಸೌಧ ಠಾಣೆಗೆ ಫೋನ್ ಮಾಡಿ ವಿಷಯ ಹೇಳಿದ್ದರು. ಅಲ್ಲಿಂದ ಹೊರಡುವ ವೇಳೆ ತಮ್ಮ ಬೈಕ್ ಹೆಲ್ಮೆಟ್ ಮರೆತು ಹೋಗಿದ್ದರು. ಅದನ್ನು ವಾಪಸ್ ತೆಗೆದುಕೊಳ್ಳಲು ಬಂದಾಗ ಎಸ್ಟಿಡಿ ಬೂತ್ನವರು ಬೈಕ್ ನಂಬರ್ ನೋಟ್ ಮಾಡಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ಗಿರೀಶ್ ಮಟ್ಟಣ್ಣನವರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಅವರು ಜಾಮೀನು ಪಡೆದು ಹೊರ ಬಂದಿದ್ದರು. ನನ್ನದೇ ರೀತಿಯಲ್ಲಿ ನಡೆಸಿದ ಪ್ರತಿಭಟನೆ ಅದು. ನಾವು ಸರ್ಕಾರದ ವಿರುದ್ಧವೋ, ಮತ್ಯಾರೋ ವಿರುದ್ಧ ಪತ್ರ ಬರೆದು ಪರಿಹಾರ ಸಿಗುತ್ತದೆ ಎಂದು ಕಾದುಕೂತರೆ ಪ್ರಯೋಜನವಿಲ್ಲ. ಜೋರಾಗಿ ಸುದ್ದಿ ಮಾಡಿದರೆ ಮಾತ್ರ ತಿರುಗಿ ನೋಡುತ್ತಾರೆ. ಇಲ್ಲದಿದ್ದರೆ ನಮ್ಮ ಕೂಗಿಗೆ ಯಾವುದೇ ಬೆಲೆ ಇರುವುದಿಲ್ಲ ಎಂದು ಕೆಲ ತಿಂಗಳ ಹಿಂದೆ ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಟ್ಟಣ್ಣನವರ್ ಹೇಳಿದ್ದರು.
'ಎಲ್ಲರಂತಲ್ಲ ನಮ್ಮ ರಾಜಿ' ಎಂಬ ಧಾರಾವಾಹಿಯಲ್ಲಿ ಕೂಡ ಗಿರೀಶ್ ಮಟ್ಟಣ್ಣನವರ್ ನಟಿಸಿದ್ದರು. ಅದರಲ್ಲಿ ಸುದ್ದಿ ವಾಹಿನಿಯೊಂದ ವರದಿಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಲೂಸ್ ಮಾದ ಯೋಗಿ ನಟನೆಯ 'ಯಕ್ಷ' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು. ಶಿವಣ್ಣ-ಯಶ್ ನಟನೆಯ 'ತಮಸ್ಸು', ಜಗ್ಗೇಶ್ ನಟನೆಯ 'ಮಠ' ಚಿತ್ರದಲ್ಲಿ ಕೂಡ ಮಿಂಚಿದ್ದರು.
ಗುರುಪ್ರಸಾದ್ ನಿರ್ದೇಶನದ 'ಮಠ' ಚಿತ್ರದಲ್ಲಿ ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗಿರೀಶ್ ಮಟ್ಟಣ್ಣನವರ್ ನಟಿಸಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋ ಈಗ ವೈರಲ್ ಆಗುತ್ತಿದೆ. ಇನ್ನುಳಿದಂತೆ 'ಭೀಮಾ ತೀರದಲ್ಲಿ' ಹಾಗೂ 'ತಂತ್ರ' ಎಂಬ ಸಿನಿಮಾಗಳಲ್ಲಿ ಸಹ ಪಾತ್ರ ಮಾಡಿದ್ದರು.


Click it and Unblock the Notifications











